Home / ಕವನ / ಕವಿತೆ / ಜೀವನದ ರೂಪನ್ನೆ ಬದಲಿಸುವ, ಬಾ!

ಜೀವನದ ರೂಪನ್ನೆ ಬದಲಿಸುವ, ಬಾ!

ಕೈಯ ಕೈಯಲಿ ಇಟ್ಟು
ಕಣ್ಣ ಕಣ್ಣಲಿ ನಟ್ಟು
ಮುಂದಕ್ಕೆ ಸಾಗೋಣ, ನೋಡೋಣ ಬಾ;
ನಾನು ನೀನೂ ಕೂಡಿ
ವಿಧಿಯೊಡನೆ ಹೆಣಗಾಡಿ
ಜೀವನದ ರೂಪನ್ನೆ ಬದಲಿಸುವ, ಬಾ!

ನದಿಯ ತಣ್ದುಟಿ ಮೇಲೆ
ಶಶಿಯ ಒಲವಿನ ಓಲೆ
ಕೊರೆಸಿ ಕುಣಿವುದನು ಓದೋಣ ಬಾ;
ಬಾಳಿನಂಗಳದಲ್ಲಿ
ಸಾವ ಪಂಜರದಲ್ಲಿ
ಅಳಿದುಳಿದ ಕುಲವನ್ನು ಕಾಣೋಣ, ಬಾ!

ನಾಡ ಸುತ್ತಲು ಸುತ್ತಿ
ಹಾಡ ಮಿಂಚಿನ ಕತ್ತಿ
ಝಳಪಿಸುತ ಇರುಳನ್ನು ಇರಿಯೋಣ ಬಾ;
ನಾನು ನೀನೂ ಕೂಡಿ
ಜೀವನವ ಜಾಲಾಡಿ
ಹುದುಗಿರುವ ಮುತ್ತನ್ನು ಆಯೋಣ, ಬಾ!

ಸಿರಿಯ ಸಂತಸ ಕೂಟ,
ಹೊರೆಯ ಸಿಂಗರ ಮಾಟ,
ಮರೆಯ ಹೆಣ್ಣಿನ ಬೇಟ, ಕಾಣೋಣ ಬಾ;
ಅದಕೆ ಜೀವವ ತೆತ್ತ
ಲೆಕ್ಕವಿಲ್ಲದ ಮೊತ್ತ
ಜನರ ಜೀವನವನ್ನು ಎಣಿಸೋಣ, ಬಾ!

ನಾಡ ಬಿಡುಗಡೆಗಾಗಿ
ಓಡ ಅರಳುಗಳಾಗಿ
ಬಾಡಿರುವ ಹೂಗಳನು ಆಯೋಣ ಬಾ;
ಅವರ ಜೀವನದ ನಾಡಿ
ಸಿಡಿಲ ನದಿಗಳ ಕೋಡಿ
ಕೊಚ್ಚಿಸುತ, ಕ್ರಾಂತಿಯನು ಹರಡೋಣ, ಬಾ!

ಜಗವೆ ತನ್ನದು ಎಂದು,
ಕದ್ದು ಎಲ್ಲವ ತಂದು
ಕೂಡಿಟ್ಟ ಕಳ್ಳನನು ಅಳಿಸೋಣ ಬಾ;
ತನ್ನ ಬಾಳ್ವೆಯ ತೆತ್ತು,
ತಾನೆ ಉಳಿದರ ತೊತ್ತು
ಆಗಿ ಅಳಿಯುವ ಜೀವ ಉಳಿಸೋಣ, ಬಾ!

ಅವರ ಕೊನೆಯಿದು ಅಲ್ಲ,
ಇದು ಬರಿಯ ಉರಿಯಲ್ಲ,
ನಾಡಿನೆದೆಗಿಚ್ಚೆಂದು ಅರಿಯೋಣ ಬಾ;
ನಾನು ನೀನೂ ಕೂಡಿ
ಒಲವ ಹಾಡನು ಹಾಡಿ
ಜೀವನದ ರೂಪ, ಬದಲಿಸುವ ಬಾ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...