Home / ಲೇಖನ / ಇತರೆ / ಸೃಷ್ಠಿಗೆ ಗಡಿಗಳಿವೆಯೇ ?

ಸೃಷ್ಠಿಗೆ ಗಡಿಗಳಿವೆಯೇ ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಆಗಿನ್ನೂ ಬೆಳಗಿನ ಚುಮಚುಮು ಬೆಳಕು ಪಸರಿಸುತ್ತಿದೆ. ಕೊರೆವ ಚಳಿಯಲ್ಲಿ ರಾತ್ರಿಯಿಡೀ ಆ ಹಿಮಪರ್ವತದ ಮೇಲೆ ಗಡಿ ಕಾಯುತ್ತಾ ಇವನು ಬೆಂಡಾಗಿದ್ದಾನೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಇವನ  ಪಾಳಿ ಮುಗಿಯಲಿದೆ. ಆಮೇಲೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದುಕೊಂಡೊಡನೆ ಆಕಳಿಕೆ ಬಂತು. ಒಂದು ಕ್ಷಣ ಕಣ್ಣನ್ನು ಮೆಲ್ಲಗೆ ಮುಚ್ಚಿದ….ಅಷ್ಟರಲ್ಲೇ ಹತ್ತಿರದಲ್ಲೇ ಎಲ್ಲೋ ಶಬ್ದ. ತಕ್ಷಣ ಇವನು ಬೆಚ್ಚಿ ಕಣ್ತೆರೆದ. ಕೈಲಿದ್ದ ರೈಫಲ್ ತನ್ನಂತೆ ತಾನೇ ಸಿದ್ಧವಾಯ್ತು! ಎಚ್ಚರದ ಕಣ್ಣಿನಿಂದ ಸುತ್ತಮುತ್ತ ಗಮನಿಸಲಾರಂಭಿಸಿದ. ಮೆಲ್ಲಗೆ ತೆವಳುತ್ತಲೇ ಸ್ವಲ್ಪ ದೂರ ಹೋಗಿ ಬಂದ. ಮತ್ತೆ ಪಟ ಪಟ ಶಬ್ಧ, ಈಗ ಮತ್ತೂ ಹತ್ತಿರದಿಂದ ಕೇಳಿದಾಗ ಮತ್ತಷ್ಟು ಕಿವಿನಿಮಿರಿಸಿ ಕುಳಿತು ರೈಫಲನ್ನು ಶಬ್ದದೆಡೆಗೆ ಹೊರಳಿಸಿ ಗುರಿಯಿಟ್ಟು ಕಾದ.

ಕೆಲಹೊತ್ತು ನಿಶ್ಶಬ್ದ. ಇದ್ದಕ್ಕಿದ್ದಂತೆ ಶತ್ರು ದೇಶದ ಭೂಮಿಯೆಡೆಯಿಂದ ಭರ್ರನೆ ಹಾರಿ ಬಂದ ಹಕ್ಕಿ ನಮ್ಮ ದೇಶದ ಮೇಲೆ ಕುಳಿತು ಪಟಪಟನೆ ರೆಕ್ಕೆ ಬಡಿಯಿತು! ಇವನು ಕ್ಷಣಕಾಲ ಸ್ತಂಭೀಭೂತನಾಗಿ ಕುಳಿತು ಬಿಟ್ಟ ಆ ಹಕ್ಕಿ ಶತ್ರು ದೇಶದ್ದೋ ? ತನ್ನ ದೇಶದ್ದೋ ? ಅದನ್ನು ಕೊಲ್ಲಲೋ ? ಬೇಡವೋ ? ಯೋಚಿಸಲಾರಂಭಿಸಿದ.

ತನ್ನ ಯೋಚನೆಗೆ ಅವನಿಗೆ ನಗು ಬಂತು. ಪಕ್ಕದಲ್ಲೇ ಎಲ್ಲೋ ಅಸ್ಪಷ್ಟವಾಗಿ ನದಿ ಹರಿಯುವ ಶಬ್ಧ ತನ್ನ ದೇಶದ ನದಿ. ಶತ್ರು ದೇಶಕ್ಕೆ ಹರಿಯುವ ಶಬ್ಧ. ತನ್ನ ದೇಶದ ನದಿ ಶತ್ರು ದೇಶಕ್ಕೆ ಹರಿದು ಹೋಗುತ್ತಿದೆ. ಶತ್ರು ದೇಶದಿಂದ ಬೀಸಿದ ಗಾಳಿ ತನ್ನ ದೇಶವನ್ನು ಆವರಿಸುತ್ತಿದೆ. ಇತ್ತಲಿನ ಪರ್ವತದ ಮುಖ ತನ್ನ ದೇಶದ್ದು. ಅತ್ತಲಿನ ಪರ್ವತದ ಮುಖ ಶತ್ರು ದೇಶದ್ದು. ಪರ್ವತ ಒಂದೇ ಆದರೂ ಹೆಸರು ಮಾತ್ರ ಎರಡು.

ಶತ್ರು ದೇಶದ ಈ ನದಿ, ಗಾಳಿ, ಪರ್ವತಕ್ಕೆ ಈಗಷ್ಟೆ ಶತ್ರುದೇಶದಿಂದ ಹಾರಿ ಬಂದ ಆ ಹಕ್ಕಿಗೆ ಹೇಗೆ ಗುಂಡಿಕ್ಕಿ ಕೊಲ್ಲಲಿ ? ಸೃಷ್ಠಿ ಎಂದಾದರೂ ಗಡಿಗಳನ್ನು ಹಾಕಿಕೊಂಡಿದೆಯೇ ? ಮಾನವನಿಗಷ್ಟೆ ಈ ಗಡಿ ! ನದಿ, ಗಾಳಿ, ಮಳೆ, ಭೂಮಿ, ಪ್ರಾಣಿ ಪಕ್ಷಿಗಳೂ ಮಾನವನಂತೆಯೇ ಗಡಿಗಳನ್ನು ಹಾಕಿಕೊಂಡು ತಮ್ಮ ತಮ್ಮಲ್ಲೇ ವಿರೋಧಿ ಬಣಗಳನ್ನು ಸೃಷ್ಟಿಸಿಕೊಂಡು ಬಿಟ್ಟರೆ… ಆಗೇನು ಮಾಡುವುದು ? ಈ ಆಲೋಚನೆ ಬಂದೊಡನೆ ಆ ಕೊರೆವ ಚಳಿಯಲ್ಲೂ ಅವನು  ಬೆವೆತು ಹೋದ. ಮನದಲ್ಲೇ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ‘ಹೇ ದೇವ, ಮಾನವನ ಸ್ವಾರ್ಥದಿಂದಷ್ಟೇ ಗಡಿಗಳ ಸೃಷ್ಟಿಯಾಯ್ತು. ಸೃಷ್ಟಿಗೂ ಶತ್ರು – ಮಿತ್ರನೆಂಬ ಗಡಿಯನ್ನು ನೀ ಎಳಿಯಲಿಲ್ಲವಲ್ಲ’ ಎನ್ನುತ್ತಾ ನಿಟ್ಟುಸಿರಿಟ್ಟ ಏಕೋ ಕೈಯಲ್ಲಿದ್ದ ರೈಫಲ್ ಎತ್ತಲಾಗದಷ್ಟು ಭಾರವಾಗುತ್ತಿದೆ ಎನಿಸಿ ಭೂಮಿಗೆ ಕುಸಿದು ಕುಳಿತ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...