Home / ಕವನ / ಕವಿತೆ / ಅಕ್ಷರ

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ
ಹೃದಯಗಳು ಮಿಡಿಯುತಿವೆ ಅಸಂಖ್ಯ
ನಾಡಿ ತುಡಿಯುತಿವೆ ಅಸಂಖ್ಯ
ನಾದ ಮೊಳಗುತಿವೆ ಅಸಂಖ್ಯ
ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ

ಇವು ಬರೀ ಕರಿಬಣ್ಣದ ಅಂಕು ಡೊಂಕು ಆಕಾರಗಳೆನ್ನುವಿಯಾ?
ಸೂರ್ಯೋದಯ ಸೂರ್ಯಾಸ್ತದ ಇನಿದಾದ ಬನಿ
ಏರು ಹೊತ್ತಿನ ಪ್ರಖರ ಸಾರ ಧುನಿ
ಗುಲಾಬಿ ಗೋರಂಟಿ ತಾವರೆ ತಂಗಡಿಕೆ ಹೂಮಿಸುನಿ
ಕೋಗಿಲೆ ಕಾಗೆ ಕಾಜಾಣ ಗುಬ್ಬಿ ಗಿಳಿ ಗೊರವಂಕಗಳ ಕುಕಿಲು ದನಿ
ನದಿ ಕೊಳ್ಳ ಜಲಪಾತಗಳ ಧುಮ್ಮಿಕ್ಕುವ ಭೋರ್ಗರೆತ
ಸರಾಗ ಹರಿವ ಕಲಕಲ ಧ್ವನಿ

ಮಲೆ ಮಲೆಗಳ ಅಲೆ ಅಲೆ ಮೈನರಗಳಲೆದಾಡಿದ
ಕುಸುರು ಕಲೆಯ ಕಲರವ
ಹುಲಿ ಸಿಂಹ ಆನೆ ಕರಡಿ ಹಂದಿ ಎಮ್ಮೆ ಎತ್ತು
ಬೆಕ್ಕು ಬಾವಲಿ ಹಾವು ಮುಂಗುಸಿ ಪ್ರಾಣಿ ಬಳಗಗಳ ಜೀವ ಧ್ವನಿ
ಇದರಲ್ಲಿ ಎಲ್ಲ ಅಡಗಿವೆ
ಬಾಲ ಭಾಷೆಯ ಕಲಿಸಿವೆ
ಭಾವ ಸ್ವಭಾವಗಳ ಬಲಿಸಿವೆ

ನೆಲವನಪ್ಪುವ ಮೂಲ ಸೆಲೆಗೆ,
ಅನ್ನಮಾಂಸದಗುಳಿಗೆ
ತನ್ನತನದುಳಿವಿಗೆ ಪ್ರಾಣ ತರ್ಪಣವೂ ಹೆಚ್ಚಲ್ಲ
ಎಂಬ ಮೂಲ ಬೇರನಿಳಿಸಿವೆ ತಿಳಿಸಿವೆ.

ಲಕ್ಷ ಲಕ್ಷ ವಸಂತ ವರ್ಷ ಶಿಶಿರಗಳು
ಗುಡ್ಡ ಅಡವಿ ಗಾಳಿ ಮಲೆ ಬಿಸಿಲುಗಳೊಡನಾಡಿ ಆಡಿ
ಅ ಆ ಇ ಈ ಕಲಿತು ನನ್ನ ನಾಲಿಗೆ
ನಮ್ಮೆಲ್ಲರ ಪಾಡ ತುಂಬಿ ಹಾಡತೊಡಗಿದರೆ “ಅಕ್ಷರ” ವಾಯಿತು
ಮಾನವ ಜಾತಿಯ ಹೃದಯದಾಲಾಪ ಶ್ರವಣರೂಪ
ಎದೆ ಬಡಿತಗಳಿಗೊಂದೊಂದು ಸ್ವರ ಸಂಚಾರ

ಧ್ವನಿ ರಾಗ ಭಾವ ಸಾರ ಸಾರ
ನಾನು ನಾನುಗಳುದಿಸಿ
ಈ ಅಕ್ಷರದಕ್ಷಯ ಸಾಗರದಲೀಜಾಡಿ ಅಳಿದವು
ತಲೆ ತಲೆಗಳಲ್ಲಿ ಅಲೆಗೊಂಡು
ಸಾಗುತ್ತಲೇ ಮಾಗುತ್ತಲೇ
ಹಬ್ಬಿ ಹರವಾಗುತ್ತಲೇ ಬಂದ ಇದಕ್ಕೆ
ಸಾವಿಲ್ಲ-ಅದಕ್ಕೆ ಇದು ಅ-ಕ್ಷರ
ಆದರೆ….
ಹನಿ ಹನಿಯಾಗಿ ಕೂಡಿಸಿಟ್ಟ ಜೇನ,
ಕಾಳು ಕಾಳು ಕಲೆ ಹಾಕಿದ ಆಹಾರ ಕಣಜವ,
ಕಲ್ಲು ಮುಳ್ಳುಗಳ ತುಳಿದ ಹೆಜ್ಜೆ ಹೆಜ್ಜೆಗಳ
ಗೆಜ್ಜೆ ನಾದಗಳ ಪೋಣಿಸಿಟ್ಟ ಮುತ್ತು ರತ್ನಾವಳಿಯ
ನಮ್ಮೊಳಗಿನ ಕೆಲ ಕುನ್ನಿಗಳು
ಬಾಚಿ ದೋಚಿ ಬಚ್ಚಿಟ್ಟುಕೊಂಡಾಗ
ಅಕ್ಷರ ಸಂಪದವ ಕಳೆದುಕೊಂಡ
ಅಸಂಖ್ಯ ಜನ ನಾವು
ಅನಾಥರಾದೆವು ಅನೇಕ ಅನೇಕ ವರ್ಷ
ಕಪ್ಪು ಬಾವಿಯ ಕೊಳಚೆ ಕುತ್ತ ಯಾತನೆಗಳ
ನರನರದಲ್ಲಿ ತುಂಬಿ ನಾಡಿಗರ ಕಿತ್ತು ತಿನ್ನುತ್ತ ಬಂದ
ಅಕ್ಕರ ಸಂಪದ ದೋಚಿಗರ
ಭೂಪರೋ ಭೂಸುರರೋ ಎಂಬ
ನಂಬಿಗೆಯೇ ಬೆಂಬತ್ತಿ ಬಂದೆವು

ಆದರಿಂದು
ವಿಜ್ಞಾನ ರವಿ ವಿಶ್ವದಗಲಗಳ ಕತ್ತಲೆಕಳೆದು
ನಮ್ಮನ್ನು ಬಾವಿಗಳಿಂದ ಬಯಲಿಗೆ ಕರೆಯುತ್ತಿದ್ದಾನೆ
ನಾನು ಅಕ್ಷರಗಳಿಗಾಗಿ ಬೆದಕಾಡಿ ಕಾಡಿ ಬೇಡಿ
ದೊರೆತಾಗ ನೋಡಿದರೆ
ಲಕ್ಷ ಲಕ್ಷ ವರ್ಷಗಳ ಹೊಕ್ಕುಳ ಬಳ್ಳಿ ಬಂಧುತ್ವ
ಸಾವಿರಾರು ವರ್ಷಗಳ ಅಂಧತ್ವ
ಎಲ್ಲ ಕಾಣತೊಡಗಿದೆ.

೧೩-೬-೧೯೮೬

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...