
ಪಂಜಾಬದಲ್ಲಿ ಒಬ್ಬ ಪುಢಾರಿಯು ಲೆಜಿಸ್ಟಿವ್ ಅಸೆಂಬ್ಲಿಗೆ ಉಮೇದವಾರರಾಗಿದ್ದಾರೆ. ಅವರ ಪತ್ನಿಯು ಪಂಜಾಬ ಲೆಜಿಸ್ಲೆಟಿವ್ಹ ಕೌನ್ಸಿಲಿಗೆ ಉಮೇದವಾರಳಾಗಿದ್ದಾಳೆ. ಉಭಯ ದಂಪತಿಗಳು ಜಯಶಾಲಿಗಳಾಗಲೆಂದು ಪ್ರಾರ್ಥಿಸುತ್ತೇವೆ!
* * * *
ಗಂಡಹೆಂಡರಿಬ್ಬರೂ ಸರಕಾರಿ ನವಕರಿಯಲ್ಲಿದ್ದರೆ ಇಬ್ಬರನ್ನೂ ಒಂದೇ ಊರಲ್ಲಿಡುವ ಮತ್ತು ವರ್ಗಾಯಿಸಿದರೆ ಇಬ್ಬರನ್ನೂ ಒಂದೇ ಊರಿಗೆ ವರ್ಗಮಾಡುವ ಸವಲತ್ತು ಇಟ್ಟಿದ್ದಾರೆ. ಅದರಂತೆ ಹೊಸ ಅಸಹಕಾರ ಚಳವಳಿಯಲ್ಲಿ ಗಂಡ ಹೆಂಡರಿಬ್ಬರಿಗೂ ಶಿಕ್ಷೆಯಾದರೆ, ಇಬ್ಬರನ್ನೂ ಒಂದೇ ಜೈಲಿನಲ್ಲಿಡುವ ಸೌಕರ್ಯವನ್ನು ಸಹ ಸರಕಾರದವರು ಕೆಲವೆಡೆಯಲ್ಲಿ ಮಾಡಿದ್ದರು. ಹೀಗೆ ಸರಕಾರದವರು ಯಾವಾಗಲೂ ದಾಂಪತ್ಯ ಸುಖವನ್ನು ಲಕ್ಷದಲ್ಲಿಟ್ಟಿದ್ದಾರೆ!
ಪಂಜಾಬದಲ್ಲಿ ಒಂದು ವೇಳೆ ಜನರ ಬೆಂಬಲದ ಜೋರಿನಿಂದಾಗಲಿ ನಮ್ಮ ಪ್ರಾರ್ಥನೆಯ ಬಲದಿಂದಾಗಲಿ ಮೇಲ್ಕಾಣಿಸಿದ ದಂಪತಿಗಳು ಆರಿಸಿ ಬಂದದ್ದಾದರೆ ಗಂಡನು ಅಸೆಂಬ್ಲಿಯಲ್ಲಿ ಮತ್ತು ಹೆಂಡತಿಯು ಕೌನ್ಸಿಲಿನಲ್ಲಿ ಕೆಲಸ ಮಾಡಬೇಕಾಗುವದು, ಸರಕಾರದವರು ಇವರೀರ್ವರನ್ನು ಬೇರೆ ಬೇರೆ ಇಡದೆ ಒಬ್ಬರ ಸ್ಥಳ ಬದಲಾಯಿಸಿ; ಅಂದರೆ ಪತಿಯನ್ನು ಕೌನ್ಸಿಲ ಮೆಂಬರನನ್ನಾಗಿಯಾಗಲಿ ಅಥವಾ ಪತ್ನಿಯನ್ನು ಅಸೆಂಬ್ಲಿಯ ಮೆಂಬರಳಾಗಿಯಾಗಲಿ ಮಾಡಬೇಕೆಂದು ನಮ್ಮ ಸೂಚನೆಯು. ಹೀಗೆ ಮಾಡುವದರಿಂದ ಇಬ್ಬರೂ ಸರಕಾರದ ಆಭಾರ ಮನ್ನಿಸದಿರರು!
ಆದರೆ ಇಬ್ಬರೂ ಒಂದೇ ಕೌನ್ಸಿಲಿಗೆ ಅಥವಾ ಅಸೆಂಬ್ಲಿಗೆ ಉಮೇದ ವಾರರಾಗುವದು ಇವರ ಕೈಯಲ್ಲಿತ್ತು. ಅದನ್ನು ಬಿಟ್ಟು ಕೊಟ್ಟು ಇಬ್ಬರೂ ಬೇರೆ ಬೇರೆ ನಿಲ್ಲಲು ಬೇರೆ ಕಾರಣವೇನಾದರೂ ಇರುವದೋ ಏನೋ ಯಾರು ಬಲ್ಲರು ? ಹೆಂಡತಿಯ ಕಾಟ ತಪ್ಪಿಸಿಕೊಳ್ಳಲು ಗಂಡನು ಬೇರೆ “ಗೃಹ”ಕ್ಕೆ ಉಮೇದವಾರನಾಗಿರಬಹುದೊ ? ಶಕ್ಯ !
****
ಏನೇ ಆಗಲಿ, ಗವ್ಹರ್ನರ ಸಾಹೇಬರು ಒಮ್ಮೆ ಅವರನ್ನು ವಿಚಾರಿಸಿ, ಒಬ್ಬರಿಗೊಬ್ಬರನ್ನು ತಪ್ಪಿಸಲಿಕ್ಕೆ ಬೇರೆ ಬೇರೆ ನಿಂತಿರದಿದ್ದರೆ, ಅವರನ್ನು ಒಂದೇ ಗೃಹದ ಮೇಂಬರರನ್ನಾಗಿ ಮಾಡುವದು ಯೋಗ್ಯ ಮತ್ತು ಹಿತಕರ. ಒಂದು ವೇಳೆ ಹೀಗೆ ಒಂದು ಗೃಹಕ್ಕೆ ಆರಿಸಿ ಬಂದವರನ್ನು ಎರಡನೇ ಗೃಹದ ಸದಸ್ಯರನ್ನಾಗಿ ಮಾಡುವದು ಗವರ್ನರರ ವಿಶೇಷ ಅಧಿಕಾರದಲ್ಲಿ ಇರದಿದ್ದರೆ, ಇಂಥ ಅಧಿಕಾರವನ್ನು ಪಾರ್ಲಿಮೆಂಟಿನಿಂದ ಪಡೆದು ಈ ಧರ್ಮಕಾರ್ಯವನ್ನು ತೀವ್ರ ಕೊನೆಗಾಣಿಸಬೇಕು.
* * * *
ಮೊದಲಿನ ಕಾಲದಲ್ಲಿ ಧನದಾನ, ಭೂದಾನ, ವಿದ್ಯಾದಾನ, ಕನ್ಯಾದಾನ, ಜೀವದಾನ ಮುಂತಾದವುಗಳ ಪ್ರಚಾರವಿತ್ತು. ಈಗಿನ ಕಾಲದಲ್ಲಿ ರಕ್ತದಾನವು ಒಂದು ದೊಡ್ಡ ದಾನವಾಗಿದೆ. ಮತ್ತು ಹೀಗೆ ರಕ್ತದಾನ ಮಾಡಿದವರಲ್ಲಿ ಇಸ್ಮಾಯಿಲ ಹಕ್ಕಿ ಎಂಬ ತುರ್ಕಿ ತರುಣನು ಶ್ರೇಷ್ಠ ತಮನೆಂದು ಎಣಿಸಲ್ಪಟ್ಟಿದ್ದಾನೆ. ಇವನಿಗೆ “ರಕ್ತದಾನಶೂರ” ಎಂಬ ಬಂಗಾರದ ಪದಕವನ್ನು ಇಸ್ತಂಬೂಲದ ಮುನಿಸಿಪಾಲಟಿಯವರು ಕೊಡುವವರಿದ್ದಾರೆ.
* * * *
ಇಸ್ಮಾಯಿಲ ಹಕ್ಕಿಯೆ ವಯಸ್ಸು ೨೬ ವರ್ಷ; ಇವನ ತೂಕ ೨೯೪ ಪೌಂಡು; ಶರೀರದಲ್ಲಿ ರಕ್ತದ ಪೂರೈಕೆ ಇರದೆ ಸಾಯುತ್ತಿದ್ದ ೧೫೯ ಜನರಿಗೆ ರಕ್ತ ಕೊಟ್ಟಿರುವನು. ಇಲ್ಲಿಯವರೆಗೆ ೧೬೦ ಪಾಯಿಂಟ ಅಂದರೆ ೨೦ ಗ್ಯಾಲನ್ ರಕ್ತ ಕೊಟ್ಟಿದ್ದಾನೆ. ೧೪೪ ಜನರನ್ನು ಉಳಿಸಿದ್ದಾನೆ. ಇನ್ನೂ ರಕ್ತ ಕೊಡಬೇಕೆಂದು ಸದೃಢನಾಗಿ ಇರುವಂತೆಯೂ ರಕ್ತವು ಶುದ್ಧವಾಗಿ ಇರುವಂತೆಯೂ ಎಚ್ಚರಿಕೆ ತೆಗೆದುಕೊಳ್ಳುತ್ತಾನೆ.
* * * *
ನಮ್ಮ ದೇಶದಲ್ಲಿಯೂ ಮನಬಂದಂತೆ ಮೇಯ್ದು ದಷ್ಟ ಪುಷ್ಟರಾದವರಿದ್ದಾರೆ. ಹೀಗೆ ರಕ್ತ ಕೊಡುವ ಪರೋಪಕಾರದ ಕೆಲಸವನ್ನು ಯಾಕೆ ಮಾಡಬಾರದು ? ರಕ್ತದ ಕೊರತೆಯಿಂದ ಪೀಡಿತರಾದವರ ಕಲ್ಯಾಣವಾಗುವದು. ಜೀವದ ಹಂಗುದೊರೆತವರು ಪುನಃ ಜೀವದ ಆಶೆ ತಾಳುವರು. ರಕ್ತ ದಾನವೆಂದರೆ ಜೀವದಾನವು ! ಕಣ್ಣಿಲ್ಲದ ಕುರುಡರನ್ನು ಕಂಡರೆ ಕನಿಕರ ಹುಟ್ಟುತ್ತದೆ. ಕಣ್ಣಿದ್ದ ಕುರುಡರನ್ನು ಕಂಡರೆ ಸಿಟ್ಟು ಬರುತ್ತದೆ. ಇವತ್ತೇ ರೇಲ್ವೆ ಗಾಡಿಯಲ್ಲಿ ಬರುವಾಗ್ಗೆ ನಾನು ಕುಳಿತ ಡಬ್ಬಿಯಲ್ಲ “೩೬ ಜನರು ಕೂಡುವದು” ಎಂದು ಪಾಟಿಯು ಇತ್ತು. ಅದರಲ್ಲಿ ಕುಳಿತಿದ್ದರು ೬೨ ಜನರು. ಇಷ್ಟೇ ಅಲ್ಲ ಆ ೩೬ ಜನರು ಕೂಡುವ ಡಬ್ಬಿಯಲ್ಲಿ ೬೨ ಜನರು ಕುಳಿತಿದ್ದರೂ ಇನ್ನೂ ಹತ್ತಿಪ್ಪತ್ತು ಜನರು ಸಹಜವಾಗಿ ಕೂಡಬಹುದೆಂದು ಹತ್ತುವವರ ತಿಳುವಳಿಕೆ. ಮತ್ತು ಒಳಗೆ ಸ್ಥಳ ಸಂಕೋಚದಿಂದ ಮುದಡಿಕೊಂಡು ಕುಳಿತವರಲ್ಲಿ ಸಹ ಕೆಲವರ ತಿಳುವಳಿಕೆ ಇಲ್ಲವಾದರೆ ಪ್ರತಿಯೊಂದು ಸ್ಟೇಶನಿನ ಮೇಲೆ ಹಿಂದು ಮುಂದಿನ ಎರಡನೇ ಖಾಲಿ ಡಬ್ಬಿಯಲ್ಲಿ ಹತ್ತಲು ಓಡಾಡುತಲಿದ್ದ ತಮ್ಮ ಪರಿಚಿತರನ್ನು ಏಕೆ ಕರೆಯುತ್ತಿದ್ದರು ?
ಎಷ್ಟೆಂದರೂ ಪರಿಚಿತರು; ಕರೆಯಲಿ, ಕಳೆದ ಮೇಲೆ, ಸ್ವತಃ ಸರಿದು ಜಾಗೆ ಕೊಡಬೇಕು. ಬೇಕಾದರೆ ಸ್ವತಃ ಎದ್ದು ನಿಂತು ಜಾಗೆ ಮಾಡಿ ಕೊಡಬೇಕು ಹಾಗೆ ಮಾಡದೇ ಉಳಿದವರನ್ನು ಸರಿಸಹೋಗುವರು. ಯಾರಾದರೂ ಸರಿಯದಿದ್ದರೆ, ಯಾರೇನು ಜಾಗೆ ಕಟ್ಟಿಕೊಂಡು ಹೋಗುವದಿಲ್ಲ. ಎಲ್ಲರೂ ತಾಸೆರಡು ತಾಸು ಕುಳಿತು ಇಳಿಯುವದಿದೆ, ಸ್ವಲ್ಪು ಸರಿಯಿರಲ್ಲ” ಎಂದು ಅನ್ನುವರು. ಇಷ್ಟರಲ್ಲಿ ದೂರದಲ್ಲಿ ಮೂಲೆಯಲ್ಲಿ ಕುಳಿತ ಮುದುಕನು “ಜಗತ್ತss ಹಾಗೆ ಅದ. ಎಲ್ಲರೂ ಒಂದು ದಿವಸ ಹೊಗುವದು ಅದ.” ಎಂದು ಇಹಪರ ಆಧ್ಯಾತ್ಮದ ತತ್ವವನ್ನೇ ಪ್ರಾರಂಭಿಸುವನು.
ಇನ್ನು ವಿಶೇಷವಾಗಿ ವರ್ಣಿಸುವ ಕಾರಣವಿಲ್ಲ. ಮುಂದೆ ಏನು ಮಾಡ ತಕ್ಕದ್ದು? ಅದನ್ನೂ ನಾನೇ ಸೂಚಿಸುವೆ. ಮೂರನೆಯ ವರ್ಗದ ರೇಲ್ವೆ ಪ್ರವಾಸಿಗಳ ಸಂಘವನ್ನು ಸ್ಥಾಪಿಸಬೇಕು. ಯಾರು ಸ್ಥಾಪಿಸಬೇಕು ? ಯಾರು ? ಅಂದರೆ ಡಿ. ಎಲ್. ಬಿ. ಅಥವಾ ಮುನಿಸಿಪಾಲಿಟಿ ಅಥವಾ ಯಾವದೇ ಸಂಸ್ಥೆಯ ಅಧ್ಯಕ್ಷಸ್ಥಾನಕ್ಕೆ ಉಮೇದವಾರರಾಗಿ ನಿಂತು ಅಪಜಯ ಹೊಂದಿದವರು ಸ್ಥಾಪಿಸಬೇಕು. ಅದರ ಅಧ್ಯಕ್ಷರಾಗಬೇಕು. ಜನರಲ್ಲಿ ಜಾಗ್ರತೆ ಅಂದರೆ ನಾಲ್ಕು ಜನರು ಕೂಡುವ ಸೀಟಿನ ಮೇಲೆ ೫ನೆಯವನು ಕೂಡ್ರಲಿಚ್ಛಿಸಬಾರದು, ಕೂತವರು ೫ನೆಯವನನ್ನು ಕರೆಯಬಾರದು. ಇಷ್ಟೊಂದು ಜಾಗ್ರತೆಯಾದ ಮೇಲೆ ಅಧ್ಯಕ್ಷರು ಆ ಸಂಘವನ್ನು ಮುಗ್ಗಿಸ ಬೇಕು. ಪುನಃ ಡಿ. ಎಲ್. ಬಿ. ಅಥವಾ ಮುನಿಸಿಪಾಲಿಟಿಯ ಅಧ್ಯಕ್ಷತೆಗೆ ಪ್ರಯತ್ನಿಸಬೇಕು. ಜಯವು ದೊರೆತರೆ ನೆಟ್ಟಗೆ, ಇಲ್ಲವಾದರೆ ಮೋಟಾರ
ಪ್ರವಾಸಿಕರ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಬೇಕು.
*****














