“ಎಲ್ಲಿ ಹೋಗಿ ಸತ್ತನೋ ಏನೋ ತಿಮ್ಮ, ಎಂಟು ಗಂಟೆಯಾದರೂ ಬರಲೇ ಇಲ್ಲ. ಏ….” ಎಂದು ಒಳಗೆ ಶ್ರೀಮತಿ ಲಕ್ಷ್ಮೀದೇವಿಯವರು ಎಂಟು ಗಂಟೆಯಾದರೂ ಬರದಿದ್ದ ಆಳಿನ ಮೇಲೆ ಕೋಪಿಸಿಕೊಂಡರು.
ಚಹಕ್ಕೆ ಒಳಗಿನಿಂದ ಕರೆಬರಲಿಲ್ಲವೆಂದು ಲಕ್ಷ್ಮೀಪತಿರಾಯರು ಹೀಗೆ ಇಣಿಕಿನೋಡಿದರು. ಪತ್ನಿಯು ಸಿಟ್ಟಿನಿಂದ ಏನೇನೋ ಹಲುಬುತ್ತ ಕೋಣೆಯಿಂದ ಕೋಣೆಗೆ ಸುಳುಮುಳು ಅಲೆಯುತ್ತಿದ್ದಾಳೆ; ಪಾತ್ರೆಗಳನ್ನು ಸರಿಸುತ್ತಿದ್ದಾಳೆ; ವಸ್ತ್ರಗಳನ್ನು ರಾಶಿ ಹಾಕುತ್ತಿದ್ದಾಳೆ.
ರಾಯರ ಪುತ್ರನು ಏನೋ ಬಾಯಿಗೆ ಹಾಕಿಕೊಂಡು ಹೊರಗೆ ಬಂದನು. ಗೋಪೂ ನೋಡು….ಒಳಗೆ ಹೋಗಿ ನಿನ್ನ ಅಮ್ಮನ ಹತ್ತಿರ ಹೇಳು- ಆಳು ಇನ್ನೂ ಬರಲಿಲ್ಲ ಅಂತ ಕಾಣುತ್ತದೆ; ನೀನೇ ಎಮ್ಮೆ ಹಿಂಡಿ ಚಹ ಮಾಡಿಕೊಡು.”
ಪುತ್ರನು ಒಳಗೆ ಹೋಗಿ ತಂದೆಯ ಅಭಿಪ್ರಾಯವನ್ನು ತಾಯಿಗೆ ತನ್ನ ತೊದಲು ನುಡಿಯಲ್ಲಿ ತಿಳಿಸಿದನು.
ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮತಿ ಲಕ್ಷ್ಮೀದೇವಿಯವರು ಕೋಪವನ್ನೆಲ್ಲ ಕೇಂದ್ರೀಕರಿಸಿಕೊಂಡು ಹೊರಗೆ ನುಗ್ಗಿ ಬಂದು “ಅಲ್ಲ, ನನ್ನನ್ನು ನಿಮಗೆ ನನ್ನಪ್ಪ ಐದು ಸಾವಿರ ರೂಪಾಯಿ ಒಟ್ಟಿಗೆ ಕೊಟ್ಟಿದ್ದು ಎಮ್ಮೆ ಹಿಂಡಲಿಕ್ಕಲ್ಲ. ತಿಳಿಯಿತೇ?”
ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮಾನ್ ಲಕ್ಷ್ಮೀಪತಿ ರಾಯರು ತಮ್ಮ ಪತ್ನಿಯ ಮಾತಿನ ಮಳೆಯಲ್ಲಿ ತೊಯ್ದು ಮುದ್ದೆಯಾಗಿ ಮಂಕನಂತೆ ಕುಳಿತುಬಿಟ್ಟರು. ಚಕಾರ ಮಾತಾಡಲಿಲ್ಲ ಅವರು.
ಆಳು ಬಂದು ಎಮ್ಮೆ ಹಿಂಡಿ, ಚಹಮಾಡಿ, ಇಬ್ಬರೂ ಕುಡಿದು ತಮ್ಮ ನಿತ್ಯದ ಕಾರ್ಯಕಲಾಪಗಳಿಗೆ ತೊಡಗಿದರೇನೋ ನಿಜ. ಆದರೆ ರಾಯರ ತಲೆ ಕಿರಿಕಿರಿ ಉಳಿಯಿತು.
ಸಂಜೆಯ ಮುಂದೆ ಅವರು “ನಾಳೆ ಸಂಜೆ ಬರುತ್ತೇನೆ.” ಎಂದು ಹೇಳಿ ಹೊರಟರು.
ಮರುದಿನ ಅವರು ಬರಲು ತುಸು ತಡವಾಯಿತು; ಸಂಜೆಯ ಬದಲು ರಾತ್ರಿಯಾಯಿತು. ಹೊಸ್ತಿಲಿಗೆ ಕಾಲಿಡುವ ಮುಂಚೆ ಲಕ್ಷ್ಮೀದೇವಿಯವರು ತಮ್ಮ ಪತಿಯು ತಡವಾಗಿ ಬಂದ ಬಗ್ಯೆ ಗುಡುಗಿ ಮಿಂಚಿ ಮಾತಿನ ಮಳೆಗರೆದರು.
ರಾಯರು ಚಕಾರ ಮಾತಾಡದೆ ಐದು ಸಾವಿರ ಮುಟ್ಟಿದ ಬಗ್ಗೆ ತಮ್ಮ ಮಾವಂದಿರು-ಅರ್ಥಾತ್ ದೇವಿಯವರ ತಂದೆಯವರು ಕೊಟ್ಟ ಪಾವತಿಯನ್ನು ತಮ್ಮ ಪತ್ನಿಯ ದೃಷ್ಟಿಗೆ ಹಿಡಿದರು.
ಲಕ್ಷ್ಮೀದೇವಿಯ ಕಣ್ಣು ತುಂಬಿ ಬಂದುವು. ಅವರು-ಅಲ್ಲ-ಅವಳು-ನಿಜವಾಗಿ (ಕಂಬನಿ) ಮಳೆಗರೆದಳು.
ಮರುದಿನ ಮುಂಜಾನೆ ರಾಯರು ಎಚ್ಚರಾಗಿ ಕಣ್ಣು ತೆರೆಯುವಾಗ ಲಕ್ಷ್ಮೀದೇವಿ ಕಸ ಹೊಡೆಯುತಿದ್ದಾಳೆ!
*****

















