Home / ಕವನ / ಕವಿತೆ / ಗಾಂಧೀಸ್ತವ

ಗಾಂಧೀಸ್ತವ

ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ
ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ
ನೆನೆಯುತಚ್ಚರಿಗೊಳುವೆ ಮಹಿಮನ ದಿವ್ಯಮಂಗಳ ಚರಿತೆಗೆ
ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ.
ನಡಸುವೊಲೆ ನಡೆವಂಥ ಕುರಿಗಳೆ ನೀವು, ಭಾರತಪುತ್ರರೆ?
ಪಡೆದುದನು ಪಡುವಂಥ ದುರ್ಬಲ ದೈವದೇಯ ನಿರೀಹರೇ?
ನಡೆಯಿರೀ ಬಳಿ, ನೋಡಿಕೊಳ್ಳಿರಿ ಪಡಿನೆಳಲ ನನ್ನಿರವೊಳು
ಬಿಡಿರಿ ದೈನ್ಯವನೆಂದು ಸಾರಿದ ಈತನಲ್ಲವೆ ತೀರ್ಥನು!
ಎನಿತು ತಾರೆಗಳಿರಲಿ ಇರುಳೀ ಚಂದ್ರನಿಂ ಜ್ಯೋತಿಷ್ಮತಿ
ಅನಿತೆ ತಮವಿಡಿದೆಮ್ಮ ನೆಲವೀ ಗಾಂಧಿಯಿಂ ಜ್ಯೋತಿಷ್ಮತಿ
ಮನಕೆ ನಿಲುಕದ ದಿವ್ಯದೀಪ್ತಿಯ ಸೊಂಡು ಮೈಯೊಳು ಪಳಗಿಸಿ
ತನಿವೆಳಗ ನಮ್ಮೆಡೆಗೆ ಚೆಲ್ಲಿದ ಸೌಮ್ಯನಿವನೆಮಗಿನಿಯನೈ.
ತನ್ನ ನಿಜದೊಳು ತಾನು ನಡೆಯಲು ಲೋಕ ತನ್ನಂತಪ್ಪುದು
ಉನ್ನತಿಯ ಬಯಸುವೊಡೆ ವಿಷಯದ ನಂಟು ಸಾಧಕಗೊಪ್ಪದು
ಬನ್ನಗಳ ಬೆಲೆಯಿಂದಲಾತ್ಮದ ಸಂಪದವ ವಿಧಿಯಳೆವನು
ಎನ್ನುವೀ ಸಾಮಾನ್ಯನೀತಿಯಿನಾದನಿವನಸಮಾನನು.
ತಾಳ್ಮೆಯಿಂ ಕ್ರೌರ್ಯವನು ಶಾಂತಿಯಿಂ ಕೋಪವನು
ಸತ್ಯದಿಂದನೃತವನು ಗೆಲ್ಲೆ ಬಯಸಿ
ಜಾಲ್ಮತೆಗೆ ಜಾಲ್ಮತೆಯನೊಡ್ಡಿ ಸೆಣಸುವ ರೂಢ
ರಾಜನೀತಿಯನೊಡೆದನೀ ಸಾಹಸಿ
ನಲ್ಮೆಗುರಿಯನು ಮುಟ್ಟೆ ಪೊಲ್ಲಮೆಯ ಬಳಿ ಸಲ್ಲ
ಭಾವದಂದದಿ ಬದುಕು, ಬೇರೆಯಲ್ಲ
ಮೇಲ್ಮೆಯನು ಸಾಧಿಪೊಡೆ ನೇರವಿರಲೆಮ್ಮ ನಡೆ
ಎಂಬಿವನ ಶಿವಛಲವನಾವ ಬಲ್ಲ?
ಕೇಡಿಗೆ ಕೇಡೆಣಿಸುವ ಬಗೆ ದೇವಗು ತಪ್ಪದೆನೆ
ಹಾಡುವೆವೆಂಟವತಾರದ ಗೋವಿಂದನ ಭವವ
ಈಡಾಗದೆ ಈತೆರ ಖಲಶಾಪಕೆ ಮಾತವಸಿ
ನೀಡಿದನಭಯವ ಲೋಕಕೆ-ಈತನಿಗಾವನೆಣೆ?
ಹೊಗಳಲೆ ಹರಿಜನಶಾಪವಿಮೋಚನ ಕಾರ್ಯವ
ಹೊಗಳಲೆ ನಾಡಿನ ನೈಚ್ಯವನಳಿಸಿದ ಕಾರ್ಯವ
ಹೊಗಳಲೆ ನರಪಶು ಮಾನವನೆನಿಸಿದ ಕಾರ್ಯವ?
ಹೊಗಳಿಕೆಗೂ ಮಿಗಿಲೀತನ ಕಲ್ಯಾಣಕೃತಿ.
ಹದಗೆಡುವೊಲು ನರಲೋಕದೊಳಾಸುರಶಕ್ತಿಯ ತುಂಬಿ
ಅದತೂಗಲು ದುರ್ಬಲಶಿವಸದ್‌ಬಲನೊಬ್ಬನ ತಂದು
ಒದಗುತ್ತಿರಲೀ ತೂಕಕೆ ಶಿವಾಶಿವದ ಸಮಭಾರ
ವಿಧಿಯೀತನನೊಯ್ದನಲಾ ಏನೀ ವಿಷಮವಿಲಾಸ!
ತಕ್ಕುದೆ ಉಳಿಯುವುದೆನ್ನುವ ನಿಯಮವ
ಪಾಶವಲೋಕದೊಳನ್ವಯಿಸಿ
ತಕ್ಕವನೆನಿಸದ ಮಾನವಶಿಶುವನು
ಜೀವಶಕ್ತಿ ಹೊರತಂದಂತೆ
ಉಕ್ಕಿನ ಯುಗದೊಳು ಯಾಂತ್ರಿಕ ಬಲವ-
ದ್ಧರ್ಮವ ಹಿಂಚಿಸಿ ಮುಂಬರಿಯೆ
ಸೊಕ್ಕಿದವರು ಬಲುನಕ್ಕು ಜರೆಯುವೀ
ಗಾಂಧೀಧರ್ಮವ ತಂದಿಹುದೋ?
೧೦
ಮಹಾತ್ಮನುದಿಸುವ ಮುನ್ನೀನಾಡಿನ ಬಾಳ್ವೆಯ ತೆರ ಬೇರೆ
ಇಹಯಾತ್ರೆಯನಿವ ಮುಗಿಸುತ ಮರಳಲು ಇದರೀತೆರ ಬೇರೆ
ಮಹಾನುಭಾವನ ಸಮೃದ್ಧರುಚಿಯೀ ಜೀವನರಸ ಬೆರೆತು
ಮಹಾಂತವಹುದೀ ಭಾರತಜೀವನ ಸೌಹೃದರಸರುಚಿರ.
೧೧
ಈತೆರವೀ ದಿನ ಸಂತನ ನೆನೆಯುತ
ನುತಿಸುತ ಹರಕೆಯನಾಡುತ್ತ
ಮಾತನು ಹೃದಯದ ತುಡಿತಕೆ ನಡೆಸುತ
ಆತಗೆ ಮಣಿಯುತ್ತಿದೆ ಚಿತ್ತ.
*****
Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...