Home / ಕವನ / ಕವಿತೆ / ಗಾಂಧೀಸ್ತವ

ಗಾಂಧೀಸ್ತವ

ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ
ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ
ನೆನೆಯುತಚ್ಚರಿಗೊಳುವೆ ಮಹಿಮನ ದಿವ್ಯಮಂಗಳ ಚರಿತೆಗೆ
ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ.
ನಡಸುವೊಲೆ ನಡೆವಂಥ ಕುರಿಗಳೆ ನೀವು, ಭಾರತಪುತ್ರರೆ?
ಪಡೆದುದನು ಪಡುವಂಥ ದುರ್ಬಲ ದೈವದೇಯ ನಿರೀಹರೇ?
ನಡೆಯಿರೀ ಬಳಿ, ನೋಡಿಕೊಳ್ಳಿರಿ ಪಡಿನೆಳಲ ನನ್ನಿರವೊಳು
ಬಿಡಿರಿ ದೈನ್ಯವನೆಂದು ಸಾರಿದ ಈತನಲ್ಲವೆ ತೀರ್ಥನು!
ಎನಿತು ತಾರೆಗಳಿರಲಿ ಇರುಳೀ ಚಂದ್ರನಿಂ ಜ್ಯೋತಿಷ್ಮತಿ
ಅನಿತೆ ತಮವಿಡಿದೆಮ್ಮ ನೆಲವೀ ಗಾಂಧಿಯಿಂ ಜ್ಯೋತಿಷ್ಮತಿ
ಮನಕೆ ನಿಲುಕದ ದಿವ್ಯದೀಪ್ತಿಯ ಸೊಂಡು ಮೈಯೊಳು ಪಳಗಿಸಿ
ತನಿವೆಳಗ ನಮ್ಮೆಡೆಗೆ ಚೆಲ್ಲಿದ ಸೌಮ್ಯನಿವನೆಮಗಿನಿಯನೈ.
ತನ್ನ ನಿಜದೊಳು ತಾನು ನಡೆಯಲು ಲೋಕ ತನ್ನಂತಪ್ಪುದು
ಉನ್ನತಿಯ ಬಯಸುವೊಡೆ ವಿಷಯದ ನಂಟು ಸಾಧಕಗೊಪ್ಪದು
ಬನ್ನಗಳ ಬೆಲೆಯಿಂದಲಾತ್ಮದ ಸಂಪದವ ವಿಧಿಯಳೆವನು
ಎನ್ನುವೀ ಸಾಮಾನ್ಯನೀತಿಯಿನಾದನಿವನಸಮಾನನು.
ತಾಳ್ಮೆಯಿಂ ಕ್ರೌರ್ಯವನು ಶಾಂತಿಯಿಂ ಕೋಪವನು
ಸತ್ಯದಿಂದನೃತವನು ಗೆಲ್ಲೆ ಬಯಸಿ
ಜಾಲ್ಮತೆಗೆ ಜಾಲ್ಮತೆಯನೊಡ್ಡಿ ಸೆಣಸುವ ರೂಢ
ರಾಜನೀತಿಯನೊಡೆದನೀ ಸಾಹಸಿ
ನಲ್ಮೆಗುರಿಯನು ಮುಟ್ಟೆ ಪೊಲ್ಲಮೆಯ ಬಳಿ ಸಲ್ಲ
ಭಾವದಂದದಿ ಬದುಕು, ಬೇರೆಯಲ್ಲ
ಮೇಲ್ಮೆಯನು ಸಾಧಿಪೊಡೆ ನೇರವಿರಲೆಮ್ಮ ನಡೆ
ಎಂಬಿವನ ಶಿವಛಲವನಾವ ಬಲ್ಲ?
ಕೇಡಿಗೆ ಕೇಡೆಣಿಸುವ ಬಗೆ ದೇವಗು ತಪ್ಪದೆನೆ
ಹಾಡುವೆವೆಂಟವತಾರದ ಗೋವಿಂದನ ಭವವ
ಈಡಾಗದೆ ಈತೆರ ಖಲಶಾಪಕೆ ಮಾತವಸಿ
ನೀಡಿದನಭಯವ ಲೋಕಕೆ-ಈತನಿಗಾವನೆಣೆ?
ಹೊಗಳಲೆ ಹರಿಜನಶಾಪವಿಮೋಚನ ಕಾರ್ಯವ
ಹೊಗಳಲೆ ನಾಡಿನ ನೈಚ್ಯವನಳಿಸಿದ ಕಾರ್ಯವ
ಹೊಗಳಲೆ ನರಪಶು ಮಾನವನೆನಿಸಿದ ಕಾರ್ಯವ?
ಹೊಗಳಿಕೆಗೂ ಮಿಗಿಲೀತನ ಕಲ್ಯಾಣಕೃತಿ.
ಹದಗೆಡುವೊಲು ನರಲೋಕದೊಳಾಸುರಶಕ್ತಿಯ ತುಂಬಿ
ಅದತೂಗಲು ದುರ್ಬಲಶಿವಸದ್‌ಬಲನೊಬ್ಬನ ತಂದು
ಒದಗುತ್ತಿರಲೀ ತೂಕಕೆ ಶಿವಾಶಿವದ ಸಮಭಾರ
ವಿಧಿಯೀತನನೊಯ್ದನಲಾ ಏನೀ ವಿಷಮವಿಲಾಸ!
ತಕ್ಕುದೆ ಉಳಿಯುವುದೆನ್ನುವ ನಿಯಮವ
ಪಾಶವಲೋಕದೊಳನ್ವಯಿಸಿ
ತಕ್ಕವನೆನಿಸದ ಮಾನವಶಿಶುವನು
ಜೀವಶಕ್ತಿ ಹೊರತಂದಂತೆ
ಉಕ್ಕಿನ ಯುಗದೊಳು ಯಾಂತ್ರಿಕ ಬಲವ-
ದ್ಧರ್ಮವ ಹಿಂಚಿಸಿ ಮುಂಬರಿಯೆ
ಸೊಕ್ಕಿದವರು ಬಲುನಕ್ಕು ಜರೆಯುವೀ
ಗಾಂಧೀಧರ್ಮವ ತಂದಿಹುದೋ?
೧೦
ಮಹಾತ್ಮನುದಿಸುವ ಮುನ್ನೀನಾಡಿನ ಬಾಳ್ವೆಯ ತೆರ ಬೇರೆ
ಇಹಯಾತ್ರೆಯನಿವ ಮುಗಿಸುತ ಮರಳಲು ಇದರೀತೆರ ಬೇರೆ
ಮಹಾನುಭಾವನ ಸಮೃದ್ಧರುಚಿಯೀ ಜೀವನರಸ ಬೆರೆತು
ಮಹಾಂತವಹುದೀ ಭಾರತಜೀವನ ಸೌಹೃದರಸರುಚಿರ.
೧೧
ಈತೆರವೀ ದಿನ ಸಂತನ ನೆನೆಯುತ
ನುತಿಸುತ ಹರಕೆಯನಾಡುತ್ತ
ಮಾತನು ಹೃದಯದ ತುಡಿತಕೆ ನಡೆಸುತ
ಆತಗೆ ಮಣಿಯುತ್ತಿದೆ ಚಿತ್ತ.
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...