Home / ಕವನ / ಕವಿತೆ / ನಾಡಿನಳ್ಕರೆ

ನಾಡಿನಳ್ಕರೆ

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ
ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ
ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ
ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ?

ನಲಿವ ತೋಪಿನ ನಗುವ ಕೆರೆಗಳ ಹುಲುಸು ಪೈರಿನ ಹೊಲಗಳ
ದೂರ ಕುಲಪಿತರಂತೆ ರಕ್ಷೆಗೆ ಕುಳಿತ ಸಾಲಿನ ಮಲೆಗಳ
ಜೀವದಾನದ ಅಂಬುವಾಹದ ಬಯಲ ಮಡಲಿನ ಹಳ್ಳಿಯ
ನಮ್ಮ ನೆಲದೀ ಚೆಲುವ ಕುರಿತಿಂದಾವ ತರದೊಳು ಹಾಡಲಿ?

ದಿನವ ದೇವನ ತೇರಸೆಳೆಯುವ ಕುದುರೆಯೇಳರ ಕೆನತಕೆ
ಹೊಳಲುಗೊಡುವಿಂಚರದ ಕಣಿವೆಯ, ಮಲೆಯ ಗಾಳಿಯ ಮಲೆತಕೆ
ಹುರುಪುಗೊಡುತಿಹ ಹೂತ ಹಿಪ್ಪೆಯ ಕಂಪಿನುಸಿರಿನ ಹುಳುವಿನ
ಹೊಲದ ತಾಯಿಯ ಮೊಲೆಯ ತೆರದೊಳು ಕಣದ ಬಣಬೆಗಳೊಟ್ಟಿನ

ತಳಿರಿನವಕುಂಠನದಿ ಮಾಧವವಧುವಿನಂದದ ಮಾವಿನ
ತರಳಪರ್ಣಾಶ್ವತ್ಥವೃಕ್ಷಕೆ ಮಧುರಳಾಗಿಹ ಬೇವಿನ
ಸ್ವಾವಲಂಬನದಿಂದ ಹಳುವನೆ ತುಂಬುವೊಲು ಬೆಳೆವಾಲದ
ತಂಪುನೆಳಲೊಳು ಬಿಡುವಗೊಳ್ಳಲು ಗೊಲ್ಲನೊಲಿವ ತಮಾಲದ

ಕೋಡತುದಿಯೊಳು ಕಾಡನಡುಗಡೆ ಆತ್ಮದನುಭವಸಾರವ
ತುಂಬಿಯಂದದಿ ಮರ್ತ್ಯ ಕೂಡಿಡೆ ಬಯಸಿ ಭದ್ರಾಗಾರವ
ನಿರ್ಮಿಸಿಹ ನೀತೆರದೊಳೆನುವಂತಿರುವ ಗುಡಿಗೋಪುರಗಳ
ಬದುಕಿಗೂರಿದ ಸೊಬಗೆ ಹರಳಾದಂತೆ ಮೆರೆಯುವ ಪುರಗಳ-

ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ಸುರಗಿ ಪಾದರಿ ಕೇದಗೆ
ಹಲವು ಹೋಲಿಕೆಗಾದ ಪಂಕಜ ಇರವಂತಿ ಸೇವಂತಿಗೆ
ಪಾರಿಜಾತ ಸುಗಂಧರಾಜ ಕದಂಬ ಜಾಲಿಯ ಸೌಸವ
ಆವ ಮಣ್ಣೀತೆರದ ಕಂಪೊಳು ಪ್ರಕಟಿಪುದು ತನ್ನಾತ್ಮವ?

ತಿಣ್ಣಮಲೆಗಾಳಿಯನು ಹೊಗಳಲೆ ತಪ್ಪಲಿನ ಕಮ್ಮೆಲರನು
ಕೆರೆಯ ಚೆಂದಾವರೆಯ ಹೂಗಳ ಹಾಯ್ದು ಬಹ ತಣ್ಣೆಲರನು
ಮಳೆಯ ಮೋಡದಿ ತೂರಿ ಮಿಂಚನು ಕುಣಿಸಿ ಗುಡುಗನು ದನಿಸುತ
ಜವ್ವನಿಗರೆದೆ ಬೆದರೆ ಬರುವಾ ಮುಂಗಾರ ಬೆದೆಗಾಳಿಯ ?

ಮಾಂದಳಿರ ಕೈಯಾಡೆ ಕೋಗಿಲೆ ಕೂಗೆ ದುಂಬಿಯು ಮೊರೆಯಿಡೆ
ಪಚ್ಚೆಗಿಳಿಗಳ ತೊಡವ ತೋರುತ ಗೋಣಿಮರಗಳು ಸಾಲಿಡೆ
ಹಚ್ಚ ಹಸುರಿನ ನಡುವೆ ಬೆಳ್ಳನೆ ದಾರಿ ಪಯಣಕೆ ಹೊರಟಿರೆ
ನನ್ನ ಚಿತ್ತವ ದಾರಿಗನ ಗೈದೆಲ್ಲಿಗೈದಿಸಲೀ ದಿನ?

ನೆಲಮುಗಿಲ ಕನಸುಗಳ ಕೊಳ್ಳುತ ದನಿಯ ದೋಣಿಯೊಳಾಡಿಸಿ
ಎಲರ ಮಲರಿಸುವಂಥ ಹಕ್ಕಿಗಳಿಂಚರವ ನಾನಾಲಿಸಿ
ಭಾವ ಶೃಂಗಾರದೊಳು ಛಂದೋಗತಿಗೆ ನರ್ತಿಸಲೆಳಸುವೀ
ನುಡಿಯ ಲಾಸ್ಯಕೆ ರಂಗವಾವುದ ಸಜ್ಜುಗೊಳಿಸುವೆನೇಪರಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...