ಒಬ್ಬ ಶಿಷ್ಯ ಗುರುವಿನಲ್ಲಿ ಬಂದು ಒಂದು ವಿಚಿತ್ರ ಪ್ರಶ್ನೆ ಕೇಳಿದ. “ಈ ಬದುಕು ಹ್ರಸ್ವವೇ ಇಲ್ಲ ಧೀರ್ಘವೇ?” ಎಂದು.
“ಅದು ಅವರವರ ಸಾಧನೆಗೆ ತಕ್ಕಂತೆ” ಎಂದರು ಗುರುಗಳು. ಮಹತ್, ಬೃಹತ್ ಹಿಂದೆ ಸಾಗುವ ಬದುಕು ಬಲು ಧೀರ್ಘ. ಕ್ಷಣಿಕಕ್ಕೆ ತುತ್ತಾದರೆ ಹ್ರಸ್ವ. ಅನಂತದ ನೂಲಿನಲ್ಲಿ ನೇಯಬೇಕು ಬದುಕು. ಅಮರತೆಯ ಅಮಲಿನಲ್ಲಿ ಮೀಯಬೇಕು ಬದುಕು.
“ನಶ್ವರ, ಕ್ಷಣಿಕವೆನ್ನುವ ಈ ಮಾನವ ಬಾಳಲ್ಲಿ ಅಮರತ್ವದ ಛಾವಣಿ ನಿತ್ಯದ ನೆಲೆ ಯಾವುದು ಗುರವರ್ಯಾ?” ಎಂದ ಶಿಷ್ಯ ಸಂದೇಹ ಪೂರ್ತಿ ಹೋಗದೆ.
“ಶಿಷ್ಯಾ! ಈ ಬದುಕಿಗೆ ವಿಸ್ತಾರದ ಛಾವಣಿ ಆಗಸ. ಈ ಬದುಕಿಗೆ ನಿತ್ಯದ ನೆಲೆ ಭೂಮಿ. ಈ ಅನಂತತೆಗೆ ಹೊಂದಿಕೊಂಡಿರುವ ಬಾಳು ಬದುಕು- ಧೀರ್ಘನಡೆಯಲ್ಲಿ ಶಿಖರಕ್ಕೆ ಬೆಳೆಯುತ್ತದೆ. ಎಡವಿದಲ್ಲಿ ಬಿದ್ದು ಹ್ರಸ್ವವಾಗುತ್ತದೆ. ಮಾನವನ ಹೃದಯ ಒಂದು ಸಾಗರ. ಇಲ್ಲಿ ಪ್ರೀತಿ ಅಲೆಗಳಿರುವ ತನಕ ಬದುಕು ಬರಡಲ್ಲ – ಬದುಕು ಬಂಗಾರ.
ಬದುಕಿನ ಕ್ಷಣಗಳು ಅವು ಅನಂತತೆಯ ಬಿಂದುಗಳು. ಕ್ಷಣ ನಿರೀಕ್ಷಣೆ, ಕ್ಷಣ ಅನ್ವೇಷಣೆ, ಕ್ಷಣ ಸ್ಪುರಣ, ಕ್ಷಣ ವೀಕ್ಷಣದಲ್ಲಿ, ಕ್ಷಣವಾಗುತ್ತದೆ ಅಕ್ಷಯ ಕಣ. ಪ್ರತಿಕ್ಷಣದ ಬಾಳಿಗೆ ಬದುಕಿಗೆ ಸಾವಿಲ್ಲ. ಅದು ಅಮರ-ಅಂತವಿಲ್ಲದ ಅನಂತ. ಸಂತೆ ಇಲ್ಲದ ವಸಂತ, ಚಿಂತೆಯಿಲ್ಲದ ಚಿರಂತ, ಕಂತೆಯಿಲ್ಲದ-ಕಲ್ಪವೃಕ್ಷ. ಆಗ ಬಾಳು ಬದುಕುತ್ತದೆ ಯುಗ ಯುಗಾಂತರ ಮಹತ್ತಿನ ಮಾನವ ಬಾಳು ಸಾಗುತ್ತದೆ ಮನ್ವಂತರ. ಅನಂತದ ಜೋಕಾಲಿಗೆ ಜೋತು ಬಿದ್ದು ಬದುಕನ್ನು ಹಿಡಿದು ಕೈತೂಗುತ್ತಲಿದೆ ಅದು ಧೀರ್ಘ, ಕೈಬಿಡೆ ಅದು ಹ್ರಸ್ವ” ಎಂದಾಗ ಗುರುಗಳು, ಶಿಷ್ಯನ ಎದ ತುಂಬಿ ಹರಿಯಿತು.
*****

















