
೧
ಯದುಕುಲಾಂಬುಧಿ ಚಂದ್ರ ವರಗುಣ
ಹೃದಯ ಕನ್ನಡ ನಾಡ ಕಣ್ಮಣಿ
ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ
ಸುದತಿ ಸತ್ಯಪ್ರೇಮದೇವಿಯ
ಮುದದಿ ವೆರಸುತ ರಾಜ್ಯಲಕ್ಷ್ಮಿಯ
ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ
೨
ವರದೆ ಶುಭಕಾವೇರಿ ಗೋದಾ
ವರಿಯು ವೇದಾವತಿ ಕಪಿಲೆಯರು
ಪರಮಪಾವನೆ ತುಂಗಭದ್ರೆಯು ಪಂಚ ಕನ್ಯೆಯರು
ಕರದಿ ಧರಿಸಿಹ ಪುಣ್ಯ ಜಲವನು
ಸುರಿಸುವರು ಮಕುಟಾಗ್ರದಲಿ ನೀ
ನರಸುತನಗೈಯ್ಯೆಂದು ಹರಸುವರು ಜನಪೋತ್ತಮಕೆ
೩
ಯಾದವಾನ್ವಯ ಮಾತೆ ಗಿರಿಜೆಯು
ಮೋದದಿಂದಲಿ ಕಟ್ಟಿ ಪಟ್ಟವ
ಗಾದಿಯಲಿ ಕುಳ್ಳಿರಿಸಿ ಕರವಾಲವಿಡುತ ಕರದಲಿ
ಸಾದರದಿ ಶಿಖ ಮೊಹರ ನೀಡುತ
ಮೇದಿನೀಪತಿಯಾಗಿ ಧರೆಯಲಿ
ಮೇದಿನೀಶರ ಮೌಳಿಮಣಿಯಾಗೆಂದು ಹರಸುವಳು
೪
ಪುಣ್ಯ ಪುರುಷನೆ! ನಿನ್ನ ಸಲಹಲಿ
ಪುಣ್ಯ ನದಿಗಳ ಪುಣ್ಯತೀರ್ಥದ
ಪುಣ್ಯರಾಶಿಯು ಪುಣ್ಯ ಪುರುಷರ ತಪದ ಫಲವೆಲ್ಲ
ಪುಣ್ಯವಧು ಸಚ್ಚರಿತೆ ಪುಣ್ಯಾ
ರಣ್ಯೆ ಸತ್ಯಪ್ರೇಮದೇವಿಯ
ಪುಣ್ಯವರ್ಧಿಸಿ ವಂಶಲತೆ ಪೂತು ಫಲಿಸಲಿಹದಲಿ
೫
ವೀರ ಯದುರಾಯರ ಕಲಿತನವ
ಧೀರ ರಾಜೊಡೆಯರಭಿಮಾನವ
ಶೂರ ಚಿಕದೇವಾಖ್ಯಭೂಪರ ದೈವಭಕ್ತಿಯ ಮೇಣ್
ಧೀರ ಮುಮ್ಮಡಿ ಕೃಷ್ಣಜನಪರ
ಶೂರರೆನಿಸಿದ ಚಾಮರಾಜರ
ಚಾರುತರ ಗುಣಗಣವ ಮೆರೆಸುತ ಸಲಹು ಲೋಕವನು
೬
“ರಾಜಋಷಿ” ಯೆಂದೆನಿಸಿ ಬಾಳಿದ
ರಾಜ ನಾಲ್ವಡಿ ಕೃಷ್ಣಭೂಪರ
ತೇಜವನು ಬೀರುತ್ತ ರಕ್ಷಿಸು ನಾಡ ಪ್ರಜೆಗಳನು
ಸಾಜದಿಂದಲಿ ತಂದೆಯಂದದಿ
ರಾಜಗುಣಗಳ ಪಡೆದು ನೆರೆ ರಾ
ರಾಜಿಸೈ ನೀಂ ರತ್ನ ಸಿಂಹಾಸನದಿ ಮಂಡಿಸುತ
೭
ಪಟ್ಟ ಭದ್ರನೆ ಸುಖಿಸು ಸಂತತ
ಪಟ್ಟಮಹಿಷಿಯ ಸಹಿತ ಧರೆಯಲಿ
ಪಟ್ಟದಾನೆಯು ಪಟ್ಟದಶ್ವವು ನಿರುತ ವರ್ಧಿಸಲಿ
ಪಟ್ಟಮೆರೆಯಲಿ ಶಾಶ್ವತವೆನಿಸಿ
ನೆಟ್ಟಿರಲಿ ಯದುವಂಶ ಪೀಳಿಗೆ
ಯಟ್ಟಹಾಸದಿ ವರ್ಧಿಸಲಿ ರವಿಚಂದ್ರರಿರುವನಕ
೮
ವಿಜಯಿಸೈ ಜಯಚಾಮರಾಜನೆ
ವಿಜಯಸೈ ನವಕೋಮಲಾಂಗನೆ
ವಿಜಯಸೈ ಶುಭವನಿತೆ ಚಾರುಪುನೀತೆಯವೆರಸಿ ನೀಂ
ವಿಜಯಲಕ್ಷ್ಮಿಯ ಪೂರ್ಣ ಕೃಪೆಯಿಂ
ವಿಜಯಿಯಾಗೈ ಸುಜನರಂಜಕ
ವಿಜಯ ಲಕ್ಷ್ಮಾಂಬಿಕೆಯ ನಲವಿನ ಮುದ್ದುಸೋದರನೆ
೯
ಸುಖಿಸು ನೀಂ ಜಯಚಾಮ ರಾಜನೆ
ಸುಖಸು ನೀಂ ನರಸಿಂಹವರನಯನೆ
ಸುಖಿಸು ಸತ್ಯಪ್ರೇಮಭಾಮೆಯ ವೆರಸಿ ಚಿರಕಾಲ
ಸುಖಿಸು ಕನ್ನಡನಾಡ ಕಣ್ಮಣಿ
ಸುಖಿಸು ಯದುಕುಲ ವೀರ ದಿನಮಣಿ
ಸುಖಸು ದೀನರ ಸಂತ ಬುಧ ಕವಿ ಜನರ ಪಾಲಿಸುತ
………
ಚಿರಮಭಿವರ್ಧತಾ೦ ಯದುಸಂತಾನ ಶ್ರೀಃ
*****
















