Home / ಕವನ / ಕವಿತೆ / ಶುಭಾಶಂಸನೆ

ಶುಭಾಶಂಸನೆ

ಯದುಕುಲಾಂಬುಧಿ ಚಂದ್ರ ವರಗುಣ
ಹೃದಯ ಕನ್ನಡ ನಾಡ ಕಣ್ಮಣಿ
ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ
ಸುದತಿ ಸತ್ಯಪ್ರೇಮದೇವಿಯ
ಮುದದಿ ವೆರಸುತ ರಾಜ್ಯಲಕ್ಷ್ಮಿಯ
ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ
ವರದೆ ಶುಭಕಾವೇರಿ ಗೋದಾ
ವರಿಯು ವೇದಾವತಿ ಕಪಿಲೆಯರು
ಪರಮಪಾವನೆ ತುಂಗಭದ್ರೆಯು ಪಂಚ ಕನ್ಯೆಯರು
ಕರದಿ ಧರಿಸಿಹ ಪುಣ್ಯ ಜಲವನು
ಸುರಿಸುವರು ಮಕುಟಾಗ್ರದಲಿ ನೀ
ನರಸುತನಗೈಯ್ಯೆಂದು ಹರಸುವರು ಜನಪೋತ್ತಮಕೆ
ಯಾದವಾನ್ವಯ ಮಾತೆ ಗಿರಿಜೆಯು
ಮೋದದಿಂದಲಿ ಕಟ್ಟಿ ಪಟ್ಟವ
ಗಾದಿಯಲಿ ಕುಳ್ಳಿರಿಸಿ ಕರವಾಲವಿಡುತ ಕರದಲಿ
ಸಾದರದಿ ಶಿಖ ಮೊಹರ ನೀಡುತ
ಮೇದಿನೀಪತಿಯಾಗಿ ಧರೆಯಲಿ
ಮೇದಿನೀಶರ ಮೌಳಿಮಣಿಯಾಗೆಂದು ಹರಸುವಳು
ಪುಣ್ಯ ಪುರುಷನೆ! ನಿನ್ನ ಸಲಹಲಿ
ಪುಣ್ಯ ನದಿಗಳ ಪುಣ್ಯತೀರ್ಥದ
ಪುಣ್ಯರಾಶಿಯು ಪುಣ್ಯ ಪುರುಷರ ತಪದ ಫಲವೆಲ್ಲ
ಪುಣ್ಯವಧು ಸಚ್ಚರಿತೆ ಪುಣ್ಯಾ
ರಣ್ಯೆ ಸತ್ಯಪ್ರೇಮದೇವಿಯ
ಪುಣ್ಯವರ್ಧಿಸಿ ವಂಶಲತೆ ಪೂತು ಫಲಿಸಲಿಹದಲಿ
ವೀರ ಯದುರಾಯರ ಕಲಿತನವ
ಧೀರ ರಾಜೊಡೆಯರಭಿಮಾನವ
ಶೂರ ಚಿಕದೇವಾಖ್ಯಭೂಪರ ದೈವಭಕ್ತಿಯ ಮೇಣ್‌
ಧೀರ ಮುಮ್ಮಡಿ ಕೃಷ್ಣಜನಪರ
ಶೂರರೆನಿಸಿದ ಚಾಮರಾಜರ
ಚಾರುತರ ಗುಣಗಣವ ಮೆರೆಸುತ ಸಲಹು ಲೋಕವನು
“ರಾಜಋಷಿ” ಯೆಂದೆನಿಸಿ ಬಾಳಿದ
ರಾಜ ನಾಲ್ವಡಿ ಕೃಷ್ಣಭೂಪರ
ತೇಜವನು ಬೀರುತ್ತ ರಕ್ಷಿಸು ನಾಡ ಪ್ರಜೆಗಳನು
ಸಾಜದಿಂದಲಿ ತಂದೆಯಂದದಿ
ರಾಜಗುಣಗಳ ಪಡೆದು ನೆರೆ ರಾ
ರಾಜಿಸೈ ನೀಂ ರತ್ನ ಸಿಂಹಾಸನದಿ ಮಂಡಿಸುತ
ಪಟ್ಟ ಭದ್ರನೆ ಸುಖಿಸು ಸಂತತ
ಪಟ್ಟಮಹಿಷಿಯ ಸಹಿತ ಧರೆಯಲಿ
ಪಟ್ಟದಾನೆಯು ಪಟ್ಟದಶ್ವವು ನಿರುತ ವರ್ಧಿಸಲಿ
ಪಟ್ಟಮೆರೆಯಲಿ ಶಾಶ್ವತವೆನಿಸಿ
ನೆಟ್ಟಿರಲಿ ಯದುವಂಶ ಪೀಳಿಗೆ
ಯಟ್ಟಹಾಸದಿ ವರ್ಧಿಸಲಿ ರವಿಚಂದ್ರರಿರುವನಕ
ವಿಜಯಿಸೈ ಜಯಚಾಮರಾಜನೆ
ವಿಜಯಸೈ ನವಕೋಮಲಾಂಗನೆ
ವಿಜಯಸೈ ಶುಭವನಿತೆ ಚಾರುಪುನೀತೆಯವೆರಸಿ ನೀಂ
ವಿಜಯಲಕ್ಷ್ಮಿಯ ಪೂರ್ಣ ಕೃಪೆಯಿಂ
ವಿಜಯಿಯಾಗೈ ಸುಜನರಂಜಕ
ವಿಜಯ ಲಕ್ಷ್ಮಾಂಬಿಕೆಯ ನಲವಿನ ಮುದ್ದುಸೋದರನೆ
ಸುಖಿಸು ನೀಂ ಜಯಚಾಮ ರಾಜನೆ
ಸುಖಸು ನೀಂ ನರಸಿಂಹವರನಯನೆ
ಸುಖಿಸು ಸತ್ಯಪ್ರೇಮಭಾಮೆಯ ವೆರಸಿ ಚಿರಕಾಲ
ಸುಖಿಸು ಕನ್ನಡನಾಡ ಕಣ್ಮಣಿ
ಸುಖಿಸು ಯದುಕುಲ ವೀರ ದಿನಮಣಿ
ಸುಖಸು ದೀನರ ಸಂತ ಬುಧ ಕವಿ ಜನರ ಪಾಲಿಸುತ
………
ಚಿರಮಭಿವರ್ಧತಾ೦ ಯದುಸಂತಾನ ಶ್ರೀಃ
*****
Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...