Home / ಕವನ / ಕವಿತೆ / ನೆನೆದೆ ನೆನೆಯುವೆ

ನೆನೆದೆ ನೆನೆಯುವೆ

ನೆನೆದೆ ನೆನೆಯುವೆ ನೆನೆದೆ ನೆನೆಯುವೆ
ಒಂದು ದಿನ ನೀನೆನ್ನನು-
ನಿನ್ನೆದೆಯ ಕದ ತಟ್ಟಿ ಪ್ರೇಮದ
ಭಿಕ್ಷೆ ಬೇಡಿದ ನನ್ನನು! || ಪಲ್ಲವಿ ||

ಇಂದು, ದಿಟ, ನೀನೆನ್ನನಳಲಿನ
ಕಮರಿಯಾಳಕೆ ತಳ್ಳುತ
ಗಟ್ಟಿ ನೆಲದೊಳೆ ನಿಂದೆನೆನ್ನುತ
ಭಾವಿಸಿಹೆ ಮುದಗೊಳ್ಳುತ!
ಅರಿಯೆಯೌ ನೀ! ಕಾಲ ಕೆಳಗಣ
ಭೂಮಿ ದುಗುಡದ ಭಾರದಿ
ಕುಸಿದು ಬೀಳುವುದೊಂದು ದಿನ್ನ ನೀ-
ನಂದು ಪಶ್ಚಾತ್ತಾಪದಿ-

ಅದ್ದಿ ದುಗುಡದೊಳಿರಿಸಿದಂತಿಹ
ಈ ಪ್ರಪಂಚದ ಬಾಳೊಳು
ಅಳಲ ಸವಿಯದೆ ನಡೆವೆನೆನ್ನುವ
ಮಂದನಮತಿಗಳ ಸಾಲೊಳು
ಕಣ್ಣುಗಳ ಮುಚ್ಚಿಂದು ನಡೆದಿಹೆ
ಸವಿಗನಸುಗಳ ಕಾಣುತ.
ಕನಸ ರಂಗಿನ ಗುಳ್ಳೆಯೊಡೆಯದೆ?
ಅಂದು ಕಂಬನಿ ಕಾರುತ-

ಓರೆನೋಟದ ಗಾಳವೆಸೆಯುತ
ಸನಿನುಡಿಯ ನೊಣ ಸಿಕ್ಕಿಸಿ
ಗಿರುಗಿರನೆ ತಿರುಗಿಸುತ ಮೀನೊಲು,
ಕೊರಲ ರಕುತನ ಕಕ್ಕಿಸಿ,
ಬೆಸ್ತನೊಲು, ದಯೆಯಿಂದ ಕೊಲ್ಲದೆ

ಮತ್ತೆ ಜೀವನಕೆಸೆಯುತ
ನಡೆದುದನು ನೀ, ನಿನಗಿದೇ ಸಂ-
ಭವಿಸೆ, ಕೈಕೈ ಹೊಸೆಯುತ-

ಎನಿತೆನಿತೊ ಎಂಥೆಂಥದೋ ಗಾ-
ಯಗಳ ಮರೆಸುವ ಮದ್ದನು
ತನ್ನೊಳಗೆ ಸಂಗ್ರಹಿಪನೆಂಬರು
ಕಾಲನೆನ್ನುವ ವೈದ್ಯನು!
ಆದರೆನ್ನೆದೆಗಾಯ ಮರೆಸಲ-
ಶಕ್ತನಾ ವೈದ್ಯರ ಗುರು!-
ಜಾರೆ ಕೂಸನು ತಿಪ್ಪೆಗೆಸೆವೊಲು
ಇಂದು ನೀನಿದ ಮರೆತರೂ-

ಇಂದು, ಸರಿ, ನೀ ಬಿಟ್ಟ ಚಿಂತೆಯು;
ಹಿಂದೆ ಸಹ ಸುಖ ಕಂಡೆನೆ?
ನಿನ್ನ ಪಡೆಯಲು ಬೆಂದುದಲ್ಲದೆ
ಸವಿಯನಾದರು ಉಂಡೆನೆ?
ಆದರೆನ್ನೊಲೆ ತಪಿಪೆ ನೀನೆಂ-
ದಿರಲು, ಜಾರಿದೆ ತೊರೆಯುತ!
ಮುಂದಕೆಂದಿಗು ಎಡವದಿರುವೆಯ!
ಅಂದು ಕೂಗುತ ಕರೆಯುತ-

ಅಳಲಿಗೆನ್ನನು ತಳ್ಳಿ ಸೊಗವನು
ಪಡೆವ ಭ್ರಾಂತಿಯ ಕಟ್ಟಿಡು!
ಮುಳ್ಳ ಬಿತ್ತುತ ಹೂವ ಬೆಳೆಯುವ
ಆಸೆಗಳ ನೀ ಬಿಡು ಬಿಡು!
ಬರಿಯ ಮುಳ್ಳನೆ ಕಂಡು, ಬಿತ್ತಿದ
ಬೀಜ ನೆನಪಿಗೆ ಬರುವೊಲು

ದುಃಖ ಕವಿಯಲು ಹಿಂದ ನೆನೆಯುತ
ಅತ್ತಕಟ ಎದೆಯೊಡೆವೊಲು-

ಪುರುಷನೊಬ್ಬನದೊಂದು ಹೆಣ್ಣನು
ಒಲಿದರವಳೂ ಅವನನು
ಒಲಿಯಲೇ ಬೇಕೆಂಬ ನಿಯಮವು
ಇಲ್ಲ, ದಿಟ, ಅದ ಬಲ್ಲೆನು!
ಆದರೇನಿದು ನೀನು ಗೈದುದು
ಒಲಿದವೊಲೆ ನೀ ನಟಿಸುತ
ಇದ್ದಕಿದ್ದೊಲೆ ತೊರೆದೆಯೆನ್ನನು;
ಇದನು ದುಗುಡದಿ, ಕೊರಗುತ-

ರೋಗ, ಬಡತನ, ಕಲಹ, ತಟವಟ,
ಗರ್ವಭಂಗವು, ಬೇಸರ,
ಒಲಿಯದಿಹ ಪತಿ, ಒಂದೆ ಇರುಳಿಗೆ
ನಶಿಪ ಕಾಮದ ಕಾತರ-
ಅಳಲ ವೇಷಗಳಿಂತು ವಿಧ ವಿಧ-
ವೆಂಬುದನು ನೀ ಮರೆಯುತ
ಜಾರಲೆತ್ನಿಸಿ ವಿಷಮವ್ಯೂಹದಿ
ಬಿದ್ದೆ ಬೀಳುವೆ! ಕೊರಗುತ-

ಬರುವ ಬಾಳೊಳು ನಿನಗೆ ಕೆಟ್ಟುದ
ಬಯಸುವುದು, ದಿಟ, ಸಲ್ಲದು.
ಬಲ್ಲೆ; ನಿನ್ನಯ ಕ್ರೌರ್ಯವೆನ್ನನು
ಅಂಥ ಮಟ್ಟಕೆ ಒಯ್ಯದು!
ಆದರೆನ್ನೆದೆಯೊಳಗಿನಾಳದಿ-
ನಾವುದೋ ದನಿ ಚಿಮ್ಮಿದೆ
ಎಡೆಬಿಡದೊಲುಕ್ಯುತ್ತ, ಸೇಡೊಳು
ಷಂಡ ರೋಷದಿ ಚೀರಿದೆ:

“ನೆನೆದೆ ನೆನೆಯುವೆ ನೆನೆದೆ ನೆನೆಯುವೆ
ಒಂದು ದಿನ ನೀನೆನ್ನನು-
ನಿನ್ನೆದೆಯ ಕದ ತಟ್ಟಿ ಪ್ರೇಮದ
ಭಿಕ್ಷೆ ಬೇಡಿದ ನನ್ನನು!”
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...