Home / ಕವನ / ಕವಿತೆ / ಬಸವಣ್ಣ

ಬಸವಣ್ಣ

ಬಾಗೇವಾಡಿ ಬಸವ, ಬಹಳ ದೊಡ್ಡವನೆಂದು
ಬೆಳ್ಳಿಯ ಮಗಡ ಮಾಡ್ಸೆನೊ | ಬಸವಣ್ಣ
ಹೊನ್ನ ಹಣಿಕಟ್ಟ ಬಿಗಿಸೇನೊ ೧

ಚೆಂದುಳ್ಳ ಪಟ್ಟದಕಲ್ಲು, ಇಂಬುಳ್ಳ ಗುಡಿಯಾಗ
ಮಂದಾನ ಬಸವ ಮಲಗ್ಯಾನ | ಗುಡಿ ಮುಂದ
ಕಂದನ ಬೇಡವರು ಕಡೆಯಿಲ್ಲ ೨

ಕುಂಟೋಜಿ ಬಸವಣ್ಣ, ಬಂಟಾಗಿ ಕಾದಾಡಿ
ಕುಂಟಾದ ಕಾಲ ಮುರಕೊಂಡು | ಪರಿಸ್ಯಾಗ
ಮಂಟಪದ ಮುಂದ ಮಲಗ್ಯಾನ ೩

ಕೋಲೆನ್ನಿರೆ ಸೀಗೀಗೆ, ಕೋಲೆನ್ನಿರಿ ಗೌರೀಗೆ
ಕೋಲುಕಲ್ಯಾಣ ಬಸವಾಗ | ಬಲಗೊಂಡ್ರ
ಬಾರದ ಹಾಡು ಬರತಾವ ೪

ಭೂಮಿ ಹುಟ್ಟಿದ ಮೊದಲು, ಭೂಮಿ ಕಟ್ಟದ ಮೊದಲು
ಭೂಪ ಹುಟ್ಟೀದ ಬಸವಯ್ಯ| ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೫

ಕಟ್ಟಿಕಟ್ಟದ ಮೊದಲು, ಕಲ್ಯಾಣ್ಹುಟ್ಟದ ಮೊದಲು
ಬಲ್ಲಿದ್ಹುಟ್ಯಾನ ಬಸವಯ್ಯ | ಮ್ಯಾಲೀನ
ಶಿವಗೇಳು ದಿನಕ ಹಿರಿಯಾನ ೬

ಹಾದಿಮಣ್ಣನು ತಂದು, ಗೀರ ಬಸವನ ಮಾಡಿ
ಹೋರೆನ್ನಬಹುದೆ ಬಸವಯ್ಯ, ನಿಂಪಾದ್ಕ
ನಾಣೇವನುಟ್ಟು ಶರಣಂದೆ ೭

ಕಟ್ಟಿ ಮಣ್ಣನು ತಂದು, ಕೆತ್ತಿ ಬಸವನ ಮಾಡಿ
ಎತ್ತೆನ್ನಬಹುದೆ ಬಸವಯ್ಯ | ನಿ೦ಪಾದ್ಕ
ಪಟ್ಟೊಳ್ಳಿ ಇಟ್ಟು ಶರಣಂದೆ ೮

ಆಗಾಸದಡಿವ್ಯಾಗ, ಧೂಪದ ಹೊಗೆಯೆದ್ದು
ಭೂಪ ಬಸವಯ್ನ ಶಿವಪೂಜೆ, ಆಗುವಾಗ
ಆಗಾಸ ಘಂಟೆ ಢಣಲೆಂದು ೯

ತುಂಬೀದ ಹೊಳಿಯಾಗ, ಕೊಂಬ ಕಾಣಿಸತಾವ
ಬಂಗಾರದಿನಿಯ ಬಸವಣ್ಣ | ಬರುವಾಗ
ತುಂಬೀದ ಗಂಗೆ ತುಳಿಕ್ಯಾಳ ೧೦

ಏರಬಾರದ ಗುಡ್ಡ, ಹ್ಯಾಂಗೇರಿದಿ ಬಸವಣ್ಣ
ಬೋರಂಗಿ ಪಕ್ಕ ಸರಜಂಗು | ಕಟಿಗೊಂಡು
ಏರಿ ಮೇದಾನೊ ಎಳೆ ಹುಲ್ಲೊ ೧೧

ಕಂಡಿರೆ ನಂಬಸವನ, ಪುಂಡತನ ಗೋಳೆಲ್ಲ
ಹೆಂಡಿಽಯ ಒಡೆದು ಬರತಾನ || ಬಸವಯ್ನ
ಕೋಡಿನ ಮ್ಯಾಲೆ ಕೈಲಾಸ ೧೨

ನೋಡಿರಿ ನಂಬಸವನ, ಕೀಡೋಳಿ ತನವಾನ
ಗೋಡಿಽಯ ಒಡೆದು ಬರತಾನ | ಬಸವಯ್ನ
ಇನಿಯ ಮ್ಯಾಲೈತಿ ಕೈಲಾಸ ೧೩

ಎರಗಿ ನೋಡುನು ಬಾರ, ಹಿರಿಯಗಸಿ ಬನವಾನ
ಸರಗೋಳ ಗಂಟಿ ಹುರಗೆಜ್ಜಿ| ನಂಬಸವ
ಚೆಲುವಾನ ನೋಡ ಮರತೇಕ ೧೪

ಹೊಕ್ಕು ನೋಡುನು ಬಾರ, ಚಿಕ್ಕಗಸಿ ಬಸವಾನ
ಒಕ್ಕಳ ಗಂಟೆ ಹುರಗೆಜ್ಜೆ | ನಂಬಸವ
ಸುತ್ತ ಮರತೇಕ ಬಲು ಚೆಲುವ ೧೫

ಎತ್ತ ಕಾಯುವಣ್ಣ, ನಮ್ಮೆತ್ತ ಕಂಡೇನೊ
ಮುತ್ತಿನ ಹಗ್ಗ ಮುಗುವಾಣ | ಹಾಕ್ಕೊಂಡು
ಹುತ್ತೀನ ಕೆಳಗ ಮಲಗ್ಯಾನೋ ೧೬

ಕಟ್ಟೀಯ ಹೊಲಗಳ, ಮೆಟ್ಟದಿರು ಬಸವಣ್ಣ
ಮಕ್ಕಳ೦ದಿಗರ ಬಡಬಗರ | ಹೊಲಗಽಳ
ಮೆಟ್ಟದಿರು ಚೆನ್ನ -ಬಸವಣ್ಣ ೧೭

ಕರಿಯ ಕೋಡಿನ ಬಸವ, ಕೆರೆಯಾಗ ಹ್ಯಾಂಗಿದ್ದೊ
ಕೆರಿ ಬತ್ತಿ ಕೆರಿಯ ಮಳಲೊತ್ತಿ | ಬಸವಾನ
ಕರದ ಬಾಡ್ಯಾವ ಬಿಸಲೀಗೆ ೧೮

ಕೆಂಪ ಕೋಡಿನ ಬಸವ, ತಂಪಿನಾಗ್ಹ್ಯಾಂಗಿದ್ಯೊ
ತಂಪೊತ್ತಿ ತಂವ ಮಳಲೊತ್ತಿ, ಬಸವಾನ
ಕೆಂಪು ಬಾಡ್ಯಾವ ಬಿಸಲೀಗೆ ೧೯

ಕೌಜಗನ ತತ್ತ್ಯಾಗ, ಹ್ಯಾಂಗಿದ್ದಿ ಬಸವಯ್ಯ
ಎಂದೆಂದಿಗಿ ಮಾಗಿ ಮಳೆಗಾಲ | ಮಂಜಿನಾಗ
ಹ್ಯಾಂಗಿದ್ದಿರಿ ಚೆನ್ನಬಸವಯ್ಯ ೨೦

ಹರಿವೂವ ಹಳದಾಗ, ಡುರಿಕೆಂತ ಬರವೂರ
ಚಿಟಿಗೊಳಗ ಬಾಲ ಮುಳಗದಲೆ | ಬರುವಂಥ
ಬಂಟ ಚೆಂಚಲಿ ಬಸವಯ್ಯ ೨೧

ತುಂಬೀದ ಹೊಳಿಯಾಗ, ಅಂಬಾಂತ ಬರವೂರ
ಹಿಂದೀನ ಬಾಲ ಮುಣಗದಲೆ | ಬರುವಂಥ
ಧೀರ ದೇಗಲೊಳ್ಳಿ ಬಸವಯ್ಯ ೨೨

ಕಡಲಿಕಾಳನು ತಿಂದ ಮಡುವಿನ ನೀರ ಕುಡಿದ
ಕಡೆಯ ಬಾಗಿಲಕ ಡರಕೀಯ | ಹೊಡಿವಂಥ
ವೀರ ಕಾದ್ರೊಳ್ಳಿ ಬಸವಯ್ಯ ೨೩

ಉದ್ದಿನ ಕಾಳ ತಿಂದು, ತೆಗ್ಗಿನ ನೀರ ಕುಡಿದು
ಹೆಬ್ಬಾಗಿಲದಾಗ ಡರಕೀಯ | ಹೊಡಿವಂಥ
ಚೆಲುವ ಹುಂಡೇದ ಬಸವಯ್ಯ ೨೪

ಕಡಲಿಕಾಳನಽಟು, ಕಟಿದಾರ ನಂಬಸವನ
ಕಡಲ ನಮ್ಮಲ್ಲಿ ಅವರೂಪ | ಬಸವಯ್ನ
ಕಟಿದಾರ ಕಲ್ಯಾಣ ಮಟದಾಗ ೨೫

ಉದ್ದಿಽನ ಕಾಳಽಟು, ತಿದ್ದ್ಯಾರ ಬಸವಯ್ನ
ಉದ್ದು ನಮ್ಮಲ್ಲಿ ಅಪರೂಪ, ಬಸವಯ್ನ
ತಿದ್ಯಾರುಳುವೀಯ ಗುಡಿಯಾಗ ೨೬
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...