Home / ಕವನ / ಕವಿತೆ / ಸಾಹಿತ್ಯೋದ್ಯಾನ

ಸಾಹಿತ್ಯೋದ್ಯಾನ

ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ
ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ!
ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ
ಕಾವ್ಯತರುಗಣ ಕವನಲತೆ ಕುಂಜಗಳ ಜಾಲ
ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ
ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ!
ಕಳೆಹುಟ್ಟಿ ಬೆಳೆದಿರಲು ಉದ್ಯಾನವನದಲ್ಲಿ
ವ್ಯಾಕರಣ ಕುಂಟೆಯನು ಹೂಡಿದರು ಕಳೆಯಲ್ಲಿ
ಛಂದಸ್ಸು ಹಲುಬೆಯನು ಹೊಡೆದಿಹರು ಹೊಲದಲ್ಲಿ
ಕಳೆಗಿಂತ ಬೆಳೆಮುಂದೆ ಹುಲುಸಾಯ್ತು ಎಲ್ಲೆಲ್ಲು!
ನೃಪತುಂಗ ಚಕ್ರೇಶ ಮಾಡಿದನು ದಾರಿಯನು
ಮುಂದೆ ಬರುವರಿಗೊಂದು `ಕವಿರಾಜಮಾರ್ಗ’ವನು
ಅಲ್ಲಿಂದ ಕಾವ್ಯಸಸಿ ಹಾಲ್ತುಂಬಿ ಹುಲುಸಾಯ್ತು
ಜೈನಕವಿಗಣ ಸೇರಿ ಕೈನೀರ ನೆರೆದಾಯ್ತು
ಪಂಪರನ್ನರ ಪೊನ್ನಜನ್ನರ ಕೃಷಿಯನಾಡು
ಸೊಂಪು ಕಾವ್ಯದ ಬೆಳೆಗೆ ಇಂಬಾಯ್ತು ಈ ಬೀಡು
ಸಂಸ್ಕೃತದ ಪುಣ್ಯತರವಾಹಿನಿಯ ಹರಿಸಿದರು
ಸಾಹಿತ್ಯದುದ್ಯಾನ ತರುಲತೆಗೆ; ಬರಿಸಿದರು
ರಾಜರಾಜರನು ಘನದೇವದೇವರನಲ್ಲಿ
ವನಕೇಳಿ ಜಲಕೇಳಿಯಾಣೆ ಸಾಹಿತ್ಯದಲ್ಲಿ!
ಪಾಮರರು ನಿಂತಾಯ್ತು ಮುಳ್ಳು ಬೇಲಿಯ ಹಿಂದೆ
ಬಿಗುಮಾನ ಬಲವಾಯ್ತುು ಬಡಜನರ ಕಣ್ಮುಂದೆ!
ಮುಂದೆ ಬಂದರು ವೀರಶೈವ ಕವಿಕೃಷೀವಲರು
ಹಂಪೆ ಹರಿಹರ ರಾಘವಾಂಕಾದಿ ಬುಧಜನರು
ಬೆಳೆಸಿದರು ಚಿರಭಕ್ತಿ ಕಾವ್ಯತರುಗಳನಿಲ್ಲಿ
ರಚಿಸಿದರು ನೀತಿಮಾರ್ಗವನು ಸಾಹಿತ್ಯದಲ್ಲಿ.
ಬಸವಣ್ಣ ಮಹದೇವಿ ಜಸವೆತ್ತ ಅಲ್ಲಮರು
ಲಾವಣ್ಯತರ ‘ವಚನ’ ಲತೆಗಳನು ಬೆಳೆಸಿದರು.
ಸಾಂಗತ್ಯ ಚೌಪದಿ ತ್ರಿಪದಿ ವರಷಟ್ಟದಿಯು
ಎಂದೆಂಬ ಕಾವ್ಯ ಸಸ್ಯಗಳಿಗಾಯ್ತು ಪಾತಿಯು.
ವೀರನಾರಣ ರುದ್ರಭಟ್ಟಾರ್ಯ ಲಕ್ಷ್ಮೀಶ
ಕವಿಕೃಷೀವಲರಿಲ್ಲಿ ಪಡೆದ ಕವಿತಾವೇಶ
ಮೂಡಿಹುದು ಧೃವಕಾವ್ಯತರುವೃಂದ ರೂಪದಲಿ
ತಣಿಸುತ್ತ ರಸಿಕರನು ಕಾವ್ಯರಸಪಾನದಲಿ.
ಕನಕ ವಿಟ್ಟಲ ವ್ಯಾಸ ವರದಾಸಗಣವಿಲ್ಲಿ
ಭಕ್ತಿಲತೆಯನು ನೆಟ್ಟಿಹರು ತಣಿದು ಮನದಲ್ಲಿ.
ಅಂದಿನಿಂ ಎಂದೆಂದು ಕನ್ನಡದ ರಾಜಗಣ
ಮಾಡಿಹುದು ಕನ್ನಡದ ಉದ್ಯಾನಕಾವರಣ.
ರಾಷ್ಟ್ರಕೂಟರು ಧೀರಚಾಲುಕ್ಯ ಹೊಯ್ಸಳರು
ವಿಜಯನಗರ ಸಾಮ್ರಾಜ್ಯ ಧುರಧೀರ ಭೂಪಾಲರು
ಮೈಸೂರು ಯದುವಂಶ ಮಹರಾಜ ಪುಂಗವರು
ಮನವಿಟ್ಟು ಮಾಡಿಹರು ಈ ನುಡಿಯ ಶೃಂಗಾರ.
ಕನ್ನಡದ ಉದ್ಯಾನ ವರ್ಧಿಸಲಿ ಇಳೆಯಲ್ಲಿ
ಕಾವ್ಯತರು ಕವನಲತೆ ಎಂದೆಂದು ಬೆಳೆದಿಲ್ಲಿ.
*****
Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...