Home / ಕವನ / ಕವಿತೆ / ಸಾಹಿತ್ಯೋದ್ಯಾನ

ಸಾಹಿತ್ಯೋದ್ಯಾನ

ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ
ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ!
ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ
ಕಾವ್ಯತರುಗಣ ಕವನಲತೆ ಕುಂಜಗಳ ಜಾಲ
ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ
ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ!
ಕಳೆಹುಟ್ಟಿ ಬೆಳೆದಿರಲು ಉದ್ಯಾನವನದಲ್ಲಿ
ವ್ಯಾಕರಣ ಕುಂಟೆಯನು ಹೂಡಿದರು ಕಳೆಯಲ್ಲಿ
ಛಂದಸ್ಸು ಹಲುಬೆಯನು ಹೊಡೆದಿಹರು ಹೊಲದಲ್ಲಿ
ಕಳೆಗಿಂತ ಬೆಳೆಮುಂದೆ ಹುಲುಸಾಯ್ತು ಎಲ್ಲೆಲ್ಲು!
ನೃಪತುಂಗ ಚಕ್ರೇಶ ಮಾಡಿದನು ದಾರಿಯನು
ಮುಂದೆ ಬರುವರಿಗೊಂದು `ಕವಿರಾಜಮಾರ್ಗ’ವನು
ಅಲ್ಲಿಂದ ಕಾವ್ಯಸಸಿ ಹಾಲ್ತುಂಬಿ ಹುಲುಸಾಯ್ತು
ಜೈನಕವಿಗಣ ಸೇರಿ ಕೈನೀರ ನೆರೆದಾಯ್ತು
ಪಂಪರನ್ನರ ಪೊನ್ನಜನ್ನರ ಕೃಷಿಯನಾಡು
ಸೊಂಪು ಕಾವ್ಯದ ಬೆಳೆಗೆ ಇಂಬಾಯ್ತು ಈ ಬೀಡು
ಸಂಸ್ಕೃತದ ಪುಣ್ಯತರವಾಹಿನಿಯ ಹರಿಸಿದರು
ಸಾಹಿತ್ಯದುದ್ಯಾನ ತರುಲತೆಗೆ; ಬರಿಸಿದರು
ರಾಜರಾಜರನು ಘನದೇವದೇವರನಲ್ಲಿ
ವನಕೇಳಿ ಜಲಕೇಳಿಯಾಣೆ ಸಾಹಿತ್ಯದಲ್ಲಿ!
ಪಾಮರರು ನಿಂತಾಯ್ತು ಮುಳ್ಳು ಬೇಲಿಯ ಹಿಂದೆ
ಬಿಗುಮಾನ ಬಲವಾಯ್ತುು ಬಡಜನರ ಕಣ್ಮುಂದೆ!
ಮುಂದೆ ಬಂದರು ವೀರಶೈವ ಕವಿಕೃಷೀವಲರು
ಹಂಪೆ ಹರಿಹರ ರಾಘವಾಂಕಾದಿ ಬುಧಜನರು
ಬೆಳೆಸಿದರು ಚಿರಭಕ್ತಿ ಕಾವ್ಯತರುಗಳನಿಲ್ಲಿ
ರಚಿಸಿದರು ನೀತಿಮಾರ್ಗವನು ಸಾಹಿತ್ಯದಲ್ಲಿ.
ಬಸವಣ್ಣ ಮಹದೇವಿ ಜಸವೆತ್ತ ಅಲ್ಲಮರು
ಲಾವಣ್ಯತರ ‘ವಚನ’ ಲತೆಗಳನು ಬೆಳೆಸಿದರು.
ಸಾಂಗತ್ಯ ಚೌಪದಿ ತ್ರಿಪದಿ ವರಷಟ್ಟದಿಯು
ಎಂದೆಂಬ ಕಾವ್ಯ ಸಸ್ಯಗಳಿಗಾಯ್ತು ಪಾತಿಯು.
ವೀರನಾರಣ ರುದ್ರಭಟ್ಟಾರ್ಯ ಲಕ್ಷ್ಮೀಶ
ಕವಿಕೃಷೀವಲರಿಲ್ಲಿ ಪಡೆದ ಕವಿತಾವೇಶ
ಮೂಡಿಹುದು ಧೃವಕಾವ್ಯತರುವೃಂದ ರೂಪದಲಿ
ತಣಿಸುತ್ತ ರಸಿಕರನು ಕಾವ್ಯರಸಪಾನದಲಿ.
ಕನಕ ವಿಟ್ಟಲ ವ್ಯಾಸ ವರದಾಸಗಣವಿಲ್ಲಿ
ಭಕ್ತಿಲತೆಯನು ನೆಟ್ಟಿಹರು ತಣಿದು ಮನದಲ್ಲಿ.
ಅಂದಿನಿಂ ಎಂದೆಂದು ಕನ್ನಡದ ರಾಜಗಣ
ಮಾಡಿಹುದು ಕನ್ನಡದ ಉದ್ಯಾನಕಾವರಣ.
ರಾಷ್ಟ್ರಕೂಟರು ಧೀರಚಾಲುಕ್ಯ ಹೊಯ್ಸಳರು
ವಿಜಯನಗರ ಸಾಮ್ರಾಜ್ಯ ಧುರಧೀರ ಭೂಪಾಲರು
ಮೈಸೂರು ಯದುವಂಶ ಮಹರಾಜ ಪುಂಗವರು
ಮನವಿಟ್ಟು ಮಾಡಿಹರು ಈ ನುಡಿಯ ಶೃಂಗಾರ.
ಕನ್ನಡದ ಉದ್ಯಾನ ವರ್ಧಿಸಲಿ ಇಳೆಯಲ್ಲಿ
ಕಾವ್ಯತರು ಕವನಲತೆ ಎಂದೆಂದು ಬೆಳೆದಿಲ್ಲಿ.
*****
Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...