Home / ಕವನ / ಕವಿತೆ / ಸಾಹಿತ್ಯೋದ್ಯಾನ

ಸಾಹಿತ್ಯೋದ್ಯಾನ

ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ
ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ!
ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ
ಕಾವ್ಯತರುಗಣ ಕವನಲತೆ ಕುಂಜಗಳ ಜಾಲ
ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ
ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ!
ಕಳೆಹುಟ್ಟಿ ಬೆಳೆದಿರಲು ಉದ್ಯಾನವನದಲ್ಲಿ
ವ್ಯಾಕರಣ ಕುಂಟೆಯನು ಹೂಡಿದರು ಕಳೆಯಲ್ಲಿ
ಛಂದಸ್ಸು ಹಲುಬೆಯನು ಹೊಡೆದಿಹರು ಹೊಲದಲ್ಲಿ
ಕಳೆಗಿಂತ ಬೆಳೆಮುಂದೆ ಹುಲುಸಾಯ್ತು ಎಲ್ಲೆಲ್ಲು!
ನೃಪತುಂಗ ಚಕ್ರೇಶ ಮಾಡಿದನು ದಾರಿಯನು
ಮುಂದೆ ಬರುವರಿಗೊಂದು `ಕವಿರಾಜಮಾರ್ಗ’ವನು
ಅಲ್ಲಿಂದ ಕಾವ್ಯಸಸಿ ಹಾಲ್ತುಂಬಿ ಹುಲುಸಾಯ್ತು
ಜೈನಕವಿಗಣ ಸೇರಿ ಕೈನೀರ ನೆರೆದಾಯ್ತು
ಪಂಪರನ್ನರ ಪೊನ್ನಜನ್ನರ ಕೃಷಿಯನಾಡು
ಸೊಂಪು ಕಾವ್ಯದ ಬೆಳೆಗೆ ಇಂಬಾಯ್ತು ಈ ಬೀಡು
ಸಂಸ್ಕೃತದ ಪುಣ್ಯತರವಾಹಿನಿಯ ಹರಿಸಿದರು
ಸಾಹಿತ್ಯದುದ್ಯಾನ ತರುಲತೆಗೆ; ಬರಿಸಿದರು
ರಾಜರಾಜರನು ಘನದೇವದೇವರನಲ್ಲಿ
ವನಕೇಳಿ ಜಲಕೇಳಿಯಾಣೆ ಸಾಹಿತ್ಯದಲ್ಲಿ!
ಪಾಮರರು ನಿಂತಾಯ್ತು ಮುಳ್ಳು ಬೇಲಿಯ ಹಿಂದೆ
ಬಿಗುಮಾನ ಬಲವಾಯ್ತುು ಬಡಜನರ ಕಣ್ಮುಂದೆ!
ಮುಂದೆ ಬಂದರು ವೀರಶೈವ ಕವಿಕೃಷೀವಲರು
ಹಂಪೆ ಹರಿಹರ ರಾಘವಾಂಕಾದಿ ಬುಧಜನರು
ಬೆಳೆಸಿದರು ಚಿರಭಕ್ತಿ ಕಾವ್ಯತರುಗಳನಿಲ್ಲಿ
ರಚಿಸಿದರು ನೀತಿಮಾರ್ಗವನು ಸಾಹಿತ್ಯದಲ್ಲಿ.
ಬಸವಣ್ಣ ಮಹದೇವಿ ಜಸವೆತ್ತ ಅಲ್ಲಮರು
ಲಾವಣ್ಯತರ ‘ವಚನ’ ಲತೆಗಳನು ಬೆಳೆಸಿದರು.
ಸಾಂಗತ್ಯ ಚೌಪದಿ ತ್ರಿಪದಿ ವರಷಟ್ಟದಿಯು
ಎಂದೆಂಬ ಕಾವ್ಯ ಸಸ್ಯಗಳಿಗಾಯ್ತು ಪಾತಿಯು.
ವೀರನಾರಣ ರುದ್ರಭಟ್ಟಾರ್ಯ ಲಕ್ಷ್ಮೀಶ
ಕವಿಕೃಷೀವಲರಿಲ್ಲಿ ಪಡೆದ ಕವಿತಾವೇಶ
ಮೂಡಿಹುದು ಧೃವಕಾವ್ಯತರುವೃಂದ ರೂಪದಲಿ
ತಣಿಸುತ್ತ ರಸಿಕರನು ಕಾವ್ಯರಸಪಾನದಲಿ.
ಕನಕ ವಿಟ್ಟಲ ವ್ಯಾಸ ವರದಾಸಗಣವಿಲ್ಲಿ
ಭಕ್ತಿಲತೆಯನು ನೆಟ್ಟಿಹರು ತಣಿದು ಮನದಲ್ಲಿ.
ಅಂದಿನಿಂ ಎಂದೆಂದು ಕನ್ನಡದ ರಾಜಗಣ
ಮಾಡಿಹುದು ಕನ್ನಡದ ಉದ್ಯಾನಕಾವರಣ.
ರಾಷ್ಟ್ರಕೂಟರು ಧೀರಚಾಲುಕ್ಯ ಹೊಯ್ಸಳರು
ವಿಜಯನಗರ ಸಾಮ್ರಾಜ್ಯ ಧುರಧೀರ ಭೂಪಾಲರು
ಮೈಸೂರು ಯದುವಂಶ ಮಹರಾಜ ಪುಂಗವರು
ಮನವಿಟ್ಟು ಮಾಡಿಹರು ಈ ನುಡಿಯ ಶೃಂಗಾರ.
ಕನ್ನಡದ ಉದ್ಯಾನ ವರ್ಧಿಸಲಿ ಇಳೆಯಲ್ಲಿ
ಕಾವ್ಯತರು ಕವನಲತೆ ಎಂದೆಂದು ಬೆಳೆದಿಲ್ಲಿ.
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...