Home / ಕವನ / ಕವಿತೆ / ಸೋತವನ ಹಾಡು

ಸೋತವನ ಹಾಡು

ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ
ತಣಿವ ತಂಪನು ಮನದಿ ತಳೆಯಬಹುದೆ?
ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ
ಒಡಲಲ್ಲಿ ಶಾಂತಿಯದು ಆರಳಬಹುದೆ?
ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು
‘ಇಂದು’ಗಳಿಗಾಳಾಗಿ ದುಡಿಯುತಿಹೆವು
ಮುಂದಿರುವ ‘ನಾಳೆ’ಗಳ ನೆಳಲಲ್ಲಿ ಚಿಂತೆಗಳ
ಚಿಗುರಿಸುತ ಎದೆಗುದಿಯ ಬೆಳೆಸುತಿಹೆವು.

ಸಾಕಾಯ್ತು ಬಾಳುವೆಯ ಕುರುಡು ಕಾಮನೆಯಾಟ
ಅನ್ಯಾಯ ಮೋಸಗಳ ಮೋಹದಾಟ
ನುಗ್ಗಿ ಬಹ ತೆರೆಗಳೇರಾಟ ಕಾಟದಿ ನನ್ನ
ಅಂಗಾಂಗವಾಯಾಸ ವಿದ್ಧವಕಟ
ಬೇಡಿದೆನೆ ಬಾನಿನಲಿ ಬೆಳೆವ ಅಮೃತದ ಹನಿಯ
ದೇವತೆಯ ವೈಭವವ ಕಾಮಿಸಿದೆನೆ ?
ಹುಲುಮನುಜನೆದೆಯೊಳಿಹ ಕಿರಿಯಾಸೆಗೂ ದೈವ
ಮುಚ್ಚಿರುವ ಬಾಗಿಲವ ತೆರೆಯಿತೇನೆ?

ಕೆರಳಿರುವ ಬಾಳ್ಗಡಲ ತೊರೆದು ಬಾ ನೀರೆಯೆ
ಏರಿಳಿತವಿಬ್ಲದೀಯುಸುಕಿನಲ್ಲಿ
ಧೆರ್ಮಬಂಧನ ಜರೆದು ಕರ್ಮಕ್ರಂದನ ತೊರೆದು
ಕೊರಳ ಕೊಯ್ಯುವ ಬಾಳನೊಗವ ಹರಿದು
ಸಿಕತಸೀಮೆಯ ಸೌಮ್ಯ ಶಾಂತಿಯಲಿ ಇಲ್ಲಿ ಬಾ
ಆಯಾಸವಾರಿಸುವ ವಿಶ್ರಾಂತಿಗೆ
ಕನಸಿನಾರಾಮದಲಿ ಕೊನರಬಹುದೆಲೆ ತಣಿವು
ಮರೆಯಬಹುದೆಲೆ ಮಲೆತ ವ್ಯಥೆಯಮೊನೆಯು

ಕಡಲತ್ತ ತನ್ನೆದೆಯ ಕದಡಿಸಿದ ಚಂದಿರನ
ಮಕ್ಕಲಿಕೆ ನಾಲಗೆಯ ಚಾಚುತಿರಲಿ
ಕಾಲ್ಕೆಳಗೆ ಸುಳಿಯುತಿಹ ಶೇಷನನು ಕುಕ್ಕಲಿಕೆ
ಪಾತಾಳವನು ಅಗಿದು ಮೊರೆಯುತಿರಲಿ
ಇಲ್ಲಿ ಕಾಣುವುದೇನು?- ನೀರ್‌ನೊರೆಯ ಬಿಳಿಗೆರೆಯೆ
ಕಡಲ ಮೊಳಗೂ ಕೂಡ ಕಿವಿಯ ಪುಗದು.
ಇಲ್ಲಿ ಗಾಳಿಯು ಕೂಡ ದಣಿದು ಗರಿಗಳ ಮುಗಿದು
ಹೂವಿನುಯ್ಯಲೆಯಲ್ಲಿ ಮಲಗಿರುವುದು.

ರಿಕ್ತವಹ ಸಂತಾಪ ಪರಿತಾಪಗಳ ತೊರೆದು
ಸೌಮ್ಯಸುಪ್ತಿಯಲೆದೆಯು ಮಿಡಿಯುತಿರಲಿ
ಇಲ್ಲಿರುವ ಗಿರಿಗಳಲಿ, ಹರಿಯುತಿಹ ಹೊಳೆಗಳಲಿ
ಹಸಿರಿನಲಿ ಬಿತ್ತರದ ಉಸುಕಿನಲ್ಲಿ
ಅಕ್ಷಯ್ಯ ಶಾಂತಿಯದು ನೆಲೆಸಿರಲು ನಾವೇಕೆ
ವ್ಯರ್ಥವಾದೆಣಿಕೆಯಲ್ಲಿ ನವೆಯಬೇಕು?
ಕನಸಿನಲಿ ಕಣ್ತೆರೆದು ನಸುಕಿನಲಿ ನಸುಬೆಳೆದು
ಅರಳಿಯಳಿವಲರಿನಾ ಬಾಳೆ ಸಾಕು!

ಮುಳುಗಲಿಹ ನೇಸರನು, ಮೂಡಲಿಹ ಚಂದಿರನು
ಮೆರೆಯುತಿಹರಾಗಸದ ಅಂಚುಗಳಲಿ
ಕ್ಷಣಕಾಲ ಮರೆತಿಹರು ರೇಗಿಸುವ ಕದನವನು
ಶಾಂತಿಯಾ ಕಾಂತಿಯನೆ ಕರೆಯುತಿಹರು,
ಗೆಳತಿ, ವೀಣೆಯಮೇಲೆ ತಂತಿ ನೋಯದೊಲಿನ್ನು
ಮೆಲ್ಪೆಲರಿಗೂ ಮಿದುವು ಬೆರಳಾಡಲಿ
ಗಾಳಿಗೂ ತಿಳಿಯದೊಲು ಮೌನವೂ ಮುರಿಯದೊಲು
ಗೀತಗಳು ಕಿವಿಯಲ್ಲಿ ಮೆಲ್ಲುಲಿಯಲಿ!

ಹುಸಿಯಾಸೆಗಳ ಪಾಶ, ಕೃತಿ ವಿರಸದಾಯಾಸ
ಮಾಯವಾಗುವುವೆಲ್ಲ ಸುಪ್ತಿಯಲ್ಲಿ
ಮಲೆತು ಮುರಿಯುವುದೇನು? ಅಲೆದು ಅರಸುವುದೇನು?
ಬಾಳೆಲ್ಲ ಸುಖಪಡೆಯೆ ವಿರತಿಯಲ್ಲಿ
ಸುಪ್ತಿಯೇ ಜೀವನದ ಸುಖ ಪೂರ್ಣ ಭುಕ್ತಿ
ಭಾವಗಳ ರಾಗಗಳ ಕೊನೆಯ ತೃಪ್ತಿ
ಪ್ರಕ್ಷುಬ್ಧ ಜಲಧಿಯಾ ಜಲವೆ ಶಿಲೆಯಾಗಿರುವ
ಹಮವತಿಯ ಸಿದ್ಧಿಯೂ ದೀರ್ಫ ಸುಪ್ತಿ.

ಸುಪ್ತಿ ಶುಕ್ತಿಯ ಸೇರೆ ಮನವು ಮೌಕ್ತಿಕವಾಗಿ
ಪಡೆಯಬಹುದೆಲೆ, ನಲ್ಲೆ, ನಿತ್ಯ ಮುಕ್ತಿ!
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...