Home / ಕವನ / ಕವಿತೆ / ಸೋತವನ ಹಾಡು

ಸೋತವನ ಹಾಡು

ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ
ತಣಿವ ತಂಪನು ಮನದಿ ತಳೆಯಬಹುದೆ?
ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ
ಒಡಲಲ್ಲಿ ಶಾಂತಿಯದು ಆರಳಬಹುದೆ?
ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು
‘ಇಂದು’ಗಳಿಗಾಳಾಗಿ ದುಡಿಯುತಿಹೆವು
ಮುಂದಿರುವ ‘ನಾಳೆ’ಗಳ ನೆಳಲಲ್ಲಿ ಚಿಂತೆಗಳ
ಚಿಗುರಿಸುತ ಎದೆಗುದಿಯ ಬೆಳೆಸುತಿಹೆವು.

ಸಾಕಾಯ್ತು ಬಾಳುವೆಯ ಕುರುಡು ಕಾಮನೆಯಾಟ
ಅನ್ಯಾಯ ಮೋಸಗಳ ಮೋಹದಾಟ
ನುಗ್ಗಿ ಬಹ ತೆರೆಗಳೇರಾಟ ಕಾಟದಿ ನನ್ನ
ಅಂಗಾಂಗವಾಯಾಸ ವಿದ್ಧವಕಟ
ಬೇಡಿದೆನೆ ಬಾನಿನಲಿ ಬೆಳೆವ ಅಮೃತದ ಹನಿಯ
ದೇವತೆಯ ವೈಭವವ ಕಾಮಿಸಿದೆನೆ ?
ಹುಲುಮನುಜನೆದೆಯೊಳಿಹ ಕಿರಿಯಾಸೆಗೂ ದೈವ
ಮುಚ್ಚಿರುವ ಬಾಗಿಲವ ತೆರೆಯಿತೇನೆ?

ಕೆರಳಿರುವ ಬಾಳ್ಗಡಲ ತೊರೆದು ಬಾ ನೀರೆಯೆ
ಏರಿಳಿತವಿಬ್ಲದೀಯುಸುಕಿನಲ್ಲಿ
ಧೆರ್ಮಬಂಧನ ಜರೆದು ಕರ್ಮಕ್ರಂದನ ತೊರೆದು
ಕೊರಳ ಕೊಯ್ಯುವ ಬಾಳನೊಗವ ಹರಿದು
ಸಿಕತಸೀಮೆಯ ಸೌಮ್ಯ ಶಾಂತಿಯಲಿ ಇಲ್ಲಿ ಬಾ
ಆಯಾಸವಾರಿಸುವ ವಿಶ್ರಾಂತಿಗೆ
ಕನಸಿನಾರಾಮದಲಿ ಕೊನರಬಹುದೆಲೆ ತಣಿವು
ಮರೆಯಬಹುದೆಲೆ ಮಲೆತ ವ್ಯಥೆಯಮೊನೆಯು

ಕಡಲತ್ತ ತನ್ನೆದೆಯ ಕದಡಿಸಿದ ಚಂದಿರನ
ಮಕ್ಕಲಿಕೆ ನಾಲಗೆಯ ಚಾಚುತಿರಲಿ
ಕಾಲ್ಕೆಳಗೆ ಸುಳಿಯುತಿಹ ಶೇಷನನು ಕುಕ್ಕಲಿಕೆ
ಪಾತಾಳವನು ಅಗಿದು ಮೊರೆಯುತಿರಲಿ
ಇಲ್ಲಿ ಕಾಣುವುದೇನು?- ನೀರ್‌ನೊರೆಯ ಬಿಳಿಗೆರೆಯೆ
ಕಡಲ ಮೊಳಗೂ ಕೂಡ ಕಿವಿಯ ಪುಗದು.
ಇಲ್ಲಿ ಗಾಳಿಯು ಕೂಡ ದಣಿದು ಗರಿಗಳ ಮುಗಿದು
ಹೂವಿನುಯ್ಯಲೆಯಲ್ಲಿ ಮಲಗಿರುವುದು.

ರಿಕ್ತವಹ ಸಂತಾಪ ಪರಿತಾಪಗಳ ತೊರೆದು
ಸೌಮ್ಯಸುಪ್ತಿಯಲೆದೆಯು ಮಿಡಿಯುತಿರಲಿ
ಇಲ್ಲಿರುವ ಗಿರಿಗಳಲಿ, ಹರಿಯುತಿಹ ಹೊಳೆಗಳಲಿ
ಹಸಿರಿನಲಿ ಬಿತ್ತರದ ಉಸುಕಿನಲ್ಲಿ
ಅಕ್ಷಯ್ಯ ಶಾಂತಿಯದು ನೆಲೆಸಿರಲು ನಾವೇಕೆ
ವ್ಯರ್ಥವಾದೆಣಿಕೆಯಲ್ಲಿ ನವೆಯಬೇಕು?
ಕನಸಿನಲಿ ಕಣ್ತೆರೆದು ನಸುಕಿನಲಿ ನಸುಬೆಳೆದು
ಅರಳಿಯಳಿವಲರಿನಾ ಬಾಳೆ ಸಾಕು!

ಮುಳುಗಲಿಹ ನೇಸರನು, ಮೂಡಲಿಹ ಚಂದಿರನು
ಮೆರೆಯುತಿಹರಾಗಸದ ಅಂಚುಗಳಲಿ
ಕ್ಷಣಕಾಲ ಮರೆತಿಹರು ರೇಗಿಸುವ ಕದನವನು
ಶಾಂತಿಯಾ ಕಾಂತಿಯನೆ ಕರೆಯುತಿಹರು,
ಗೆಳತಿ, ವೀಣೆಯಮೇಲೆ ತಂತಿ ನೋಯದೊಲಿನ್ನು
ಮೆಲ್ಪೆಲರಿಗೂ ಮಿದುವು ಬೆರಳಾಡಲಿ
ಗಾಳಿಗೂ ತಿಳಿಯದೊಲು ಮೌನವೂ ಮುರಿಯದೊಲು
ಗೀತಗಳು ಕಿವಿಯಲ್ಲಿ ಮೆಲ್ಲುಲಿಯಲಿ!

ಹುಸಿಯಾಸೆಗಳ ಪಾಶ, ಕೃತಿ ವಿರಸದಾಯಾಸ
ಮಾಯವಾಗುವುವೆಲ್ಲ ಸುಪ್ತಿಯಲ್ಲಿ
ಮಲೆತು ಮುರಿಯುವುದೇನು? ಅಲೆದು ಅರಸುವುದೇನು?
ಬಾಳೆಲ್ಲ ಸುಖಪಡೆಯೆ ವಿರತಿಯಲ್ಲಿ
ಸುಪ್ತಿಯೇ ಜೀವನದ ಸುಖ ಪೂರ್ಣ ಭುಕ್ತಿ
ಭಾವಗಳ ರಾಗಗಳ ಕೊನೆಯ ತೃಪ್ತಿ
ಪ್ರಕ್ಷುಬ್ಧ ಜಲಧಿಯಾ ಜಲವೆ ಶಿಲೆಯಾಗಿರುವ
ಹಮವತಿಯ ಸಿದ್ಧಿಯೂ ದೀರ್ಫ ಸುಪ್ತಿ.

ಸುಪ್ತಿ ಶುಕ್ತಿಯ ಸೇರೆ ಮನವು ಮೌಕ್ತಿಕವಾಗಿ
ಪಡೆಯಬಹುದೆಲೆ, ನಲ್ಲೆ, ನಿತ್ಯ ಮುಕ್ತಿ!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...