Home / ಕವನ / ಕವಿತೆ / ಹಸು-ಕರು

ಹಸು-ಕರು

ಹಸುವಿನ ಹೆಸರು ಯಶೋದಾ
ಅದರ ಬಣ್ಣ ಊದಾ
ಅದೊಂದು ಕರುವನು ಈದ
ಸಂಗತಿಯೇನು ಪ್ರಮಾದ?
ಅದರಿಂದೆನಗೀ ಕವಿತೆಯ ಬಾಧ
ಪ್ರಾಸವ ಬರೆವ ವಿನೋದ.

ನಾನದಕಿತ್ತುದು ನೂರು ರುಪಾಯಿ
ಮಧ್ಯಸ್ಥಿಕೆಗಿರೆ ರಂಗಾಬೋಯಿ
ನೆರೆಮನೆಯೊಳಗಿದಕಾಯಿತು ಸಾಲ
ಬಿತ್ತರಿಸಿತೆಮ್ಮ ಮಮತೆಯ ಜಾಲ
ಇಂತು ಯಶೋದೆಯ ಬಾಳಿನ ಮೇಲೆ
ಪ್ರಕೃತಿಯ ಮತ್ತೂಂದಾವರಣದವೊಲೆ.
ಇದಕ್ಕೂ ಚೆಂದದ ಹಸುವಿನ್ನುಂಟೆ
ಇದರ ಸುಗುಣಗಳು ನಾಲ್ಕೆ ಎಂಟೆ
ಗಿಡ್ಡವಾಗಿಹುದು ಕರೆಯುವ ಜಾತಿ
ಸೌಮ್ಯವಾದ ಬಲು ಅಂದದ ಮೂತಿ
ನಮ್ಮ ಪಾಲಿಗಿದುವೇ ಸುರಧೇನು
ಎರಡೇ ದಿನ ಈನುವುದಿನ್ನೇನು
ಇಂತೀ ಪರಿಯೊಳು ನಡೆದಿರೆ ಮಾತು
ಪ್ರಸೂತಿವೇದನೆ ಯಶೋದೆಗಾಯ್ತು
ನಿಲ್ಲದೆ ಮಲಗದೆ ಬೇನೆಯ ತಿನುತ
ನೀರವವಾಗಿಯೆ ಬಾಧೆಯ ಪಡುತ-
ನಾನೊಪ್ಪುವೆ ಈ ನೀರವ ಭಾವ
ನನ್ನಚ್ಚರಿಸಿತು ಒಂದರೆ ಜಾವ
ಬೆದೆಗಾಲದ ಹಮ್ಮೈಸಿಕೆಯೊಳಗೆ
ಪೆರ್ಭಯದಂಬಾ ಸಂರುತಿಯೊಳಗೆ
ತನ್ನ ಹೊರಗಿರುವ ಜೀವದ ನೆರವ
ಆತ್ಮಸ್ವಾಸ್ಥ್ಯಕೆ ಯಾಚಿಸುತ್ತಿರುವ
ಪರಿಯಿಲ್ಲೀ ದಿನ ನಮ್ಮೀ ಪಶುವಿಗೆ
ತನ್ನ ಪ್ರಕೃತಿಯೆ ತನಗಾಗಿರೆ ಹಗೆ
ತಿತಿಕ್ಷೆಯೇ ಗತಿ ಬೇರಿನ್ನಿಲ್ಲ
ಎಂದರಿಯಿತೊ ಇದು ಯಾವನು ಬಲ್ಲ-
ಅಂತೂ ನೋವನು ಮೌನದಿ ಸಹಿಸಿ
ಈ ಮೌನದೊಳೆನ್ನಚ್ಚರಿಗೊಳಿಸಿ
ಯಶೋದೆ ಈದಿತು ಹೋರಿಕರುವನು
ತಾಯ ಗರ್ಭದಿಂ ಹೊರಟ ಶಿಶುವನು
ಸ್ವಾಗತಿಸಿರೆ ನಾವಮೃತದಾಸೆಯಿಂ
ಹಸು ಸುತನಂ ನೆಕ್ಕಿತು ಅಕ್ಕರೆಯಿಂ.

ಎಳೆಯರು ಕರೆದರು ಗೋಪೀನಾಥ
ಹೊಸಬನಿವನು ಆದೊಡೆ ನಿರ್ಭೀತ
ರೋದನವಿಲ್ಲದೆ ಜಗಕ್ಕೆ ಬಂದ
ಎರಡೇ ಚಣದೊಳು ಸ್ವತಂತ್ರ ನಿಂದ
ಕೆಚ್ಚಲಿನೊಳು ತನ್ನ ನ್ನವ ಕಂಡ
ಅಧಿಪತಿಯಂದದಿ ತಾನದನುಂಡ.
ಈತನ ಮೈಯೇನಚ್ಚರಿಮಾಟ
ಈತನ ಬಗೆ ಏ ಮಾಯೆಯ ಹೂಟ
ಅಗೊ ಅಗೊ ನನ್ನೆಡೆ ಕೊಂಕಿನ ನೋಟವ-
ನಿಡುತಿಹನಬ್ಬ ನೋಡಿವನಾಟವ
ಗರ್ಭದಿ ನಿನ್ನಾಲಿಯ ಸಮೆವಂದು
ನೋಟವದಾವುದ ಬಯಸಿದೆ ಬಂಧು
ಆ ಕತ್ತಲೆಯೊಳು ಏ ಬೆಳಕನ್ನ
ಹಾರೈಸಿದ್ದೆಯೊ ನೀ ಬಹ ಮುನ್ನ
ಈ ಜಗವಚ್ಚರಿಯಲ್ಲವೆ ನಿನಗೆ
ಇಲ್ಲಿ ಕಾಂಬೆಯಾ ನೀ ಬಗೆದ ಬಗೆ?
ನೀನೀ ತೆರದೊಳು ನೋಡುವ ರೀತಿ
ಕಿವಿಯನು ನಿಮಿರಿಸುತಾಲಿಪ ರೀತಿ
ಕರಣದ ತುದಿ ವಿಷಯದ ತುದಿ ಸೇರಿ
ಏನೋ ಶಕ್ತಿಗೆ ಸಮಯುತ ದಾರಿ
ಏನೋ ಬೆಳಕಿನ ಹರಿವನು ತೋರಿ
ಮನದೊಳು ನವತೇಜದ ಕಳೆಬೀರಿ
ಹೊಸತೊಂದಿರವಿನ ಪರಿಯಂ ಸಾರಿ
ಹೊಸ ತೆರದೊಳು ಭವಜಲಧಿಯ ವಾರಿ
ತೆರೆಯಿಡುತಿಹ ರೀತಿಯ ತೋರುತಿದೆ
ನಿನ್ನೀ ಲೀಲೆಗೆ ನಿರ್ವ್ಯಾಜಂ ಎದೆ
ಒಲಿದಿಹುದೈ ಮುದವಾನುತಲೀಗ
ಎಲ್ಲರಿಗೂ ಮುದ್ದಾದೆಯೊ ಬೇಗ.
ಅತ್ತಣಿನಿತ್ತಡೆ ಬಂದಿರುವಣ್ಣ
ನಿನ್ನಿರವನು ಇಹ ಕವಿಯುವ ಮುನ್ನ
ಪೇಳೈ ಆವನು ನಮ್ಮಿಬ್ಬರನೂ
ನಮ್ಮ ನಂಟಿನ ಇವರೆಲ್ಲರನ್ನೂ
ಈ ತರ ತಡಿಕೆಯ ಪಂದ್ಯದೊಳೋಡಿಸಿ
ಓಡಿಸಿ ಆಡಿಸಿ ಕಾಡಿಸಿ ಬಾಡಿಸಿ
ಪಣವೇನಂ ಗೆಲೆ ಬಯಸಿಹನಯ್ಯ?
ಇದರೊಳು, ದಿಟ, ನಿನಗೌದಾಸೀನ್ಯ
ಈ ಓಟವು ನಿನಗಿನ್ನೂ ಲೀಲೆ
ನನ್ನ ದಣಿವಿನನುಭೂತಿಯ ಕೇಳೆ.
ಚಿಣ್ಣಾ, ತೋಳ್ತೆಕ್ಕೆಗೆ ಬಾರಣ್ಣಾ
ನಿನ್ನಾಲಿಂಗನವೆನಿತಿನಿದಣ್ಣಾ
ಹೊಸಮೈಕೂದಲ ನಸುಬಿಸಿಯಿಂಪು
ಹೊಸ ಬಾಳಿನ ಸಂಸರ್ಗದ ಸೊಂಪು
ಗಂಗಾಸ್ನಾನದ ಶುಚಿಯಾಯ್ತಣ್ಣ
ದೇವರ ಮುಟ್ಟಿದ ಪೆರಿಯಾಯ್ತಣ್ಣ-
ಬೆಚ್ಚು ವೆ ಏಕೀ ಸ್ಪರ್ಶಕೆ ಕರುವೇ
ಈ ಮುದ್ದಿಗೆ ಈ ಒದೆತವು ತರವೇ?
ಚಿಮ್ಮುವೆ ಹಮ್ಮೈಸುವ ತಾಯೆಡೆಗೆ
ಗರ್ಭದ ತಡೆಯಿರಿ ಮಮತೆಯ ತಡೆಗೆ
ಅಂಬಾ ಎನ್ನುವೆ ನೀ ಮರುನುಡಿಗೆ
ಆಹ್ಹಾ ನೀ ನಡೆದಾಡುವ ಬೆಡಗೇ!

ಇಂತೀಪರಿಯೊಳು ಕರುವನು ಮುದ್ದಿಸಿ
ಈ ಅರ್ತಿಯೊಳೆನ್ನೊಳಗಂ ಶುದ್ದಿಸಿ
ಹಮ್ಮೈಸುವ ತಾಯ್ನುಡಿಯಂ ಕೇಳಿ
ಅಂಬಾ ಎನ್ನುವ ಕರುವಂ ಕೇಳಿ
ಇಂತೆರಡಿರವಿನ ಬಗೆತುದಿಯಿಂದ
ವಿದ್ಯುತ್ಕಣ ಸಿಡಿದಾಡುವ ಚೆಂದ
ವಾತ್ಸಲ್ಯಂ ಪರಿದಾಡುವ ಬಗೆಗೆ
ಸೋಜಿಗಗೊಳ್ಳುತೆ ಯಶೋದೆಯೆಡೆಗೆ
ನಮ್ಮಿ ಗೋಪೀನಾಥನ ಬಿಟ್ಟು
ಅಂದಿನಚ್ಚರಿಗೆ ಈ ನುಡಿಗಟ್ಟು
ನನ್ನೊಳು ವೇದನೆಗೊಳ್ಳಲು ಇಂತು
ಬರೆದೆನು-ಈ ಕತೆ ಮುಗಿಯಿತು ಅಂತು.

ಇದನೋದಲು ನಾ ಮುತ್ತಣ್ಣನಿಗೆ,
“ಗದ್ಯವೊ ಪದ್ಯವೊ ಏನಿದರ ಬಗೆ
ನಿನ್ನದು, ಬಿಡು, ಬಲು ಅಂತರ್‌ದೃಷ್ಟಿ
ಸೃಷ್ಟಿಯೊಳಗೆ ನೀ ವಿಚಿತ್ರಸೃಷ್ಟಿ
ಹಸು ಕರುವೀದರೆ ಅಚ್ಚರಿಯೇಕೆ?
ಹೊಸತನುಭವ ನಿನಗಾದೊಡೆ ಜೋಕೆ
ಹೆಜ್ಜೆ ಹೆಜ್ಜೆಗೂ ಬೆರಗೆನಬೇಡ
ನಿನಗೇ ಬೆರಗೆಂಬರು ಜನ ನೋಡ”
ಎನುತೀ ಪರಿ ದಟ್ಟಿಸಿ ನಗೆಯಾಡಿ
ತುಸ ಚಿಂತಿಸಿ ಬಳಿಕೆನ್ನನು ನೋಡಿ
“ದಿಟ, ಸೋಜಿಗವೀ ಪಂದ್ಯದ ಓಟ
ನಮಗಿಂತಾಯಿತು ದೇವರ ಕಾಟ.
ಈ ಬಾಳ ಮುಂದೆ ಮತ್ತಾವ ತಡಿಕೆಯೋ
ಏ ಜನ್ಮವೊ ಮೇಣೇನು ದುಡಿಕೆಯೋ
ನಮಗೀ ಬಾಳಿನೊಳೇನು ರುಚಿಸದೋ
ಆ ಬಾಳೇ ಮುಂದಕ ನಮಗಹುದೊ?
ಎಲ್ಲಾ ಜನ್ಮದ ರುಚಿಗಳನುಂಡು
ಸಿಹಿ ಕಹಿ ಎನ್ನದ ಹದವನು ಕಂಡು
ಥೂ ಛೀ ಸೈ ಎಂಬುದ ಬಿಡುವರೆಗೂ
ತಡಿಕೆಯ ಓಟವೆ ನನಗೂ ನಿನಗೂ.
ನಿ‌ರ್‌ವೈರಾಗ್ಯಗೆ ಮುಕ್ತಿಯೆ? ಭ್ರಾಂತಿ.
ಸಮತೆಗೆ ಸಲ್ಲದಗೆಲ್ಲಿಯ ಶಾಂತಿ?”
ಎನ್ನುತ ತತ್ತ್ವವನೊರೆದನು ನನಗೆ
ಇಲ್ಲಿಗೆ ಮುಗಿಯಿತು ಈ ಬರೆವಣಿಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...