Home / ಕವನ / ಕವಿತೆ / ಮಡಿಕೇರೀಲಿ ರತ್ನ

ಮಡಿಕೇರೀಲಿ ರತ್ನ

ಮಡಿಕೇರೀಲಿ ರತ್ನ
ಕಂಡಾ ವೊಸಾ ಮತ್ನ. ೧

‘ಮಡಿಕೇರೀಲಿ ಮಡಿಕೆ ಯೆಂಡ
ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’
ಅಂದಿ ರತ್ನ ಪಡಕಾನೇಗೆ
ವೊಂಟಿ, ಬೆಟ್ಟದ ನೆತ್ತಿ ಮೇಗೆ
ವೋಯ್ತಿದ್ದಂಗೆ ನಿಂತ!
ಕಲ್ಲಾದಂಗೆ ಕುಂತ! ೨

ಸುತ್ತ ಸಾಯೋ ಬಿಸಿಲಿನ್ ಚಾಪೆ!
ಅಲ್ಲಲ್ಲಿ ವೊಸಿ ನೆರಳಿನ್ ತೇಪೆ!
ಅಲೆಯಲೆಯಾಗಿ ಬಿಸಿಲಿನ್ ಜೊತೆಗೆ
ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ
ಮನಸೀಗ್ ಅರ್‍ಸ ತರ್‍ತ-
ರತ್ನ ಯೆಂಡ ಮರ್‍ತ! ೩

‘ಮುದಕನ್ ಸಾವೇ ನೋಡಾಕ್ ಚಂದ!’
ಅಂದ್ರೆ ಸೂರ್‍ಯ ಸಾಯಾಲ್ಲೇಂದ;
‘ಸಾಯೋ ಮುದುಕ ಸಂಜೆ ಸೂರ್‍ಯ
ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?’
ಅಂತ ಹಿಂದಕ್ಕ್ ತಿರ್‍ಗಿ
ನೋಡ್ದ್ರೆ-ಬತ್ತು ಗಿರ್‍ಕಿ! ೪

ದೇವರದೊಂದು ಚೆಂದದ್ ಸೋತ್ರ
ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ
ಬಂದಂಗಿದ್ಲು ಅತ್ರ ಕಾಲ್ತಾವ್
ಒಂದು ಕೊಡಗೀನುಡಗಿ!
ಐದಾರೊರಸದ್ ವುಡಗಿ! ೫

ಕೊಡಗಿನ್ ತೋಟದ್ ಕಾಪೀ ಅಣ್ಣು
ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
ಕೆನ್ನೆ ಅನಕ ಕೊಡಗಿನ್ ಕಿತ್ಲೆ!
ಔಳೇಳಿದ್ಲು ನಾ ಕೇಳೂತ್ಲೆ :
‘ನಿಂಗೆ ಯೆಸರೇನಮ್ಮ?’
‘ನನ್ನೆಸರು ಪೂವಮ್ಮ!’ ೬

‘ಪೂವಮ್ಮ!’ ಹಾ ! ಯೆಂತಾ ಯೆಸರು!
ಕಣ್ಣಿಗೆ ಚಿತ್ರ ಕಟ್ಟೋ ಯೆಸರು!
ರೂಪು ರಾಗಕೆ ತಕ್ಕಂತ್ ಯೆಸರು!
ಯಂಗ್ ನೋಡಿದ್ರು ವೊಪ್ಪೋ ಯೆಸರು!
‘ಪೂವಮ್ಮಾ! ಪೂವಮ್ಮಾ!’
‘ಪೂವಮ್ಮಾ! ಪೂವಮ್ಮಾ!’

ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!
ಔಳ್ ಮಾತ್ ಇನ್ನಾ ಕೇಳ್ಬೇಕೂಂತ
‘ನಾನ್ಯಾರ್ ಗೊತ್ತೆ?’ ಅಂದ್ರೆ ‘ಹೂ’ತ
‘ನೀ ಯೆಂಡಕುಡಕ’ ಅಂದ್ಲು
ನೆಗ್ತ ಅತ್ರ ಬಂದ್ಲು. ೮

‘ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?’
ಅಂದ್ರೆ, ‘ಯಾವೋನ್ಗೈತೆ ಜಮ್ಮ
ಔನ್ಗೆ ಯೋಳ್ತಿವ್ ಕೊಡವಾಂತಂದಿ!
ಕುಡದಂಗ್ ಆಡೋನ್ ಕುಡುಕಾಂ’ತ್ ಅಂದಿ
ತೊಡೇನ್ ಅತ್ತಿದ್ಲು ಮೆಲ್ಗೆ!
ಕುಡದೋನ್ ಅಂದ್ರೆ ಸಲ್ಗೆ! ೯

ಕತ್ತಿನ್ ಸುತ್ತ ಕೈ ಆಕ್ಕೊಂಡಿ
‘ಅಣ್ಣ ರತ್ನ’ ಅಂತ್ ನೆಕ್ಕೊಂಡಿ
‘ಯೆಂಡದ ಪದಗೊಳ್ ಏಳ್ ನೋಡಾನೆ!
ನಾನೂ ನಿನ್ನಂಗ್ ಕಲ್ತ್ ಆಡಾನೆ!’
ಅಂದ್ಲು ಮೊಕಾನ್ ನೋಡಿ!
ಕಣ್ಣ ದೊಡ್ದು ಮಾಡಿ! ೧೦

ಇಲ್ದಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ದೆ ಯೆಂಗೀಸ್ ಇಡದಂಗ್ ತಾಲಿ-
ಸೂರ್‍ಯ ಮುಳಗಿದ್ ಕಾಣ್ದೆ!
ಯೆಂಡ ಬೇಕಂತ್ ಅನ್ದೆ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...