Home / ಕವನ / ಕವಿತೆ / ಮುತ್ತಣ-ಸಾಬಿ-ದೊರೆಸಾಮಿ-ದೇವರು

ಮುತ್ತಣ-ಸಾಬಿ-ದೊರೆಸಾಮಿ-ದೇವರು

ಮೇಲೂರ ಮುತ್ತಣ್ಣ ಬಲು ಬುದ್ಧಿವಂತ
ಅವನ ಮಾತೇ ಮಾತು ಅದಕಿಲ್ಲ ಅಂತ
ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ
ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ.
ನಮ್ಮ ಮನದಾರೋಗ್ಯಕವನ ಸಹವಾಸ
ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ
ಮಂಕನೇಳಿಪುದಣ್ಣ ಏನದರ ಬಣ್ಣ!
‘ಹೇಗೆ ಬೆಳೆಯಿತು ಬೊಜ್ಜು ನಿನಗೆ, ಮುತ್ತಣ್ಣ,
ಏನುಂಡೆ’ ಎನೆ, ಎಂಬ: ‘ಸತ್ತವರ ಪಿಂಡ!
ಅವರ ಸ್ವರ್ಗಕೆ ಎತ್ತೆ ಇಂಥ ದೋರ್ದಂಡ
ಮತ್ತಾರಿಗುಂಟಯ್ಯ ಈ ಊರಿನೊಳಗೆ?
ಎತ್ತಬೇಕಿರಿಸಬೇಕುರುಳದಂತಿಳೆಗೆ
ಅದಕೆನಗೆ ನಿಮಂತ್ರಣೆ ಮೂರುದಿನಕೊಮ್ಮೆ
ಹಿರಿಯ ಪಿತೃದೇವರನು ಹೊರಲಾನೆ ಎಮ್ಮೆ-
ನಮ್ಮ ಬ್ರಾಹ್ಮಣ್ಯದಲಿ ಶ್ರಾದ್ಧವೇ ಸಾರ
ಅದರ ಬಲವಿಲ್ಲದಿರಲೆಲ್ಲಿ ಸಂಸಾರ?’
ಎಂದು ನಗುವನು ಶ್ವೇತಮೃತ್ತಿಕೆಯ ತೀಡಿ
ಇದರ ಕೈಗೆಯ್ಮೆಯೊಳು ಯಾರಿವಗೆ ಜೋಡಿ?

ಕೊಕ್ಕರೆಯ ಗರಿಗಿಂತ ಬಿಳಿಯ ತಿರುಮಣ್ಣು-
ಎಲ್ಲ ಮೊಗದೊಳು ಹೊಳೆವಳಿವನ ಜಸೆವೆಣ್ಣು.
ಯತಿರಾಜರಿವನಿಗಿದೆ ಗಳಿಸಿಟ್ಟ ಆಸ್ತಿ
ಇವರು ಆ ಸಾಬಿಗೂ ಬಹಬಹಳ ದೋಸ್ತಿ.
ಇವನ ತಿರುಮಣ್ಣಿಡಲು ಅವನ ತಿರುಪುಟ್ಟಿ;
ಬೇಹಾರವೆಷ್ಟಿರಲಿ ಒಂದಿಲ್ಲ ಬಿಟ್ಟಿ.
ಯಾ ಅಲ್ಲ, ಏ ಸಾಮಿ, ಎಂದವನು ಬರುವ.
ಉಡಿದಾರ ತಿರುಚೂರ್ಣ ಎಲ್ಲವು ತರುವ.
“ಹರಿಯಲ್ಲ ಹರನಲ್ಲ ದಿಟ ನಿಮ್ಮ ಅಲ್ಲ
ನರಸಿಂಹನೂ ಅಲ್ಲ ನಾರಣನು ಅಲ್ಲ
ನೇತಿ ಎಂಬುದೆ ಅಲ್ಲ ಇತಿ ಎಂಬುದಲ್ಲ
ಆದೊಡಲ್ಲನ ಇಲ್ಲ ಎಂಬುಸಿರಿಲ್ಲ
ಅಲವೇ ಸಾಬಿ?” ಎನೆ, ಅರೆ ಅಲ್ಲ ಎನುವ.
ಏತಿ ಎಂದರೆ ಪ್ರೇತಿ ಎಂಬ ಪಂಥದವ
ನೀತಿ ಪ್ರೀತಿಗಳಲ್ಲಿ ಮಿಗಿಲೆ ಇಲ್ಲದವ
ವಾರ ವಾರಕು ಇರುಳನವನಿಲ್ಲೆ ಕಳೆವ.
“ನಾ ಗೈವೆ ಜನಿವಾರ ನೀನು ಉಡಿದಾರ,
ನಾ ನಾಮಕಾರ ನೀ ತಿರುಚೂರ್ಣಕಾರ
ಈ ಊರ ಹಾರುವಿಕೆಗಾವೆ ಆಧಾರ”
ಇಂತೆನಲು ಮುತ್ತಣ್ಣ, ನಗುವನವ ಪೂರ
“ಹೊರುವರೆಂದರೆ ಚೆನ್ನ ಹಾರುವರಿಗಿಂತ;
ನಮಗಿಲ್ಲವೀ ಭಾರ ಈ ಹೊರುವ ಪಂಥ”
ಇಂತಿವರ ಬಗೆ ತಾಗಿ ಕೆದರುವುದು ಹೊಗರ
ಇವರನಾಲಿಸುತಿರಲು ನಮ್ಮ ಬಗೆ ಹಗುರ.

ದಿಟವಾಗಿ ಮುತ್ತಣ್ಣ ಗೀತನೊಳು ಭಕ್ತಿ
ಇವ ನಮಾಜನು ಮಾಡೆ ನೋಡಲಾಸಕ್ತಿ;
ಎಂಥ ರಾಗದ ರಚನೆ ಈ ಮೊರೆಯೊಳೆಂಬ
ಭಾವದಂತಾಗುವನು ಈ ದೇವರೆಂಬ
ಶೂನ್ಯದಿಂ ಸೃಷ್ಟಿಯನು ಗೈವುದಿಂತೆಂಬ
ವ್ಯೋಮದಿಂ ಕಾಮವನು ಕರೆವುದಿಂತೆಂಬ
ಗದ್ದಲವ ಮಾಡುತಿರೆ ಸದ್ದು ಸದ್ದೆಂಬ
ಯಾವುದೋ ಯಕ್ಷಿಣಿಯ ನಿರುಕಿಪೊಲು ಕಾಂಬ.
“ದೇವಭಾವದ ಹೊಳೆಗೆ ಮರಳುಕಡ ಸಾಬಿ,
ಕಲ್ಲುಕಡವೆಮ್ಮ ಗುಡಿ ಭಟ್ಟನೇ ದೋಭಿ,
ಮನವ ಮಡಿಯಾಗಿಡಲು ದಮ್ಮಡಿಯ ತಮಡಿ
ನಮಗೆ ಬೇಕೀತನಿಗೊ ನಲ್ಮೊರೆಯೆ ತಮಡಿ”
ಇಂತೊರೆವನೊಮ್ಮೊಮ್ಮೆ ಮುತ್ತಣ್ಣನೆಮಗೆ.
ಪಡುವಲೋ ಮೂಡಲೋ ಎಲ್ಲವೊಳಿತವಗೆ
ಆಸ್ತಿಕ್ಯ ನಾಸ್ತಿಕ್ಯವೆರಡು ಬೇಕಿವಗೆ
ಆಸ್ತಿಕ್ಯದಾಧಿಕ್ಯ ನಾಸ್ತಿಕ್ಯ ಇವಗೆ.

ನವಶಾಸ್ತ್ರಿ ದೊರೆಸಾಮಿ ಇವಗಚ್ಚು ಮೆಚ್ಚು
ವೇದವೇದಾಂತಗಳೆ ಅವನಿದಿರು ಪೆಚ್ಚು!
“ಮನುಜನಿಗು ಮಿಗಿಲಿಲ್ಲ ಮನಕು ಮಿಗಿಲಿಲ್ಲ
ಇವನರಿವೆ ಜಗದೆಲ್ಲೆ, ಇದಕೆ ಹೊರತಲ್ಲ.
ತಿಳಿವ ಮೀರಿಹುದಿಹುದೊ? ಎಂತು ಇಹುದೆಂಬೆ?
ನಿನ್ನೀ ವಿತರ್ಕದೊಳೆ ನಾನಿಲ್ಲವೆಂಬೆ
ನನ್ನ ನೀ ನಂಬೆ ನಾನೂ ನಿನ್ನ ನಂಬೆ”
“ಅಬ್ಬ ನಿನ್ನೀ ವಾದಕೆನ್ನ ತಿಳಿವಿಂಬೆ?
ಎಂತರಿವೆನೋ ನಿನಗೆ ತಿಳಿವಿಹುದು ಎನುತ!”
ಎನ್ನುವನು ಮುತ್ತಣ್ಣ ಹುಸಿನಗೆಯ ನಗುತ.
“ತಿಳಿವಿರಲು ತಿಳಿವುದೈ ಇಲ್ಲದಿರಲಿಲ್ಲ
ಭಕ್ತಿಗೂ ನನ್ನುಕ್ತಿಗೂ ನೇಹವಿಲ್ಲ.
ಗುಡಿಯ ಪೊಂಗಲು ಹಿತ ಅದಕೆ ಪೂಜೆ ಕತ
ಅದರ ಸೇವನೆಗಿದರ ಸೈರಣೆಯೆ ವಿಹಿತ.
ರಾಮಾನುಜರು ಕಂಡ ವೈಕುಂಠ ಕನಸು
ಆಹ ನಮಗಾಗುತಿದೆ ತೇಂಗೊಳಲ ನನಸು.
ಅಂದರಸುಕುವರಿಯನು ಮೆಟ್ಟಿದ್ದ ದೆವ್ವ
ಇಂದೆಮಗೆ ಸವಿತಿಂಡಿಯುಣಿಸಿಸುತಿರುವವ್ವ.
ನಮೊ ಅದಕೆ ಅದರಧಿಷ್ಠಾನದರಮನೆಗು
ಅದನಟ್ಟಿದಾ ಯತಿಗು ಅವರನಟ್ಟಿದಗು
ಆ ಮಹಾಗುರು ನೆಟ್ಟ ಗುರುಪರಂಪರೆಗು
ಪುಳಿಯೋರೆಯಿರದೆ ಮೊರೆಯದ ಶಾತ್ತುಮೊರೆಗು
ಕಣ್ಮುಚ್ಚಿ ಕೈ ಮುಗಿದು ಕೂಳ್‌ಕಾಯ್ವ ನಿಮಗು
ಮುಗಿಯದೇ ನಿನ್ನ ಮರೆಯೊಳು ಬಾಳ್ಳ ನನಗು!”
ನವಯುವಕ ಇಂತೆನಲು, “ದಿಟ, ಪುಣ್ಯವಂತ
ಕೊಡಲು ಬೇಕಿಲ್ಲ ನೀನವಗೆ ಭಕ್ತಿ ಕಂತ.
ಸಂಕಟವೆ ಇಲ್ಲದಗೆ ವೆಂಕಟನು ಬೇಕೆ
ಸಂತೋಷವುಳ್ಳವಗೆ ದಾಸೋಹವೇಕೆ?
ದೇವರೊಲಿಯದ ನಮಗೆ ದಿನ ಅವನ ಚಿಂತೆ
ಅವನಿಂಬುತುಂಬಿರುವ ನಿನಗಿಲ್ಲ ಚಿಂತೆ
ಆಸ್ತಿಕ್ಯದಾಧಿಕ್ಯ ನಿನ್ನ ನಾಸ್ತಿಕ್ಯ
ದೈವವುಳ್ಳಗೆ ದೇವರುಂಟೆನೆ ಅಶಕ್ಯ”
ಇಂತು ಮುತ್ತಣ್ಣನೆನೆ, “ಗುಡಿಯ ರಸದೂಟೆ
ನನಗಿರಲಿ, ನೀವಿಟ್ಟುಕೊಳಿ ದೇವರೋಟೆ”
ಎಂದು ಕೊಂಕನು ನುಡಿದು ಎಲ್ಲವನು ನಗುವ
ದೊರೆಸಾಮಿಯನು ಕುರಿತು ಮುತ್ತಣ್ಣನೆನುವ
“ಎಳೆಯ ಕರುವಿಗೆ ಮೊಳೆವ ಕೊಂಬುಗಳ ಕಡಿತ
ಅಂತೆಮ್ಮ ದೊರೆಸಾಮಿಗೂ ಕಲಿತನುಡಿತ.
ಇದರ ನವೆ ತೀರಿಸಲು ನನ್ನರಿವೆ ಮೋಟುಕಂಬ
ಏತಕೂ ಸಗ್ಗದಿಹ ಮೊದ್ದುಮನವೆನ್ನ ಜಂಬ.”

ಇಂತು ನಡೆವುದು ಮಾತು ಸರಸಸುಮ್ಮಾನದಿಂದ
ಲಾಮಂಚವೂರಿರುವ ತೀರ್ಥಾಂಬುಪಾನದಿಂದ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...