Home / ಕವನ / ಕವಿತೆ / ಕವಿತೆ

ಕವಿತೆ

ಕವಿತೆ ಮತಿಜಲ ನಲಿನ,
ವ್ಯಸನ ವನಧಿಯ ಪುಲಿನ,
ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ,
ಕವಿತೆ ನವರಸ ರಂಗ
ವದು ತ್ರಿವೇಣಿಯ ಸಂಗ
ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬

ಧ್ಯಾನ ಗನಿಗಳ ರನ್ನ,
ಪ್ರಣಯ ಭಿಕ್ಷುವಿನನ್ನ,
ಕವಿತೆ ಜೀವನಸಮರ ಯೋಧರ ತುತೂರಿ,
ಕರುಣೆಯ ನಯನ ಬಿಂದು
ವೇಕಾಂತತೆಯ ಬಂಧು-
ಬಹುರೂಪದಿಂ ಸುಖಿಸುವುದು ಮನಮನವ ಸೇರಿ. ೧೨

ಇಂದುವುರುಗುವುದೇಕೆ?
ತಾರೆ ಮಿರುಗುವುದೇಕೆ?
ಕುಕಿಲು ಕರಗುವುದೇಕೆ ವಿರಹ ವಿಸ್ಮೃತಿಗೆ ?
ಅವರವರಿಗದೆ ಧರ್‍ಮ
ವಿದು ವಿಧಾತನ ಮರ್‍ಮ –
ಕವಿಯ ಹೃದಯವೆ ನರ್‍ಮಕುಂಜ ಕವಿತಾಸತಿಗೆ. ೧೮

ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು,
ಶೈಲಿಯಂಗದ ಚೆಲುವು, ಛಂದಸಂಚಲವು
ಅರ್‍ಥಲಾಲಿತ್ಯವೆನು
ವ ಸತೀತ್ವವಿರದೊಡನು
ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು? ೨೪

ವಿಪುಲ ಮಾನುಷ ಜೀವ
ನದ ಯಥಾರ್‍ಥ ಸಮಾವ
ಲೋಕನಂ ಕವಿತೆ ಎನೆ ಪಡುದೀವಿಯವರು,೧
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ,
ಎನಿತು ಧನ್ಯರೊ ಸಂಸ್ಕೃತಿಯ ನಾವನೇರ್‍ದವರು! ೩೦

ಸಂಪಗೆಗೆ ಕಂಪಿಹುದೆ?
ಇಂಗೋಲಿಗಿಂಪುಹುದೆ?
ಮಳೆವಿಲ್ಗೆ ಸೊಂಪಿಹುದೆ? ಕದಿರಿಹುದೆ ರವಿಗೆ?
ತಿಂಗಳಿಗೆ ತಂಪಿಹುದೆ?
ಸಾಗರಕ ಪೆಂಪಿಹುದೆ?
ಇಲ್ಲದಡೆ ಪೇಳು ಪೊಸ ಸೃಷ್ಟಿರಚಿಸುವ ಕವಿಗೆ ೩೬

ಕಂಬದಿಂ ಕವಿವಂದು,
ದಶತಿರನ ತಿವಿವಂದು,
ಫಲುಗುಣಗೆ ಕೊಳುಗುಳದಿ ಗೀತೆಯೊರೆವಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು…
ರವಿಯೊ ಮೇಣ್‌ ಕವಿಯೊ ಕಾಣಿಸುವನಂದುಮನಿಂದು? ೪೨

ಮನದನ್ನನಿನೆಯಳಿಗೆ,
ಮನದನ್ನೆ ಇನೆಯನಿಗೆ,
ತಂದೆತಾಯನಗಲ್ದವರ ತಾಯಿತಂದೆ,
ತಂಗಿಯಳಿದರ ತಂಗಿ,
ಬಂಧುಗಳನು ಮರುಂಗಿ
ಶೂನ್ಯಮಾದೆದೆಯ ಪಡಿವಾವಿ ಕವಿತೆಯದೊಂದೆ! ೪೮

ಜಗದುದಯ ನಡುವಗಲು
ಸಂಜೆ ರಜನಿಯ ಮಿಗಿಲು
ನೆನಸು ಕನಸುಗಳನರಿಯಲು ಮನಸನೀಯೆ,
ಗುರುವಿನಾಶ್ರಮದಂತೆ
ಕವಿತೆ ವಿದ್ಯೆಯ ಸಂತೆ-
ಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ. ೫೪

ಕವಿಗಿಂತ ಪಗೆಯಿಲ್ಲ
ಪರವಶತೆ ಒಗೆಗೆಲ್ಲ-
ಕವಿಯೆ ಸ್ಪಾತಂತ್ರ್ಯ ಮಧು ಕುಡಿವ ಮಧುಕರನು,
ಆದಿಕವಿ ಹರಿಯಿಂದ
ಕಲಿತು ಪರಿಪರಿಯಿಂದ
ಪರಹಿತವ ಬೆದರದೆಸಗುವನವನೆ ಕವಿವರನು ೬೦

ಅಬಲೆಯರ ತೋಳ್ಗಳನು
ಪರವಶರ ಬಾಳ್ಗಳನು
ಹುರಿದುಂಬಿಪುದು ನಾಡಿನಾಡಿಯಲಿ ಹರಿದು,
ಉದ್ಧರಿಸಿ ಪತಿತರನು,
ತಡೆದು ದುಶ್ಚಂತರನು,
ಧರ್‍ಮಪಥಕೊಯ್ಯುವುದು ಕವಿತೆಗಿದು ದಿಟ ಬಿರಿದು! ೬೬

ದಿನಭುವನನನು ಪದೆದು
ಹಾಸುಹೊಕ್ಕಂತೆ ಪದು
ಪಿಂದಲೊಂದಿಸುತೊಂದೆ ಮಗ್ಗದಲಿ ನೇತ
ಕವಿತೆ ಶಬಲಾಂಶುಕವ
ನುಡುತ ಕವಿಗತಿಸುಖವ
ನೀಡು ದೇವಕಿಕಂದ ಕವಿಚಂದ್ರ ದಿನನಾಧ! ೭೨
*****
1 Poetry is the criticism of Life’ (Matthew Arnold)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...