Home / ಕವನ / ಕವಿತೆ / ಕವಿತೆ

ಕವಿತೆ

ಕವಿತೆ ಮತಿಜಲ ನಲಿನ,
ವ್ಯಸನ ವನಧಿಯ ಪುಲಿನ,
ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ,
ಕವಿತೆ ನವರಸ ರಂಗ
ವದು ತ್ರಿವೇಣಿಯ ಸಂಗ
ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬

ಧ್ಯಾನ ಗನಿಗಳ ರನ್ನ,
ಪ್ರಣಯ ಭಿಕ್ಷುವಿನನ್ನ,
ಕವಿತೆ ಜೀವನಸಮರ ಯೋಧರ ತುತೂರಿ,
ಕರುಣೆಯ ನಯನ ಬಿಂದು
ವೇಕಾಂತತೆಯ ಬಂಧು-
ಬಹುರೂಪದಿಂ ಸುಖಿಸುವುದು ಮನಮನವ ಸೇರಿ. ೧೨

ಇಂದುವುರುಗುವುದೇಕೆ?
ತಾರೆ ಮಿರುಗುವುದೇಕೆ?
ಕುಕಿಲು ಕರಗುವುದೇಕೆ ವಿರಹ ವಿಸ್ಮೃತಿಗೆ ?
ಅವರವರಿಗದೆ ಧರ್‍ಮ
ವಿದು ವಿಧಾತನ ಮರ್‍ಮ –
ಕವಿಯ ಹೃದಯವೆ ನರ್‍ಮಕುಂಜ ಕವಿತಾಸತಿಗೆ. ೧೮

ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು,
ಶೈಲಿಯಂಗದ ಚೆಲುವು, ಛಂದಸಂಚಲವು
ಅರ್‍ಥಲಾಲಿತ್ಯವೆನು
ವ ಸತೀತ್ವವಿರದೊಡನು
ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು? ೨೪

ವಿಪುಲ ಮಾನುಷ ಜೀವ
ನದ ಯಥಾರ್‍ಥ ಸಮಾವ
ಲೋಕನಂ ಕವಿತೆ ಎನೆ ಪಡುದೀವಿಯವರು,೧
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ,
ಎನಿತು ಧನ್ಯರೊ ಸಂಸ್ಕೃತಿಯ ನಾವನೇರ್‍ದವರು! ೩೦

ಸಂಪಗೆಗೆ ಕಂಪಿಹುದೆ?
ಇಂಗೋಲಿಗಿಂಪುಹುದೆ?
ಮಳೆವಿಲ್ಗೆ ಸೊಂಪಿಹುದೆ? ಕದಿರಿಹುದೆ ರವಿಗೆ?
ತಿಂಗಳಿಗೆ ತಂಪಿಹುದೆ?
ಸಾಗರಕ ಪೆಂಪಿಹುದೆ?
ಇಲ್ಲದಡೆ ಪೇಳು ಪೊಸ ಸೃಷ್ಟಿರಚಿಸುವ ಕವಿಗೆ ೩೬

ಕಂಬದಿಂ ಕವಿವಂದು,
ದಶತಿರನ ತಿವಿವಂದು,
ಫಲುಗುಣಗೆ ಕೊಳುಗುಳದಿ ಗೀತೆಯೊರೆವಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು…
ರವಿಯೊ ಮೇಣ್‌ ಕವಿಯೊ ಕಾಣಿಸುವನಂದುಮನಿಂದು? ೪೨

ಮನದನ್ನನಿನೆಯಳಿಗೆ,
ಮನದನ್ನೆ ಇನೆಯನಿಗೆ,
ತಂದೆತಾಯನಗಲ್ದವರ ತಾಯಿತಂದೆ,
ತಂಗಿಯಳಿದರ ತಂಗಿ,
ಬಂಧುಗಳನು ಮರುಂಗಿ
ಶೂನ್ಯಮಾದೆದೆಯ ಪಡಿವಾವಿ ಕವಿತೆಯದೊಂದೆ! ೪೮

ಜಗದುದಯ ನಡುವಗಲು
ಸಂಜೆ ರಜನಿಯ ಮಿಗಿಲು
ನೆನಸು ಕನಸುಗಳನರಿಯಲು ಮನಸನೀಯೆ,
ಗುರುವಿನಾಶ್ರಮದಂತೆ
ಕವಿತೆ ವಿದ್ಯೆಯ ಸಂತೆ-
ಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ. ೫೪

ಕವಿಗಿಂತ ಪಗೆಯಿಲ್ಲ
ಪರವಶತೆ ಒಗೆಗೆಲ್ಲ-
ಕವಿಯೆ ಸ್ಪಾತಂತ್ರ್ಯ ಮಧು ಕುಡಿವ ಮಧುಕರನು,
ಆದಿಕವಿ ಹರಿಯಿಂದ
ಕಲಿತು ಪರಿಪರಿಯಿಂದ
ಪರಹಿತವ ಬೆದರದೆಸಗುವನವನೆ ಕವಿವರನು ೬೦

ಅಬಲೆಯರ ತೋಳ್ಗಳನು
ಪರವಶರ ಬಾಳ್ಗಳನು
ಹುರಿದುಂಬಿಪುದು ನಾಡಿನಾಡಿಯಲಿ ಹರಿದು,
ಉದ್ಧರಿಸಿ ಪತಿತರನು,
ತಡೆದು ದುಶ್ಚಂತರನು,
ಧರ್‍ಮಪಥಕೊಯ್ಯುವುದು ಕವಿತೆಗಿದು ದಿಟ ಬಿರಿದು! ೬೬

ದಿನಭುವನನನು ಪದೆದು
ಹಾಸುಹೊಕ್ಕಂತೆ ಪದು
ಪಿಂದಲೊಂದಿಸುತೊಂದೆ ಮಗ್ಗದಲಿ ನೇತ
ಕವಿತೆ ಶಬಲಾಂಶುಕವ
ನುಡುತ ಕವಿಗತಿಸುಖವ
ನೀಡು ದೇವಕಿಕಂದ ಕವಿಚಂದ್ರ ದಿನನಾಧ! ೭೨
*****
1 Poetry is the criticism of Life’ (Matthew Arnold)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್