Home / ಬಾಲ ಚಿಲುಮೆ / ಕಥೆ / ಬಾಳೆಯೂ ಸುಗಂಧರಾಜನೂ

ಬಾಳೆಯೂ ಸುಗಂಧರಾಜನೂ

ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ್ತಿದ್ದವು. ಹುಡುಗರು ಗುರುಗಳು ಹೇಳಿದಂತೆ ಕೇಳಿಕೊಂಡು ವಿದ್ಯೆ ಕಲಿಯುತ್ತಿದ್ದರು.

ಹಣ್ಣಿನ ಗಿಡಗಳಲ್ಲಿ ಬಾಳೆಯೂ, ಹೂವಿನ ಗಿಡಗಳಲ್ಲಿ ಸುಗಂಧರಾಜನೂ ಇಬ್ಬರೂ ಗೆಳೆಯರಾದವು. ಅವರಿಬ್ಬರಿಗೂ ಕೊಂಚ ಜಂಭ. “ಮುತ್ತುಗದ ಎಲೆಗಿಂತ ನನ್ನ ಎಲೆ ದೊಡ್ಡದು; ಅಲ್ಲದೆ ಜನರು ಮುತ್ತುಗದ ಎಲೆಗಿಂತ ನನ್ನ ಎಲೆಗೆ ಬೆಲೆಯನ್ನು ಕೊಡುವರು” ಎಂದು ಬಾಳೆಗೆ ಜಂಭ. “ಮುತ್ತುಗದ ಹೂ ಎಷ್ಟು ಅಂದವಾಗಿದ್ದರೇನು? ವಾಸನೆಯೇ ಇಲ್ಲ, ನನ್ನ ಹೂವಿನ ಮುಂದೆ ಹೂವೇ?” ಎಂದು ಸುಗಂಧರಾಜನಿಗೆ ಜಂಭ. ಈ ಜಂಭವು ಬಲಿಯಿತು. ಬಾಳೆಯೂ ಸುಗಂಧರಾಜನೂ ಬರುಬರುತ್ತ ಅವಿಧೇಯರಾದರು. ಅವು ಗುರುಗಳು ಹೇಳಿದ ಮಾತನ್ನು ಕೇಳದೆ ಹೋದವು.

ಮುತ್ತುಗವೂ ಇದನ್ನು ಕಂಡು, ಅವರಿಬ್ಬರನ್ನೂ ಕರೆದು “ನೀವು ಹೀಗೆ ಮಾಡಬಾರದು. ಹೇಳಿದ ಮಾತು ಕೇಳದಿದ್ದರೆ ನಿಮಗೇ ಕಷ್ಟ” ಎಂದು ಹೇಳಿತು. ಅವು ಕೇಳಲಿಲ್ಲ. ಆಗ ತರಗತಿಯಲ್ಲಿ “ಕವಲು ಬಿಡುವುದು” ಎಂಬ ಪಾಠವು ಆಗುತ್ತಿತ್ತು. ಅವಿಧೇಯರಾದ ಬಾಳೆ, ಸುಗಂಧರಾಜಗಳು ಪಾಠವನ್ನು ಗಮನಿಸಲಿಲ್ಲ.

ಕೆಲವು ದಿನವಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಪಾದರಿ, ಸುರಗಿ, ಪಗಡೆ, ಮೊದಲಾದ ಹೂವಿನ ಗಿಡಗಳೂ, ಮಾವು, ಬೇಲ, ಸೇಬು, ದ್ರಾಕ್ಷಿ, ಕಿತ್ತಳೆ, ಮೊದಲಾದ ಹಣ್ಣಿನ ಗಿಡಗಳೂ ಕವಲೊಡೆದವು. ಏನೇನು ಮಾಡಿದರೂ ಬಾಳೆಯೂ ಸುಗಂಧರಾಜನೂ ಕವಲು ಬಿಡಲಾಗಲಿಲ್ಲ. ಅವುಗಳಿಗೆ ಬಹಳ ದುಃಖವಾಯಿತು. “ಗುರುವು ಹೇಳಿದ ಮಾತು ಕೇಳಲಿಲ್ಲವಲ್ಲ! ಕೆಟ್ಟೆವಲ್ಲಾ!” ಎಂದು ಬಹಳ ನೊಂದುಕೊಂಡವು. ಈಗಲೂ ನೀವು ಬಾಳೆಯನ್ನೂ ಸುಗಂಧರಾಜನನ್ನೂ ನೋಡಿ. ಹಣ್ಣು ಹೂವು ಆದಮೇಲೆ ಮಿಕ್ಕ ಗಿಡಗಳು, ಕವಲೊಡೆದು ಸಂತೋಷದಿಂದ ಬೆಳೆಯುತ್ತಿದ್ದರೆ, ಅವೆರಡೂ ದುಃಖದಿಂದ ಬಾಡಿ ಬಳಲಿ ಒಣಗಿ ಹೋಗುವುವು.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...