Home / ಬಾಲ ಚಿಲುಮೆ / ಕಥೆ / ಬಾಳೆಯೂ ಸುಗಂಧರಾಜನೂ

ಬಾಳೆಯೂ ಸುಗಂಧರಾಜನೂ

ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ್ತಿದ್ದವು. ಹುಡುಗರು ಗುರುಗಳು ಹೇಳಿದಂತೆ ಕೇಳಿಕೊಂಡು ವಿದ್ಯೆ ಕಲಿಯುತ್ತಿದ್ದರು.

ಹಣ್ಣಿನ ಗಿಡಗಳಲ್ಲಿ ಬಾಳೆಯೂ, ಹೂವಿನ ಗಿಡಗಳಲ್ಲಿ ಸುಗಂಧರಾಜನೂ ಇಬ್ಬರೂ ಗೆಳೆಯರಾದವು. ಅವರಿಬ್ಬರಿಗೂ ಕೊಂಚ ಜಂಭ. “ಮುತ್ತುಗದ ಎಲೆಗಿಂತ ನನ್ನ ಎಲೆ ದೊಡ್ಡದು; ಅಲ್ಲದೆ ಜನರು ಮುತ್ತುಗದ ಎಲೆಗಿಂತ ನನ್ನ ಎಲೆಗೆ ಬೆಲೆಯನ್ನು ಕೊಡುವರು” ಎಂದು ಬಾಳೆಗೆ ಜಂಭ. “ಮುತ್ತುಗದ ಹೂ ಎಷ್ಟು ಅಂದವಾಗಿದ್ದರೇನು? ವಾಸನೆಯೇ ಇಲ್ಲ, ನನ್ನ ಹೂವಿನ ಮುಂದೆ ಹೂವೇ?” ಎಂದು ಸುಗಂಧರಾಜನಿಗೆ ಜಂಭ. ಈ ಜಂಭವು ಬಲಿಯಿತು. ಬಾಳೆಯೂ ಸುಗಂಧರಾಜನೂ ಬರುಬರುತ್ತ ಅವಿಧೇಯರಾದರು. ಅವು ಗುರುಗಳು ಹೇಳಿದ ಮಾತನ್ನು ಕೇಳದೆ ಹೋದವು.

ಮುತ್ತುಗವೂ ಇದನ್ನು ಕಂಡು, ಅವರಿಬ್ಬರನ್ನೂ ಕರೆದು “ನೀವು ಹೀಗೆ ಮಾಡಬಾರದು. ಹೇಳಿದ ಮಾತು ಕೇಳದಿದ್ದರೆ ನಿಮಗೇ ಕಷ್ಟ” ಎಂದು ಹೇಳಿತು. ಅವು ಕೇಳಲಿಲ್ಲ. ಆಗ ತರಗತಿಯಲ್ಲಿ “ಕವಲು ಬಿಡುವುದು” ಎಂಬ ಪಾಠವು ಆಗುತ್ತಿತ್ತು. ಅವಿಧೇಯರಾದ ಬಾಳೆ, ಸುಗಂಧರಾಜಗಳು ಪಾಠವನ್ನು ಗಮನಿಸಲಿಲ್ಲ.

ಕೆಲವು ದಿನವಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಪಾದರಿ, ಸುರಗಿ, ಪಗಡೆ, ಮೊದಲಾದ ಹೂವಿನ ಗಿಡಗಳೂ, ಮಾವು, ಬೇಲ, ಸೇಬು, ದ್ರಾಕ್ಷಿ, ಕಿತ್ತಳೆ, ಮೊದಲಾದ ಹಣ್ಣಿನ ಗಿಡಗಳೂ ಕವಲೊಡೆದವು. ಏನೇನು ಮಾಡಿದರೂ ಬಾಳೆಯೂ ಸುಗಂಧರಾಜನೂ ಕವಲು ಬಿಡಲಾಗಲಿಲ್ಲ. ಅವುಗಳಿಗೆ ಬಹಳ ದುಃಖವಾಯಿತು. “ಗುರುವು ಹೇಳಿದ ಮಾತು ಕೇಳಲಿಲ್ಲವಲ್ಲ! ಕೆಟ್ಟೆವಲ್ಲಾ!” ಎಂದು ಬಹಳ ನೊಂದುಕೊಂಡವು. ಈಗಲೂ ನೀವು ಬಾಳೆಯನ್ನೂ ಸುಗಂಧರಾಜನನ್ನೂ ನೋಡಿ. ಹಣ್ಣು ಹೂವು ಆದಮೇಲೆ ಮಿಕ್ಕ ಗಿಡಗಳು, ಕವಲೊಡೆದು ಸಂತೋಷದಿಂದ ಬೆಳೆಯುತ್ತಿದ್ದರೆ, ಅವೆರಡೂ ದುಃಖದಿಂದ ಬಾಡಿ ಬಳಲಿ ಒಣಗಿ ಹೋಗುವುವು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...