ತಿಮ್ಮ

ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್ಟು ಹೋದೀರಿ!” ಎಂದು ಆಗಾಗ ಹೇಳುತ್ತಿದ್ದವು.

ಆ ಹಿಂಡಿನಲ್ಲಿ ತಿಮ್ಮ ಎಂಬ ಒಂದು ಮರಿ ಇತ್ತು. ಆದು ಒಂದು ದಿನ “ಯಾವಾ ಗಲೂ ಇವರ ಜೊತೆಯಲ್ಲಿಯೇ ಏಕೆ ಹೋಗಬೇಕು? ಇಂದು ನಾನೇ ಬೇರೆ ಹೋಗುತ್ತೇನೆ” ಎಂದುಕೊಂಡಿತು. ಅಂದು ಹಾಗೆಯೇ, ಅವರೆಲ್ಲರೂ ಹೋಗುತ್ತಿದ್ದ ದಾರಿಯನ್ನು ಬಿಟ್ಟು, ಮತ್ತೊಂದು ಹಾದಿಯನ್ನು ಹಿಡಿಯಿತು. ಎಂದಿನಂತೆ ಮರಿಗಳೆಲ್ಲ ಜತೆಯಲ್ಲಿ ಬರುತ್ತಿವೆ ಎಂದು ದೊಡ್ಡ ಕಪಿಗಳೂ ಮುಂದು ಮುಂದಕ್ಕೆ ಹೋದವು. ತಿಮ್ಮನು ಹಿಂದೆ ಉಳಿದುದು ಯಾರಿಗೂ ತಿಳಿಯದು.

ತಿಮ್ಮನು ಕೊಂಚದೂರ ಹೋಗುವುದರೊಳಗಾಗಿ, ಒಂದು ನಾಯಿ ಬಂತು; ತಿಮ್ಮನನ್ನು ಕಂಡು ಬೊಗಳಿತು. ಅದನ್ನು ಕಂಡು ಕೆಲವರು ತುಂಟ ಹುಡುಗರು ಬಂದರು. ತಿಮ್ಮನನ್ನು ಬೇಕಾದಷ್ಟು ಕೀಟಲೆ ಮಾಡಿದರು. ಕೆಲವರು ಮುಖವನ್ನು ಉದ್ದಮಾಡಿ, “ಗುರ್‌ಗುರ್‌” ಎಂದು ಅಣಕಿಸಿದರು. ಮತ್ತೆ ಕೆಲವರು ಕೈಚಪ್ಪಾಳೆಯಿಟ್ಟು “ಕೋತೀ ತಿಮ್ಮಾ! ಲೇ! ಕೋತೀ ತಿಮ್ಮಾ!” ಎಂದು ಅದನ್ನು ರೇಗಿಸಿದರು. ಇನ್ನು ಕೆಲವರು ಕಲ್ಲಿನಿಂದ ಹೊಡೆದರು. ಇದನ್ನೆಲ್ಲಾ ಕಂಡು ತಿಮ್ಮನಿಗೆ ಬಲು ದಿಗಿಲಾಯಿತು. ಅರಿಚಿಕೊಂಡಿತು; ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೋ ತಿಳಿಯದೆ, ಸುಮ್ಮನೆ “ಕಿಚಿಕಿಚಿ” ಎಂದು ಒರಲಿಕೊಂಡಿತು.

ಅಷ್ಟರಲ್ಲಿ ಅದರ ಅರಚಾಟವು ದೊಡ್ಡ ಕಪಿಗಳಿಗೆ ಕೇಳಿಸಿತು. ಕೂಡಲೇ ಹಿಂಡಿಗೆ ಹಿಂಡೇ ತಿಮ್ಮನಿರುವ ತಾವಿಗೆ ಓಡಿಬಂದವು. ಅವು ಬರುತ್ತಲೇ ಹುಡುಗರೂ ಓಡಿಹೋದರು. ನಾಯಿಯೂ ಓಡಿಹೋಯಿತು.

ಆಗ ಅದಕ್ಕೆ ಬುದ್ಧಿ ಬಂತು. ತಿಮ್ಮನು ಅಲ್ಲಿಂದ ಮುಂದೆ ಎಂದೂ ಅವಿಧೇಯನಾಗಿ ನಡೆಯಲಿಲ್ಲ. ಹಿಂಡಿನಲ್ಲಿ ಯಾರಾದರೂ ತಾಯಿತಂದೆಗಳು ಹೇಳಿದ ಮಾತು ಕೇಳದೆ ಹೋದರೆ, ತಿಮ್ಮನು ಅವರಿಗೆ ತನ್ನ ಕಥೆಯನ್ನು ಹೇಳಿ ದಾರಿಗೆ ತರುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...