ಒಂದಾನೊಂದು ಊರಿನಲ್ಲಿ ದೇವಶರ್ಮನೆಂಬ ಬ್ರಾಹ್ಮಣನಿದ್ದನು. ಅವನು ವೇದ ಶಾಸ್ತ್ರಗಳನ್ನು ಬಲ್ಲವನು. ದಿನವೂ ವೇದಗಳನ್ನು ಓದುವನು. ಶಾಸ್ತ್ರದಲ್ಲಿ ಹೇಳಿರುವಂತೆ ನಡೆಯುವನು. ಆಹಿತಾಗ್ನಿಯು (ಮನೆಯಲ್ಲಿ ಅಗ್ನಿಯನ್ನು ಇಟ್ಟುಕೊಂಡು ದಿನವೂ ಬೆಳಿಗ್ಗೆ ಸಂಜೆ ತಪ್ಪದೆ ಹೋಮ ಮಾಡುವವರು.) ಆತನಿಗೆ ಪರಮ ಪತಿವ್ರತೆಯಾದ ಯಜ್ಞದತ್ತೆಯೆಂಬ ಹೆಂಡತಿಯಿದ್ದಳು. ಅವಳೊಮ್ಮೆ ಬಸುರಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅದೇ ದಿನವೇ ಅವರ ಮನೆಯಲ್ಲಿದ್ದ ಮುಂಗುಸಿಯೂ ಒಂದು ಮರಿಯನ್ನು ಹಾಕಿತು. ಆ ಬ್ರಾಹ್ಮಣಿಯು ತನ್ನ ಮಗುವಿನಂತೆ ಆ ಮರಿಯನ್ನು ವಿಶ್ವಾಸದಿಂದ ಸಾಕುತ್ತಿದ್ದಳು:
ಅದೂ ಮಗುವಿನಲ್ಲಿ ಬಲು ಅಕ್ಕರೆಯಿಂದ ಇದ್ದರೂ ಆಕೆಗೆ “ಇದು ಕೆಟ್ಟಜಾತಿ. ಯಾವಾಗಲಾದರೂ ಮಗುವಿಗೆ. ಕೇಡುಮಾಡಿದರೂ ಮಾಡೀತು ಎಂದು ಬಲು ಎಚ್ಚರಿಕೆಯಿಂದ ಇರುತ್ತಿದ್ದಳು.
ಒಂದುದಿನ ಆಕೆಯು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಗಂಡನನ್ನು ಕೂಗಿ, “ನಾನು ಕೆರೆಗೆ ಹೋಗಿ ನೀರು ತರುವೆನು. ನೀವು ಈ ಮಗುನನ್ನು ನೋಡಿಕೊಳ್ಳಿ, ಮುಂಗುಸಿಯೂ ಇಲ್ಲಿಯೇ ಇದೆ. ಎಚ್ಚರಿಕೆ.” ಎಂದು ಹೇಳಿ ಒಪ್ಪಿಸಿ ಕೊಡವನ್ನು ತೆಗೆದುಕೊಂಡು ನೀರಿಗೆ ಹೋದಳು. ಆ ವೇಳೆಗೆ ಆ ಊರಿನ ಅರಸು “ದಾನಕ್ಕಾಗಿ ಬರಬೇಕು” ಎಂದು ಆಳುಗಳನ್ನು ಕಳುಹಿಸಿದನು. ಆ ದೇವಶರ್ಮನು ಅರಸನ ಮಾತು ಮೀರಲಾರದೆ ಅಲ್ಲಿಗೆ ಹೋದನು.
ಇತ್ತ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಂದು ನಾಗರಹಾವು ತನ್ನ ಬಿಲದಿಂದ ಈಚೆಗೆ ಬಂತು. ಮುಂಗುಸಿಯು ಅದನ್ನು ಕಂಡು ಅದರಮೇಲೆ ಬಿದ್ದು ಕಾದಾಡಿ ಅದನ್ನು ಕೊಂದಿತು.
ಹಾಗೆ ಹಗೆಯನ್ನು ಕೊಂದೆನೆಂಬ ತನ್ನ ಸಂತೋಷವನ್ನು ತಾಯಿಗೆ ಹೇಳಲು ಅದು ಅಕೆಗೆ ಎದುರಾಗಿ ಬಂತು. ಆಕೆಯು ಅದರ ಮುಸುಡಿಯಲ್ಲಿದ್ದ ಮಾಂಸ ರಕ್ತಗಳನ್ನು ನೋಡಿ ಮಗುವನ್ನು ಕೊಂದು ಬಂದಿರುವುದು ಎಂದುಕೊಂಡು, ಆ ಕೋಪ ದುಃಖಗಳಲ್ಲಿ ತಾನು ತಂದಿದ್ದ ನೀರಿನ ಕೊಡವನ್ನು ಅದರ ತಲೆಯ ಮೇಲೆ ಕುಕ್ಕಿದಳು. ಅದು ಅಲ್ಲಿಯೇ ಸತ್ತು ಬಿದ್ದಿತು.
ಬ್ರಾಹ್ಮಣಿಯು ಮನೆಗೆ ಬಂದು ನೋಡಿದಳು. ಮಗುವು ತೊಟ್ಟಿಲಲ್ಲಿ ಸುಖವಾಗಿ ಆಡಿಕೊಂಡಿತ್ತು. ತೊಟ್ಟಿಲಿನ ಮಗ್ಗುಲಲ್ಲಿಯೇ ನಾಗರಹಾವು ತುಂಡಾಗಿ ಬಿದ್ದಿತ್ತು ಆ ವೇಳೆಗೆ ಗಂಡನೂ ಬಂದನು. ಬ್ರಾಹ್ಮಣಿಯು ಬಲವಾಗಿ ಅತ್ತು. “ನಿಮ್ಮನ್ನು ಕಾದಿಕೊಂಡಿರಿ ಎಂದರೆ ನೀವು ಕೇಳಲಿಲ್ಲ. ದಾನದಮೇಲಿನ ಆಸೆಯಿಂದ ನೀವು ಹೊರಟು ಹೋದಿರಿ. ಅದರ ಫಲವಾಗಿ ಇಷ್ಟೂ ಆಯಿತು. ನಾನು ಬರುವವರೆಗೂ ತಡೆಯಬಾರದಾಗಿತ್ತೇ? ಮಗುವಂತಿದ್ದ ಮುಂಗುಸಿಯು ಅನ್ಯಾಯವಾಗಿ ಮೃತ್ಯುವಿನ ಪಾಲಾಯಿತು. ಅಷ್ಟಲ್ಲದೆ ಹೇಳಿದರೇ?
ಲೋಭ ಬಲಿತತಿಯಾಗಬಾರದು | ಲೋಭವನು ಪೂರ್ಣ ಬಿಡಬಾರದು ॥
ಲೋಭವು ಅತಿಯಾಗಲು ಫಲವಾಗಿ | ಆಯಿತು ಚಕ್ರವು ಮಸ್ತಕದಲ್ಲಿ ॥೮॥
ಬ್ರಾಹ್ಮಣನು ಹೇಳಿದನು: – “ಅದು ಹೇಗೆ?” ಎಂದು
ಆಕೆಯು ಹೇಳಿದಳು:-
*****
ಚಕ್ರಧರನ ಕಥೆ ಓದಿ