Home / ಕವನ / ಕವಿತೆ / ನಿತ್ಯ ಪೂಜೆ

ನಿತ್ಯ ಪೂಜೆ

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು
ಮರೆಯಾಗಿದೆ-ಎಲ್ಲ-ಮರೆಯಾಗಿದೆ!


ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ,
ಬೆಳಗಿಸಿದುವಂದು ದೇವಿಯ ವರದ ಮೂರುತಿಯ ;
ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ-
ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ.
ದೇವಿಯಾ ವರದಮೂರುತಿ ಕಾಣದಿಹುದು;
ಭಾವುಕರ ಬಳಗವದು ಬೆದರಿ ಚೆದರಿಹುದು!


ಅರಳುಗಳ ಕರ್ಪುರಾರತಿಯ ಧೂಪದ ಕಂಪು
ಬೆರೆತು ಸುಳಿಗಾಳಿಯೋಳು ಹರಿದು, ದೂರದ ಜನರ
ಕರೆದೊಯ್ಯುತ್ತಿರಲಿಲ್ಲವೇ ಬಳಿಗೆ ? ಇಂದೇನು ?
ಸರಿದಿರುವ ಸೊಡರುಗಳ ಸೊವಡುಗಂಪದು ಹರಡಿ,
ಹೊರ- ಹೊರಟು ಮೂಗುಸೆಲೆ ಕೊರೆಯುತಿಹುದು,
ನೆರೆಯವರನೂ ದೂರ ಸರಿಸುತಿಹುದು !


ಅಂದಿನಾ ಪೂಜೆಯವಸರದ ಮಂತ್ರಗಳೇನು !
ಒಂದೆ ದನಿಯೊಳೆ ಮೊರೆವ ಭಾವಗೀತಗಳೇನು !
ದುಂದುಭಿಯ ಡೋಳು-ಜಾಗಟೆಗಳಬ್ಬರವೇನು !
ಇಂದದೊಂದೂ ಇಲ್ಲ, ಎಲ್ಲೆಲ್ಲಿಯೂ ಮೌನ !
ನುಡಿಯುತಿಹ ಹಲ್ಲಿಗಳ ಲೊಟಲೊಟೆಂಬುಲುಹು,
ಅಡಿಗಡಿಗೆ ಮೌನತೆಯ ಸೀಳಿ ಹೊರಡುವುವು!


ಹಾಲಕ್ಕಿಯೊಂದು ಹುಮ್ಮಸದಿ ಕಿಲಬಿಲಿಸುತಿದೆ ;
ಮೂಳನಾಯೊಂದು ಮನಬಂದಂತೆ ಬೊಗಳುತಿದೆ ;
ಕೇಳುತಿದೆ ಅತ್ತಿತ್ತ ನರಿಗಳೂಳಾಟ; ಬಿರುಗಾಳಿ ಬಿರು-
ಗಾಳಿ ಬಿರು-ಬಿರ್ರೆಂದು ಮೊರೆಮೊರೆದು ಬೀಸುತಿದೆ !
ಪೂಜೆಯವಸರದ ಮಂತ್ರ ಸ್ವನಗಳಿಲ್ಲ….
ಓಜೆಯಲಿ ಮೆರೆವ ವಾದ್ಯಧ್ವನಿಗಳಿಲ್ಲ!


ಓ! ಅರಿದಿದೇನಿದು?… ದೇವಿಯಿರುವ ದೆಸೆಯಿಂದಿತ್ತ,
ಬರುವ ಗಾಳಿಯೊಳು ಬೆರೆತಿರುವ ಬಿಸಿಯುಸಿರೇನು ?
ಬಿಸಿಯುಸಿರ ಬೆಂಬಳಿಸಿ ಬರುವ ದನಿ ಯಾರದಿದು ?
ಬರಿಯೆ ದನಿಯಲ್ಲ; ಹುರುಳಿನ ನುಡಿಯ ಕೂಡಿಹುದು!
ಗಾಳಿ ತರುತಿಹ ನುಡಿಯಿದೇನೆಂಬಿರೇನು?
ಕೇಳಿ-ಕೇಳಿರಿ, ನಸುವೆ ಕೊಟ್ಟು ಕಿವಿಗಳನು !


“ನಿತ್ಯ ಪೂಜೆಯು ಬೇಕು ! ನಿತ್ಯ ಪೂಜೆಯು ನನಗೆ !
ಕುತ್ತಗಳ ಕಳೆದುಕೊಳುವಾಶೆಯಲ್ಲವೆ ನಿಮಗೆ?
ನಿತ್ಯ ಪೂಜಿಸಲು ಬೇಸತ್ತರಾಗುವುದೇನು?
ನಿತ್ಯ ಪೂಜೆಯು ಬೇಕು; ನಿತ್ಯ ಪೂಜ್ಯಳು ನಾನು!
ಕತ್ತಲೆಗೆ ಹೆದರದಿರಿ ಕಾಲಿಡಿ ಮುಂದೆ,
ಒತ್ತರದಿ ಬನ್ನಿರೆಲ್ಲರು ಇಲ್ಲಿಗಿಂದೆ!
ಮರ-ಮರಳಿ ಸಲ್ಲಿಸಿರಿ ವೀರಪೂಜೆಯನೆನಗೆ,
ವರವಾವುದನು ಕೇಳಿ ಕೊಡುವೆ ನಾ ನಿಮಗೆ!”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...