Home / ಲೇಖನ / ಪುಸ್ತಕ / ಪ್ರೆಂಜ್ ಕಾಫ್ಕಾ ನ “ದಿ ಟ್ರಯಲ್” ಸಾಮಾನ್ಯನಿಗೆ ತೆರೆಯದ ನ್ಯಾಯದ ಬಾಗಿಲು

ಪ್ರೆಂಜ್ ಕಾಫ್ಕಾ ನ “ದಿ ಟ್ರಯಲ್” ಸಾಮಾನ್ಯನಿಗೆ ತೆರೆಯದ ನ್ಯಾಯದ ಬಾಗಿಲು

ಆತ ಪ್ರೆಂಜ್ ಕಾಫ್ಕಾ ಜರ್ಮನ್ ಲೇಖಕ. ೧೮೮೩ರಲ್ಲಿ ಪ್ರೇಗ್‌ನಲ್ಲಿ ಜನಿಸಿದ. ೨೦ನೇ ಶತಮಾನ ಅದ್ವಿತೀಯ ಸಾಹಿತಿಗಳಲ್ಲಿ ಒಬ್ಬ. ಯಹೂದಿ ಕುಟುಂಬದಲ್ಲಿ ಜನಿಸಿದ ಕಾಫ್ಕಾನ ತಂದೆ ಹರ್ಮನ್ ಕಾಫ್ಕಾ ಹಾಗೂ ತಾಯಿ ಜೂಲಿ ಲೋವಿ. ಸಂಪಧ್ಭರಿತ ಮದ್ಯಮ ವರ್ಗದ ಸದಾ ಹಣದ ಗಳಿಕೆಯಲ್ಲೇ ಜೀವನದ ಸಾರ್ಥಕತೆಯನ್ನು ಕಾಣುತ್ತ ಪ್ರಾಪಂಚಿಕ ವ್ಯವಹಾರಗಳಲ್ಲೇ ದುಡಿಮೆ ಮಾಡುತ್ತ ದರ್ಪ ದಾರ್ಷ್ಟ್ಯಿಕ ಪ್ರವೃತ್ತಿಗಳಲ್ಲೇ ಮಗನ ಹಿತಾಸಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಆತನ ತಂದೆ ವ್ಯಾಪಾರಿ. ತಂದೆಯ ಅಧಿಕಾರಿಶಾಹಿ ಗುಣ ಆತನಲ್ಲಿ ವಿಮುಖ ವ್ಯಕ್ತಿತ್ವವನ್ನು ಬೆಳೆಸಿತು. ಮಾತೃಕುಟುಂಬದ ಒಳ್ಳೆಯತನ, ಆಧ್ಯಾತ್ಮಿಕ, ಬೌದ್ಧಿಕ ಶ್ರೇಷ್ಟತೆಗಳು ಈ ಎಲ್ಲ ಸದ್ಗುಣಗಳು ಆತನಲ್ಲಿ ರಕ್ತಗತವಾಗಿದ್ದು, ತಾಯಿ ಪುತ್ರ ವ್ಯಾಮೋಹಿಯಾಗಿದ್ದರೂ ತಂದೆಯ ಆಜ್ಞೆಯನ್ನು ಪರಿಪಾಲಿಸುತ್ತಿದ್ದ ನಿಷ್ಟಳಾಗಿದ್ದ ತಾಯಿಯಿಂದ ಆತನಿಗೆ ಹೆಚ್ಚಿನದೇನೂ ಪಡೆಯಲಾಗಲಿಲ್ಲ. ಆಕೆಯ ಹತ್ತಿರವಾಗಲಾಗಲಿಲ್ಲ. ಸಂಪತ್ತಿನ ದೊರೆಯಾಗುವುದೇ ಬದುಕಿನ ನಿಜವಾದ ಅರ್ಥ ಎಂದು ತಿಳಿದು ದುಡಿಯುತ್ತಿದ್ದ ತಂದೆಯ ಪ್ರಭಾವ ಕಾಫ್ಕಾನ ವೈಯಕ್ತಿತ ಹಾಗೂ ಸಾಹಿತ್ಯಿಕ ಜೀವನದಲ್ಲೂ ಬೆಂಬಿಡದೆ ಹಿಂಬಾಲಿಸಿತ್ತು. ಮಗನ ಬಾವುಕ ಭಾವನಾತ್ಮಕತೆಗೆ ಸ್ಪಂದಿಸದೇ ಇದ್ದ ಆತ ವ್ಯಾವಹಾರಿಕ ಬದುಕಿನಲ್ಲಿ ಸಂತೃಪ್ತನಾಗಿದ್ದ. ಆತನ ವ್ಯಕ್ತಿತ್ವ ಕಾಫ್ಕಾನ ಮೇಲೆ ಅಗಾಧ ಪರಿಣಾಮ ಬೀರಿತ್ತು.

ತಂದೆ ತಾಯಿ ಮೊದಲಿನ ಎರಡು ಮಕ್ಕಳನ್ನು ಕಳೆದುಕೊಂಡ ಮೇಲೆ ಹುಟ್ಟಿದ ಕಾಫ್ಕಾ ತನ್ನ ಮೂವರು ಸಹೋದರಿರಲ್ಲಿ ಒಬ್ಬಳಾದ ಒಟ್ಟೆಲಾಳೊಂದಿಗೆ ಆತ್ಮೀಯನಾಗಿದ್ದ, ಸಮೀಪನಾಗಿದ್ದ. ಅಷ್ಟೇ ಅಲ್ಲ ಶಾಲಾ ದಿನಗಳಲ್ಲಿ ಅಂಜುಬುರುಕಿ ವ್ಯಕ್ತಿಯಾಗಿದ್ದ. ಆದರೆ ಪ್ರಾಯಕ್ಕೆ ಬರುತ್ತಲೇ ನಿರಂಕುಶಮತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಆತ ತನ್ನನ್ನು ಸಮಾಜವಾದಿ ನಿರೀಶ್ವರವಾದಿ ಎಂದು ಘೋಷಿಸಿಕೊಂಡ. ಆಂತರ್ಯದಲ್ಲಿ ದರ್ಪದ ಅಧಿಕಾರಿಶಾಹಿ ಪ್ರವೃತ್ತಿಯ ವಿರುದ್ಧ ಸದಾ ಸಿಟ್ಟಾಗುತ್ತಿದ್ದ. ಯಹೂದಿಯಾಗಿದ್ದರೂ ಅಲ್ಲಿಂದಲೂ ಹೊರಗುಳಿದು, ಜರ್ಮನ್ ಸಮುದಾಯದಿಂದಲೂ ಹೊರಗುಳಿದು ಏಕಾಂಗಿಯಾಗಿ ಬೆಳೆದ. ನಿರೀಶ್ವರವಾದಿಯಾಗಿ ಬೌಧ್ಧಿಕತೆಯಿಂದ ಬೆಳೆದ.

ಸಾಮಾಜಿಕ ವಿಮುಖತೆ, ಕೌಟಂಬಿಕ ಬಂಧಗಳಿಂದಲೂ ಹೊರಗುಳಿದ ಇತ ವ್ಯಕ್ತಿಗತ ನೋವು ನಿರಾಶೆಗಳನ್ನೆ ಕೊಡುಗೆಯಾಗಿ ಪಡೆದ.

೧೯೦೨ರಲ್ಲಿ ಪ್ರೇಗನ ವಿಶ್ವವಿದ್ಯಾಲಯದಲ್ಲಿ ಲಾ ಅಧ್ಯಯನಕ್ಕೆ ತೊಡಗಿದ ಕಾಫ್ಕಾನಿಗೆ ಪರಿಚಯವಾದವನೇ ಮ್ಯಾಕ್ಸ ಬ್ರೊಡ್. ಕಾಫ್ಕಾನ ಸಾಹಿತ್ಯದ ಸಹಪಾಠಿ. ಕಾಫ್ಕಾನ ಸಾವಿನ ನಂತರ ಈ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಿ ಕಾಫ್ಕಾನನ್ನು ಜಗತ್ತಿಗೆ ಪರಿಚಯಿಸಿದ.

ಇತನ ಕೃತಿಗಳು ಓದುಗನ ಮೇಲೆ ಹೇರುವ ಪ್ರಭಾವ ನಿಚ್ಚಳ. ಪಾತ್ರಗಳೆಲ್ಲ ದೈಹಿಕ ಮಾನಸಿಕ ಒತ್ತಡಗಳಿಂದ ಬಳಲುತ್ತವೆ. ಬದುಕಿನ ನಿಜವಾದ ಉದ್ದೇಶ ಅರ್‍ಥ ಸುರಕ್ಷತೆ ಸ್ವಲಾಭ ಇತ್ಯಾದಿಗಳ ಸುತ್ತ ಸುತ್ತುವ ಪಾತ್ರಗಳು ೨೦ನೇ ಶತಮಾನದ ವ್ಯಕ್ತಿಯ ಎಲ್ಲ ಬವಣೆಗಳನ್ನು ಇಂಚೂ ಬಿಡದೆ ಸ್ಪರ್ಷಿಸುತ್ತವೆ. ಅಸ್ತಿತ್ವ ವಾದದ ಸುತ್ತ ಹೆಣೆದ ಚಿತ್ರಗಳು ಅಸಂಬದ್ಧತೆಯ ಬದುಕಿನ ಚಿತ್ರಣವನ್ನೂ ಕೊಡುತ್ತವೆ.

ಆತನ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದಾದ “ದಿ ಟ್ರಯಲ್” ಅನ್ನು ಕಾಫ್ಕಾನ ಮರಣದ ಒಂದು ವರ್ಷದ ನಂತರ ಅಂದರೆ ೧೯೨೫ರಲ್ಲಿ ಮ್ಯಾಕ್ಸ ಬ್ರಾಢ್ ಪ್ರಕಟಿಸಿದ. ಅದರಲ್ಲಿಯ ೯ನೇ ಅಧ್ಯಾಯದ ದ್ವಾರಪಾಲಕ ಸನ್ನಿವೇಶವನ್ನು ಮಾತ್ರ ಕಾಫ್ಕಾ ತನ್ನ ಜೀವಿತಾವಧಿಯಲ್ಲಿ ಪ್ರಕಟಿಸಿದ್ದ. ಅದರಲ್ಲಿ ನಿರೂಪಿತವಾದ ನ್ಯಾಯದ ಬಾಗಿಲನ್ನು ಕಾಯುವ ಜನರ ದುಷ್ಟ ಭ್ರಷ್ಟ ಸ್ವಭಾವ ಹಾಗೂ ಬಡಜನರ ಅಸಹಾಯಕ ಪರಿಸ್ಥಿತಿಯ ಚಿತ್ರಣ ಕಣ್ಣೀರ ಹನಿಸುತ್ತದೆ. ಒಟ್ಟು ೧೦ ಅಧ್ಯಾಯಗಳಲ್ಲಿ ಕಾದಂಬರಿ ಹೆಣೆಯಲ್ಪಟ್ಟಿದೆ.

ಸರಳವಾಗಿ ನಿರೂಪಿಸಲ್ಪಟ್ಟ “ದಿ ಟ್ರಯಲ್” ಜೊಸೆಫ್ ಕೆ ಎಂಬ ವ್ಯಕ್ತಿಯ ಬದುಕಿನಲ್ಲಿ ದುತ್ತೆಂದು ಎದುರಾಗುವ ಅಸಹಜ ಸಂದರ್ಭದ ಸುತ್ತ ಹೆಣೆಯಲ್ಪಟ್ಟಿದೆ. ವಿಚಿತ್ರ ಸನ್ನಿವೇಶದ ಚಕ್ರವ್ಯೂಹದಲ್ಲಿ ಒದ್ದಾಡುವ ಪರಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ ಕಾಫ್ಕಾ. ಬ್ಯಾಂಕಿನಲ್ಲಿ ಅಕೌಂಟಂಟ ಆಗಿದ್ದ ಜೊಸೆಫ್ ಕೆ. ಸಭ್ಯ ನಾಗರಿಕ, ಅವಿವಾಹಿತ.

ಒಬ್ಬ ಮಹಿಳೆಯ ಮನೆಯಲ್ಲಿ ವಾಸವಾಗಿದ್ದ ಆತನಿಗೆ ಅಲ್ಲಿಯೇ ವಾಸಕ್ಕಿದ್ದ ಯುವತಿಯನ್ನು ಗುಪ್ತವಾಗಿ ಪ್ರೀತಿಸುತ್ತಾನೆ. ಆದರೆ ಒಂದು ಮುಂಜಾನೆ ದಿನದಂತೆ ಆತನಿಗೆ ಬೆಳಗಿನ ಉಪಹಾರ ತರುವ ಮನೆಯೊಡತಿಯ ಅಡುಗೆಯವ ಆಗಮಿಸದೇ ಆತನ ಬಂಧನಕ್ಕೆ ಬಂದ ಗಾರ್ಡುಗಳು ಎದುರಾಗುತ್ತಾರೆ. ಯಾವ ಮುನ್ಸೂಚನೆ ಇಲ್ಲದೇ ಕೆ ಬಂಧಿಸಲ್ಪಡುತ್ತಾನೆ. ಕಾರಣ ನೀಡಲು ಆತ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಗಾರ್ಡುಗಳು ವಿಫಲರಾಗುತ್ತಾರೆ.

ಆದರೆ ಆತನ ನ್ಯಾಯ ನಿರ್ಣಯದ ತೀರ್ಪೂ ಬರುವವರೆಗೂ ತನ್ನ ಕರ್ತವ್ಯ ನಿರ್ವಹಿಸಲು ಮಾತ್ರ ಅವಕಾಶ ಸಿಗುತ್ತದೆ.

ತನ್ನ ಬಂಧನದ ಕಾರಣವನ್ನು ತಿಳಿಯದೇ ಅದನ್ನು ತಿಳಿಯಲು ಮಾಡುವ ಪ್ರಯತ್ನಗಳು ವ್ಯರ್ಥವಾಗುತ್ತವೆ. ತನ್ನ ನಿರಪರಾಧಿತನವನ್ನು ಮಂಡಿಸಲು ಗೊತ್ತು ಮಾಡಿದ ವಕೀಲನಿಂದ ಕೂಡ ಸರಿಯಾದ ಸಹಕಾರ ಸಿಗದೇ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ.
೯ನೇ ಅಧ್ಯಾಯದಲ್ಲಿ ಬರುವ ದಿ ಕೆಥೆಡ್ರಲ್‌ನ ಸನ್ನಿವೇಶ ಅತ್ಯದ್ಭುತ ನಿರೂಪಣೆ. ಜೊಸೆಫ್ ಕೆ. ತನ್ನ ಅತಿಥಿಯೊಬ್ಬನಿಗೆ ಇಗರ್ಜಿಗೆ ಕರೆದೊಯ್ಯಬೇಕಾಗಿದೆ. ಅತಿಥಿ ಬರಲು ತಡವಾಗಿದೆ. ಹಾಗಾಗಿ ಇನ್ನೇನು ಅಲ್ಲಿಂದ ಹೊಟು ಹೋಗಲು ಕೆ ಹೊರಬರುತ್ತಿದ್ದಂತೆ ಆ ಸಮಯದಲ್ಲಿ ಚರ್ಚಿನ ಪಾದ್ರಿ ಕೆ ನನ್ನು ನಿಲ್ಲಿಸುತ್ತಾನೆ. ಮತ್ತು ತಾನು ಜೈಲಿನ ವಾರ್ಡನ್ ಎಂದು ಹೇಳುತ್ತಾನೆ. ಮತ್ತು ಆತನ ಕೇಸಿನ ವಿಚಾರ ಮಾತನಾಡಿ ನಿರಾಸೆ ಹುಟ್ಟಿಸುತ್ತಾನೆ. ಕೇ ತನ್ನ ಮುಗ್ಧತೆಯನ್ನು ಹೇಳಿಕೊಂಡರೂ ಆತ ಎಲ್ಲ ಅಪರಾಧಿಗಳು ಹೀಗೆ ವರ್ತಿಸುತ್ತಾರೆಂದು ಕೆ ಗೆ ಮುಖಭಂಗವಾಗುವಂತೆ ಮಾತನಾಡುತ್ತಾನೆ. ಅಲ್ಲದೇ ನ್ಯಾಯದ ಮುನ್ನುಡಿಯಲ್ಲಿಯ ಒಂದು ದೃಷ್ಟಾಂತ ಕಥೆಯನ್ನು ಹೇಳುತ್ತಾನೆ.

ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬ ನ್ಯಾಯ ನಿರ್ಣಯದ ಒಂದು ಧೃಶ್ಯವನ್ನಾದರೂ ನೋಡೋಣವೆಂದುಕೊಂಡು ನ್ಯಾಯದ ಬಾಗಿಲಲ್ಲಿ ಬಂದಿದ್ಧಾನೆ ಆದರೆ ಆ ಬಾಗಿಲ ದ್ವಾರಪಾಲಕ ಆತನನ್ನು ತಡೆದು ನಿಲ್ಲಿಸುತ್ತಾನೆ. ಹಳ್ಳಿಯಾತ ಸ್ವಲ್ಪ ಸಮಯದ ನಂತರ ಅವಕಾಶ ಸಿಗಬಹುದೇ ಎಂದು ಕೇಳುತ್ತಾನೆ ಅದಕ್ಕಾತ ಉತ್ತರಿಸದೇ ಅಲ್ಲಿಯೇ ಕಾಲ ಹರಣ ಮಾಡಿಸುತ್ತಾನೆ ಅಷ್ಟೇ ಅಲ್ಲ ಮುಂದಿನ ಬಾಗಿಲುಗಳ ದ್ವಾರಪಾಲಕರು ತನಗಿಂತ ಉಗ್ರ ಕ್ರೂರಿಗಳೆಂದು ಹೆದರಿಸುತ್ತಾನೆ. ಅಲ್ಲಿಯೇ ಕೂತು ನವೆದು ನಿಶ್ಯಕ್ತನಾದ ಆ ವ್ಯಕ್ತಿ ಇಗಲಾದರೂ ನ್ಯಾಯದ ಒಂದು ಕಿರಣವನ್ನದರೂ ಕಾಣ ಸಿಗುವುದೇ ಎಂದು ಹಂಬಲಿಸಿದಾಗ ದ್ವಾರಪಾಲಕ ಕೊನೆಯಲ್ಲಿ ಹೇಳುತ್ತಾನೆ ಈ ಬಾಗಿಲು ನಿನಗಾಗಿಯೇ ಮಾಡಿದ್ದು ನಿನ್ನನು ಹೊರತು ಪಡಿಸಿ ಬೇರೆ ಯಾರೂ ಇಲ್ಲಿಗೆ ಬರಲಾರರು ಎಂದು ಹೇಳಿ ಬಾಗಿಲು ಮುಚ್ಚುತ್ತಾನೆ. ಆ ಹಳ್ಳಿಯ ವ್ಯಕ್ತಿಯು ಅಲ್ಲಿಯೇ ಕುಸಿಯುತ್ತಾನೆ.

ಕಥೆ ಹೇಳಿದ ವಾರ್ಡನ್ ಕೆ ನ ಯಾವ ವಿಡಂಬನೆಯನ್ನು ಒಪ್ಪದೇ ಆತನನ್ನು ಗೊಂದಲಗೊಳಿಸುವ ಕಥೆಗಳನ್ನು ಹೇಳಿ ಬೆದರಿಸುತ್ತಾನೆ. ಕೇ ಚರ್ಚನ್ನು ಬಿಟ್ಟು ಹೊರಟು ಹೋಗುತ್ತಾನೆ. ಹೀಗೆ ನ್ಯಾಯ ಎನ್ನುವುದು ಬಡಜನರಿಗೆ ಹೇಗೆ ದುಬಾರಿ ಯಾಗುತ್ತದೆ. ಕೈಗೆಟುಕದ ವಸ್ತು ಎಂಬುದನ್ನು ಕಾಫ್ಕಾ ಪರಿಣಾಮಕಾರಿಯಾಗಿ ನಿರೂಪಿಸುತ್ತಾನೆ.

ಕೊನೆಗೂ ತನ್ನ ಯಾವ ಅಪರಾಧಕ್ಕಾಗಿ ಶಿಕ್ಷೆ ಎಂಬ ಕನಿಷ್ಟ ಮಾಹಿತಿಯೂ ತಿಳಿಯದೆ ಜೊಸೆಫ್ ಕೆ ಮರಣದಂಡನೆಗೆ ಗುರಿಯಾಗುತ್ತಾನೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...