Home / ಲೇಖನ / ಪುಸ್ತಕ / ‘ಶಬ್ದ ಪ್ರಸಂಗ’ವೆಂಬ ಕಾವ್ಯದ ಮೋಜವಾನಿ’

‘ಶಬ್ದ ಪ್ರಸಂಗ’ವೆಂಬ ಕಾವ್ಯದ ಮೋಜವಾನಿ’

‘ಕಾವ್ಯ ಅಂದ್ರ
ಕವಿಯ ಮನಿ-
-ಯ ಮೇಜವಾನೀ’

– ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟಿಸಿರುವ ಆನಂದ ಝಂಜರವಾಡರ ‘ಶಬ್ದ ಪ್ರಸಂಗ’ ಸಂಕಲನ ಓದುಗನಿಗೆ ಮುಖಾಮುಖಿಯಾಗುವುದೇ ಮೇಲಿನ ಸಾಲುಗಳ ಮೂಲಕ. ಈ ಕವಿಯ ಮನೆಯ ಮೇಜವಾನಿ ಅಂತಿಂಥದಲ್ಲ- ಕವಿ ಸಾವಿರದ ಪಡಿ ಪದಾರ್‍ಥಾನ ಛಂದ ಬಡಿಸಿಟ್ಟದ್ದಾನೆ. ಇಲ್ಲಿ ವೈವಿಧ್ಯತೆಯಿದೆ. ನುರಿತ ಅಡುಗೆ ಕಲಾವಿದನ ಕೈಯಲ್ಲಿ ಒಣಗಸೋದು, ನೆನಸೋದು, ಬೇಯ್ಸೋದು, ಕರಿಯೋದು ಎಲ್ಲವೂ ಹದವಾಗಿದೆ. ‘ಖಮ್ಮಗ ವಾಸನೀ ಮನೀ ಎಲ್ಲಾ ತುಂಬೇದ/ ಯಾರ ಬಂದ್ರೂ ಕರೀತದ ಒಳಗ ಬರ್ರಿ’ ಎಂದು ಕವಿ ಆಶ್ವಾಸನೆ ನೀಡುತ್ತಾರೆ. ಸಂಕಲನದ ಆರಂಭದಲ್ಲಿ ನೀಡುವ ಈ ಭರವಸೆ ಸಂಕಲನದುದ್ದಕ್ಕೂ ಹುಸಿಯಾಗುವುದಿಲ್ಲ. ಅದು ಝಂಜರವಾಡರ ಕಾವ್ಯದ ಯಶಸ್ಸು.

ಕವಿತೆಯೆಂಬುದು ಅಂತರಂಗದ ವ್ಯಾಪಾರವಾಗಿರುವ ಸಾಧ್ಯತೆಗಳು ಕಡಿಮೆಯಾಗಿರುವ ಈ ದಿನಗಳಲ್ಲಿ ಕವಿತೆಯನ್ನು ಪ್ರೀತಿಸುವವರಿಗೆ ಝಂಜರವಾಡರ ‘ಶಬ್ದ ಪ್ರಸಂಗ’ ಕಾವ್ಯದ ಮೇಜವಾನಿ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಝಂಜರವಾಡ ನಮ್ಮ ನಡುವಿನ ಮಹತ್ವದ ಕವಿ ಅನ್ನುವುದನ್ನೂ ‘ಶಬ್ಬ ಪ್ರಸಂಗ’ ರುಜುವಾತು ಪಡಿಸುತ್ತದೆ. ‘ಶಬ್ಬ ಪ್ರಸಂಗ’ದ ಕುರಿತು ಕೆಲವು ಅನ್ನಿಸಿಕೆಗಳನ್ನು ಹಂಚಿಕೊಳ್ಳುವ ಮುನ್ನ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಅದೆಂದರೆ ಝಂಜರವಾಡರ ಕವಿತೆಗಳನ್ನು ವಿಮರ್‍ಶಿಸುವುದು ಆಥವಾ ಅವುಗಳಿಗೆ ಬೆಲೆ ಕಟ್ಟುವುದು ಈ ಬರಹದ ಉದ್ದೇಶವಲ್ಲ. ಕವಿತೆಯನ್ನು ಪ್ರೀತಿಸುವ ಸಹೃದಯನಾಗಿ ‘ಶಬ್ಬ ಪ್ರಸಂಗ’ಕ್ಕೆ ಮುಖಾಮುಖಿಯಾದಾಗ ಉಂಟಾದ ಅನ್ನಿಸಿಕೆಗಳ ಕೆಲವು ಟಿಪ್ಪಣಿಗಳು ಇಲ್ಲಿವೆ.

ಪ್ರತಿ ಓದಿಗೂ ಹೊಸ ಅರ್‍ಥ ಸಾಧ್ಯತೆಗಳನ್ನು ಹೊಳೆಯಿಸುವ ‘ಶಬ್ಬ ಪ್ರಸಂಗ’ದ ಮಹತ್ವದ ಕವಿತೆಗಳು ಅರ್‍ಥವಾಗಿಯೂ ಮಿಗುವ ಸಂಕೀರ್‍ಣ ರಚನೆಗಳು. ಬೇಂದ್ರೆ ಹಾಗೂ ಅಡಿಗರನ್ನು ಎರಕ ಹೊಯ್ದಂತೆ ಕಾಣುವ ಝಂಜರವಾಡರ ಕವಿತೆಗಳ ಪಟ ಹಾರುವ ಮುಗಿಲ ವಿಸ್ತಾರ ಬಹು ದೊಡ್ಡದು. ‘ಶಬ್ಬ ಪ್ರಸಂಗ’ ದಲ್ಲಿನ ಕವಿತೆಗಳನ್ನು ಓದುವಾಗ ಆನೇಕ ಬಾರಿ ಬೇಂದ್ರೆ ಹಾಗೂ ಆಡಿಗ ನೆನಪಿಗೆ ಬರುವುದು ಇಲ್ಲಿನ ಕವಿತೆಗಳ ಶ್ರೇಷ್ಠತೆಯಿಂದಲೇ ಹೊರತು, ಕವಿತೆಗಳ ಬಗೆಗಿನ ಆನುಮಾನದಿಂದಲ್ಲ. ಇಡೀ ಕನ್ನಡ ಕಾವ್ಯವನ್ನು ಪ್ರಭಾವಿಸಿರುವ ಬೇಂದ್ರೆ ಹಾಗೂ ಅಡಿಗರ ನೆರಳು ‘ಶಬ್ಬ ಪ್ರಸಂಗ’ದ ಕವಿಯ ಮೇಲೆ ಬಿದ್ದಿಲ್ಲವೆಂದು ತರ್‍ಕ ಹೂಡುವ ಅಗತ್ಯವೂ ಇಲ್ಲ. ‘ಆಹೋ ಬೇಂದ್ರ ಮಾಸ್ತರ’, ‘ಅಡಿಗರೂ ಹೋದರು’, ‘ಆಡಿಗರನ್ನು ಮತ್ತೆ ಓದಿದಾಗ’- ಕವಿತೆಗಳನ್ನು ಓದಿದರೆ ಝಂಜರವಾಡರಿಗೆ ಇಬ್ಬರು ಮಹಾನ್ ಕವಿಗಳ ಮೇಲಿನ ಗೌರವ ಅರ್‍ಥವಾಗುತ್ತದೆ. ಒಂದರ್‍ಥದಲ್ಲಿ ಬೇಂದ್ರೆ ಹಾಗೂ ಅಡಿಗರ ಹಾದಿಯ ಮುಂದುವರೆದ ಕುರುಹಾಗಿ ‘ಶಬ್ಬ ಪ್ರಸಂಗ’ದ ಕವಿತೆಗಳು ಕಾಣಿಸುತ್ತವೆ. ಬೇಂದ್ರೆ, ಅಡಿಗರನ್ನು ಮೆಚ್ಚಿಯೂ ಅವರನ್ನು ಮೀರುವ ಮಹತ್ವಾಕಾಂಕ್ಷೆ, ಸಾಮರ್‍ಥ್ಯ ಹಾಗೂ ಆತ್ಮವಿಶ್ವಾಸ ಝಂಜರವಾಡರದು. ಅವರು ಬರೆಯುತ್ತಾರೆ:

ನಿನ್ನ ಮುಗಿಲಾಗ ನಿನ್ನ ಗಾಳೀಪಟಾ ಹಾರಸು
ಮಂದೀ ಹೆಗಲಮ್ಯಾಲ ಕೈ ಹಾಕಬ್ಯಾಡಾ

ಕವಿತೆ, ಕವಿ ಹಾಗೂ ಕವಿಯ ತೊಳಲಾಟಗಳ ಕುರಿತು ‘ಶಬ್ದ ಪ್ರಸಂಗ’ದ ಬಹುತೇಕ ಕವಿತೆಗಳು (ನನ್ನ ಕವಿತೆ, ಕವಿಯ ಸಾವು, ಗಾಳೀಪಟ, ಕಾವ್ಯ ಅಂದ್ರ, ನನ್ನ ಕವಿತೆಗೆ.. ಇತ್ಯಾದಿ) ಧ್ಯಾನಿಸಿರುವುದು ಗಮನಾರ್‍ಹ. ಮುಖಾಮುಖಿಯಾಗುವ ಕವಿ, ಆತ್ಮಕ್ಕೂ ಮುಖಾಮುಖಿಯಾಗೂತ್ತಾನೆ. ಇಲ್ಲಿ ಕವಿಯ ಆತ್ಮ ಕವಿತೆಯೇ ಆಗಿದೆ. ಆತ್ಮ ಕೇಂದ್ರಿತವಾದಾಗ ಅಥವಾ ಬಾಲ್ಯದ ನೆನಪು-ಅನುಭವಗಳತ್ತ ಹೊರಳಿದಾಗ ಕವಿ ಸ್ಥಳೀಯ ಭಾಷೆ ಬಳಸುವುದು, ಉಳಿದಂತೆ ಬರಹದ ರೂಢಿಭಾಷೆಗೆ ಮರಳುವ ಝಂಜರವಾಡರ ಕಾವ್ಯಭಾಷೆ ಕುತೂಹಲಕರವಾದುದು.

‘ಶಬ್ಬ ಪ್ರಸಂಗ’ದ ಕವಿ ನಾದಲೋಲ. ಝಂಜರವಾಡರ ಲೇಖನಿಯಲ್ಲಿ ಪದಗಳು ಬಾಗುವ ಬಳುಕುವ ಮೋಡಿಯೇ ಮೋಡಿ. ಇಲ್ಲಿನ ಬಹುತೇಕ ಕವಿತೆಗಳು ಹಾಡಬಾರದ ಭಾವಗೀತೆಗಳು. ಆಡು ಮಾತಿನ ಬಳಕೆಯ ಕವಿತೆಗಳನ್ನು ಕಟ್ಟುವಾಗಂತೂ ಝಂಜರವಾಡ ಆವರು ಮಾತುಗಳ ಮಾಯೆಯಲ್ಲಿ ಮೈಮರೆಯುತ್ತಾರೆ.

ಕವಿಯ ಪಾಲಿಗೆ ಕವಿತೆ ಎನ್ನುವುದು ಅಂತರಂಗದ ವ್ಯಾಪಾರವೋ ಇನ್ನೊಂದೋ ಅಲ್ಲ. ಇಲ್ಲಿನ ಕವಿತೆ ತೃಪ್ತ ಮನಸ್ಸಿನ ಗರ್‍ಭದಲ್ಲಿ ಹುಟ್ಟಿದುದೂ ಅಲ್ಲ ಆ ಕಾರಣದಿಂದಲೇ ‘ಶಬ್ದ ಪ್ರಸಂಗ’ದಲ್ಲಿನ ಕವಿತೆಗಳಲ್ಲಿ ಪ್ರಕೃತಿಯ ಸ್ಥಾನ ತೀರಾ ಗೌಣವಾದುದು.

ಝಂಜರವಾಡರ ಕವಿತೆ-

ಹೆಣಕ್ಕುಡಿಸಿದ ಸೀರೆಯನ್ನೇ ಉಟ್ಟು;
ಜೀವಂತ ಜನರನ್ನು ಕಾಮಿಸಿ ಕರೆಯುತ್ತಾಳೆ
ಸತ್ತವರ ಸುತ್ತ ಅಳುವವರನ್ನು ಕಂಡು
ನಗುತ್ತಾಳೆ ನನ್ನ ಕವಿತೆ
ನಗೆಯ ಬೂದಿಯಲ್ಲಿ ನಿಗಿನಿಗಿಸುವ ಚಿತೆ.

ವಿಷಾದವೇ ಸ್ಥಾಯಿಯಾದ ಸಂದರ್‍ಭದಲ್ಲಿ ‘ಶಬ್ಬ ಪ್ರಸಂಗ’ದ ಕವಿತೆಗಳು
ಹುಟ್ಟಿದ್ದರೂ, ಕವಿಯ ಆಶಯ ಸಹೃದಯನಿಗೆ ಸಂತೋಷ ನೀಡುವುದೇ ಆಗಿದೆ.
‘ನನ್ನ ಕವಿತೆಗೆ ಚಳಿಯಲ್ಲಿ ಸುಖಕೊಡುವ
ಬೆಚ್ಚಿಗಿನ ಮೊಲೆಗಳ ಮಾಂಸಲತೆ ಇರಲಿ
ಎರೆದು ಕೊಂಡವಳ ಕೇಶಗಳ ವಿಶಾಲ ಬೆನ್ನ ಹರವು
ಸಿಪ್ಪೆಯೊಡೆದ ಬಿಸಿತುಟಿಗಳ ಹುಳಿ ಹುಳಿಯಾದ ರುಚಿ ಇರಲಿ’

-ಎನ್ನುವುದು ಕವಿಯ ಆಶಯ.

ಕವಿತೆಯ ಬಗ್ಗೆ ಏನೆಲ್ಲಾ ಆತ್ಮ ವಿಶ್ವಾಸದ ಮಾತಾನಾಡಿದರೂ ತನ್ನ ಕವಿತೆ ಓದುಗನಿಗೆ ತಲುಪದೆ ಹೋದರೆ ಫಲವೇನು ಎನ್ನುವ ಎಲ್ಲ ಕವಿಗಳೆದೆಯ ಭಯದ ಬೀಜ ಝಂಜರವಾಡರದರದೂ ಆಗಿದೆ. ‘ಕವಿಯ ಸಾವು’ ಈ ಭಯವನ್ನು ಸಹೃದಯನ ಎದೆ ಚಿತ್ತಾಗುವಂತೆ ಚಿತ್ರಿಸಿದೆ. ಕವಿಯ ಸಾವಿನ ಹಿನ್ನೆಲೆಯಲ್ಲಿ ಆತನ ಬಗ್ಗೆ ಜನ ಮಾತನಾಡಿಕೊಳ್ಳುವ ವಿವರಗಳ ಕವಿತೆ ಮುಕ್ತಾಯವಾಗುವುದು- ‘ಕವಿತಾನ ಮರತಾವ್ರಿಗೆ, ಕವೀನ್ನ ಮರೀಲಿಕ್ಹೆಷ್ಟೊತ್ತು?’ ಎನ್ನುವ ವಿಷಾದದ ಸಾಲಿನೊಂದಿಗೆ.

‘ದ್ವೇಷ’, ‘ಕೊಂಡರು’, ’ಜೀವನ’ ಮುಂತಾದ ಅಷ್ಟೇನೂ ಮಹತ್ವವಾದುದನ್ನು ಹೇಳದ ಕವಿತೆಗಳೂ ‘ಶಬ್ಬ ಪ್ರಸಂಗ’ದಲ್ಲಿವೆ. ಆದರೆ- ‘ಸಂಸ್ಕೃತಿ ಸರಳರೇಖೆಯಲ್ಲ’, ‘ತಾರೆ ಮತು ವೃತ್ತಗಳು’, ‘ಜಂಗೀ-ಜಾತ್ರೆ’, ‘ಇದೇ ಹೊಳೆಯಲ್ಲಿ’, ‘ಆಟಾ’, ‘ಮುಟ್ಟಾಟ’ದಂಥ ಕವಿತೆಗಳ ಕವಿ ಝಂಜರವಾಡರ ಕಾವ್ಯ ಪ್ರತಿಭೆ ಮೇಲ್ಮಟ್ಟದ್ದೆನ್ನುವುದರಲ್ಲಿ ಅನುಮಾನವೇ ಇಲ್ಲ.

‘ಶಬ್ದ ಪ್ರಸಂಗ’ದ ಕವಿತೆಗಳಲ್ಲಿನ ವರ್‍ತಮಾನಕ್ಕೆ ಸ್ಪಂದನ, ಪಾರಮಾರ್‍ಥ ಚಿಂತನೆ, ಅಧ್ಯಾತ್ಮದ ವಾಸನೆ ಮುಂತಾದ ಅಂಶಗಳನ್ನು ಚರ್‍ಚಿಸಲು ಇಲ್ಲಿ ಪ್ರಯತ್ನಿಸಿಲ್ಲ. ಕೆಲವು ಕವಿತೆಗಳ ಪ್ರವೇಶವೇ ಕಠಿಣವಾಗಿದೆ. ಆದರೆ, ಝಂಜರವಾಡರ ಕವಿತೆಗಳೊಂದಿಗೆ ಗುದ್ದಾಡುವುದೂ ಸುಖವೇ.

‘ಶಬ್ಬ ಪ್ರಸಂಗ’ ಸಂಕಲನದ ಕೆಳಗಿನ ಸಾಲುಗಳೊಂದಿಗೆ ಈ ಬರಹವನ್ನು ಮುಗಿಸುತ್ತೇನೆ:

ಕವೀನೂ. ನಮ್ಮ – ನಿಮ್ಮ ಪ್ಯಾಟ್ಯಾಗ ಸಂತೀ ಮಾಡತಾನ
ನಮ್ಮ ಪಂಕ್ತ್ಯಾಗ ಕೂಡುತಾನ.
ಅವಂಗೂ ತನ್ನ ಸಾಹಿತ್ಯದ ಬಗ್ಗೇ ತಾನ ಹೇಳಬೇಕಾದ ಮಾತು
ಇದ್ದೇ ಇರ್‍ತಾವ.
ತಗದ ಒಗಿರಿ ಇನ್ನರೇ ಆ ನಿಮ್ಮ ‘ಪೋರ್ಕು’ ‘ಸ್ಪೂನೂ’
ಈ ಕೈಲೆ ಮಾಡಿದ್ದನ್ನ ಇದ ಕೈಲೇ ಉಣ್ಣೂಣು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...