Home / ಲೇಖನ / ಇತರೆ / ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಯೋನಸಂಚರತೀ ದೇಶಾನ್‌ ಯೋನಸೇವೇತ್‌ ಪಂಡಿತಾನ್‌ | ತಸ್ಯಸಂಕುಚಿತಾಬುದ್ಧಿ ಘೃತಬಿಂದುರಿವಾಂಭಸಿ || ಸುಭಾಷಿತ ||

ಎಷ್ಟೋ ಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್‍ಥಕವಾಗಿ ವ್ಯಯವಾಗುವದೆಂದು ಭಾವಿಸುವರು, ಆದರೆ ಹಾಗೆ ತಿಳಿಯವದು ದಡ್ಡತನವು. ಪ್ರವಾಸಮಾಡುವದರಿಂದ ವಿಶಿಷ್ಟಪ್ರಕಾರದ ಜ್ಞಾನಸಂಚಯವಾಗುವದು, ದೇಹಕ್ಕೆ ಆರಾಮವೆನಿಸುವದು. ಪ್ರಸಿದ್ಧ ಜನರ ಗುರುತುಪರಿಚಯವಾಗುವದು. “ಕೇಲ್ಯಾನೆದೇಶಾಟನಾ ಪಂಡಿತಮೈತ್ರೀಸಭೇತಸಂಚಾರ” ಎಂಬಂತೆ ಪ್ರವಾಸದಿಂದ ಉಪಲಬ್ಧವಾಗದ ಹಲವು ಸಂಗತಿಗಳ ಜ್ಞಾನವು ಉಪಲಬ್ಧವಾಗುತ್ತದೆ.

ಪ್ರವಾಸಮಾಡುವದರಿಂದ ಮಹಾ ಮಹಾ ರೋಗಿಗಳು ಗುಣ ಹೊಂದಿರುವದನ್ನು ನೋಡಿದರೆ ಮನುಷ್ಯನಿಗೆ ಅದರಲ್ಲಿಯೂ ಪಟ್ಟಣ ವಾಸಿ ಮನುಷ್ಯನಿಗೆ ಪ್ರವಾಸವು ಅತ್ಯಂತ ಅವಶ್ಯವಾದದ್ದು. ಯಾಕಂದರೆ ಮುಂಬಯಿಯಂಥ ಅತ್ಯುಂತ ದಟ್ಟವಾದ ವಸತಿಯುಳ್ಳ ಪಟ್ಟಣಗಳಲ್ಲಿಯ ಸಾಧಾರಣಪ್ರತಿಯ ಜನರು ಹಗಲು-ರಾತ್ರಿ ಶ್ರಮಬಟ್ಟು ಕೆಲಸ ಮಾಡಬೇಕಾಗುವದು. ಅಲ್ಲಿ ಹಗಲುರಾತ್ರಿ ಒಂದೇಸವನೆ ನಡೆಯುವ ಗಿರಣಿ, ಉಗೆಬಂಡಿ, ಉಗೆಹಡಗ, ಮೋಟಾರಗಳಿಗಾಗಿ ಕಲ್ಲಿದ್ದಲಿಯನ್ನು ಉಪಯೋಗಿಸುವರು. ಆ ಹೊಗೆಯು ಪಟ್ಟಣ ತುಂಬತುಂಬಿ ಹವೆಯೊಳಗೆ ಮಿಶ್ರವಾಗುವದು. ಈ ಹವೆಯನ್ನೇ ಎಲ್ಲರೂ ಉಸಿರಾಡಿಸುವದರಿಂದ ಪ್ರಕೃತಿಯು ಕೆಟ್ಟುಹೋಗುವದು. ಮನಸ್ಸಿಗೆ ಸ್ವಸ್ಥತೆಯುಂಟಾಗದು. ಅದರಿಂದ ಆ ಜನರು ವರ್ಷ ದೊಳಗಿನ ಕೆಲವೆ ದಿವಸಗಳನ್ನಾದರೂ ಶುದ್ಧಹವೆಯಿದ್ದ ಕಡೆಗೂ, ತರತರದ ವನಶೋಭೆಯಿರುವ ಕಡೆಗೂ ಹೋಗಿ ಪ್ರವಾಸ ಮಾಡಿಬರಬೇಕು. ಈ ಪ್ರವಾಸ ಕಾರ್‍ಯದಿಂದ ಅವರ ಶರೀರ-ಮನಸ್ಸು ಇವುಗಳ ಜಾಡ್ಯವು ಹೋಗುವದು. ಕೆಲಸಮಾಡಲಿಕ್ಕೆ ಹೊಸ ಹುರುಪು ಬರುವದು.

ಸುವ್ಯವಸ್ಥಿತವಾದ ಜೀವನೋಪಾಯಕ್ಕೂ, ನಿಜವಾದ ಪ್ರಗತಿಗೂ ಪ್ರವಾಸವು ಬೇಕೇಬೇಕು. ಪ್ರವಾಸದಲ್ಲಿ ವಿಶ್ರಾಂತಿಯೂ ಸಿಗುವದು. ಖುಷಿಮೋಜೂ ಆಗುವದು. ವರ್ಷಾನುಗಟ್ಟಲೆ ಕೊರಗುತ್ತ ಕೆಲಸಮಾಡುವದಕ್ಕಿಂತ ನಡುವೆ ಕೆಲವು ದಿವಸ ಪ್ರವಾಸಮಾಡಿ ಹುರುಪುಗೊಂಡು ತೀವ್ರ ಕೆಲಸಮಾಡುವದು ಯೋಗ್ಯವಲ್ಲೆಂದು ಯಾರು ಹೇಳುವರು? ಕೆಲಸಮಾಡುವಾಗ ಒದಗುವ ಚಿಂತೆಯಿಂದೆ ಒಂದುಪ್ರಕಾರದ ಬುದ್ಧಿ ಮಾಂದ್ಯವು ಉಂಟುಗುತ್ತದೆ. ನಡುವೆ ಪ್ರವಾಸದಲ್ಲಿ ವಿಶ್ರಾಂತಿ ಪಡೆಯುವದರಿಂದ ಮನಸ್ಸು ಶಾಂತಗೊಂಡು ವಿಕಸಿತವಾಗುವದು:

ಪ್ರವಾಸವು ಪಟ್ಟಣಿಗರಿಗೆ ಸುಖಕರವಾಗುವಂತೆ ಹಳ್ಳಿಯವರಿಗೂ ಆಗುವದು. ಸದು ಹಳ್ಳಿಯಲ್ಲಿ ವಾಸಮಾಡುವ ಮನುಷ್ಯನು ಕೂಪಮಂಡೂಕದಂತೆ ದೇಶಾಂತರಗಳ ಜ್ಞಾನವಿಲ್ಲದವನಾಗುವನು. ಹಳ್ಳಿಯವರು ವರ್ಷಕ್ಕೊಮ್ಮೆಯಾದರೂ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಅಲ್ಲಿ ಒಂದೆರಡುವಾರಗಳನ್ನು ಕಳೆದು ಬರಬೇಕು. ಅಂದರೆ ಅವರು ವಿವಿಧ ಸಂಗತಿಗಳನ್ನು ಬಲ್ಲವರಾಗುವರು. ಅದರಿಂದ ಅವರ ವಿವೇಚಕಶಕ್ತಿಗೆ ಬಹಳ ಸಹಾಯವಾಗುವದು.

ಪೌರ್ವಾತ್ಯರಲ್ಲಿ ಪ್ರತಿವರ್ಷ ಕೆಲವು ದಿವಸಗಳನ್ನು ಪ್ರವಾಸದಲ್ಲಿ ಕಳೆಯುವ ರೂಢಿಬಿದ್ದದೆ. ಆನುಕರಣೀಯವಾದ ಆ ರೂಢಿಯು ವೃಕ್ಷ ಮೊದಲಾದವುಗಳಿಗೆ ಮಳೆ-ಚಳಿ-ಬಿಸಿಲು-ನೆರಳು ಇವುಗಳಿಂದ ಹೊಸ ಜೀವನವು ಪ್ರಾಪ್ತವಾಗುವಂತೆ, ಮನುಷ್ಯನಿಗೆ ಅತ್ಯಂತ ಉತ್ಸಾಹಪೂರ್‍ಣವಾದ ಹೊಸ ಚೈತನ್ಯವನ್ನು ಕೊಡುವದು.

ಪ್ರವಾಸಮಾಡುವಾಗ ನಾವು ಚಿಂತೆಯನ್ನು ಸಂಗಡ ಕಟ್ಟು ಕೊಂಡು ಹೋಗಬಾರದು, “ಯಾಕೆ ಯಾತ್ರೆಯ ಮಾಡುತಿರ್‍ಪರಲ್ಲೇನಿಹುದು” ಎಂಬಂತೆ ಪ್ರವಾಸಿಕನು ದ್ವೇಷ, ಅಸೂಯಾ, ನಿಂದಾ, ಮೋಹ ಇತ್ಯಾದಿ ಗುಣಗಳುಳ್ಳವನಾಗಿ ಪ್ರವಾಸಮಾಡಿದರೆ, ಪ್ರವಾಸದ ಮಹತ್ವವು ಅವನಿಗೇನೂ ತಿಳಿದುಬರುವದಿಲ್ಲ. ಯಾಕಂದರೆ ಅವನ ಮನಸ್ಸು ಪ್ರವಾಸದ ಸುಖವನ್ನು ಅನುಭವಿಸಲು ಅವನ ಸಂಗಡ ಬಂದಿರುವದಿಲ್ಲ. ಅದು ಮನೆಗೆಲಸ, ಹೆಂಡತಿ, ಮಕ್ಕಳು, ತರುವದು, ಬರುವದು, ಖಟ್ಲೆ-ಖೋಖಲೆ ಇವುಗಳಲ್ಲಿ ಪೇಚಾಡುತ್ತ ಮನೆಯಲ್ಲಿಯೇ ಇರುತ್ತದೆ.

ಆರೋಗ್ಯವು ಎಲ್ಲಕ್ಕೂ ಮಹತ್ವವಾದ ವಿಷಯವಾಗಿರುತ್ತದೆ. “ಅಪಭಲಾ ತೋ ಜಗಭಲಾ” ನಾಣ್ಣುಡಿಯ ಅರ್‍ಥವನ್ನು ಆರೋಗ್ಯದೃಷ್ಟಿಯಿಂದ ಮಾಡಿದರೆ ಮನುಷ್ಯನು ಗಟ್ಟಿ ಮುಟ್ಟಿಯಾಗಿದ್ದರೆ ಏನನ್ನಾದರೂ ಮಾಡಿ ಪ್ರಗತಿಹೊಂದುವನು, ಎಂದಾಗುವದು; ರೋಗಿಷ್ಟನಾದ ಮನುಷ್ಯನು ಯಾವ ಕಾರ್ಯವನ್ನೂ ಸಾಧಿಸಲರ್‍ಹನಲ್ಲ. ಆರೋಗ್ಯದ ಬಲದಿಂದಲೇ ನಮಗೆ ಎಲ್ಲಸುಖಗಳ ಅನುಭವ ಆಗುವದು. ಆದ್ದರಿಂದ ಕೃಪಣತನಮಾಡುವದಿದ್ದರೆ ಬೇರೆ ಬೇಕಾದ ವಿಷಯಗಳಲ್ಲಿ ಮಾಡಬಹುದು. ಪ್ರವಾಸಕಾರ್‍ಯದ ವಿಷಯಕ್ಕೆ ದುಡ್ಡಿನ ಹಾಗು ವೇಳೆಯ ಕೃಪಣತನಮಾಡಿ ಆರೋಗ್ಯ ಮಂದಿರದ ನೆಲಗಟ್ಟನ್ನು ಸಡಲಿಸಲಿಕ್ಕೆ ಯತ್ನಿಸಲಾಗದು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...