Home / ಲೇಖನ / ಇತರೆ / ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಯೋನಸಂಚರತೀ ದೇಶಾನ್‌ ಯೋನಸೇವೇತ್‌ ಪಂಡಿತಾನ್‌ | ತಸ್ಯಸಂಕುಚಿತಾಬುದ್ಧಿ ಘೃತಬಿಂದುರಿವಾಂಭಸಿ || ಸುಭಾಷಿತ ||

ಎಷ್ಟೋ ಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್‍ಥಕವಾಗಿ ವ್ಯಯವಾಗುವದೆಂದು ಭಾವಿಸುವರು, ಆದರೆ ಹಾಗೆ ತಿಳಿಯವದು ದಡ್ಡತನವು. ಪ್ರವಾಸಮಾಡುವದರಿಂದ ವಿಶಿಷ್ಟಪ್ರಕಾರದ ಜ್ಞಾನಸಂಚಯವಾಗುವದು, ದೇಹಕ್ಕೆ ಆರಾಮವೆನಿಸುವದು. ಪ್ರಸಿದ್ಧ ಜನರ ಗುರುತುಪರಿಚಯವಾಗುವದು. “ಕೇಲ್ಯಾನೆದೇಶಾಟನಾ ಪಂಡಿತಮೈತ್ರೀಸಭೇತಸಂಚಾರ” ಎಂಬಂತೆ ಪ್ರವಾಸದಿಂದ ಉಪಲಬ್ಧವಾಗದ ಹಲವು ಸಂಗತಿಗಳ ಜ್ಞಾನವು ಉಪಲಬ್ಧವಾಗುತ್ತದೆ.

ಪ್ರವಾಸಮಾಡುವದರಿಂದ ಮಹಾ ಮಹಾ ರೋಗಿಗಳು ಗುಣ ಹೊಂದಿರುವದನ್ನು ನೋಡಿದರೆ ಮನುಷ್ಯನಿಗೆ ಅದರಲ್ಲಿಯೂ ಪಟ್ಟಣ ವಾಸಿ ಮನುಷ್ಯನಿಗೆ ಪ್ರವಾಸವು ಅತ್ಯಂತ ಅವಶ್ಯವಾದದ್ದು. ಯಾಕಂದರೆ ಮುಂಬಯಿಯಂಥ ಅತ್ಯುಂತ ದಟ್ಟವಾದ ವಸತಿಯುಳ್ಳ ಪಟ್ಟಣಗಳಲ್ಲಿಯ ಸಾಧಾರಣಪ್ರತಿಯ ಜನರು ಹಗಲು-ರಾತ್ರಿ ಶ್ರಮಬಟ್ಟು ಕೆಲಸ ಮಾಡಬೇಕಾಗುವದು. ಅಲ್ಲಿ ಹಗಲುರಾತ್ರಿ ಒಂದೇಸವನೆ ನಡೆಯುವ ಗಿರಣಿ, ಉಗೆಬಂಡಿ, ಉಗೆಹಡಗ, ಮೋಟಾರಗಳಿಗಾಗಿ ಕಲ್ಲಿದ್ದಲಿಯನ್ನು ಉಪಯೋಗಿಸುವರು. ಆ ಹೊಗೆಯು ಪಟ್ಟಣ ತುಂಬತುಂಬಿ ಹವೆಯೊಳಗೆ ಮಿಶ್ರವಾಗುವದು. ಈ ಹವೆಯನ್ನೇ ಎಲ್ಲರೂ ಉಸಿರಾಡಿಸುವದರಿಂದ ಪ್ರಕೃತಿಯು ಕೆಟ್ಟುಹೋಗುವದು. ಮನಸ್ಸಿಗೆ ಸ್ವಸ್ಥತೆಯುಂಟಾಗದು. ಅದರಿಂದ ಆ ಜನರು ವರ್ಷ ದೊಳಗಿನ ಕೆಲವೆ ದಿವಸಗಳನ್ನಾದರೂ ಶುದ್ಧಹವೆಯಿದ್ದ ಕಡೆಗೂ, ತರತರದ ವನಶೋಭೆಯಿರುವ ಕಡೆಗೂ ಹೋಗಿ ಪ್ರವಾಸ ಮಾಡಿಬರಬೇಕು. ಈ ಪ್ರವಾಸ ಕಾರ್‍ಯದಿಂದ ಅವರ ಶರೀರ-ಮನಸ್ಸು ಇವುಗಳ ಜಾಡ್ಯವು ಹೋಗುವದು. ಕೆಲಸಮಾಡಲಿಕ್ಕೆ ಹೊಸ ಹುರುಪು ಬರುವದು.

ಸುವ್ಯವಸ್ಥಿತವಾದ ಜೀವನೋಪಾಯಕ್ಕೂ, ನಿಜವಾದ ಪ್ರಗತಿಗೂ ಪ್ರವಾಸವು ಬೇಕೇಬೇಕು. ಪ್ರವಾಸದಲ್ಲಿ ವಿಶ್ರಾಂತಿಯೂ ಸಿಗುವದು. ಖುಷಿಮೋಜೂ ಆಗುವದು. ವರ್ಷಾನುಗಟ್ಟಲೆ ಕೊರಗುತ್ತ ಕೆಲಸಮಾಡುವದಕ್ಕಿಂತ ನಡುವೆ ಕೆಲವು ದಿವಸ ಪ್ರವಾಸಮಾಡಿ ಹುರುಪುಗೊಂಡು ತೀವ್ರ ಕೆಲಸಮಾಡುವದು ಯೋಗ್ಯವಲ್ಲೆಂದು ಯಾರು ಹೇಳುವರು? ಕೆಲಸಮಾಡುವಾಗ ಒದಗುವ ಚಿಂತೆಯಿಂದೆ ಒಂದುಪ್ರಕಾರದ ಬುದ್ಧಿ ಮಾಂದ್ಯವು ಉಂಟುಗುತ್ತದೆ. ನಡುವೆ ಪ್ರವಾಸದಲ್ಲಿ ವಿಶ್ರಾಂತಿ ಪಡೆಯುವದರಿಂದ ಮನಸ್ಸು ಶಾಂತಗೊಂಡು ವಿಕಸಿತವಾಗುವದು:

ಪ್ರವಾಸವು ಪಟ್ಟಣಿಗರಿಗೆ ಸುಖಕರವಾಗುವಂತೆ ಹಳ್ಳಿಯವರಿಗೂ ಆಗುವದು. ಸದು ಹಳ್ಳಿಯಲ್ಲಿ ವಾಸಮಾಡುವ ಮನುಷ್ಯನು ಕೂಪಮಂಡೂಕದಂತೆ ದೇಶಾಂತರಗಳ ಜ್ಞಾನವಿಲ್ಲದವನಾಗುವನು. ಹಳ್ಳಿಯವರು ವರ್ಷಕ್ಕೊಮ್ಮೆಯಾದರೂ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಅಲ್ಲಿ ಒಂದೆರಡುವಾರಗಳನ್ನು ಕಳೆದು ಬರಬೇಕು. ಅಂದರೆ ಅವರು ವಿವಿಧ ಸಂಗತಿಗಳನ್ನು ಬಲ್ಲವರಾಗುವರು. ಅದರಿಂದ ಅವರ ವಿವೇಚಕಶಕ್ತಿಗೆ ಬಹಳ ಸಹಾಯವಾಗುವದು.

ಪೌರ್ವಾತ್ಯರಲ್ಲಿ ಪ್ರತಿವರ್ಷ ಕೆಲವು ದಿವಸಗಳನ್ನು ಪ್ರವಾಸದಲ್ಲಿ ಕಳೆಯುವ ರೂಢಿಬಿದ್ದದೆ. ಆನುಕರಣೀಯವಾದ ಆ ರೂಢಿಯು ವೃಕ್ಷ ಮೊದಲಾದವುಗಳಿಗೆ ಮಳೆ-ಚಳಿ-ಬಿಸಿಲು-ನೆರಳು ಇವುಗಳಿಂದ ಹೊಸ ಜೀವನವು ಪ್ರಾಪ್ತವಾಗುವಂತೆ, ಮನುಷ್ಯನಿಗೆ ಅತ್ಯಂತ ಉತ್ಸಾಹಪೂರ್‍ಣವಾದ ಹೊಸ ಚೈತನ್ಯವನ್ನು ಕೊಡುವದು.

ಪ್ರವಾಸಮಾಡುವಾಗ ನಾವು ಚಿಂತೆಯನ್ನು ಸಂಗಡ ಕಟ್ಟು ಕೊಂಡು ಹೋಗಬಾರದು, “ಯಾಕೆ ಯಾತ್ರೆಯ ಮಾಡುತಿರ್‍ಪರಲ್ಲೇನಿಹುದು” ಎಂಬಂತೆ ಪ್ರವಾಸಿಕನು ದ್ವೇಷ, ಅಸೂಯಾ, ನಿಂದಾ, ಮೋಹ ಇತ್ಯಾದಿ ಗುಣಗಳುಳ್ಳವನಾಗಿ ಪ್ರವಾಸಮಾಡಿದರೆ, ಪ್ರವಾಸದ ಮಹತ್ವವು ಅವನಿಗೇನೂ ತಿಳಿದುಬರುವದಿಲ್ಲ. ಯಾಕಂದರೆ ಅವನ ಮನಸ್ಸು ಪ್ರವಾಸದ ಸುಖವನ್ನು ಅನುಭವಿಸಲು ಅವನ ಸಂಗಡ ಬಂದಿರುವದಿಲ್ಲ. ಅದು ಮನೆಗೆಲಸ, ಹೆಂಡತಿ, ಮಕ್ಕಳು, ತರುವದು, ಬರುವದು, ಖಟ್ಲೆ-ಖೋಖಲೆ ಇವುಗಳಲ್ಲಿ ಪೇಚಾಡುತ್ತ ಮನೆಯಲ್ಲಿಯೇ ಇರುತ್ತದೆ.

ಆರೋಗ್ಯವು ಎಲ್ಲಕ್ಕೂ ಮಹತ್ವವಾದ ವಿಷಯವಾಗಿರುತ್ತದೆ. “ಅಪಭಲಾ ತೋ ಜಗಭಲಾ” ನಾಣ್ಣುಡಿಯ ಅರ್‍ಥವನ್ನು ಆರೋಗ್ಯದೃಷ್ಟಿಯಿಂದ ಮಾಡಿದರೆ ಮನುಷ್ಯನು ಗಟ್ಟಿ ಮುಟ್ಟಿಯಾಗಿದ್ದರೆ ಏನನ್ನಾದರೂ ಮಾಡಿ ಪ್ರಗತಿಹೊಂದುವನು, ಎಂದಾಗುವದು; ರೋಗಿಷ್ಟನಾದ ಮನುಷ್ಯನು ಯಾವ ಕಾರ್ಯವನ್ನೂ ಸಾಧಿಸಲರ್‍ಹನಲ್ಲ. ಆರೋಗ್ಯದ ಬಲದಿಂದಲೇ ನಮಗೆ ಎಲ್ಲಸುಖಗಳ ಅನುಭವ ಆಗುವದು. ಆದ್ದರಿಂದ ಕೃಪಣತನಮಾಡುವದಿದ್ದರೆ ಬೇರೆ ಬೇಕಾದ ವಿಷಯಗಳಲ್ಲಿ ಮಾಡಬಹುದು. ಪ್ರವಾಸಕಾರ್‍ಯದ ವಿಷಯಕ್ಕೆ ದುಡ್ಡಿನ ಹಾಗು ವೇಳೆಯ ಕೃಪಣತನಮಾಡಿ ಆರೋಗ್ಯ ಮಂದಿರದ ನೆಲಗಟ್ಟನ್ನು ಸಡಲಿಸಲಿಕ್ಕೆ ಯತ್ನಿಸಲಾಗದು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...