Home / ಕವನ / ಕವಿತೆ / ಬಸವಿ ಮಗಳು

ಬಸವಿ ಮಗಳು

ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ
ಕುತ್ತಿಗೆಗೆ ಬರುವುದು
ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು
ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು
ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು
ನಿತ್ರಾಣವಾಗಿ ಕಾಲುಗಳು ಕಿತ್ತಿಡಲಾಗದಷ್ಟು ಭಾರವಾಗುವವು
ಜೀವ ಮುದ್ದೆ, ಮುದ್ದೆಯಾಗುವುದು.
ಬಸವಿಯ ಮಗಳಾದ ಪಾಪಕ್ಕಾಗಿ ಎಲ್ಲಾ ಸಹಿಸ ಬೇಕಾಗುವುದು

ಹೊರಗೆ ಈ ವಾಡು
ಒಳಗೆ, ಕೇಳೋದೆ ಬೇಡ!

ನಮ್ಮನ್ನು ಸಾಕಿದ ದೊಡ್ಡಮ್ಮನ ಮಗನೂ
ಮಾತಿಗೆ ಬಂದರೆ ಏನೇನೂ ಉಳಿಸನು, ಜನ್ಮ ಜಾಲಾಡಿ ಬಿಡುವನು-
“ನಿಮಗೆ ಯಾರಿದ್ದರು?
ನಾನೊಬ್ಬ ಕೈ ಹಿಡಿಯದಿದ್ದರೆ
ಎಂದೋ ತುರುಕರು, ತುಂಡರ ಪಾಲಾಗಿ ಹೋಗಿ ಬಿಡುತ್ತಿದ್ದಿರಿ,
ನಿಮ್ಮಮ್ಮ, ಬೀದಿ ನಾಯಿಯಂತೆ
ಸಿಕ್ಕಿದವರಿಗೆ ಬಸುರಾಗಿ, ಸಿಕ್ಕಲ್ಲಿ ಈದುಕೊಂಡು, ಹಾಗೇನೆ,
ಮೂರು ಹೆಣ್ಣು ಬೋಕಿಗಳನ್ನು ಕಟ್ಟಿ ಕೊಂಡು
ಹೊಸ್ತಿಲಿಂದ ಹೊಸ್ತಿಲಿಗೆ ತಳ, ಕೂಳಿಗಾಗಿ ಅಲೆಯುತ್ತಿದ್ದಾಗ
ಪಾಪ! ಅಂದ ನಾನು ಕರಕೊಂಡು ಬಂದು
ಒಳಗಿಟ್ಟು ಕೊಂಡೆ;
ಒಂದು ಗೌರವ, ಬಾಳು ಕೊಟ್ಟೆ ಕಣಿರೆ” ಎನ್ನುವನು

ಮಾಡಿದ್ದ ಆಡಿದರೆ ಏನು ಬಂತು? ಹೇಳಿ

ಕಟ್ಟಿ ಕೊಂಡವನೋ…
ದೇವರಿಗೆ ಪ್ರೀತಿಯಾಗ ಬೇಕು!-
ಅಂಬದ ಮಾತಿಲ್ಲ
ಕೊಡದ ಚಿತ್ರ ಹಿಂಸೆಯಿಲ್ಲ
ಅವನಿಗೆ ನಾನೊಬ್ಬಳು ಮನುಷ್ಯಳೆಂಬುದೇ ಗೊತ್ತಿಲ್ಲ
ನನಗೆ ಅನುಭವಿಸದೆ ವಿಧಿಯಿಲ್ಲ

ಬಿಟ್ಟನೆಂದರೆ ಬರಮಾಡಿಕೊಳ್ಳುವರಾರು!
ಹೊರಟೆನೆಂದರೆ ಹೋಗುವುದೆಲ್ಲಿಗೆ?
ನನಗೆ, ನನ್ನವರೆ, ತನ್ನವರೆ, ಮನೆಯೆ, ಮಠವೆ?
ಯಾರಿದ್ದಾರೆ? ಏನಿದೆ?
ಇದ್ದರೂ ಇಲ್ಲೆ ಬಿದ್ದರೂ ಇಲ್ಲೆ! ನನಗಿರುವುದು ಇದೊಂದೆ!
ಇದ್ದೊಬ್ಬ ತಾಯಿಯೂ ಹೆಣವಾಗಿ ಇಲ್ಲೆ ಬಿದ್ದಿಹಳು

ಎಲ್ಲೆಲ್ಲೋ ಬಿದ್ದೆದ್ದು ಬರುವನು
ತಿಂದು, ಕುಡಿದು ಮಜಾ ಮಾಡಿ ಲಾಕ್ ಲೇಕ್ ಮಾಡುವನು
ಯಾರು ಯಾರನ್ನೋ ಕಟ್ಟಿ ಕೊಂಡು ಬರುವನು
ಹೊತ್ತು ಗೊತ್ತೆಂಬುದೇ ಇಲ್ಲ
ಬಂದಾಗ ಬಾಗಿಲು ತೆರೆಯಬೇಕು
ಈಗ ಆಗ ಬೇಕೆಂದರೆ ಆಗ ಆಗಬೇಕು
ಒಳಗೆ ಐತ್ತೆ ಇಲ್ಲ ಅನ್ನೋದು ನೋಡಲ್ಲ
ತನಗೆ ಹೇಗೊ ತನ್ನ ಹಿಂದೆ ಬಂದಿರುವವರಿಗೂ ಹಾಗೇ
ಏನೂ ಕಡಿಮೆಯಾಗಬಾರದು
ಹಾಗೇನಾದರೂ ಆಯಿತೋ ಕೆಂಡ, ಕೆಂಡವನ್ನೇ ಕಾರುವನು
ಮಹಾರಾಯ! ತಾನು ಸಾಕಿರುವ ನಾಯಿಗೆ ತೋರಿಸುವಷ್ಟು ಪ್ರೀತಿ
ತೋರಿಸಿದ್ದರೂ ಎಷ್ಟೋ ಆಗುತ್ತಿತ್ತು

ಏನಾದರೂ ಮಾಡಲಿ ಬಿಡಲಿ
ಇರುಳು ಹಗಲು ಮಲಗಿ ಕೊಂಡಿರಲಿ ಕೇಳುವ ಹಾಗಿಲ್ಲ
ಬಾಯಿತಪ್ಪಿ ಅಂದರೂ
ಆಂ! ಊಂ… ಊ….!
ಉಸಿರು ಬಿಟ್ಟರೆ ನೋಡು
ತಲೆ ಹೊಯ್ದ ಎಲೆ ಮುಚ್ಚಿ ಬರುವೆ ಹುಷಾರ್!
ಎಚ್ಚರಿಕೆಯಲ್ಲಿರು ಎನ್ನುವನು

ಅದು ಹೋಗಲಿ ಬಿಡಿ!
ಇವುಗಳ ತಲೆ ಬಿದ್ದೋಗ
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಾದರೂ ಕೂಡ
ನೋಡಿ, ಮಾಡಿ ಮಾತಾಡುವುದಿದೆಯೆ?
“ಲೇ! ಅಪ್ಪನ ಗುರುತು ಅರಿಯದವಳೆ! ಹಾರಾಡ ಬೇಡ”
ವೆನ್ನುವವು

ಥೂ! ಇಂತಾ ಜನ್ಮಬೇಕಿತ್ತಾ?
ಯಾವ ತಾಯಿಗ್ಗಂಡ ಮಾಡಿದನೋ ಈ ಬಸವಿ ಬಿಡೋದಾ!
ಇವನ ವಂಶ ನಿರ್ವಂಶವಾಗಿ ಹೋಗಾ!
ಅವನನ್ನು ಮೆಟ್ಟು ಬೀಳುವಾಗ ಮೆಟ್ಟು ತಗೊಂಡು ಹೊಡಿಬೇಕು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...