Home / ಕವನ / ಕವಿತೆ / ಭರತಮಾತೆಯ ನುಡಿ

ಭರತಮಾತೆಯ ನುಡಿ

ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ?
ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ?
ಎಂದು ಮಲಿನತೆ ನೀಗುವೆ-ಮಗು
ಳೆಂದು ನುಗುಮುಖವಾಗುವೆ ?

ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ,
ಯಾರು ಜಾಡ್ಯವ ಹರಿಸಿ ನಮ್ಮಲಿ ಹೊಸದು ಜೀವವನಿಟ್ಟರೋ,
ಅವರೆ ಕಣ್ಣನು ಹಿರಿವರೇ-ಕುದಿ
ದವರೆ ಕೊರಳನು ಮುರಿವರೇ !

ಎಲ್ಲಿ ಧರ್ಮವ ಕಂಡು ಸಾರಿದ ನಿನ್ನ ಪೂರ್ವದ ಋಷಿಗಳು ?
ಎಲ್ಲಿ ಘನತೆಯ ಬದುಕ ಹಾಡಿದ ನಿನ್ನ ಸತ್ಯದ ಕವಿಗಳು ?
ಎಲ್ಲಿ ಧರ್ಮದ ಧಣಿಗಳು-ಅವ
ರೆಲ್ಲ ಜ್ಞಾನದ ಕಣಿಗಳು ?

ಎಲ್ಲಿ ಕಲೆಗಳ ಬೆಳಸಿ, ಲಕ್ಷ್ಮಿಯನೊಲಿಸಿ ನಿಲಿಸಿದ ಧೀರರು ?
ಎಲ್ಲಿ ರಾಜ್ಯವ ಕಟ್ಟಿ, ಶಾಂತಿಯ ಪ್ರಜೆಗೆ ಬೀರಿದ ವೀರರು ?
ಎಲ್ಲಿ ಆರ್‍ಯರ ರಾಜರು-ಈ
ಗೆಲ್ಲಿ ಸಾಹಸ ತೇಜರು ?

ಭರತಮಾತೆಯೆ, ಭರತಮಾತೆಯೆ, ನಮ್ಮ ಹಂಬಲು ಕೇಳದೆ ?
ದೇವಿ, ಮೌನವಿದೇನು, ಭಕ್ತರು ನಮಗೆ ನೀತಿಯ ಹೇಳದೆ ?
ಎಂದು ಮಕ್ಕಳಿಗೊಲಿಯುವೆ-ನುಡಿ,
ಎಂದು ನಮ್ಮಲಿ ನಲಿಯುವೆ ?

– ೨ –

ನಿನ್ನ ಧರ್ಮದ ದಿವ್ಯಪಥದಲಿ ಬದುಕ ತಿದ್ದದೆ ಹೋದೆವು ;
ನಿನ್ನ ಸೇವೆಯ ಮರೆತು ನಮ್ಮ ಹೋರಿ ಸೋತವರಾದೆವು ;
ನಿನ್ನ ಹೆರರಿಗೆ ಕೊಟ್ಟೆವು-ನೀ
ನಿನ್ನು ಸಾಕದೆ ಕೆಟ್ಟೆವು.

ನಮ್ಮ ಮನೆಯಲಿ ನಾವು ಹೆರರಿಗೆ ದುಡಿವ ತೊತ್ತುಗಳಾದೆವು ;
ನಮ್ಮ ಹಿರಿಯರ ಪುಣ್ಯ ಕೀರ್ತಿಯನುಳಿಸಿಕೊಳ್ಳದೆ ಹೋದೆವು ;
ನಮ್ಮ ಬಾಳಿಸು, ಕೂಡಿಸು-ಸಲ
ಹಮ್ಮ, ಸದ್ಗತಿ ನೋಡಿಸು.

-ಮಕ್ಕಳಿರ, ಅಕ್ಕರೆಯ ಮಕ್ಕಳ, ಹೆತ್ತ ಕರುಳನು ಮರೆವೆನೆ ?
ಸೊಕ್ಕಿ ಸೆಡೆದವರೀಗ ತಿಳಿದಿರಿ, ಇನ್ನು ನಿಮ್ಮ ನು ತೊರೆವೆನೆ ?
ಕೇಳಿ, ಎದೆಯಲಿ ಹದಿಯರಿ-ಹೊಸ
ಆಳ ಬಾಳಲಿ ಹುದಿಯಿರಿ.

ದೇವ ಸನ್ನಿಧಿಯಿಂದ, ಮಕ್ಕಳ, ಮೊದಲು ಧರ್ಮವ ತಂದೆನು ;
ಜೀವಕಲೆಗಳ ಕಲಿಸಿ ಸುಖದಲಿ ಸೊಬಗ ಬೆಳಸುತ ಬಂದೆನು ;
ಹಿಮದ ಗಿರಿಯಲಿ ಸುಳಿದೆನು-ಕುಡಿ
ನಿಮಿರಿ ತೆರೆಗಳ ತುಳಿದೆನು.

ಹೊಳೆದ ಸತ್ಯವ ಹಿಡಿದು ಮುಂದಕೆ ನೂಕಲಮ್ಮದೆ ಸೆಡೆದಿರಿ ;
ಹಳದ ನೆಮ್ಮುತ ಜಾತಿಮತಗಳ ಮದದ ಗುಹೆಯಲ್ಲಿ ಕೆಡೆದಿರಿ ;
ಬಯಲ ಬೆಳಕಿಗೆ ಮುಳಿದಿರಿ-ಸಮ
ದಯದ ನಡತೆಯ ಹಳಿದಿರಿ.

ಮತ್ತೆ ಮತ್ತೊಡಹುಟ್ಟಿನೊಲುಮೆಯನೊರೆವ ಗುರುಗಳನಿಳುಹಿದೆ;
ಒತ್ತಿ ಗಡಿಗಳ ಹಲವು ನಾಡನು ಬೆಸೆವ ರಾಜರ ಕಳುಹಿದೆ;
ಮರುಗಿ ಆಗಚ್ಚತ್ತಿರಿ-ಮ
ತ್ತೊರಗಿ ಮುಸುಕನು ಹೊತ್ತಿರಿ.

– ೩ –

ಕಾವಲೊಡೆದೆನು, ಪಡುವ ಕಣಿವೆಯ ತೆರೆದು ಸುರಿದೆನು ದಳವನು ;
ದೈವಭಕ್ತಿಯ, ಭ್ರಾತೃಧರ್ಮದ, ಧೀರ ಮುಸ್ಲಮಕುಳವನು
ಚಿಮ್ಮಿ, ಕೆರಳಿಸಿ, ಕಲೆತರು-ಅಹ !
ನಿಮ್ಮ ಸಮಕೇ ಮಲೆತರು.

ಕಡೆಗೆ ನೆನೆದೆನು ನನ್ನ ಮನೆತನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಟಾನಿಯಳ, ನನ್ನಿ ನಿಯ ತಂಗಿಯ ನೆರವನು ;
ಗೆಲಿದು ನಾಡನು ಬೆಸೆದಳು-ನೆಲ
ದೊಲುಮೆಕಟ್ಟನು ಹೊಸೆದಳು.

ಸಕಲ ಧರ್ಮದ ತಿರುಳ ಹೊರೆದಳು, ಸಕಲ ಜ್ಞಾನವ ತೆರೆದಳು ;
ಸಕಲ ಸೀಮೆಯ ಬಳಕೆಗೆಳೆದಳು, ಸಕಲ ಕುಶಲವನೊರೆದಳು ;-
ಅವಳ ಗುಣವನ್ನು ಮೆರೆಯಿರಿ-ಕಳೆ
ದವಳ ಕೊರತೆಯ ಮರೆಯಿರಿ.

ಮುರಿಯಲಾಕೆಯ ವ್ರತವನಸುರರ ಮಕ್ಕಳುರಿದುರಿದೆದ್ದರು;
ಹರಡಿ ನೆಲಸಿದ ಮಗಳ್ದಿರಣುಗರು ತಾಯ ಕಾಯುತ ಬಿದ್ದರು ;
ಅವರು ಮಡಿದೆಡೆ ಮಡಿಯಿರಿ-ಬಿಡ
ದವರು ಹಿಡಿದುದ ಹಿಡಿಯಿರಿ.

ಹಿರಿಯ ಸಿರಿಯೊಕ್ಕಲಲಿ ಹೊಕ್ಕಿರಿ, ನಂಟನಳಿಯದೆ ಬಲಿಯಿರಿ ;
ಅರುಹಿ, ನಯದಲಿ ಹೋರಿ, ನಂಬಿಸಿ, ಮನೆಯನಾಳಲು ಕಲಿಯಿರಿ.
ಶಿಷ್ಟ ಮಾರ್ಗದಿ ನಡೆಯಿರಿ-ನಿ
ಮ್ಮಿಷ್ಟಸಿದ್ಧಿಯ ಪಡೆಯಿರಿ.

ಮರಳಿ ಸುಗುಣರ ಕಾರ್‍ಯದಕ್ಷರ ಹೆತ್ತು ಕೊರಗನು ತಳ್ಳುವೆ ;
ಮರಳಿ ಮಹಿಮೆಯ ತೋರಿ ಲೋಕದ ಜನದ ಪೂಜೆಯ ಕೊಳ್ಳುವೆ;
ಮಕ್ಕಳಿರ, ನಿಮಗೊಲಿಯುವೆ-ನಿ
ಮ್ಮಕರೆಗೆ ಮಿಗೆ ನಲಿಯುವೆ.

– ೪ –

ಧರ್ಮ ಶಾಂತಿ ಸ್ವತಂತ್ರವಲ್ಲದೆ ನಮ್ಮ ಹಿರಿಯರ ನುಡಿಗಳು ?
ಧರ್ಮ ಶಾಂತಿ ಸ್ವತಂತ್ರವೇ ನನ್ನಿನಿಯ ತಂಗಿಯ ಮುಡಿಗಳು ;
ಕೂಡ ಲೋಕವ ಕಾಯುವ-ಯಶ
ಗೂಡಿ ಮುಕ್ತಿಗೆ ಹಾಯುವ!

-ಭರತಮಾತೆಯೆ, ಭರತಮಾತೆಯೆ, ನಿನ್ನ ಮಾತನ್ನು ಮರೆಯೆವು ;-
ಹಿರಿಯ ಬಳಗದ ಕಾರ್‍ಯಚತುರೆಯ ಸಾಕುತಾಯಿಯ ತೊರೆಯೆವು ;
ಒಂದೆ ಜನವಾಗಿರುವೆವು-ಒಲಿ
ದೊಂದೆ ಭಾರವ ಹೊರುವೆವು.

ನಿನ್ನ ಹಿಂದಿನ ಭಾಗ್ಯವೆಲ್ಲವ ಮರಳಿ ಸಾಧಿಸಿ ಮೆರೆವೆವು ;
ನಿನ್ನ ಧರ್ಮಾಮೃತವ ಶೋಧಿಸಿ ಬರಡು ಲೋಕಕ್ಕೆರೆವೆವು ;
ದೈವಚಿತ್ತದಿ ನಿಲುವೆವು-ಸ
ತ್ಸೇವೆಗೆಯ್ಯುತ ಸಲುವೆವು.
*****
೧೯೧೪

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...