Home / ಕಥೆ / ಕಿರು ಕಥೆ / ಜೇನುಹುಳು ಮತ್ತು ನೊಣಗಳು

ಜೇನುಹುಳು ಮತ್ತು ನೊಣಗಳು

ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು.  ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ.  ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ.  ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ.  ಒಂದು ಗೂಡಾದ ನಂತರ ಮತ್ತೊಂದು ಗೂಡನ್ನು ಜೇನುಹುಳುಗಳು ಅಲ್ಲಿ ಕಟ್ಟುತ್ತಲೇ ಇದ್ದವು.  ಮೆನಯ ಸದಸ್ಯರಿಗೆಲ್ಲ ಮಧುರಜೇನು ಸಿಗುತ್ತಿತ್ತು.  ಯಜಮಾನ ಅದನ್ನು ಸುತ್ತಮುತ್ತಲಿನ ಜನಕ್ಕೂ ಹಂಚುತ್ತಿದ್ದ.  ಜೇನು ಸವಿದ ಅವನ ಮನಸ್ಸು ಜೇನುಹುಳುಗಳ ಬಗ್ಗೆ ಕೃತಜ್ಞವಾಗಿತ್ತು.

ಅವನ ಮನೆಯ ಒಳಗೂ-ಹೊರಗೂ ಹಾರಾಡಿಕೊಳ್ಳುವ ನೊಣಗಳಿಗೆ ಯಜಮಾನನ ಮೇಲೆ ವಿಪರೀತ ಸಿಟ್ಟು.  ಅವನು ತಮ್ಮನ್ನು ದ್ವೇಷಿಸುತ್ತಾನೆ ಮತ್ತು ಧಿಕ್ಕರಿಸುತ್ತಾನೆ ಎಂದು ಆ ನೊಣಗಳು ಆರೋಪಿಸುತ್ತಿದ್ದವು.  ಅತ್ತಿತ್ತ ಹಾರಾಡಿದರೆ, ಒಂದು ಕಡೆಗೆ ಕುಳಿತರೆ ಯಜಮಾನನ ಕಣ್ಣು ಕೆಂಪಾಗಿ ನೊಣಗಳ ಮೇಲೆ ದಾಳಿ ಮಾಡುತ್ತಿದ್ದವು.  ಮನೆಯಲ್ಲಿದ್ದ ಹೆಂಗಸರೂ ಅಷ್ಟೆ “ಈ ಹಾಳಾದ ನೊಣ” ಎಂದು ಒಟಗುಡುತ್ತ, ನೀರಲ್ಲಿ ವಿಷ ಹಾಕಿ ನೊಣಗಳನ್ನು ಕೊಲ್ಲುತ್ತಿದ್ದರು.  ಅಥವಾ ಮನೆಯೊಳಗೆ ಪ್ರವೇಶಿದಂತೆ ಯತ್ನಿಸುತ್ತಿದ್ದರು.

ಅವರದು ಪಕ್ಷಪಾತ ಬುದ್ಧಿ ಎಂದು ನೊಣಗಳು ಹತಾಶೆಯಿಂದ ಹೇಳಿಕೊಳ್ಳುತ್ತಿದ್ದವು..  ಜೇನುಹುಳಗಳಿಗೆ ಗೌರವ ಕೊಡುವ ಅವರು ತಮ್ಮನ್ನು ಕಂಡರೆ ಅಪಾಯ ಎದುರಾದಂತೆ ವರ್ತಿಸುವರೆಂದು ತಹತಹಿಸುತ್ತಿದ್ದವು.  ಈ ಮನುಷ್ಯರು ತಮ್ಮನ್ನು ದ್ವೇಷಿಸಲು ಜೇನುಹುಳಗಳೇ ಕಾರಣವೆಂದು ಮತ್ಸರದಿಂದ ತಳಮಳಿಸುತ್ತಿದ್ದವು.

ಅಸೂಯೆ ವರ್ಧಿಸಿದಂತೆ ನೊಣಗಳು ಯಜಮಾನನ ಮೇಲೆ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದ್ದವು.  ಯಜಮಾನನೂ ಛಲದಿಂದ ನೊಣಗಳೊಂದಿಗೆ ಹೋರಾಡುತ್ತಿದ್ದ.  ಅವನ ಆಕ್ರೋಶದ ದಾಳಿಗೆ ಸಿಕ್ಕು ಕೆಲವು ನೊಣಗಳು ಸತ್ತು ನೆಲಕುರುಳುತ್ತಿದ್ದವು.  ಹೆಂಗಸರು ಅವನ್ನೆಲ್ಲ ಗುಡಿಸಿ ತಿಪ್ಪೆಗೆಸೆಯುತ್ತಿದ್ದರು.  ಸತ್ತ ನೊಣಗಳನ್ನು, ಇರುವೆಗಳು ಮುತ್ತಿಕೊಂಡು ಎಳೆದೊಯ್ಯುವಾಗ ಉಳಿದ ನೊಣಗಳು ದುಃಖದಿಂದ ಒದ್ದಾಡುತ್ತಿದ್ದವು.

ಒಮ್ಮೆ ಯಜಮಾನ ಆರಾಮಾಗಿ ಕುಳಿತಾಗ ನೊಣಗಳು ಗುಂಪಾಗಿ ಬಂದು ನೇರವಾಗಿ ಕೇಳಿದವು – “ಸ್ವಾಮಿ, ಯಜಮಾನರೆ ಜೇನುಹುಳಗಳಿಗೆ ತೋರಿಸುವ ಪ್ರೀತಿ ನಮಗೇಕಿಲ್ಲ?”

“ಜೇನು ಹುಳುಗಳು ನಿಮ್ಮಂತೆ ಅಪಾಯಕಾರಿಯಲ್ಲ ಅದಕ್ಕೆ” ನಿರ್ವಿಕಾರನಾಗಿ ಹೇಳಿದ.

“ಅವು ಮನುಷ್ಯನನ್ನು ಕಚ್ಚಿ ಕೊಲ್ಲುತ್ತವೆ.”

“ಹೌದು… ಮನುಷ್ಯನು ತೊಂದರೆ ಕೊಟ್ಟಾಗ ಮಾತ್ರ.”

“ನಮ್ಮಿಂದ ನಿಮಗೇನು ಕಷ್ಟ?”

“ನಿಮಗೆ ಅನ್ನ ಯಾವುದು ಹೊಲಸು ಯಾವುದು ವ್ಯತ್ಯಾಸವೇ ಗೊತ್ತಿಲ್ಲ.  ಜೇನುಹುಳುಗಳು ಸತತವಾಗಿ ದುಡಿದು, ಎಲ್ಲರಿಗೂ ಸಿಹಿಯಾದ ಜೇನು ಹನಿ ನೀಡಿ ಉಪಕಾರ ಮಾಡುತ್ತವೆ.  ಅವುಗಳದು ನಿಸ್ಪೃಹ ಬದುಕು.  ನಿಮ್ಮದು ಸ್ವಾರ್ಥದ ಕೊಳಕು.  ಎಂಜಲಿನ ದಾಹಕ್ಕೆ ಮನುಷ್ಯರನ್ನು ಬಲಿ ತಗೊಂತೀರಿ ನೀವು”  ಗುಂಪಾಗಿ ಕುಳಿತಿದ್ದ ನೊಣಗಳ ಮೇಲೆ ಬಲವಾಗಿ ಕೈ ಬೀಸಿದ ಯಜಮಾನ.

ರೆಕ್ಕೆ ಬಿಚ್ಚಿದ ನೊಣಗಳು ಬಚ್ಚಲ ಮೋರಿಯತ್ತ ಹಾರಿ ನಾಚಿಕೆಯಿಲ್ಲದಂತೆ ಹೊಲಸು ನೆಕ್ಕತೊಡಗಿದವು.

*****

Tagged:

One Comment

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...