Home / ಕವನ / ಕವಿತೆ / ಕಡೆಕಂಜಿ

ಕಡೆಕಂಜಿ

ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;||
ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧||

ಅರಸು ಒಂದಿನ ತಿರುಗುತಿರೆ, ಅ | ಚ್ಚರಿಯ ಒಂದನು ಕಂಡನು- ||
ಮರುಕ ತೋರುವ, ಕರೆದು ಚೀರುವ ! ಬಿರುಮ ಸೆಟ್ಟಿಯ ಕಂಡನು- ||೨||

ಕಂದು ಮೋರೆಯ, ನಾಂದ ಕಣ್ಣಿನ, | ಮಿಂದ ಕೆನ್ನೆಯ ಮಸುಕಿನಾ, ||
ಬೆಂದು ಹೊರಡುವ ಮೂಗುಸುಯ್ಲಿನ | ನೊಂದು ನೋಯುವ ಸೆಟ್ಟಿಯಾ. ||೩||

ದಿಟ್ಟ ಕೈಯಲಿ ಪುಟ್ಟ ಕರುವನು | ಕಟ್ಟಿಕೊಂಡಿಹ ಸೆಟ್ಟಿಯು ||
“ಕೆಟ್ಟೆನಯ್ಯೋ! ಕೆಟ್ಟೆನಯ್ಯೋ! | ಕೆಟ್ಟೆ!” ಎಂದಳುತಿದ್ದನು. ||೪||

ದೊರೆಯ ಕಂಡನು, ನಾಚಿಕೊಂಡನು; | ಬಿರುಮ ಅರಿಯನು ದೊರೆಯನು; ||
ಇರದೆ ನಡೆದನು, ಮೆಲ್ಲ ನುಡಿದನು; | ಒರಸಿಕೊಂಡನು ಕಣ್ಣನು. ||೫||

“ಏನು ಸೆಟ್ಟಿಯೆ? ಹೇಗೆ ಕೆಟ್ಟೆಯೆ? | ಏನು ನೀರಿದು ಕಣ್ಣಲಿ? ||
ಏನು ಬೇಸರು? ಏತಕೀ ಕರು? ಏನು? ಹೇಳ್‌! ಹೇಳ್‌!” ಎಂದನು. ||೬||

“ನನ್ನ ಬಾಳುವೆ ಏನು ಹೇಳುವೆ | ನನ್ನ ಹಣೆಯಲಿ ಬರೆದುದಾ? ||
ಚೆನ್ನ ಕರುವಿಗೆ ಬನ್ನಬಡುವೆನು | ಕಣ್ಣನೀರನು ಮಿಡಿವೆನು.” ||೭||

“ಹಿಂಡಿ ಹುಲ್ಲನು ತಿಂಡಿ ಕಾಳನು | ಉಂಡು ಬೆಳೆದೀ ಕರುವಿದು ||
ಗಂಡು ಅಲ್ಲವು ಕೊಂಡು ಬಂದೆನು. ಹಿಂಡಿನಲಿ ಕಡೆಕಂಜಿಯು.” ||೮||

“ಮಕ್ಕಳಿಲ್ಲದ ಮಡದಿ ಇಲ್ಲದ | ಚಿಕ್ಕತನದಲಿ, ಹಿಂದಕೆ ||
ರೊಕ್ಕ ಎರಡು ವರಹ ಕೊಟ್ಟು, | ಅಕ್ಕರೆಯ ಕರು ಸಾಕಿದೆ.” ||೯||

“ಗಬ್ಬವಾಯಿತು, ಅಬ್ಬೆಯಾಯಿತು, ಹಬ್ಬವಾಯಿತು ಹಾಲಿನಾ. ||
ಒಬ್ಬಳನು ನಾ ಮದುವೆಯಾದೆನು, | ಇಬ್ಬರಿದ್ದೆವು ಸುಖದಲಿ.” ||೧೦||

“ಒಡಕು ಕೊಟ್ಟಿಗೆ ಹಿಡಿಯಲಾರದು, | ನಡೆಗಳಿಪ್ಪತ್ತಾದವು. ||
ಮಡದಿಮಕ್ಕಳ ಹಡೆದು, ಸೌಖ್ಯವು | ಬಿಡದೆ ಬೆಳೆಯಿತು ಮನೆಯಲಿ.” ||೧೧||

“ಮೂಡು ಬೈಲನು ಮಾಡಿಕೊಂಡೆನು;| ಜೋಡು ಎತ್ತನು ಕಟ್ಟಿದೆ; ||
ಓಡು ಹೊಚ್ಚಿದೆ ಮಾಡು ಹುಲ್ಲಿಗೆ; | ಜೋಡು ಹಾಕಿದೆ ಕಾಲಿಗೆ.” ||೧೨||

ಏನು ಹೇಳಲಿ? ಬಾನಿನ ಹಸು | ತಾನೆ ಬಂದಂತಾಯಿತು.||
ಸ್ಥಾನ ಸ್ಥಾನದಿ ನಮಗೆ ಮದಿಪು | ಮಾನ ಕೊಟ್ಟರು ಚೌಟರು.” ||೧೩||

“ಒಡಕು ಹಣೆಯಿದು; ಕೆಡುಕು ಗ್ರಹವಿದು; | ಕುಡುಕತನದಾ ಫಲವಿದು.”
ಒಡನೆ ಸುಯ್ಯುತ ಹಣೆಯ ಬಡೆಯುತ | ನುಡಿದ ಮುಂದಕೆ ಸೆಟ್ಟಿಯು- ||೧೪||

“ಸಾಲವಾಯಿತು, ಸೋಲವಾಯಿತು. | ಶಾಲು ಸೀರೆಯ ಮಾರಿದೆ, ||
ಬೈಲು ಬಿಟ್ಟೆನು, ತೋಟ ಕೊಟ್ಟೆನು. | ಮೂಲೆಕಸದಂತಾದೆನು.” ||೧೫||

“ಮನೆಯು ಮಾನ್ಯವು, ಧನವು ಧಾನ್ಯವು | ಕನಸು ಕಂಡಂತಾಯಿತು. ||
ಇನಿಸು ಭಾಗ್ಯವು ಮಳೆಯ ನೀರಿನ | ಹೊನಲ ನರೆಯಂತಾಯಿತು. ||೧೬||

“ಹಾಳು ಕಾಲವು! ಕೂಳು ದೊರೆಯದು. | ಏಳು ಮಕ್ಕಳು ಸೆರಗಿಗೆ! ||
ಕಾಳುಕಡ್ಡಿಯ ತಿಂದ ದನಗಳ | ಕೂಳಿಗೋಸುಗ ಮಾರಲೇನ್?” ||೧೭||

“ನಾಡು ಸೇರಿದೆ ಬೇಡಲೋಸುಗ. | ನೋಡಿ ನನ್ನನು ಹಳಿದರು- ||
“ಮೂಡು ಬೈಲಿನ ಬಿರುಮ ಸೆಟ್ಟಿಯು | ಬೇಡುವನು ಬಲು ನಾಚಿಕೆ.” ||೧೮||

“ಕೆಲಸ ಮಾಡಲು ಮಾರಿ ಇವನಿಗೆ!! ಬಲುಹು ಮೈಯಲ್ಲಿ ತುಂಬಿದೆ! ||
ಹಲವು ಕಾಲ್ನಡೆ ಇವನಿಗೆ | ಸುಲಿದು ತಿನ್ನಲು ಬಂದಿಹ.” ||೧೯||

“ಎಂದು ಮೊನೆನಗೆಯಿಂದ ಆಡಿದ | ಮಂದಿ ಮಾತನು ಮನ್ನಿಸಿ, ||
ಕಂದರಂತಿಹ ಚೆಂದ ದನಗಳ | ಲೊಂದುಮಾರಲು ಬಗೆದನು.” ||೨೦||

“ಅಕ್ಕಿ ತಂದೆನು ರೊಕ್ಕದಿ೦ದಲಿ, | ಮಕ್ಕಳನು ಅರೆ ಸಾಕಿದೆ. ||
ಒಕ್ಕಲೊಂದು ಮನೆಯೊಳಿಲ್ಲವು, | ದುಕ್ಕ ಗಂಜಿಯ ಉಂಡೆನು.” ||೨೧||

“ದುಡಿತಹೋಯಿತು ಮಗೆಯ ಮಳೆವೋಲ್, | ಬಿಡದೆ ಸಲಹಿದ ಸಾಕಿದಾ ||
ನಡೆಗಳೊಂದೊಂದಾಗಿ ಹೋದವು | ಕಡೆಯ ಸಂಜೆಯ ಬಿಸಿಲವೋಲ್” ||೨೨||

“ಮುದ್ದು ದನ ಇನ್ನೊಂದು, ಎಳೆ ಕರು | ಇದ್ದ ಹಸು ಮತ್ತೊಂದು, ಹಾ!
ಮುದ್ದೆ ನೆತ್ತರ ನನ್ನ ಮೈಯನು | ಗುದ್ದಿ ತೆಗೆದಂತಾಯಿತು” ||೨೩||

“ಬೇರೆ ಒಂದೊಂದಾಗಿ ದನಗಳ | ಮಾರಿ ತಿಂಬುದಕಿಂತಲೂ, ||
ಮಾರಿ ತಿಂಬುದೆ ಹಿಂಡೆ ಅಳಿವುದೆ | ಭಾರಿ ಲೇಸೆನೆ ತೋರಿತು.” ||೨೪||

“ಹೆಂಡತಿಯು ಬಳಿಕನ್ನ ಕೊರಳಿಗೆ | ಗುಂಡು ಕಲ್ಲಂತಾದಳು. ||
ಚೆಂಡಿನಂತಹ ಮಕ್ಕಳನ್ನು | ಕಂಡು ಕಲ್ಲೆದೆ ಹಾರದು.” ||೨೫||

“ಹಾರುವೆನೊ ನೀರ್ಬಾವಿಯೊಳಗೆ? | ಹೀರುವೆನೊ ಕಹಿ ವಿಷವನು? ||
ಸೇರುವೆನೊ ಹುಲಿಗವಿಯ? ಚಟ್ಟವ | ಏರುವೆನೊ? ಎನೆ ಬಗೆದೆನು.” ||೨೬||

“ಕಾಸು ಕೈಯಿಂ ಲೇಸು ಮೈಯಿಂ | ಮಾಸಿ ಎಲ್ಲವು ಹೋಯಿತು ||
ಮೋಸ ಮಾಡಲು, ಘಾಸಿ ಮಾಡಲು | ಆಸೆಯಾಯಿತು ಮನದಲಿ.” ||೨೭||

“ಕದ್ದ ಕಳ್ಳನ ಹಾಗೆ ಕಾಂಬರೊ | ಇದ್ದವರು ಎಂದಿರುಳಲಿ ||
ನಿದ್ದೆ ಬಾರದು; ಬುದ್ಧಿ ತೋರದು | ಹೊದ್ದ ದುಗುಡದ ಹೊರೆಯಲಿ” ||೨೮||

“ಹುಚ್ಚನೆಂದರು, ಲುಚ್ಚನೆಂದರು, | ಮುಚ್ಚುಮರೆಯವನೆಂದರು, ||
ಕಚ್ಚಿ ನುದಿದರು, ಚುಚ್ಚಿ ನುಡಿದರು. | ಪಚ್ಚೆ ದೇವರೆ ಬಲ್ಲನು!” ||೨೯||

“ಬಡವನಾದರೂ ಬೇಡಲೊಲ್ಲೆನು. | ಹಡೆದ ಮಕ್ಕಳ ಮಾರೆನು, ||
ಕಡವ ಪರರಿಂ, ಒಡವೆ ಹೆರರಿಂ | ಪಡೆಯೆ ಪಡೆಯದೆಂದಿಗೂ.” ||೩೦||

“ಈವರಿಲ್ಲವು, ಕಾವರಿಲ್ಲವು. | ಗೋವು ಕಣ್ಮರೆಯಾದವು. ||
ನೋವು ತೀರದು; ಸಾವು ಬಾರದು. ! ದೈವ ಮುನಿಸಿದಂತಾಯಿತು.” ||೩೧||

“ನಿನ್ನೆಯೋ ಎಂಬಂತೆ ಕಾಣುವ | ನನ್ನದಾಗಿಹ ಹಿಂಡೊಳು ||
ಇನ್ನು ಎಳೆ ಕರು ಒಂದೆ ಬದುಕಿದೆ; | ನನ್ನ ಹೆಗಲಲಿ ಮಲಗಿದೆ.” ||೩೨||

“ಕರುವು ಚೊಚ್ಚಲು; ತೊರೆದ ಕೆಚ್ಚಲು | ಸುರಿದು ಕುಡಿಯುವ ಮುಂಚೆಯೇ ||
ತುರುವ ಮಾರಿದ ಬರಿದೆ ಚೀರಿದ | ಬಿರುಮ ಕಟುಕನು ನಾನಲೇ! ||೩೩||

“ಎರಡು ತಿಂಗಳ ಹರೆಯ-ಮಂಗಳ | ಬರಲು-ತುಂಬಿತು ವತ್ಸಗೇ. |
ಬರುಮನಂಗಳ ಸಿರಿಯು; ಕಂಗಳ | ಪುರಲಿದೇ ಕಡೆಕಂಜಿಯು!” ||೩೪||

ಎಂದು ಸೆಟ್ಟಿಯು ಮುಗಿಸಿ ಕಥೆಯನು, | ಮುಂದು ನಡೆದನು ದಾರಿಯಾ. ||
ಬಂದುದಾಗಲೆ ಚ೦ದ್ರನಾಥಗೆ | ಬಿಂದು ನೀರ್ಗಳು ಕಣ್ಣಲಿ. ||೩೫||

“ಅಲ್ಲೆ ಸೆಟ್ಟಿಯೆ! ನಿಲ್ಲು! ತಡೆ! ತಡೆ! | ಸೊಲ್ಲನೊಂದನು ಹೇಳುವೆ! ||
ಕಲ್ಲು ನಿನ್ನಯ ಕಥೆಗೆ ಕರಗದೆ | ಮೆಲ್ಲನಿರುವುದೆ? ಬಿರುಮನೆ!” ||೩೬||

“ಬಿದ್ದುದಿಲ್ಲವು ಗದ್ದಿಗೆಯ ಮೇ | ಲಿದ್ದ ನಮ್ಮೀ ಕಿವಿಯಲಿ ||
ಗದ್ದೆ ಉಳುವರ ಉದ್ದ ಗೋಳಿನ | ಸದ್ದು ಸುದ್ದೀತನಕವಾ.” ||೩೭||

“ಬೇಡು! ಬೇಗನೆ ಮೂಡು ಬೈಲನು | ಮಾಡಿಕೊಡುವೆನು, ಕೊಡುವೆನು ||
ನಾಡಿಗೊಡೆಯನು ಚಂದ್ರನಾಥನು | ಬೀಡುಮದಿಪನು ಇಡುವನು.” || ೩೮ ||

ಒಡನೆ ಸೆಟ್ಟಿಯು ಕೆಡವಿ ಮೈಯನು. | ಅಡಿಗೆ ಚಾಚಿದ ರಾಯನಾ. ||
“ಒಡೆಯ! ಕಾರ್ಕಳದೊಡೆಯ | ಚೌಟರೆ! | ನುಡಿದ ತಪ್ಪನು ಕಾವುದು.” ||೩೯||

ಹೊಗಳುತಿರುವನ ನೆಗಹಿ ಅರಸನು | ನೆಗೆವ ಕರುವನು ಹಿಡಿದನು, ||
“ತಗೆದುಕೊಳ್ಳೈ ಮಗುವ” ಎನ್ನುತ | ಸೊಗದಲಿತ್ತನು ಕೈಯಲಿ. ||೪೦||

“ಆರರೆ! ಬಿರುಮನೆ! ಮರೆಯದಿರು ಮನೆ | ಮರಿಯ ಮಕ್ಕಳ ಮಡದಿಯಾ.||
ಬರಿದೆ ಕೊಡುವೆನು ಬರೆದು ಕೊಡುವೆನು | ಸ್ಥಿರ ಚರಾಸ್ತಿಯ ಉಂಬಳಿ.” ||೪೧||

ಎಂದುಸುರಿ ಮನೆತಂದು ಬಿರುಮನ | ಕಂದನಹ ಕಡೆಕಂಜಿಯಾ ||
ಒಂದನುಳುಹಿದ ಹಿಂದೆ ಕಳುಹಿದ | ಇಂದುನಾಥದೀಶನೂ. ||೪೨||
*****
(ಪದ್ಯ ಪುಸ್ತಕ)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...