Home / ಕವನ / ಅನುವಾದ / ನಾವು ಬಹಳ ಜನ

ನಾವು ಬಹಳ ಜನ

ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ,
ನಿಜವಾಗಿ
ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ.
ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ
ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ.
ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ
ನಾನು ಜಾಣನಂತೆ ಕಾಣಬೇಕೆಂದು ಸಿದ್ಧನಾದಾಗ
ನನ್ನೊಳಗಡಗಿರುವ ಒಬ್ಬ ಮೂರ್ಖ
ನನ್ನ ಬಾಯನ್ನು ತುಂಬಿ ನಾಲಗೆಯ ಮೇಲೆ ನರ್ತಿಸುತ್ತಾನೆ.
ಮತ್ತೆ ಕೆಲವೊಮ್ಮೆ ಹಲವು ಗಣ್ಯರ ನಡುವೆ
ನಾನು ತೂಕಡಿಸುತ್ತಿರುವಾಗ
ಒಳಗಿನ ಧೈರ್‍ಯವನ್ನೆಲ್ಲ ಕೂಡಿಸಿಕೊಂಡು
ಧೀರನಂತಿರಬೇಕೆಂದರೆ
ನನಗೆ ಗೊತೇ ಇರದ ಹೇಡಿ ಸಾವಿರ ಹಿಂಜರಿಕೆಗಳೊಂದಿಗೆ.
ನನ್ನ ಇಡೀ ಅಸ್ತಿಪಂಜರದ ಮೇಲೆ
ಸವಾರಿ ಮಾಡುತ್ತಾನೆ,
ನಾಲ್ಕಂತಸ್ತಿನ ಸುಂದರ ಮನೆಗೆ ಬೆಂಕಿ ಬಿದ್ದಾಗ
ಫೈರ್ ಮ್ಯಾನನ್ನು ಕರೆದರೆ
ಡಿಡಿಟಿ ಹೊಡೆಯುವವನು ಓಡಿಬರುತ್ತಾನೆ :
ನಾನೇ ಅವನು. ನಾನು ಮಾಡಬಹುದಾದ್ದು ಏನೂ ಇಲ್ಲ.
ನನ್ನನ್ನು ನಾನು ಹೇಗೆ ಒಗ್ಗೂಡಿಸಿಕೊಳ್ಳಲಿ?
ನಾನು ಓದುವ ಪುಸಕಗಳಲ್ಲಿ ಹೀರೊಗಳು
ಸಿಂಹ ಸದೃಶರು, ಆತ್ಮ ವಿಶ್ವಾಸ ಭರಿತರು.
ಅವರ ಕಥೆ ಓದಿದರೆ ನನಗೋ
ಅಸೂಯೆಯಿಂದ ಸಾಯಬೇಕೆನಿಸುತ್ತದೆ.
ಸಿನಿಮಾಕ್ಕೆ ಹೋದರೆ
ಗಾಳಿಯಲ್ಲಿ ಸುಂಯ್ ಗುಡುವ ಬುಲೆಟ್ಟುಗಳ ನಡುವೆ
ಆರಾಮವಾಗಿ ಓಡಾಡುವ ಕೌಬಾಯ್ಗಳನ್ನು ಕಂಡು ಹೊಟ್ಟೆಕಿಚ್ಚಾಗುತ್ತದೆ.
ಎಲಾ, ಅವರ ಕುದುರೆಗೂ ಎಷ್ಟೊಂದು ಧೈರ್ಯ ಅನ್ನಿಸಿಬಿಡುತ್ತದೆ.
ಒಳಗಿನ ಉತ್ಸಾಹಿಯನ್ನು ಬಾರೆಂದು ಕರೆದರೆ
ನನ್ನೊಳಗಿಂದ ಅದೇ ಮುದಿ ಸೋಮಾರಿ ಆಲಸಿ ಕಾಣಿಸಿಕೊಳ್ಳುತ್ತಾನೆ.
ಅದಕ್ಕೆಂದೇ ನಾನೆಂದರೆ ಯಾರೆಂದು ನನಗೆ ತಿಳಿಯುವುದೇ ಇಲ್ಲ.
ನಾನೆಂದರೆಷ್ಟು ಜನ? ಈಗಿರುವವರು ಯಾರು?
ಗೊತ್ತೇ ಆಗುವುದಿಲ್ಲ,
ರಾಜನಂತೆ ಕರೆಗಂಟೆಯೊತ್ತಿ, ನನ್ನನ್ನು, ನನ್ನೊಳಗಿನ ನಿಜವಾದ ನನ್ನನ್ನು
ಕರೆಯಬೇಕು ನಾನು. ನಿಜವಾದ ನಾನು ಸಿಗಬೇಕಾದರೆ
ನಾನು ಮರೆಯಾಗಿಬಿಡಬಾರದಲ್ಲ.
ಈಗ, ಬರೆಯುತಿರುವಾಗ, ನಾನು ದೂರದಲ್ಲಿದ್ದೇನೆ;
ವಾಪಸ್ಸು ಬರುವಷ್ಟು ಹೊತ್ತಿಗೆ ನಾನು ಹೊರಟುಹೋಗಿರುತ್ತೇನೆ.
ಹೀಗೆ ನನಗೆ ಆಗುವ ಹಾಗೇ ಬೇರೆಯವರಿಗೆ ಕೂಡಾ,
ಆಗುತ್ತದೆಯೇ ಎಂದು ತಿಳಿಯುವ ಆಸೆ ನನಗೆ.
ನನಗೆ ನಾನು ಕಾಣಿಸುವಂತೆ ಅವರಿಗೂ ಅವರು ಕಾಣುತ್ತಾರೆಯೋ?
ಈ ಸಮಸ್ಯೆ ತಳಮುಟ್ಟ ಶೋಧಿಸಿದ ಮೇಲೆ
ಸ್ಕೂಲಿಗೆ ಹೋಗಿ ಪಾಠ ಹೇಳುತ್ತೇನೆ.
ನನ್ನ ಸಮಸ್ಯೆ ವಿವರಿಸಲು ಹೊರಟರೆ
ನನ್ನ ಬಗ್ಗೆ ಅಲ್ಲ, ಭೂಗೋಳದ ಬಗ್ಗೆಮಾತಾಡುತ್ತೇನೆ.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...