Home / ಕವನ / ಕವಿತೆ / ಪರಮಹಂಸ

ಪರಮಹಂಸ

ಏನಿದೀ ಜಿಗಿದಾಟ
ಕಿವಿಹರಿವ ಕೂಗಾಟ
ಇದುವರೆಗು ಕೇಳರಿಯದೀ ಆರ್ಭಟ?
ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ
ಇವನಾಡುವಾಟ!
ಅವರಿವರ ನಾಲಗೆಯ ಕಿತ್ತು
ತಲೆಯೊಳು ನೆಟ್ಟು
ಬೆಳೆಸಿಹನು ಇವನೊಂದು ಭಾರಿ ಮಂಡೆ.
ರಮಣ ಅರವಿಂದ ನುಡಿಯುವರು ಬುರುಡೆಯೊಳಿಂದ
ಅವರು ಹೊರಜಿಗಿಯೆ ಇದು ಖಾಲಿಹಂಡೆ!

ಯಾರದೋ ಗದ್ದೆಯಲಿ ನಿನ್ನ ದನ ಮೇಯಿಸುವುದಿನ್ನು ಸಾಕು;
ಕಂಡಕಂಡವರೆಲ್ಲ ತುಡುಗುದನ ಎಂದೊಯ್ದು
ದೊಡ್ಡಿಗಟ್ಟುವ ರಂಪ ಏಕೆ ಬೇಕು?
ಇರುವೆರಡು ಪುಡಿಕಾಸ
ನಾಲ್ಕು ಅಡಿ ನೆಲಕೊಳಲು ಹಾಕು,
ಆದ ಕೈಬಿಟ್ಟು
ನೆರೆಬೇಲಿ ತರಿದು
ನಾ ಸುರಭಿಕುಲಸ್ವಾಮಿಯೆನುವುದು ಬರಿ ಧಿಮಾಕು.

ಈಗೀಗ ನಡುಹರೆಯ,
ಮರ್ಮಸ್ಥಾನವ ಮೆಟ್ಟಿ ನಡೆದು ಬರುತಿದ್ದಾನೆ ನರ್ಮಸಚಿವ;
ಉತ್ಥಾನಪಾದರೆದೆ ಮೇಲೆಯೇ
ನಗುನಗುತ
ತುತ್ತುಗೊಳೆ ನಿಲುವಂಥ ಅಗ್ನಿಪಾದ.
ಸಪ್ತಸಾಗರದಡಿಯ ಪಾತಾಳದೊಡಲಲ್ಲಿ
ಅಬ್ಬರಿಸಿ ಒರಲುತಿರೆ ತೋಳ ಕರಡಿ, ಹೊರಗೆ
ಹಣೆಯ ಮಣೆಯಲಿ ಪರಮಹಂಸ ಪಾದದ ರಜವ
ಮೆರೆಸುವನು ‘ವೈರಾಗ್ಯ ಷಟ್ಕ’ ಹಾಡಿ.

ಅರಿವು ವರಿಸುವ ಮುಂಚೆ
ಗುರುಮಹಾರಾಜ ಪೀಠದ ಬಯಕೆ ಎದೆಯೊಳುರಿಯೆ,
ಕುಣಿದಾಡಿ ಬೊಬ್ಬಿಡಲು ಬಯಕೆ ಮುತ್ತಿದ ಜೀವ
ಮೌನದಲಿ ನಿಂತರಿವೆಗೆಣೆಯೆ?
ನಿನ್ನ ಪ್ರಾಣಕೆ ಪರಿಧಿಯೊಡ್ಡಿ ಸುತ್ತುತಲಿರಲು
ಈ ಮಣ್ಣ ನೂರು ಬಣ್ಣ,
ಅದ ಜಿಗಿದ ಮೇಲೆನ್ನು
‘ನನ್ನ ಸಾಧನೆಯ ಗುರಿ ಬ್ರಹ್ಮ, ಅದೆ ಅತ್ಮಕನ್ನ.’

ಸುಗ್ಗಿ ಬರೆ ಬೀಗಿ ಮಾಗಿಗೆ ಕೊರಗಿ ಬಳಲುವನು
ಈ ಪರಮಹಂಸ!
ಪಾಮರರು ಬನ್ನಿರೋ, ಅಡಿಯೊಳಿಡಿ ಹಣೆಯ
ಇವ ಅರವಿಂದರಂಶ!
ಎಲ್ಲೊ ಹುಟ್ಟಿದ ಗಿಡವನಿದರ ನಿಜಭೂಮಿಯೊಳು
ನೆಡಬಾರದೇನೊ ಭಗವಂತ?
ಬಿಸಿಲ ಹಣ್ಣಾಗದೆ ರಸತುಂಬಿ ಕಳಿವಂತೆ ಕೃಪೆಮಾಡೊ,
ಬದುಕಲೀ ಭ್ರಾಂತ.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...