Home / ಕವನ / ಕವಿತೆ / ಬರಡು

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ
ಫಲ ಸುರಿಸಲು ಬಯಸಿ,
ಮೊಳಕೆ ಒಡೆಯುತಿರುವಾಗಲೆ ಯಾವುದೊ
ನಂಜು ಗಾಳಿ ಬೀಸಿ,
ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ
ಎಲೆಯುದುರಿವೆ ಕೆಳಗೆ;
ಪ್ರಾಯದ ಗಿಡ ಆಯ ತಪ್ಪಿದಂತಿದೆ
ಈ ರೂಪವೆ ಇದಕೆ?
ಮೂಳೆಗೈಯಾಗಿ ಮುಗಿಲಿಗೆ ಚಾಚಿದ
ಬರದ ಭಿಕ್ಷಹಸ್ತ.
ಸತ್ತ ಸಿರಿಯನ್ನು ಎತ್ತಲು ನಿಲುಕದೆ
ಅಳುತಲಿರುವ ತ್ರಸ್ತ;
ಕಾಣುವ ಕಣ್ಣಿನ ಶಾಪ,
ಬಾಳಿನ ಹಾಳಿಗೆ ರೂಪ,
ಬೋಳು ಬಯಲಲ್ಲಿ, ಬೆಂಕಿ ಬಿಸಿಲಲ್ಲಿ
ಸ್ತಬ್ಧವಾದಂತೆ ಮಾರಿಗುಡಿಯಲ್ಲಿ
ಹೊಗೆಯಾಗೇಳುವ ಧೂಪ;
ಗಾಳಿಮೈಯ ಸೀಳುತ ನಿಂತಿರುವ
ಒರೆಗಳಚಿದ ಬಾಳು,
ಗತಿಸಿದ ಬದುಕಿಗೆ ತಪಿಸುತಿರುವ ಈ
ಮರದ ರೋಗಿಬಾಳು.
* * *

ಟೊಂಗೆಯೊಡೆದ ದಿನದಿಂದಲು ಗಿಡಕೆ
ಪಡೆಯಬೇಕು ಎಂಬುದೊಂದೆ ಬಯಕೆ
ತಿಳಿಯದಂತೆ ತಳದಿಂದಲೆ ಬೆಳೆದು
ಮೈಯೆಲ್ಲಾ ಹಸಿರ ವಸ್ತ್ರ ತಳೆದು,
ತುಳುಕಬೇಕು ಮೈ ತುಂಬಾ ಹಣ್ಣು
ತಣಿಯುವಂತೆ ಬೆಳೆಸಿದವನ ಕಣ್ಣು;
ಬಯಲಲೆಲ್ಲ ತನ್ನ ಕುಲವ ನಿಲಿಸಿ
ಬಾಳಬೇಕು ಎಂದು ಬೇರನಿಳಿಸಿ,
ಮಂತ್ರ ಜಲವ ಸಿಡಿಸಿದಂತೆ ಈ ಗಿಡ
ಭರ ಭರ ಬೆಳೆದಾಯಿತು ಪುಟ್ಟ ಮರ.
* * *

ರಸವತಿಯಾದರು ತನ್ನೊಡಲು
ಗುರಿಯೋ ತಳಕಾಣದ ಕಡಲು.
ಫಲ ಬಿಡದಿದ್ದರೆ ಏನಿದ್ದೇನು
ಮುಗಿಯಿತೆ ಬರಿ ಸುಖಪಡಲು?
ಕರಿಮುಗಿಲಿನ ಸಂತತ ರಸಧಾರೆಗು
ಮೊಗ್ಗನು ತಳೆಯದು ಮಡಿಲು :
ಗಂಗೆಗನಸ ಕಟ್ಟಿದ ಹೊಳೆ ಇಂಗಿದೆ
ಸುಡುಹೆಂಚಾಗಿದೆ ಒಡಲು ;
ಇಡಿ ಜಗ ಫಲವತಿಯಾದರು ನಿಯಮಕೆ
ಹೊರತಾಗಿದೆ ಈ ಗಿಡ,
ಎಷ್ಟೆ ನುಡಿಸಿದರು ಸುಸ್ವರ ಬರದಿದೆ
ಒಡೆದ ಮಡಕೆ ಈ ಘಟ.
ಗುಡಿಯನು ಬೆಳಗಲು ಬಯಸಿದ ಸೊಡರು
ಉರಿಯುತ್ತಿದೆ ಚಿತೆ ಸುಡಲು;
ಚಾಮರವಾಗುವ ಕನಸ ಕಂಡ ಗಿಡ
ಆಯಿತೆ ಕಸಗುಡಿಸುವ ಬರಲು?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...