Home / ಕಥೆ / ಸಣ್ಣ ಕಥೆ / ಗೆದ್ದವರು……….

ಗೆದ್ದವರು……….

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅದು ಊರನ್ನು ದಂಗುಬಡಿಸುವ ವಿಷಯವಾಗಿತ್ತು. ಆಶಾ ಮತ್ತು ರಮೇಶ ಮದುವೆ ಮಾಡಿಕೊಂಡರಂತೆ ಎಂಬ ಸುದ್ದಿ ಅದು.

ಅಕ್ಕಪಕ್ಕದ ಮನೆಯ ಆಶಾ ಮತ್ತು ರಮೇಶ ಒಟ್ಟಿಗೆ ಬೆಳೆದವರು. ವೈದಿಕರ ಮನೆಯ ರಮೇಶ ಮಾಂಸ ಮಡ್ಡಿ ತಿನ್ನುವ ಗೀತಾಳ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವಾಗ ಅವನಪ್ಪ ಹೆದರಿದ್ದರು, ಎಲ್ಲಿ ಹುಡುಗ ಮಾಂಸ ಮಡ್ಡಿ ತಿನ್ನುತ್ತಾನೆಂದು ಹೆದರಿಕೆ ಯಲ್ಲಿ. ಆಶಾ ರಮೇಶನ ಮನೆಗೆ ಹೋಗುವಾಗ ಅವಳ ಅಪ್ಪ ಅಮ್ಮ ಕಸಿವಿಸಿ ವ್ಯಕ್ತ ಪಡಿಸುತ್ತಿದ್ದರು. ಅಲ್ಲಿ ಹೋಗಿ ಈ ಹುಡುಗಿ ಎಲ್ಲಿ ಅವರ ಮಡಿ ಕೆಡಿಸುತ್ತಾಳೋ ಎಂದು.

ಆಶಾ ರಮೇಶ ಬೆಳೆದಂತೆ ಅವರ ನಡುವಿನ ಪ್ರೀತಿಯೂ ಬೆಳೆಯತೊಡಗಿತು. ಅವಳು ಎಂಜಿನಿಯರಿಂಗ್ ಗೆ ಸೇರಿದರೆ ಅವನು ಮೆಡಿಕಲ್ ಗೆ ಸೇರಿದ. ಹೋಗಿ ಬರಲು ಒಂದೇ ಬಸ್ಸು. ಅಕ್ಕಪಕ್ಕದಲ್ಲಿ ಕಾಲೇಜುಗಳು. ಇವರ ಮಾತು ಕತೆಯನ್ನು ಗಮನಿಸಿ ಕತೆ ಕಟ್ಟುತ್ತಿದ್ದವರಿಗೆ ರಮೇಶ ನೇರವಾಗಿ ಹೇಳುತ್ತಿದ್ದ. “ನಿಮಗೆ ಅಕ್ಕತಂಗಿಯರು ಇಲ್ಲವೇನ್ರೋ? ನಾವು ಒಟ್ಟಿಗೆ ಬೆಳೆದವರು.” ಗೀತಾಳೂ ಅಷ್ಟೇ. ಅವಳನ್ನು ಪರಿಹಾಸ್ಯ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು.

ಅಂತಹ ಆಶಾ ರಮೇಶರ ಫೋಟೋ ಪತ್ರಿಕೆಯಲ್ಲಿ ಪ್ರೇಮ ವಿವಾಹ ಎಂಬ ಶೀರ್ಷಿಕೆಯಡಿಯಲ್ಲಿ ಕಾಣಿಸಿಕೊಂಡಾಗ ಊರಿಗೆ ಊರೇ ಬೆಚ್ಚಿಬಿತ್ತು. ವೈದಿಕ ಮನೆತನದ ತನ್ನ ಎಲ್ಲಾ ಪಿತೃಗಳನ್ನು ನರಕಕ್ಕೆ ಇಳಿಸಿದನೆಂದು ರಮೇಶನ ತಂದೆ ಕೆಂಡಾಮಂಡಲವಾದರು. ಆಶಾಳ ಮನೆಯವರು ತಮಗೆ ಬ್ರಹ್ಮಶಾಪ ತಗಲುತ್ತದೆಂದು ಚಿಂತಾಕ್ರಾಂತರಾದರು.

ಎರಡೂ ಮನೆಯವರು ಒಟ್ಟಿಗೆ ಸೇರಿ ನವವಿವಾಹಿತರನ್ನು ಹೋಟೇಲೊಂದರಲ್ಲಿ ಪತ್ತೆಹಚ್ಚಿ ಊರಿಗೆ ಕರೆತಂದರು. ಆಶಾಳನ್ನು ಅವಳ ಮನೆಗೆ ಕರೆದೊಯ್ದರೆ ರಮೇಶನನ್ನು ಅವನ ಭಾವನ ಮನೆಗೆ ಕಳುಹಿಸಿಕೊಟ್ಟರು. ಆಶಾಳ ಅಮ್ಮ ಮಗಳನ್ನು ನೋಡಿದವರೇ ತಬ್ಬಿಕೊಂಡು ಗೋಳೋ ಎಂದು ಅತ್ತರು. ನೀನು ಅವನನ್ನೇ ಮದುವೆಯಾದರೆ ನಾನು ಕೆರೆಯೋ ಬಾವಿಯೋ ನೋಡಿಕೊಳ್ಳಬೇಕಾಗುತ್ತದೆಂದು ಹೆದರಿಸಿದರು. ಅದಕ್ಕೆ ಆಶಾ ’ಈಗಾಗಲೇ ಮದುವೆ ಯಾಗಿದೆಯಲ್ಲಮ್ಮ! ಇನ್ನೇನು ಮಾಡಲಾಗುತ್ತದೆ?’ ಎಂದದಕ್ಕೆ “ಏನು ಪೇಪರ್ ನಲ್ಲಿ ಫೋಟೋ ಬಂದ ಮಾತ್ರಕ್ಕೆ ಆಗಿಹೋಯಿತಾ? ಮದುವೆ ಅಂದ್ರೆ ಏನೂಂತ ತಿಳ್ಕೋಂಡಿದ್ದೀಯಾ? ಅಪ್ಪ, ಅಮ್ಮ ಇಲ್ಲದೆ ನಡೆದ ಮದುವೆ, ಅದೆಂತಾ ಮದುವೆ? ನಡೆದುದನ್ನು ಮರೆತುಬಿಡು” ಎಂದರು.

ರಮೇಶನಿಗೆ ದಿನಾ ಭಾವನಿಂದ ಉಪದೇಶ. “ಅಲ್ಲಯ್ಯಾ ಹೋಗಿ ಹೋಗಿ ಆ ಮಾಂಸ ತಿನ್ನುವ ಶೂದ್ರಮುಂಡೇದನ್ನು ಕಟ್ಟಿಕೊಂಡಿದ್ದೀಯಲ್ಲಾ? ನಾಳೆ ನಿನಗೆ ಹುಟ್ಟುವ ಮಕ್ಕಳು ಮನೆಯಲ್ಲೇ ಎಲುಬುತುಂಡನ್ನು ಕಚ್ಚಿ ಎಳೆಯುವದನ್ನು ಹೇಗೆ ಸಹಿಸಿಕೊಳ್ಳುತ್ತೀ?” ಎಂದು ದಬಾಯಿಸಿದರು. ಅದಕ್ಕೆ ರಮೇಶ “ಸುಮ್ಮನಿರಿ ಭಾವ, ನೀವು ಅಕ್ಕನಿಗೆ ಗೊತ್ತಾಗದೆ ಬಾರಿಗೆ ಹೋಗಿ ಏನೇನು ಮಾಡುವುದಿಲ್ಲ? ನನಗೆ ಬುದ್ಧಿ ಹೇಳುತ್ತಿದ್ದೀರಾ?” ಎಂದ.ಭಾವನದಕ್ಕೆ ನಗುತ್ತಾ,”ಅದು ಹೌದಯ್ಯ, ಜಾತಿಯವಳನ್ನೇ ಮದುವೆಯಾಗಿ ನೀನು ಏನು ಮಾಡಿದರೂ ಧಕ್ಕುತ್ತದೆ. ಬೇರೆ ಜಾತಿಯವಳನ್ನು ಮದುವೆ ಯಾಗಿ ಚೆನ್ನಾಗಿದ್ದರೂ ತಪ್ಪಾಗುತ್ತದೆ” ಎಂದರು. ರಮೇಶ ಮಾತಾಡಲಿಲ್ಲ.

ಇದಾಗಿ ಕೆಲವು ತಿಂಗಳುಗಳ ನಂತರ ನನಗೆ ರಮೇಶ ಆಶಾ ಸಿಕ್ಕರು. ಆಶಾ ನನ್ನನ್ನು ಕಂಡವಳೇ”ಏನೇ ಹೇಗಿದ್ದೀಯ? ಕತೆ-ಗಿತೆ ಈಗಲೂ ಬರಿತೀಯಾ?” ಎಂದು ಕೇಳಿದಳು. ನಾನದಕ್ಕೆ ನಿನ್ನದೇ ಕತೆ ಬರೆಯಬೇಕೆಂದಿದ್ದೆ. ಇದು ಹೇಗೆ ನೀವಿಬ್ಬರೂ ಮತ್ತೆ ಒಂದಾಗಲು ಸಾಧ್ಯವಾಯ್ತೆಂದು ಪ್ರಶ್ನಿಸಿದೆ. ಆಶಾ ನಗುತ್ತಾ”ಓ, ಅದಾ ವಿಷಯ? ಹೇಳ್ತೀನಿ ಕೇಳು, ಮದುವೆಯಾಗಿ ಒಂದು ತಿಂಗಳ ಮೇಲಷ್ಟೆ ಉಳಿದವರಿಗೆ ವಿಷ್ಯ ಗೊತ್ತಾದದ್ದು. ಆಗಲೇ ನನ್ನ ಹೊಟ್ಟಿಯಲ್ಲಿ ಹೊಸ ಜೀವವೊಂದು ಉದಯಿಸುತ್ತಿತ್ತು. ಈ ವಿಷಯ ತಿಳಿದಮೇಲೆ ನಮ್ಮ ಮನೆಯವರು ಮೆತ್ತಗಾದರು. ರಮೇಶನ ಅಪ್ಪ ಭ್ರೂಣಹತ್ಯೆ ಮಹಾಪಾಪ ಎಂದರು. ಮತ್ತೆ ಅವರೇ ನಮ್ಮನು ಜತೆ ಗೂಡಿಸಿದರು.” ಎನ್ನುತ್ತಾ ಕಿಲಕಿಲ ನಕ್ಕಳು.ನನಗದು ಸಂಗೀತದಂತೆ ಭಾಸವಾಯಿತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...