Home / ಕವನ / ಕವಿತೆ / ವಿಷವದನ

ವಿಷವದನ

ಆಗಿನಿಂದಲು ಇವನು ಹೀಗೆಯೇ ರೋಗಿಯೇ,
ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ;
ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ
ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ.
ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ!
ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯಕಾರ
ಚಟಪಟಿಸಿ ಅಲೆಯುತಿದೆ ಚಿನಕುರುಳಿ ಮಂದೆ
ಹಿಂದೆ ಮುಂದೆ.

ಕೂದಲಿಗು ಹೆಚ್ಚು ಕನಸಿನ ಗಣಿತ ತಲೆಯಲ್ಲಿ;
ಮೈಯಲ್ಲಿ ಮರೆಸಿರುವ ಅಂಗಿ ಭಂಗಿಗಳೆಲ್ಲ
ತೀರ ಹೊಸಹೊಸದು, ಇಂಗ್ಲಿಷ್ ಪಿಕ್ಚರಲ್ಲಿ
ಕಾಮುವೋ ಭೀಮುವೋ ಬರೆದ ಪುಸ್ತಕದಲ್ಲಿ
ಮೊನ್ನೆ ನೋಡಿದ್ದು.

ಹಾಗಂತಲೇ ಇವನು ಮೂಲಂಗಿ ತಿಂದೂ
ಫರಂಗಿ ತೇಗಿದ್ದು;
ಬಾಳೆಮರ ಲಿಲಿಹೂವು ಬಿಟ್ಟಿತೆಂದದ್ದು;
ನ್ಯೂಯಾರ್ಕಿನಲ್ಲಿ ಮಳೆ ಬಿತ್ತೆಂದು ಶೇಷಾದ್ರಿ-
ಪುರದಲ್ಲಿ ಕೊಡೆಬಿಚ್ಚಿ ಉಳಿದವರ ನಕ್ಕಿದ್ದು.
ಈಗ-
ಬೇರೊಂದು ಹೊಸರಾಗ ಹಾಡುತ್ತಿದ್ದಾನೆ,
ಗುದ್ದಿ ಸುದ್ದಿಗೆ ಜಿಗಿದು, ಚುಟುಕು ಬೆಳಗುವ ರೋಗ
ನರಳುತ್ತಿದ್ದಾನೆ;
ಶಂಖ ಜಾಗಟೆ ಹಿಡಿದು
ನಾಮ ಬಳಿದು
ನಡಿಗೆಯಲಿ ಆಗೀಗ ಲಾಗ ಎಳೆದು
ಬಸ್ಸು ರಿಕ್ಷಾ ಕಾರು ಇಡಿಕಿರಿದ ರಸ್ತೆಯಲಿ
ನಟ್ಟ ನಡುವೆ ನಿಂತು ಕೂಗುತ್ತಿದ್ದಾನೆ.
ಸುತ್ತಲೂ ಮುಕ್ಕಿರಿವ ಜನಮಂದೆ ಕಂಡು
ಮಂಗ ಕುಣಿಸುವ ಕೊಂಗ ಪೂರ ದಂಗಾಗಿ
ಬೆಪ್ಪು ನೋಡಿದ್ದಾನೆ!

ನಿಂತೆಬಿಟ್ಟಿರ! ಅಯ್ಯೋ, ಕೂರಿ ಇವರೆ
ಗೊತ್ತೆ ಏನಾಯ್ತಂತ ಶನಿವಾರ ಬೆಳಗಾಗ?
ಸರ್ಕಲ್ಲ ಹೋಟಲಲಿ ಗುಂಪಲ್ಲಿ ಕಂಡ.
ಎದ್ದವನೆ ಬಳಿ ಬಂದು
“ಹಲೊ ಭಟ್ಟ ಹೊಲಿಸಯ್ಯ ಹೊಸ ಮೆಟ್ಚ” ಎಂದ!
“ಹೇಗಿದೆ ಪ್ರಾಸಗಳ ಗೇಲಿ ಕಂದ?
‘ಅನುಭವದ ಲಯ ಮುರಿದು ಅನುಭಾವಕೇರುವುದೆ
ಎಲ್ಲ ಸಾಹಿತ್ಯಗಳ ಪರಮೋಚ್ಚ ಗುರಿ.’
ಇದು ಖುದ್ದು ನನ್ನದೆ ಮಾತು ಈಗಷ್ಟೆ ಸ್ಫುರಿಸಿದ್ದು”
ಎಂದವನೆ ತನ್ನ ಎರಡೂ ಕೈಗಳನ್ನ
ಪ್ಯಾಂಟಿನೆಡಬಲದ ಎರಡೂ ಜೇಬಲ್ಲಿಟ್ಟು
ತಾಳ ಬಡಿಯುತ್ತ ಎರಡೂ ಕಾಲಿನಿಂದ
ಪ್ರಾಸಶೈಲಿಯಲೆ ಆತ್ಮಾಭಿನಯ ನೀಡಿದ.
ಹುಬ್ಬ ಕೊಂಕಿಸಿ
ಮುಖಕ್ಕೆ ಕೊಂಚ ನಗು ತರಿಸಿ
‘ಕೆಲಬಲದ ಮನ್ನೆಯರ’ ಗತ್ತಿಂದ ನೋಡಿದ.

ಇದ್ದಕ್ಕಿದ್ದಂತೆ ಎದ್ದಿತೊ ಭಾರಿ ಉದ್ಘೋಷ,
ಪತಿಪಾದ ಸೇವೆಯಲ್ಲಿ ಮೈಯ ಸಲ್ಲಿಸಲೆಂದು
ತವಕದಲ್ಲಿ ಕಾದ ಸತಿಭಾವದಾವೇಶ.
ಉಬ್ಬಿ ಚಿನಕುರುಳಿಗಳು ಬಿರುದ ಸಿಡಿಸಿದರಯ್ಯ ಮೆಚ್ಚುಗಣ್ಣಾಗಿ
ನಡೆದ ವಿಷವದನ ಹೊಗಳಲೂ ಬರದ ದಡ್ದರನ್ನು
ಕಾವ್ಯಶೈಲಿಯಲಿ ಚುಚ್ಚುತ್ತ
ಚಿನಕುರುಳಿಗಳ ತಲೆಯ ಸವರುತ್ತ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...