Home / ಕವನ / ಕವಿತೆ / ದೇಶ ದೇಹ

ದೇಶ ದೇಹ

ಈ ದೇಶ ದೇಹದ ಶಕ್ತಿ ಕುಂದುತ್ತಿದೆ
ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ
ಯುವ ಪೀಳಿಗೆ ಪೋಲು ಪೋಲಿಗಳಾದಂತೆ

ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ
ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ
ಅಸಂಖ್ಯ ಬಟ್ಟೆ ಗಿರಣಿ ಸಿಕ್ ಇಂಡಸ್ಟ್ರೀಸ್
ಒಂದೊಂದೇ ಉದುರಿದಂತೆ

ಕೂದಲು ಬೆಳ್ಳಗಾಗುತ್ತಿದೆ ಕಪ್ಪು ಮಾಯ
ಹಚ್ಚಹರಿತ್ತಿನ ಗಿಡಮರಗಳು ಕಡಿದುರುಳಿ
ನೆಲಬಂಜೆ ಬರಡಾದಂತೆ
ಕೂದಲುದುರಿ ಬೋಳು ಬೋಳು ತಲೆ

ಐವತ್ತಕ್ಕೇ ಮುಪ್ಪಡರುತ್ತಿದೆ
ಉದ್ದೀಪನಗೊಳ್ಳಲು ಉತ್ತೇಜಕ ಮಾರ್ಗಗಳು
ಮದ್ಯ ಎಲ್‌ಎಸ್‌ಡಿ ವಿಟಾಗೋಲ್ಡ್‌
ಕೃತಕ ದಾರಿಗಳು ತೆರೆದಿವೆ
ನರನಾಡಿಗಳ ಮಿಡಿತ ಮಂದ
ತಗ್ಗು ಕೊರಕಲು ರಸ್ತೆಗಳಲ್ಲಿ ವಾಹನಗಳು
ಕುಕ್ಕಾತ್ತ ಏಳು ಬೀಳುತ್ತ ತೆವಳುವಂತೆ

ಎಳೆಯುತ್ತಿದೆ ಗಾಡಿ ಏದುಸಿರು ಬಿಡುತ್ತ
ತಲೆ ಜೋಲಾಡಿಸುತ್ತ ಬಡಪ್ರಾಣಿ
ದುಡಿವ ಜನ ಅರೆಹೊಟ್ಟೆಯಲ್ಲಿ
ಹೇಗೋ ಕಾಲೆಳೆದು ಬಗ್ಗಿ ಬಂಡಿ ಜಗ್ಗುವಂತೆ
ಕೀಲು ಕೀಲು ಸಡಿಲ ನೋವು
ಕುಂತರೂ ಹಾಯ್ ನಿಂತರೂ ಹಾಯ್
ವರ್ಗ ವರ್ಗಗಳು ಅಮಾನವೀಯ
ನೋವುಗಳಲ್ಲಿ ನರಳುವಂತೆ

ಜಗವೇ ಪರಕೀಯವಾಗುತ್ತಿದೆ
ನನ್ನವರೆಂಬುವರಿಲ್ಲದೆ
ಮನೆಮನೆಯಲ್ಲಿ ಓಣಿ ಊರುಗಳಲ್ಲಿ
ಮುಖ ಮುಖಗಳು ಮುಖವಾಡಗಳು
ಜೀವಿಗಳೆಲ್ಲ ಕೀಲುಗೊಂಬೆಗಳು
ಒಳಗೊಳಗೇ ಕತ್ತಿ ಮಸೆಯುತ್ತಿವೆ
***

ತಿಂದದ್ದು ಜೀರ್ಣವೇ ಆಗುತ್ತಿಲ್ಲ
ಭ್ರಷ್ಟ ಬೊಜ್ಜು ಬೆಳೆಯುತ್ತಿದೆ
ಎತ್ತಲ್ಲೂ ಅಪವಾದ ಅಪಪ್ರಚಾರಗಳ
ಗ್ಯಾಸು ಊದುತ್ತ ವಾಯುಮಾಲಿನ್ಯ
ತಿಂದೂ ತಿಂದೂ ನಾಲಿಗೆ ಪಾಚಿಗಟ್ಟಿದೆ
ಯಾವ ಲಕ್ಷ ಕೋಟಿಗಳ ಆಪಾದನೆಗಳು
ಸಲೀಸಾಗಿ ಜಾರಿಕೊಂಡು ಹೋಗುತ್ತವೆ

ಜೀವ ಸೆಲೆ ಬತ್ತಿಹೋಗಿದೆ
ಅಂತರ್ಜಲ ಒಳಗೊಳಗೆ ಇಳಿದಂತೆ
ಸತ್ಯ ನ್ಯಾಯನೀತಿ ಪ್ರಾಮಾಣಿಕತೆಗಳ
ಹೃದಯ ಸೆಲೆಗಳು ಬತ್ತಿ ಹೋಗುತ್ತಿವೆ
ಅಲ್ಲೋ ಇಲ್ಲೋ ಹುಡುಕಬೇಕೆಂದರೆ
ನೂರಾರು ಅಡಿಗೆ ಒಡಲೊಳಗೆ ಕೊರೆಯಬೇಕು
ಕಣ್ಣೋಟ ಮಬ್ಬು ಮಬ್ಬು ಮುಂದೆ
ಕರಾಳ ಭವಿಷ್ಯದ ಕತ್ತಲಾವರಿಸಿದೆ
ಯಾವ ಕಡೆ ದಾರಿ ಯಾವುದು ಸಂದು
ಗೊತ್ತಾಗುತ್ತಿಲ್ಲ ಎಲ್ಲ ಅಯೋಮಯ
ನನ್ನ ಬಟ್ಟೆ ಯಾವುದು ಬೇರೆಯವರದು
ಯಾವುದು ಪರಪಾಟಾಗುತ್ತವೆ

ನನ್ನದು ಬಿಟ್ಟು ಪರರದನ್ನು ಒಮ್ಮೆ
ಎರಡೂ ಕೂಡಿಸಿ ಅರ್ಧರ್ಧ ಒಮ್ಮೆ
ಸೇರಿಸಿ ಉಟ್ಟುಕೊಳ್ಳುತ್ತೇನೆ
ಅಸಹ್ಯವೆನಿಸುತ್ತದೆ ಆದರೂ

ಬಟ್ಟೆಗಳ ಸಡಿಲು ಬಿಗುವು
ಗೊತ್ತಾಗುವುದಿಲ್ಲ
ಬಟ್ಟೆ ಎಂದು ಹಿಡಿದು ಹೊರಟದ್ದೆಲ್ಲ
ಮುರಾಬಟ್ಟೆ ಕೊರಕಲಿಗೋ ಗಟಾರಕ್ಕೋ

ಚಾಳೀಸು ಬಂದು ಮತ್ತೆ ಬಿಟ್ಟು ಹೋಯಿತು
ಐವತ್ತರ ಗಡಿ ದಾಟಿ ಅರವತ್ತರ ಅರುಳುಮರುಳು
ಮೈಯ ಮೂಲೆ ಮೂಲೆಗಳಲ್ಲಿ ಗಾಯಗಳು
ಅಲ್ಲಿ ಕಗ್ಗೊಲೆ ಇಲ್ಲಿ ಸೇಡು ಅತ್ಯಾಚಾರ

ಅಂಗಾಂಗಗಳ ಹರತಾಳ ಮೂಕ ಮುಷ್ಕರ
ಕಾಲುಗಳು ಮುಂದೆ ನಡೆಯುವ
ಶಕ್ತಿ ಕಳೆದುಕೊಂಡಿವೆ
ಪ್ರಗತಿ ಪುರೋಗತಿಗಳ ಓಟವಂತೂ ದೂರ

ಬಾಯೇನೋ ವಟಗುಟ್ಟುತ್ತಿದೆ
ವೇದಿಕೆಗಳ, ಕಾಗದಗಳ, ಕ್ರಾಸ್‌ರೂಮುಗಳ
ಭಾಷಣಗಳಂತೆ, ಕಾವ್ಯ, ಸಿನಿಮಾ
ಪರದೆಗಳ ಕನವರಿಕೆಗಳಂತೆ
ಯೋಜನೆ ಆಶ್ವಾಸನೆಗಳ ಉಗುಳೇ ಹೆಚ್ಚು
ಮಂತ್ರಕ್ಕಿಂತ ತಂತ್ರಕ್ಕಿಂತ
ಹೊಟ್ಟೆಯ ಸಿಟ್ಟು ರಟ್ಟೆಯಲ್ಲಿ
ಏರಿ ಬರದೆ ಆವಿಯಾಗಿ ಹೋಗುತ್ತದೆ
ಕನಸುಗಳಾಗಿ ತೇಲಿ ಮೇಲೆ

ವಯಸ್ಸಿಳಿದಂತೆಲ್ಲಾ ಈ ದೇಹ
ಒಂದೊಂದೇ ರೋಗಕ್ಕೆ ಎಡೆ ಮಾಡಿಕೊಡುತ್ತದೆ
ಕ್ಷಯ ಕ್ಯಾನ್ಸರ್ ಏಡ್ಸ್‌ಗಳಂತೆ
ಸಮಸ್ಯೆಗಳು ಪರಿಹಾರವಿಲ್ಲ

ರಾಜಕೀಯ ಕೊಳಚೆ ರಾಡಿ ನೀರು
ಕುಡಿಯುವ ನೀರನ್ನೂ ಕೊಳಕೆಬ್ಬಿಸಿದೆ
ಬಿ.ಪಿ. ಏರುಪೇರು
ಪಕ್ಷಗಳ ಬಿರುಸು ತುರುಸಿನ ಪೈಪೋಟಿಯಂತೆ
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿ
ಮೈಮೇಲಾದ ಯಾವ ಗಾಯವೂ ಮಾಯುತ್ತಿಲ್ಲ
ಗಡಿ ಭಾಷೆ ಕೋಮು ಗಾಯಗಳು
ಮಾಯದೇ ಬಲಿಯುತ್ತಾ ಹೊರಟಿವೆ ದಿನೇ ದಿನೇ

ಜಿಜೀವಿಷೇತ್ ಶತಂ ಸಮಾಃ
ಎಂಬ ಆಶಯ ಪೂರ್ವಜರಲ್ಲಿ ನನಸಾಗಿದ್ದುದು
ಈಗ ಒಂದು ಒಣ ಮಾತು ಕೈಗೂಡದ ಕನಸು
ಅರ್ಧ ಆಯುಷ್ಯ ಕಳೆಯುವುದರಲ್ಲೇ
ಸಾವಿನೊಡನೆ ಮುಖಾಮುಖಿ ಮಾತುಕತೆ
ಅದೂ ರೋಗಗಳ ತವರಾದ ಈ ದೇಹ
ಸದೃಢವಾದ ಅಂಗಾಂಗಗಳೊಡನೆ
ನೂರು ವರ್ಷ ಬಾಳುವುದೆಂದರೇನು
ಅದೊಂದು ದೂರ ಗಗನದ ಚಿಕ್ಕಿ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...