Home / ಕವನ / ಕವಿತೆ / ಅಣುಶಕ್ತಿ

ಅಣುಶಕ್ತಿ

ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍
ಭಕ್ತರ್‍ ವಿರಕ್ತರ್‍ ಕೀವಂದ್ರರ್‍
ದಿವ್ಯಚಕ್ಷುನಿನಿಂ
ಅಣುವನೊಡೆದರ್‍
ಕಂಡರದ್ಭುತಮಂ,
ಪೂರ್ಣ ದರ್ಶನಮಂ:
ವ್ಯೋಮ ಭೂಮಿಗಳೊಳ್

ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ
ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನಿಸಿ
ಕಡಲಾಗಿ ಭೂಮಿಯೊಡಲಾಗಿ
ತಾನ್ ಸರ್ವ ಸೃಷ್ಟಿಯೆನಿಸಿ
ಮೆರೆವ
ಪರಮ ತೇಜಸ್ವಿಯನ್
ಅಣುವಿಗಣುವಾದನನ್
ಮಹತೋಮಹೀಯನನ್
ಸರ್ವಶಕ್ತನನ್
ಸರ್ವಕಾರಣನನ್
ಪರಮಾತ್ಮನನ್
ಲೋಕತಾರಕನನ್.

ಇಂದು – ಹಿರಿ ವಿಜ್ಞಾನಿಗಳ್ ಪರಮ ಶಕ್ತರ್‍
ಪ್ರತ್ಯಕ್ಷತಾ ತತ್ವದತಿವೀರ ಭಕ್ತರ್‍
ಯಂತ್ರ ಚಕ್ಷುವಿನಿಂ
ಅಣುವನೊಡೆದರ್‍
ಜಗದ
ಕಟ್ಟನೊಡೆದರ್‍:
ಒಡೆದು
ಕಂಡರದ್ಭುತಮಂ,
ಖಂಡ ದರ್ಶನಮಂ:
ವ್ಯೋಮ ಜನ ಭುವಿಗಳೊಳ್
ರವಿ ಶಶಿಗಳಂ ನೊಣೆವ ರಾಹು ಸಮನಾಗಿ
ತಾರೆಗಳ ಮುಕ್ಕುಳಿಪ ತಮದ ರಕ್ಕಸನೆನಿಸಿ
ಸಿಡಿಲಾಗಿ ಸಿಡಿದು ಸೀಳ್ ಮಿಂಚಾಗಿ ಇಳಿದು
ಸುರಿದಗ್ನಿವೃಷ್ಟಿಯಾಗಿ
ಕಡಲನೇ ಕುಡಿದು ನೆಲಮೆಲ್ಲಮನ್ ಒಡೆದು
ಸೃಷ್ಟಿಸರ್ವಸ್ವಮಂ ಬಿಡದೆ ತೊಡೆದು
ಅತಿ ರೌದ್ರದೆಸಕದಿಂ
ಉರಿದು ಮಾಮಸಕದಿಂ
ಪ್ರಲಯ ರುದ್ರಂ ತಾನೆ ಎನಿಸಿ
ಮೆರೆವ
ಪರಮ ಪ್ರಕಾಶಮಂ
ಸೃಷ್ಟಿಯ ವಿನಾಶಮಂ
ಅಣುವಿನೊಳಶಕ್ತಿಯಂ
ಲೋಕ ಮಾರಕಮಂ.

ಅದು ಶಾಂತಿದರ್ಶನಂ,
ಲೋಕತಾರಕ ಶಾಂತಿ;
ಇದು ಕ್ರಾಂತಿ ದರ್ಶನಂ,
ಲೋಕಮಾರಕ ಕ್ರಾಂತಿ.

ವಿಜ್ಞಾನಿಗಳ್ ಧರ್ಮಜ್ಞಾನಿಗಳ್ ತಾವಾಗಿ
ವಿಜ್ಞಾನದ ಸಿಡಿಲ್ ಬಾನವರ ಹೂವಾಗಿ
ಮಾನವರಿಗೊಸಗೆಯಾಗೆ
ಕ್ರಾಂತಿ ‘ಸಂಕ್ರಾಂತಿ’ಯಾಗೆ
ಶುಭವರಳೆ ಕ್ರಾಂತಿಯೊಳಗೆ
ನಿಶ್ಚಯಂ ಕಾಂತಿ ಇಳೆಗೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...