Home / ಕವನ / ಕವಿತೆ / ನೆನಪುಗಳಿವೆ… ಕೊಳ್ಳಿ!

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ,
ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು.
ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ,
‘ಗುಯ್’…ಽಽ ಎಂದು,
ಊರುಕೇರಿ ಆಲಿಸುವಂತೆ,
‘ಗುಯ್’ ಗುಟ್ಟಿಸಿದ್ದ!
ಆಕ್ಷಣ: ಏನೆಲ್ಲ ಮರೆತು,
ಬಾಲ್ಯಕೆ ಜಾರಿದ ಜನ!
ಅರಳಿ ನೆರಳಿಗೆ,
ತೊಟ್ಟಿಲ ಕಟ್ಟಿ,
ಅಳುವಾಕಂದಮ್ಮಗಳ ಹಾಕಿ…
ಕರುಳ ಬಳ್ಳಿಯ ಹಾಡು, ನಿತ್ಯ ತೂಗುತ್ತಿತು!

ಅರಳಿ ಮರದ ಕತೆ, ಆಳೆತ್ತರ ಹಬ್ಬಿ…
ಮರ ಮರದಾ ರಂಬೆ, ಕೊಂಬೆಗೆಲ್ಲ…
ಹದ್ದು, ಕಾಗೆ, ಹಾಳಾಗದ್ದ, ಗುಬ್ಬಿ, ಪಾರಿವಾಳ,
ಗಿಡುಗ, ಗಿಳಿ, ಬೆಳವಗಳೂ ಹಿಂಡು… ಹಿಂಡು!
ನಿತ್ಯ ಚಿಲಿಪಿಲಿಯ ಸುಪ್ರಭಾತ ಮುದದೀ ಕೇಳುತ್ತಿತ್ತು
ಪಡ್ಡೆ ಹುಡುಗರಿಲ್ಲಿ ಗೋಲಿ, ಗೆಜ್ಜುಗವಾಡಿ,
ನೆರಳ ಆಶ್ರಯಿಸಿ ಬಂದ್ವರಿಲ್ಲಿ…
ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆಯಾಟವಿಲ್ಲಿ!
ಊರುಕೇರಿ ಜಗಳ ಬಗೆಹರಿದು,
ಸಾಕ್ಷಿ ಮರವಾಗಿ, ವರವಾಗಿ, ಹಣ್ಣು, ಕಾಯಿ, ತೂಗುತ್ತಿತ್ತು!
ಆಲೆ ಹಣ್ಣಿನಾ ರುಚಿಯು ಬಲು ನೆನೆದರೇನುಂಟು?
ಸಿಹಿ ಸಿಹಿ ನೆನಪುಗಳಿವೆ ಈಗೋಕೊಳ್ಳಿ…
ತಲೆ ತಲೆ ಮಾರಿನ, ಲೆಕ್ಕವೀಗ ಇತಿಹಾಸ!

ಸುತ್ತಳ್ಳೀ ಜನ, ಅರಳಿ ಮರವನ್ನೇ…
ತಲೆದಿಂಬು ಮಾಡಿ
ಗುಡಿ, ಚರ್ಚು, ಮಸೀದಿ ಮನೆ, ಮಠಗಳ ಬಿಟ್ಟು,
ಒಟ್ಟಿಗೆ ಕುಂತು… ಹೊಟ್ಟೆ ತುಂಬಾ… ಮಂಡಾಳುಕಾರ,
ಒಬ್ಬಟ್ಟು, ಮಿರ್ಚಿಭಜೆ, ಕೆನೆಮಸ್ರು, ಖಾರದ ಹಿಂಡಿ,
ಅಕ್ಕಿಬಾನ, ಹುಣೆಸೆತೊಕ್ಕು, ಕೆತ್ತು ತಿಂದು…
ದುಂಡಗೆ ಮಾತಿನಾಮಂಟಪ ಕಟ್ಟಿ,
ಕುಣಿಕುಣಿದಾ ದೀನವೀಗಾ, ಗತ ವೈಭವವಿಲ್ಲಿ!!

ಎಲ್ಲಿ ಹೋದವೋ… ಆ ದಿನಗಳೂ?!
ಬಟ್ಟು, ದಮ್ಮಿಡಿ, ಆಣೆ, ಅರ್ಧಾಣೆ…
ಇನ್ನೆಲ್ಲಿ ಹುಡುಕಲಿನ್ನಾ…ಽಽ ಸೇರು, ಅಚ್ಫೇರು, ಗಿದ್ನಾ, ಪಾವುಗಳನ್ನಾ…
‘ಅಂಥಾ ಮುತ್ತಿನಂಥಾ ಜನಗಳನ್ನಾಽಽ…??’
ಈಗ ಪೆರ್‍ಲಾಜ್ಜನಿಲ್ಲ!… ಮರವಿಲ್ಲ!
ವರವಾಗಿ, ನೆನಪುಗಳಿವೆ ಕೊಳ್ಳಿ…!!
ಹಳ್ಳಿಯೆಂದರೆ: ಕೊಳ್ಳಿ! ಕಳ್ಳಿಯಂಗೆ ಸಿಕ್ಕಿದಂಗೆಲ್ಲ ಹಬ್ಬಿದಾ ಮಳ್ಳಿ!
ಪ್ರಗತಿಯ ಹೆಸರಲಿ:
ಹಸಿರು ಕಡಿದು, ಉಸಿರು ತಡೆದು,
ಬರ ಹಡೆದು, ಸರಣಿ ಸ್ಫೋಟಾ, ಏಡ್ಸ್, ಹಾರ್ಟು, ಸಕ್ಕರೆ, ಬೀಪಿ,-
ಒತ್ತಡಕ್ಕೆ, ಪೀಪಿ ಹರಿದಾಪಾಪಿಗಳಿಲ್ಲಿ.
ಐಟಿ; ಬೀಟಿ, ಆಧುನಿಕರಣದ ಬೇಟೆಗೆ,
‘ಕೊಳ್ಳು ಬಾಕು’ ಸಂಸ್ಕೃತಿಗೆ-
ಗರಗರನೇ, ಗಿರಗಿರನೇ… ತಿರಗುವಾ ‘ಗಿರಗಿಟ್ಟೆ’ಯಾಗಿ,
ಮನೆ ಮನೆಯೆಲ್ಲ…
ಜನಾಮನವೆಲ್ಲ…
ಹಳ್ಳಿ ಹಳ್ಳಿಯೆಲ್ಲ ಖಾಲಿ ಖಾಲಿ…
ಎಲ್ಲೆಲ್ಲೋ… ಆತಂಕದಾ ಸೀಮೆ ಜಾಲಿ…!!
ಊರು ಹಬ್ಬಕೆ- ‘ಮಾರಿ ಹಬ್ಬ’ವ ಮಾಡಿ,
ನಾರಿಯರೆಲ್ಲ… ನಾರು ಮಡೀಲೆ, ಹಸಿರು ತೋರಣ, ಸಿಂಗಾರ ಮಾಡಿ,
ಘಮ ಘಮ ‘ಸಳ್ಳೆಪಲ್ಲೆ’, ಅಕ್ಕಿದಾನ ಉಂಡು-
‘ದಢಮ್ಮ ಧಡಿಕೆ’ಯಾಡಿದ ನೆನಪೀಗ, ಹಾಳು ಹಂಪಿಯಾಗಿದೆ!
ಈ ಊರು ಕೇರಿ,
ಈ ಹಾದಿ ಬೀದಿ,
ಈ ಗಂಡು ಹೆಣ್ಣು,
ಒಟ್ಟಿಗಿದ್ದ ಆ ನಂಟೂ…
ಈಗೆಲ್ಲಿದೆ ಅಂಥಾ ಅಂಟು?!
ಹಾಲಿನಂಥಾ ನಮ್ಮೂರ, ಬೆಳದಿಂಗಳ ಬೆಳಕಲಿ,
ಇರುಳೆಲ್ಲ ‘ಬಗಾಟುಬಗ್ರಿ’ ‘ಪರಂಗಿ ಪೀಪಿ’ ಆಡಿದಾ ಅಂಗಳದಿ,
ಕಾಂಕ್ರಿಟ್ ಗೋಡೆಗಳೆದ್ದು,
ಮೈಯೆಲ್ಲ ತಂತಿ ಬೇಲಿಯಂದದಿ-
ಮೋಬೆಲ್ ಸರಪಳಿಗಳು!!
ಬೋರು ಬೋರಾಡಿ ಅತ್ತರೂ…
ಹೆಣಯೆತ್ತಲು ನಾಲ್ಕು ಜನರಿಲ್ಲ!
ಕೂಗಿ ಬೊಬ್ಬಿಟ್ಟರೂ ಕದ ತೆಗೆದು ‘ಸೊಪ್ಪೆನ್ನು’ವವರಿಲ್ಲ!
ಮನೆ ಮಂದಿಯೆಲ್ಲ, ಮಾಯಾ ಪೆಟ್ಟಿಗೆ ಮುಂದೇಮುಪ್ಪು!!
ಬದುಕೆಲ್ಲ ಮೂರು ಕಣ್ಣಿನಾ ಚಿಪ್ಪು
ಯಾರು ಅಳಲಿಲ್ಲ…?
ಯಾರು ಕೇಳರಿಲ್ಲಿ?!
ಯಾರಿಗೆ ಯಾರು?
ಮೂರು ದಿನದ ಸಂಸಾರ…
ಯಾವ ಪುರುಷಾರ್ಥಕೆ ಈ ಜನರೋ??
ಮನ ಕಲಕಿದೆ!
ದಿನವೆಲ್ಲ…!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...