Home / ಕವನ / ಕವಿತೆ / ನೆನಪುಗಳಿವೆ… ಕೊಳ್ಳಿ!

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ,
ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು.
ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ,
‘ಗುಯ್’…ಽಽ ಎಂದು,
ಊರುಕೇರಿ ಆಲಿಸುವಂತೆ,
‘ಗುಯ್’ ಗುಟ್ಟಿಸಿದ್ದ!
ಆಕ್ಷಣ: ಏನೆಲ್ಲ ಮರೆತು,
ಬಾಲ್ಯಕೆ ಜಾರಿದ ಜನ!
ಅರಳಿ ನೆರಳಿಗೆ,
ತೊಟ್ಟಿಲ ಕಟ್ಟಿ,
ಅಳುವಾಕಂದಮ್ಮಗಳ ಹಾಕಿ…
ಕರುಳ ಬಳ್ಳಿಯ ಹಾಡು, ನಿತ್ಯ ತೂಗುತ್ತಿತು!

ಅರಳಿ ಮರದ ಕತೆ, ಆಳೆತ್ತರ ಹಬ್ಬಿ…
ಮರ ಮರದಾ ರಂಬೆ, ಕೊಂಬೆಗೆಲ್ಲ…
ಹದ್ದು, ಕಾಗೆ, ಹಾಳಾಗದ್ದ, ಗುಬ್ಬಿ, ಪಾರಿವಾಳ,
ಗಿಡುಗ, ಗಿಳಿ, ಬೆಳವಗಳೂ ಹಿಂಡು… ಹಿಂಡು!
ನಿತ್ಯ ಚಿಲಿಪಿಲಿಯ ಸುಪ್ರಭಾತ ಮುದದೀ ಕೇಳುತ್ತಿತ್ತು
ಪಡ್ಡೆ ಹುಡುಗರಿಲ್ಲಿ ಗೋಲಿ, ಗೆಜ್ಜುಗವಾಡಿ,
ನೆರಳ ಆಶ್ರಯಿಸಿ ಬಂದ್ವರಿಲ್ಲಿ…
ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆಯಾಟವಿಲ್ಲಿ!
ಊರುಕೇರಿ ಜಗಳ ಬಗೆಹರಿದು,
ಸಾಕ್ಷಿ ಮರವಾಗಿ, ವರವಾಗಿ, ಹಣ್ಣು, ಕಾಯಿ, ತೂಗುತ್ತಿತ್ತು!
ಆಲೆ ಹಣ್ಣಿನಾ ರುಚಿಯು ಬಲು ನೆನೆದರೇನುಂಟು?
ಸಿಹಿ ಸಿಹಿ ನೆನಪುಗಳಿವೆ ಈಗೋಕೊಳ್ಳಿ…
ತಲೆ ತಲೆ ಮಾರಿನ, ಲೆಕ್ಕವೀಗ ಇತಿಹಾಸ!

ಸುತ್ತಳ್ಳೀ ಜನ, ಅರಳಿ ಮರವನ್ನೇ…
ತಲೆದಿಂಬು ಮಾಡಿ
ಗುಡಿ, ಚರ್ಚು, ಮಸೀದಿ ಮನೆ, ಮಠಗಳ ಬಿಟ್ಟು,
ಒಟ್ಟಿಗೆ ಕುಂತು… ಹೊಟ್ಟೆ ತುಂಬಾ… ಮಂಡಾಳುಕಾರ,
ಒಬ್ಬಟ್ಟು, ಮಿರ್ಚಿಭಜೆ, ಕೆನೆಮಸ್ರು, ಖಾರದ ಹಿಂಡಿ,
ಅಕ್ಕಿಬಾನ, ಹುಣೆಸೆತೊಕ್ಕು, ಕೆತ್ತು ತಿಂದು…
ದುಂಡಗೆ ಮಾತಿನಾಮಂಟಪ ಕಟ್ಟಿ,
ಕುಣಿಕುಣಿದಾ ದೀನವೀಗಾ, ಗತ ವೈಭವವಿಲ್ಲಿ!!

ಎಲ್ಲಿ ಹೋದವೋ… ಆ ದಿನಗಳೂ?!
ಬಟ್ಟು, ದಮ್ಮಿಡಿ, ಆಣೆ, ಅರ್ಧಾಣೆ…
ಇನ್ನೆಲ್ಲಿ ಹುಡುಕಲಿನ್ನಾ…ಽಽ ಸೇರು, ಅಚ್ಫೇರು, ಗಿದ್ನಾ, ಪಾವುಗಳನ್ನಾ…
‘ಅಂಥಾ ಮುತ್ತಿನಂಥಾ ಜನಗಳನ್ನಾಽಽ…??’
ಈಗ ಪೆರ್‍ಲಾಜ್ಜನಿಲ್ಲ!… ಮರವಿಲ್ಲ!
ವರವಾಗಿ, ನೆನಪುಗಳಿವೆ ಕೊಳ್ಳಿ…!!
ಹಳ್ಳಿಯೆಂದರೆ: ಕೊಳ್ಳಿ! ಕಳ್ಳಿಯಂಗೆ ಸಿಕ್ಕಿದಂಗೆಲ್ಲ ಹಬ್ಬಿದಾ ಮಳ್ಳಿ!
ಪ್ರಗತಿಯ ಹೆಸರಲಿ:
ಹಸಿರು ಕಡಿದು, ಉಸಿರು ತಡೆದು,
ಬರ ಹಡೆದು, ಸರಣಿ ಸ್ಫೋಟಾ, ಏಡ್ಸ್, ಹಾರ್ಟು, ಸಕ್ಕರೆ, ಬೀಪಿ,-
ಒತ್ತಡಕ್ಕೆ, ಪೀಪಿ ಹರಿದಾಪಾಪಿಗಳಿಲ್ಲಿ.
ಐಟಿ; ಬೀಟಿ, ಆಧುನಿಕರಣದ ಬೇಟೆಗೆ,
‘ಕೊಳ್ಳು ಬಾಕು’ ಸಂಸ್ಕೃತಿಗೆ-
ಗರಗರನೇ, ಗಿರಗಿರನೇ… ತಿರಗುವಾ ‘ಗಿರಗಿಟ್ಟೆ’ಯಾಗಿ,
ಮನೆ ಮನೆಯೆಲ್ಲ…
ಜನಾಮನವೆಲ್ಲ…
ಹಳ್ಳಿ ಹಳ್ಳಿಯೆಲ್ಲ ಖಾಲಿ ಖಾಲಿ…
ಎಲ್ಲೆಲ್ಲೋ… ಆತಂಕದಾ ಸೀಮೆ ಜಾಲಿ…!!
ಊರು ಹಬ್ಬಕೆ- ‘ಮಾರಿ ಹಬ್ಬ’ವ ಮಾಡಿ,
ನಾರಿಯರೆಲ್ಲ… ನಾರು ಮಡೀಲೆ, ಹಸಿರು ತೋರಣ, ಸಿಂಗಾರ ಮಾಡಿ,
ಘಮ ಘಮ ‘ಸಳ್ಳೆಪಲ್ಲೆ’, ಅಕ್ಕಿದಾನ ಉಂಡು-
‘ದಢಮ್ಮ ಧಡಿಕೆ’ಯಾಡಿದ ನೆನಪೀಗ, ಹಾಳು ಹಂಪಿಯಾಗಿದೆ!
ಈ ಊರು ಕೇರಿ,
ಈ ಹಾದಿ ಬೀದಿ,
ಈ ಗಂಡು ಹೆಣ್ಣು,
ಒಟ್ಟಿಗಿದ್ದ ಆ ನಂಟೂ…
ಈಗೆಲ್ಲಿದೆ ಅಂಥಾ ಅಂಟು?!
ಹಾಲಿನಂಥಾ ನಮ್ಮೂರ, ಬೆಳದಿಂಗಳ ಬೆಳಕಲಿ,
ಇರುಳೆಲ್ಲ ‘ಬಗಾಟುಬಗ್ರಿ’ ‘ಪರಂಗಿ ಪೀಪಿ’ ಆಡಿದಾ ಅಂಗಳದಿ,
ಕಾಂಕ್ರಿಟ್ ಗೋಡೆಗಳೆದ್ದು,
ಮೈಯೆಲ್ಲ ತಂತಿ ಬೇಲಿಯಂದದಿ-
ಮೋಬೆಲ್ ಸರಪಳಿಗಳು!!
ಬೋರು ಬೋರಾಡಿ ಅತ್ತರೂ…
ಹೆಣಯೆತ್ತಲು ನಾಲ್ಕು ಜನರಿಲ್ಲ!
ಕೂಗಿ ಬೊಬ್ಬಿಟ್ಟರೂ ಕದ ತೆಗೆದು ‘ಸೊಪ್ಪೆನ್ನು’ವವರಿಲ್ಲ!
ಮನೆ ಮಂದಿಯೆಲ್ಲ, ಮಾಯಾ ಪೆಟ್ಟಿಗೆ ಮುಂದೇಮುಪ್ಪು!!
ಬದುಕೆಲ್ಲ ಮೂರು ಕಣ್ಣಿನಾ ಚಿಪ್ಪು
ಯಾರು ಅಳಲಿಲ್ಲ…?
ಯಾರು ಕೇಳರಿಲ್ಲಿ?!
ಯಾರಿಗೆ ಯಾರು?
ಮೂರು ದಿನದ ಸಂಸಾರ…
ಯಾವ ಪುರುಷಾರ್ಥಕೆ ಈ ಜನರೋ??
ಮನ ಕಲಕಿದೆ!
ದಿನವೆಲ್ಲ…!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...