Home / ಲೇಖನ / ಇತರೆ / ಹಸಿವು

ಹಸಿವು

face-867521__180ಪ್ರಿಯ ಸಖಿ,

ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸುತ್ತದೆ. ಹೌದು ಅವರು ಏನನ್ನೂ ಸೇವಿಸದೇ ಹನ್ನೆರಡು ಗಂಟೆಗಳೇ ಕಳೆದಿವೆ. ಆದರೆ ಹಸಿವು ಎಂದು ಬಾಯಿಬಿಟ್ಟು ಹೇಳುವುದಾದರೂ ಹೇಗೆ? ಸತ್ತವನು ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಹತ್ತಿರದ ಸಂಬಂಧಿ.

ಆ ಸಮಯದಲ್ಲಿ ಕಿಚ್ಚಿನಂತೆ ಸುಡುತ್ತಿರುವ ಹಸಿವನ್ನು ಬೈಯ್ದುಕೊಳ್ಳುವವರೇ ಹೆಚ್ಚು. ಇಷ್ಟೆಯೇ ಸಂಬಂಧಗಳನ್ನು ಕಳೆದುಕೊಂಡಾಗಿನ ನೋವಿನ ತೀವ್ರತೆ ಅವನನ್ನು ಮಣ್ಣು ಮಾಡಿ ಬಂದೊಡನೆ ಹಸಿವು ಕಾಡಲು ಪ್ರಾರಂಭಿಸಿಬಿಡಬೇಕೆ? ಹಸಿವಿನ ಮುಂದೆ ನೋವು ಎರಡನೇ ಸ್ಥಾನಕ್ಕೆ ಹೋಯಿತೇ? ಹಾಗಿದ್ದರೆ ಇಲ್ಲಿ ಎಲ್ಲಕ್ಕಿಂತಾ ಮುಖ್ಯವಾದದ್ದು ಹಸಿವು ಮಾತ್ರವೇ? ಬೇರೆಲ್ಲದ್ದಕ್ಕೂ ಇಲ್ಲಿ ಅರ್ಥವೇ ಇಲ್ಲವೇ? ಬದುಕಲು ತಿನ್ನುವುದು, ತಿನ್ನಲು ಬದುಕುವುದು, ಇವೆರಡರ ನಡುವಿನ ವ್ಯತ್ಯಾಸದ ಗೆರೆ ಪ್ರಾರಂಭವಾಗುವುದು ಎಲ್ಲಿಂದ? ಎಂಬುದು ಮನದ ಪ್ರಶ್ನೆಗಳು. ನೋವಿದೆಯೆಂದು ಎಷ್ಟು ದಿನ ಉಪವಾಸವಿರಲು ಸಾಧ್ಯ? ನೋವಿನ ತೀವ್ರತೆ ಹಸಿವಿನ ತೀವ್ರತೆಯನ್ನು ಭಂಗಿಸಲು ಸಾಧ್ಯವೇ? ಎಂಬುದು ಬುದ್ಧಿಯ ತರ್ಕ.

ಸಖಿ, ನಾವು ಮರೆತಿದ್ದೇವೆ. ಹಸಿವು ದೇಹಕ್ಕೆ ಸಂಬಂಧಿಸಿದ್ದು, ನೋವಿದೆಯೆಂದು ಏನೂ ತಿನ್ನದಿರಲಾಗುವುದಿಲ್ಲ ಎಂಬ ವಿವೇಚನೆ ಬುದ್ಧಿಗೆ ಸಂಬಂಧಿಸಿದ್ದು. ದೇಹ, ಬುದ್ಧಿ, ಮನಸ್ಸು, ಮೂರೂ ಬೇರೆ ಬೇರೆಯಾದದ್ದೆಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹಾಗೇ ದೇಹದ ಹಸಿವಿಗೂ ಬುದ್ಧಿ, ಮನಸ್ಸುಗಳಿಗೂ ನೇರ ಸಂಬಂಧವಿಲ್ಲದಿದ್ದರೂ ನಾವು ಮೂರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತೇವೆ! ಬುದ್ಧಿಯ ಹಸಿವು, ಮನಸ್ಸಿನ ಹಸಿವುಗಳು ಇದ್ದರೂ  ಅದಕ್ಕೆ ದೇಹದ ಹಸಿವಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ನಾವು ಕೊಡುವುದಿಲ್ಲ. ಏಕೆಂದರೆ ದೇಹದ ಹಸಿವು ಜೀವಕ್ಕೆ ಮೂಲವಾದುದು ಅದನ್ನು ಹಿಂಗಿಸಲೇಬೇಕು. ಅದು ಅನಿವಾರ್ಯ. ಆದರೆ ಬುದ್ಧಿಯ ಹಸಿವು; ಮನಸ್ಸಿನ ಹಸಿವುಗಳನ್ನು ಹಿಂಗಿಸಲೇಬೇಕಾದ ಅನಿವಾರ್ಯತೆ ಇಲ್ಲವೆಂದೇ ಅದು ಹಿಂದಕ್ಕೆ ತಳ್ಳಲ್ಪಟ್ಟಿದೆ.

ಬುದ್ಧಿಯ ಹಸಿವು ಇಂಗಿಸಲು ವಿಚಾರಗಳ, ಚಿಂತನಗಳ ಅವಶ್ಯಕತೆ ಇರುವಂತೆ ಮನಸ್ಸಿನ ಹಸಿವು ಇಂಗಿಸಲು ಪ್ರೀತಿ, ಅಕ್ಕರೆ, ಅಭಿಮಾನ, ಸ್ನೇಹ ಮುಂತಾದ ಭಾವನೆಗಳ ಅವಶ್ಯಕತೆ ಇದೆ. ಆದರೆ ದೇಹದ ಹಸಿವನ್ನು ಪೂರೈಸುವುದೇ ಮುಖ್ಯವಾಗಿ ಮಿಕ್ಕ ಹಸಿವು ಗೌಣವಾಗುತ್ತದೆ.

ಆದರೆ ಬರಿಯ ದೇಹದ ಹಸಿವನ್ನಷ್ಟೇ ಹಿಂಗಿಸಿ ಇದೇ ಬದುಕೆಂದುಕೊಂಡು ಆಯುಷ್ಯವನ್ನು ಕಳೆದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವೇನಿದೆ? ಬುದ್ಧಿಯ ಹಸಿವೂ
ಮನಸ್ಸಿನ ಹಸಿವೂ ನಮ್ಮನ್ನು ಸುಡಬೇಕು. ಅದನ್ನು ಹಿಂಗಿಸಿಕೊಳ್ಳಲು ನಾವೂ ಪ್ರಯತ್ನಿಸಬೇಕು. ಆಗ ಬದುಕು ಸಾರ್ಥಕ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...