Home / ಕವನ / ಕವಿತೆ / ತೇರು ಬಂತು, ದಾರಿ

ತೇರು ಬಂತು, ದಾರಿ


ಗಾಲಿ ಉರುಳಿದಂತೆ-ಕಾಡಿನ
ಗಾಳಿ ಹೊರಳಿದಂತೆ-
ಬಾನ ದೇಗುಲದ
ಬೆಳ್ಳಿ ಗೋಪುರದ
ಘಂಟೆ ಮೊಳಗಿದಂತೆ,
ಹಾಲು ಕಂಚಿನ
ಹೊನ್ನ ಮಿಂಚಿನ
ಘಂಟೆ ಮೊಳಗಿದಂತೆ,
ಊರ ದಾರಿಯಲಿ
ಹೂವ ತೇರಿನಲಿ
ಕೃಷ್ಣ ಬರುವನಂತೆ!


ಎತ್ತಿ ನೋಡು ಕಣ್ಣ, ಬಾನಿಗೆ
ಹತ್ತಿ ಹೊಳೆವ ಬಣ್ಣ!
ಬೆಳದ ಭಕ್ತಿಯೇ ಊರ ದೇವರಿಗೆ
ತೇರು ಆಯಿತಣ್ಣ!
ಗುಡಿಯ ಮಟ್ಟದ
ಗುಡುಗು ಹುಟ್ಟುವ
ನಡೆದು ಬರುವ ಬೆಟ್ಟ!
ಗಿರಿಯನೆತ್ತಿದ
ಕೊಳಲ ಬಿತ್ತಿದ
ಕೃಷ್ಣ ಬಂದುಬಿಟ್ಟ,
ಚೆಲುವ ಬಂದುಬಿಟ್ಟ!


ಗೋಪಿ ನೀನೆ ಧನ್ಯೆ! – ಕೃಷ್ಣ
ನಿನ್ನ ಕಂದನೇನೆ?
ಇಲ್ಲಿ ನೋಡು ತಾನೇ ತನ್ನ
ತೇರನೇರಿದಾನೆ!
ಕೊಳಲ ಬಾರಿಸದೆ
ಜಗವ ತೋರಿಸದೆ
ಹಿಗ್ಗಿ ಬರುತಿದಾನೆ.
ಚರಣ ಚಂದ್ರಿಕೆಗೆ
ಜೀವ ಹಿಗ್ಗುತಿದೆ
ಕೃಷ್ಣ ಬರುತಿದಾನೆ-
ತೇರಮೇಲೆ ತಾನೆ.


ತೇರು ಬಂತು ದಾರಿ-ದಾರಿ!
ಹಣ್ಣು ದವನ ಬೀರಿ!
ಬೀದಿ ತಿರುಗಿನಲಿ
ಜನದ ಕರಗಿನಲಿ
ತೇರು ಬಂತು ದಾರಿ!
ತಡೆದು ಗುಡುಗಿ ಬಹ
ದೊಡ್ಡ ತೇರು, ಅಹ!
ಬಿಡಿರಿ ಬಿಡಿರಿ, ದಾರಿ!
ಮುತ್ತ ಮೆಟ್ಟಿರುವ
ಮಕುಟವಿಟ್ಟಿರುವ
ಕೃಷ್ಣ ಬಂದ, ದಾರಿ!


ಸೆರಗ ಸೆಳೆದರಿಯ, ಬೆಣ್ಣೆ ಕದ್ದರಿಯ;
ಚೆಲುವ ಬಂದ, ದಾರಿ!
ಹಣೆಯ ಕತ್ತುರಿಯ, ತಿಲಕದಚ್ಚರಿಯ
ಕಂದ ಬಂದ, ದಾರಿ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...