Home / ಕವನ / ಕವಿತೆ / ನರ್ತಕಿ ಬಂದಳು

ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ
ಠಮ ಢಮ ತಾಳಕೆ ಕುಣಿಯುತ್ತ
ಪಾತರಗಿತ್ತಿಯ ಆ ಕುಣಿತ.
ಪಾರ್ಥ ಸುಭದ್ರೆಯ ರಾಧಾಕೃಷ್ಣರ-
ನೊಬ್ಬಳೆ ತಾನೆಂದೆಣಿಸುತ್ತ
ರಂಗಸ್ಥಳದಲಿ ತಿರುಗುತ್ತ.

ತುಟಿಯಿಂದುರುಳುವ ಹಾಡಿನ ತನಿರಸ
ಮೌಕ್ತಿಕ ಮಣಿಯಂತುರುಳುವುದು;
ತಾಳದ ಓಜೆಗೆ ಜಾರುವುದು!
ಕತ್ತಲೆ ನಡುವಣ ಚಂದ್ರನ ಬಿಂಬವೊ
ಕೆದರಿತ ಹೆರಳದು ಇಕ್ಕೆಡೆಯು
ಸುಂದರ ಮುಖವೊ ಮಿನುಗೆಲೆಯು.

ಕಣ್ಣಾಲಿಗಳನು ಹೊರಳಿಸಿ ಉರುಳಿಸಿ
ದುಂಡನೆ ರುಂಡವನಲುಗಾಡಿ;
ಕಣ್ಣನು ಮೂಗಿನ ಮೇಲಿರಿಸಿ
ಕುಣುಕುಣು ಮೊಣಕಾಲಾಟದಿ ನೋಟದಿ
ಕೊಂಕಿಸಿ ನಡುವನು ಆ ಮಳ್ಳಿ
ಚಂಚಲ ಮಿಂಚಿನ ಬಾನ್‌ಬಳ್ಳಿ!

ಫಾರಸಿ ಹಿಂದೀ ವಂಗೀಯ ಕಲೆ
ಒಂದಾಯಿತು ಇಂದೀ ಮೇಳ!
ಬೃಂದಾವನದ ಆ ಲೀಲಾ!
ಬಂದಳು ನರ್ತಕಿ ಕೈಗಳ ಬೀಸುತ
ಕೆಳಮೇಲಾಂಗಗಳಾಡಿಸುತ
ಮೆಟ್ಟುತ ಬೆಟ್ಟಲಿ ಆ ಕುಣಿತ.

ಓಹೋ ಓಹೋ ಕನ್ನಡ ಗಾನ
‘ಕಥಕಳಿ’ಯಾಟದ ಬಯಲಾಟ
ಭರತನ ನಾಟ್ಯದ ಮನನೋಟ.
ಲಾಸ್ಯಾನರ್ತನ ನಟಕೇಸರಿ ಮನ
ಜುಂ ಝುಂ ಛಲ್ ಛಲ್ ಈ ಓಜ,
ನರ್ತನ ತೋರಿದ ನಟರಾಜ.

ಹೊರಳುವ ಅಂಗಗಳಾಟವ ನೋಡಿರೊ
ಬೆರಳನು ತೋರವ ತಿರುಳನ್ನು
ಕೊಂಕಿಸಿ ಕಾಲಿನ ನಿಲುವನ್ನು!
ದುಂಡನೆ ತಲೆಯನಲುಗಿಸಿ ತೋರುವ
ಮನ್ಮಥ ಕರೆಯೊ ಅದು ಕೇಳೊ!
ಚಕ ಚಕ ಎದೆಯ ಗೆಲುನೋಡೊ.

ಬಗ್ಗಿದಳೆದ್ದಳು ಹಾರಿದಳೋಡಿದ-
ಳೆಂತೀ ಆಟದ ಈ ಬಲ್ಮೆ
ಕುಲುಕಿತ ಅಂಗಗಳೀ ನಲ್ಮೆ.
ಊರ್ವಶಿ ರಂಭೆಯರಾದಿನದಾಟವ
ತೋರುತ ನರ್ತಕಿ ಬಂದಳದೊ,
ಕುಡಿನೋಟಾಡಿಸಿ ಕುಣಿವಳದೊ!

ಗಿರಿಗಿಟ ತಿರುಗಿದ ತೆರದಲಿ ತಿರುಗಿತು,
ಧಕಥಕ ಧೀಂಕಿಟ ಹಾರಿದಳು
ಗಾಳಿಯ ನರ್ತನ ತೋರಿದಳು.
ವಾನರ ಚೇಷ್ಟಾ ಗೋಷ್ಠಿಯಲಿರಿತಳು
ಹಿಂದೂ ಮುಂದೂ ಜೋಲಾಡಿ
ತನಗೇ ತಾನೇ ತೂಗಾಡಿ.

ಸೂರ್ಯನ ಕಾಂತಿಯ ನೋಡುತ ಭ್ರಾಂತಿಯಿಂ
ಥೈ ಥೈ ಹಾರಿತು-ಆ ರಭಸ
ಲೇ ಲೇ ತಟ್ಟುವ ಪದನ್ಯಾಸ!
ಢಮರುಗ ಭಾರಿಸಿ ಲೋಕವ ತಿರುಗಿಸಿ
ನರ್ತನ ತೋರಿದ ಪರಮೇಶ;
ಬಂದಳು ನರ್ತಕಿ-ಆ ವೇಷ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...