ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರೆ ಅವನಿಗೆ ಏನೋ ಒಂದು ಸಂತೋಷ.
ಒಂದು ರಾತ್ರಿ ಅವನಿಗೆ ಹಿಟ್ಟಿನ ಮಡಿಕೆಯನ್ನು ನೋಡಿ ಹಾಗೆಯೇ ಒಂದು ಯೋಚನೆ ಬಂತು; “ಈ ಮಡಕೆಯೇನೋ ಹಿಟ್ಟನಿಂದ ತುಂಬಿತು. ಏನಾದರೂ ದುರ್ಭಿಕ್ಷ ಬಂದರೆ ಇದಿಷ್ಟು ಹಿಟ್ಟಿಗೇ ಹೊನ್ನು ಸಿಕ್ಕೀತು. ಆ ಹಣನನ್ನು ಕೊಟ್ಟು ಎರಡು ಆಡುಗಳನ್ನು ಕೊಂಡುಕೊಳ್ಳುವುದು. ಅವು ಆರು ತಿಂಗಳಿಗೆ ಮರಿ ಹಾಕುವುದರಿಂದ ಕೆಲವು ವರ್ಷಗಳಲ್ಲಿ ಒಂದು ಹಿಂಡು ಆಗುತ್ತವೆ. ಆ ಹಿಂಡು ಮಾರಿ ಒಂದು ಒಳ್ಳೆಯ ದೊಡ್ಡ ಹಸುವನ್ನು ಕೊಂಡು ಕೊಳ್ಳುವುದು: ಜೊತೆಗೆ ಒಂದು ಎಮ್ಮೆಯನ್ನೂ ಕೊಳ್ಳುವುದು. ಜೊತೆಗೆ ಒಂದು ಹೆಣ್ಣು ಕುದುರೆಯನ್ನು ಕೊಂಡುಕೊಳ್ಳುವುದು. ಇವೆಲ್ಲವೂ ಈದು ಅವೆಲ್ಲವೂ ದೊಡ್ಡವಾದ ಮೇಲೆ ಅವುಗಳನ್ನು ಮಾರಿದರೆ ಬೇಕಾದಷ್ಟು ಚಿನ್ನವು ಸಿಕ್ಕುವುದು. ಆ ಚಿನ್ನದಿಂದ ಒಂದು ತೊಟ್ಟಿಯ ಮನೆಯನ್ನು ಕೊಂಡುಕೊಳ್ಳುವುದು.
ಆಗ ಯಾವನಾದರೂ ಒಬ್ಬನು ಯೋಗ್ಯನು ಬಂದು ರೂಪವತಿಯಾದ ತನ್ನ ಮಗಳನ್ನು ಬಲವಂತ ಮಾಡಿ ನನಗೆ ಕೊಡುವನು. ಅವಳಲ್ಲಿ ಒಂದು ಗಂಡು ಮಗುವಾಗುವುದು. ಆ ಮಗುವಿಗೆ ಸೋಮಶರ್ಮ ಎಂದು ಹೆಸರು ಇಡುವೆನು. ಆ ಮಗವು ಅಂಬೆಗಾಲು ಇಡುವಷ್ಟು ಆಗುವುದು. ಅದು ನಾನು ಒ೦ದು ದಿವಸ ಅಶ್ವ ಶಾಲೆಯ ಬಳಿ ಪುಸ್ತಕವನ್ನು ಹಿಡಿದು ಓದುತ್ತಾ ಕುಳಿತಿದ್ದರೆ ನನ್ನನ್ನು ಕಂಡು ಅಂಬೆಗಾಲಿಕ್ಕಿಕೊಂಡು ನನ್ನ ಕಡೆಗೆ ಬರುವುದು. ಆಗ ನಾನು “ಮಗುವು ಕುದುರೆಯ ಕಾಲಿಗೆ ಸಿಕ್ಕಿದರೆ ಏನು ಗತಿ?” ಎಂದು ಕೋಪಗೊಂಡು, ಮಗುವಿನ ತಾಯನ್ನು ಕೂಗಿ “ಮಗುವನ್ನು ಎತ್ತಿಕೋ” ಎಂದು ಗದುರುವೆನು. ಅವಳು ಏನೋ ಮನೆಗೆಲಸ ಮಾಡುತ್ತಿದ್ದು ನನ್ನ ಮಾತು ಅವಳಿಗೆ ಕೇಳಿಸದೆ ಹೋಗುವುದು. ಆಗ ನಾನು ಎದ್ದು ಹೋಗಿ ಅವಳನ್ನು ಹೀಗೆ ಝಾಡಿಸಿ ಒದೆಯುವೆನು.”
ಹೀಗೆ ಯೋಚನೆ ಮಾಡುತ್ತ ಮಾಡುತ್ತ ಅವನಿಗೆ ಮೈಮರೆತು ಹೋಗಿತ್ತು. ನಿಜವಾಗಿಯೂ ಹೆಂಡತಿಯನ್ನು ಒದೆಯುವವನಂತೆ ಝಾಡಿಸಿ ಒದ್ದೇ ಒದ್ದನು. ಆ ಒದೆತವು ಮಡಿಕೆಗೆ ಬಿತ್ತು ಆ ಮಡಿಕೆಯು ಒಡೆಯಿತು. ಅದರಲ್ಲಿದ್ದ ಹಿಟ್ಟೆಲ್ಲ ಅವನ ಮೇಲೆ ಬಿತ್ತು. ಅದರಿಂದ “ಫಲಿಸಿದ ಕಾರ್ಯದ ಫಲವಂ ಚಿಂತಿಸಿ ಮೊದಲಾಗಿ ಹೇಳಿದೆನು” ಎಂದನು.
ಸುವರ್ಣಸಿದ್ದಿಯು “ನಿಜ ನಿಜ ಇದು ನಿನ್ನ ದೋಷವಲ್ಲ ಸರ್ವರೂ ಲೋಭದಿಂದ ಹಾಗಾಗುವರು- ಕೇಳಲಿಲ್ಲವೆ?
ಫಲವನೆಣಿಸದೆ ಚಪಲ ಮತಿಯಿಂ |
ಕೆಲಸ ಮಾಡಲು ಕೇಡು ತಪ್ಪದು ॥
ಚಂದ್ರ ನರಪನ ನೋಡಿ ಕಲಿಯೈಯ್ಯಾ ॥ ೨೯ ॥
ಚಕ್ರಧರನು “ಅದೆಂತು?” ಎಂದು. ಕೇಳಲು ಅವನು ಹೇಳಿದನು:-
*****
ಚಂದ್ರ ಭೂಪತಿಯ ಕಥೆ ಓದಿ