Home / ಕವನ / ಕವಿತೆ / ಹೊಗೆಯ ಸೊಪ್ಪು

ಹೊಗೆಯ ಸೊಪ್ಪು

ಹೊಗೆಯಸೊಪ್ಪಿನ ಮೇಲೆ ಪದ್ಯವ
ಬರೆವ ನನ್ನನು ಹಳಿಯದೆ
ಸಾವಧಾನದೊಳದರ ಮಹಿಮೆಯ
ಕೇಳಿರಯ್ಯಾ ಮುಳಿಯದೆ!

ಜಗದೊಳೆಷ್ಟೋ ಸೊಪ್ಪು ಸದೆಗಳು
ಬೆಳೆದು ಮಡಿಯುತಲಿವೆ ನಿಜ
ಪೇಳಿರೈ ನಿಮಗಾವುದೀವುದು
ಹೊಗೆಯಸೊಪ್ಪಿನ ಈ ಮಜ!

ಹಳಿವರೆಲ್ಲರ ತೃಪ್ತಿಗೋಸುಗ
ಇದರ ಜನನವನಿಲ್ಲಿಯೆ
ಬಣ್ಣಿಪೆನು ನಾ. ಇದುವು ಜನಿಸಿತು
ಶಿವನ ಸಮ್ಮುಖದಲ್ಲಿಯೆ!

ಒಮ್ಮೆ ಶಿವನಿಗೆ ಗಂಗೆ ತಲೆಯೊಳು
ನೆಲಸಿ ನೆಗಡಿಯು ಹಿಡಿದಿತು
ನಾರದನ ಜೊತೆಯಲ್ಲಿ ಯೋಚಿಸೆ
ಹೊಗೆಯಸೊಪ್ಬಿದು ಜನಿಸಿತು!

ಇದರ ಫಲವನು ಕಂಡ ಶಂಕರ
“ತಿರೆಯೊಳೂ ಇದ ಸೃಷ್ಟಿಸಿ
ಜನರಿಗುಪಕಾರವನು ಗೈವೆನು”
ಎಂದ ಗೌರಿಯ ದೃಷ್ಟಿಸಿ!

ಅಂದಿನಿಂ ಮೊದಲಾಯಿತಹಹಾ
ಹೊಗೆಯ ಸೊಪ್ಪಿನ ಮೋಹವು!
‘ಮೋಹ’ ವೆಂದೆನೆ? ತಪ್ಪು ನುಡಿದೆನು.
ಮೋಹವಲ್ಲವು, ನೇಹವು!

ಕೆಲರು ಸೊಪ್ಪನು ಎಲೆಯ ಜೊತೆಯೊಳು
ಜಗಿದು ಸುಖಿಸುತ ನಲಿದರು!
ಮತ್ತೆ ಕೆಲವರು ಪುಡಿಯ ಮೂಗಿಗೆ
ತುರುಕಿ ಮೂಗೊಳೆ ಉಲಿದರು!

ಇನ್ನು ಕೆಲವರು ಸುರುಳಿಗೈಯ್ಯುತ
ಅದಕೆ ಬೆಂಕೆಯನಿಟ್ಟರು!
ಬಂದ ಹೊಗೆಯನು ಶ್ವಾಸಕೋಶಕೆ
ಕಳುಹಿ ಉಸುರನು ಬಿಟ್ಟರು!

ಇಂತು ವಿಧವಿಧ ರೀತಿಯೊಳು ಜನ
ಹೊಗೆಯಸೊಪ್ಪನು ಬಳಸುತ
ನಲಿಯುತಿರಲದ ಮಾತ ಬಹುಜನ-
ರಿದ್ದರಲ ಹಣ ಗಳಿಸುತ!

ಒಳ್ಳೆ ಸುಣ್ಣದ ತೆಳ್ಳನೆಯ ಲೇ-
ಪವನು ಧರಿಸಿಹ ಚಿಗುರೆಲೆ
ಘಮ್ಮನಡಕೆಯು, ಜೊತೆಗೆ ಸೊಪ್ಪಿರೆ
ತಿರೆಯ ಜೀವನ ಹಗುರೆಲೆ!

ಅಡಕೆಲೆಯ ಜಗಿದಿಂತು ಬಿಡದಲೆ
ಕೆಂಪಗಾಗಿರೆ ತುಟಿಗಳು
ಬೆರಳ ಮಧ್ಯದಿ ರಸವ ಪಿಚ್ಚನೆ
ಉಗುಳ್ವರಹಹಾ ಸುಟಿಗಳು!

ಬೆರಳುಗಳ ನಡುವಿಂದ ಬುಗ್ಗೆಯ
ತೆರದಿ ಝಗ್ಗನೆ ನುಗ್ಗುತ
ಬಗೆಬಗೆಯ ತುಂತುರನು ರಚಿಪುದು
ಅರುಣ ರಸ ನೆರೆ ಹಿಗ್ಗುತ!

ಇಂತು ಜಗಿದರೆ ಹಲ್ಲಹುಳುಕಿಗೆ
ಪರಮ ಔಷಧವೆಂಬರೈ!
ಮದ್ದಿದೀಯದೆ ಹಲ್ಲಕೀಳುವ
ವೈದ್ಯರೆಲ್ಲರು ಹುಂಬರೈ!

ಬೇಸ್ತಿನಾಟದಿ, ಸುತ್ತುಮುತ್ತಿನ
ಗೆಳೆಯರೆಲ್ಲರು ಬಳಿಯಿರೆ
ಕಾಯುತೆನ್ನಿಳಿತವನೆ ಭಯದೊಳು
ಸದ್ದ ಮಾಡೆ ಕುಳಿತಿರೆ,

“ನೈಲ ತೂರಲೊ ತೂರದಿರಲೋ”
ಎಂಬ ಪೇಚೊಳು ನಾನಿರೆ
ಒಂದೆ ಚಿಟಿಕೆಯ ಮೂಗಿಗೇರಿಸೆ
ಹರಿವುದಹ ಮಂಕಿನ ಪೊರೆ!

ಠೀವಿಯೊಳು ಬಲಗಾಲ ತುದಿ ಎಡ-
ಗಾಲ ಮಂಡಿಯೊಳಾಡುತ
ತೂಗುತಿರೆ, ಘೃತ ಸುಣ್ಣ ಬೆರೆಸಿದ
ಮಡ್ಡಿ ನಶ್ಯವ ತೀಡುತ,

ಕುಳಿತು-ಸಗ್ಗದ ಮರಿಗಳಂದದ
ಗುಳಿಗೆ ಕೈಯೊಳು ನಿಂದಿರೆ
ಅದನೆ ನೋಡುತ ಪಡುವ ಸುಖವಿರೆ
ಏಕೆ ನನಗಾ ಇಂದಿರೆ?

ನೇವಿಕಟ್ಟನೊ ಗೋಲ್ಡುಫ್ಲ್ಯಾಕನೊ
ಬಾಯಲಿಡುತಲಿ ಬೆಂಕಿಯ
ಹಚ್ಚಿ ನೋಡಿರಿ! ನನ್ನ ಮಾತೊಳು
ನೀವು ಕಳೆವಿರಿ ಶಂಕೆಯ!

ತನಗೆ ತಾನೇ ಬಾಯಿ ಗೊಣಗುತ-
ಲಿರಲು ಹಾಡಿನ ಗುಂಗನು
ಕಣ್ಣ ತೇಲಿಸಿ, ದಮ್ಮನೊಂದನು
ಎಳೆದು ಬಿಡುತಲಿ ರಿಂಗನು,

ಅದನೆ ದಿಟ್ಟಿಸಿ ಮನದ ಪಾತ್ರೆಗೆ
ಸ್ವಪ್ನಮಧುವನು ತುಂಬಿಸಿ
ನಲಿಯದೀ ಜನ ಬರಿದೆ ಬೈವರು
ಮೂರ್ಖತನವನು ಬಿಂಬಿಸಿ!

ಉಗಿಯ ಬಂಡಿಗೆ ಆವಿಯೆಂತೋ
ಮತ್ತದೆಂತೋ ಸುರೆಯೊಳು
ನಿದ್ದೆಗೊಳ್ಳೆಯ ಕನಸದೆಂತೋ
ಅಂತೆ ಸಿಗರೇಟ್‌ ತಿರೆಯೊಳು!

“ಹೊಗೆಯ ಸೊಪ್ಪಿದು ಕೆಡುಕನೀವುದು”
ಎನುವರೆಲ್ಲರು ಪೆದ್ದರು
ತಿರೆಯೊಳುತ್ತಮ ಸೃಷ್ಟಿಯೆನಿಸಿದ
ನರನ ಕುಟಿಲತೆ ಮರೆವರು!

ನಿದ್ದೆವೆಣ್ಣಿನ ಕನಸ ಸೀರೆಯ
ಅವಳ ನೆರವೊಂದಿಲ್ಲದೆ
ಕಾಣಬಹುದಹ ಹೊಗೆಯಸೊಪ್ಪೊಳು
ಏನು ಮಾಯೆಯಿದಲ್ಲದೆ!

ಅದರಿನೆಲ್ಲರು ನನ್ನ ಮಾತೊಳು
ನಂಬಿ ಸೊಗವನು ಕಾಣಿರಿ
ಪ್ರಾಣಿಗಳು ಸಹ ನಾಚಿಕೊಳುವಂ-
ತಿರುವ ಬೈಗಳ ಮಾಣಿರಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...