ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು. ನಮ್ಮನ್ನು ಕುರಿತು ಅವನು ಯೋಚಿಸುವುದೂ ಇಲ್ಲ. ಹೀಗೆ ಕೇವಲ ಹೆಸರಿಗೆ ಮಾತ್ರ ಸ್ವಾಮಿಯಾಗಿರುವ ಅರಸನಿಂದ ನಮಗೇನು ಪ್ರಯೋಜನ? ದಿನದಿನವೂ ನಮ್ಮನ್ನು ಮನುಷ್ಯರು ಸಾವಿರಾರಾಗಿ ಕೊಲ್ಲುತ್ತಿದ್ದರೂ ಆತನು ಏನಾದರೂ ಮಾಡಿದ್ದಾನೆಯೇ? ಕೇಳಿಲ್ಲವೆ?
ಓದು ಹೇಳದ ಗುರುವು| ಮಂತ್ರ ಬರದರ್ಚಕನು ॥
ರಕ್ಷೆ ನೀಡದ ನೃಪನು| ನಲವು ನುಡಿಯದ ಭಾರ್ಯೆ ॥
ಮುರಿದ ನಾವೆಯ ತೆರದೊಳಿವರ ಬಿಡಬೇಕು ॥೯॥
ಅದರಿಂದ ನಮ್ಮ ಕಷ್ಟ ಸುಖಗಳನ್ನು ನೋಡುವ ರಾಜನೊಬ್ಬನನ್ನು ಮಾಡಿಕೊಳ್ಳೋಣ” ಎಂದು ಚಿಂತಿಸಿ, ನೋಡುವುದಕ್ಕೆ ಚೆನ್ನಾಗಿದ್ದಾನೆಂದು ಗೂಗೆಯನ್ನು ಅರಸಾಗಿ ಆರಸಿಕೊಂಡರು. ಅರಸುತನದ ಅಭಿಷೇಕಕ್ಕಾಗಿ ಬೇಕುಬೇಕಾದ ಪದಾರ್ಥಗಳೆಲ್ಲವೂ ಸಿದ್ಧವಾದುವು. ಸಿಂಹಾಸನವನ್ನು ಹಾಕಿ, ಅದರ ಮೇಲೆ ಹುಲಿಯ ಚರ್ಮವನ್ನು ಹಾಸಿ, ಮಂತ್ರಗಳನ್ನೂ ಹಾಡುಗಳನ್ನೂ ಹೇಳುತ್ತಿರುವ ವೇಳೆಯಲ್ಲಿ ಒಂದು ಕಾಗೆಯು ಎಲ್ಲಿಂದಲೂ ಬಂತು “ಇದೇನು ಪಕ್ಷಿ ಕುಲವೆಲ್ಲ ಇಲ್ಲಿ ಸೇರಿದೆ. ಏನೋ ದೊಡ್ಡ ಉತ್ಸವ ನಡೆಯುತ್ತಿದೆ? ಎಂದುಕೊಂಡಿತು. ಪಕ್ಷಿಗಳೂ ಆ ಕಾಗೆಯನ್ನು ನೋಡಿ “ಪ್ರಾಣಿಗಳಲ್ಲಿ ನರಿಯು ಹೇಗೋ ಹಕ್ಕಿಗಳಲ್ಲಿ ಈ ಕಾಗೆಯು. ಹಾಗೆ ಬುದ್ಧಿವಂತನು. ಇದನ್ನೂ ಕೇಳಬೇಕಾಗಿತ್ತು”? ಎಂದು ಕೊಂಡುವು. ಆ ವೇಳೆಗೆ ಕಾಗೆಯು “ಇದೇನಿದು?” ಎಂದು ಕೇಳಿತು. ಅವು “ನಮಗೆ ರಾಜನಿಲ್ಲ ಅದರಿಂದ ಒಬ್ಬ ರಾಜನನ್ನು ಆರಿಸುತ್ತಿದ್ದೇವೆ. ಈ ಗೂಗೆಯನ್ನು ಅರಸನನ್ನು ಮಾಡಬೇಕೆಂದು ಇದ್ದೇವೆ. ನೀನೇನು ಹೇಳುವೆ?” ಎಂದುವು. ಈ ಕಾಗೆಯು ನಕ್ಕು “ನವಿಲು, ಹಂಸ, ಮೊದಲಾದ ಬೇಕುಬೇಕಾದ ಹಕ್ಕಿಗಳೆಲ್ಲ ಇರುವಾಗ ಈ ಹಗಲು ಕುರುಡನಿಗೆ ಅರಸುತನವೆ? ಈ ಸೊಟ್ಟ ಮೂತಿಗೆ ಸಿಂಹಾಸನವೆ? ಚೆನ್ನಾಯಿತು. ನಾನು ಒಪ್ಪುವುದಿಲ್ಲ. ಕೇಳಿಲ್ಲವೆ?
ಅರಸು ಕೀಳನಾದರೆ ಧರ್ಮ ಮರೆತು ಹೋಹುದು ॥
ಧರಣಿ ಬೆಳೆಯ ಬೆಳೆಯದು| ನರರ ಗೋಳು ಬೆಳೆವುದು ॥೧೦॥
ಅಲ್ಲದೆ ಒಬ್ಬ ರಾಜನಿರುವಾಗ ಇನ್ನೊಬ್ಬ ರಾಜನನ್ನು ಮಾಡುವುದೆಂದರೇನು? ಆಕಾಶಕ್ಕೆ ಒಬ್ಬ ಸೂರ್ಯ ಎನ್ನುವ ಹಾಗೆ ಪ್ರಜೆಗಳಿಗೆ ಒಬ್ಬನೇ ರಾಜ. ಅಲ್ಲದೆ ಗರುಡನು ಸಾಮಾನ್ಯನೇ? ಕೇಳಿಲ್ಲವೆ?
ಮಹಿಮರಾ ಹೆಸರಿನಿಂದಲೆ ಸಿದ್ಧಿಯಹುದು|
ಚಂದ್ರಮನ ಹೆಸರೆತ್ತಿ ಬದುಕಿದುವು ಮೊಲಗಳು ॥೧೧॥
ಆ ಹಕ್ಕಿಗಳು ಅದು ಹೇಗೆ ಎಂದು ಕೇಳಲು ಕಾಗೆಯು ಹೇಳಿತು:-
*****
ಚತುರ್ದಂತನ ಕಥೆ ಓದಿ