Home / ಕಥೆ / ಸಣ್ಣ ಕಥೆ / ಬೆಟ್ಟದ ಒಡೆಯರು

ಬೆಟ್ಟದ ಒಡೆಯರು

ಬೋಳತಲೆ ಚಾಮರಾಜ ಒಡೆಯರರ ತರುವಾಯ ಬೆಟ್ಟದ ಒಡೆಯರೆಂದು ಪ್ರಸಿದ್ಧರಾದ ಒಡೆಯರು ಪಟ್ಟಕ್ಕೆ ಬಂದರು. ಇವರು ಶೂರರಾಗಿದ್ದರು; ಆದರೆ ಮುಂದಾಲೋಚನೆಯಿಲ್ಲದೆ ದುಡುಕುತ್ತಿದ್ದರು. ಮೃದು ಸ್ವಭಾವವಿದ್ದರೂ ನಿದಾನವಿರಲಿಲ್ಲ. ಇವರು ಎರಡು ವರ್ಷಗಳಾಳ್ವಿಕೆಯಲ್ಲಿ ಬೊಕ್ಕಸದಲ್ಲಿದ್ದ ಹಣವೆಲ್ಲವನ್ನೂ ವೆಚ್ಚ ಮಾಡಿಬಿಟ್ಟರು. ಶ್ರೀರಂಗಪಟ್ಟಣಕ್ಕೆ ಸಲ್ಲಬೇಕಾಗಿದ್ದ ಪೊಗದಿಯು, ಹಾಗೆಯೇ ಉಳಿದುಹೋಯಿತು. ಆಗ ಅರಮನೆಯ ಹಿರಿಯರು ಬೆಟ್ಟದ ಒಡೆಯರನ್ನು ಪಟ್ಟದಿಂದ ತಪ್ಪಿಸಿ ರಾಜ ಒಡೆಯರಿಗೆ ಪಟ್ಟವನ್ನು ಕಟ್ಟುವ ಆಲೋಚನೆ ಮಾಡಿದರು. ದುರಾಲೋಚನಾ ಪರರಾದ ರಾಜ ಒಡೆಯರು ಸಾಲ ತೀರುವಂತೆಯು ಹಣ ಬರವಂತೆಯೂ ಮುಖ್ಯಸ್ಥರಿಂದ ಮಾತು ತೆಗೆದುಕೊಂಡು ಪಟ್ಟಕ್ಕೊಪ್ಪಿದರು.

ಬೆಟ್ಟದ ಒಡೆದುರನ್ನು ಕೊಲೆಮಾಡಿಸಬೇಕೆಂದು ಯಾರೂ ಆಲೋಚಿಸಲಿಲ್ಲ. ರಾಜ ಒಡೆಯರಿಗೆ ಪಟ್ಟ ಕಟ್ಟುವ ನಿಶ್ಚಯವು ನಡೆಯುತ್ತಿದ್ದಾಗಲೇ ಬೆಟ್ಟದ ಒಡೆಯರು ಅಲ್ಲಿಗೆ ಬಂದರು. ಅಲ್ಲಿಯ ಪರಿವಾರದವರು ಕೂಡಲೆ ವಿನೀತರಾಗಿ ಆ ನಿಶ್ಚಯವನ್ನು ಅರಿಕೆ ಮಾಡಿ “ದೇಶದ ಸಾಲವನ್ನು ತೀರಿಸಲು ಈ ನಿಶ್ಚಯವು ಅವಶ್ಯವಾಯಿತು. ಇದರಿಂದ ತಾವು ಖಿನ್ನರಾಗಬಾರದು. ತಾವು ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯ ಸಭೆಯಲ್ಲಿ ಮೈಸೂರಿನ ಗೌರವವನ್ನುಳಿಸುತ್ತ ಇರಬಹುದು ; ಅಧವಾ ತಮಗೆ ಸ್ವತಂತ್ರವಾಗಿರಲು ಇಷ್ಟವಾದರೆ ಮೈಸೂರಿನಲ್ಲಿಯೇ ತಾವೂ ಇರಬಹುದು” ಎಂದು ಸೂಚಿಸಿದರು. ಆಗ ಬೆಟ್ಟದ ಒಡೆಯರಿಗೆ ಕೋಪ ಬಂದಿತು. “ನಾವು ಶ್ರೀರಂಗಪಟ್ಟಣದಲ್ಲಿ ಇರುವುದಿಲ್ಲ, ಮೈಸೂರಿನಲ್ಲಿಯೂ ಇರುವುದಿಲ್ಲ. ನಮಗೇನೂ ಬೇಡ” ಎಂದುಬಿಟ್ಟು ಆ ಸ್ಥಳದಿಂದ ಹೊರಟುಹೋದರು.

ಈ ಸಮಾಚಾರವನ್ನು ಕೇಳಿದಕೂಡಲೆ ಕಾರುಗಹಳ್ಳಿಯ ಪಾಳೆಯಗಾರನು ತನಗೆ ಒಳ್ಳೆ ಸಮಯ ಬಂದಿತೆಂದು ನೆನೆದು ಸೈನ್ಯವನ್ನು ನಡೆಸಿಕೊಂಡು ಮೈಸೂರಿನಮೇಲೆ ಅಕಸ್ಮಾತ್ತಾಗಿ ದಂಡೆತ್ತಿ ಬಂದು ಮುತ್ತಿದನು. ಬೆಟ್ಟದ ಒಡೆಯರು ಎಲ್ಲವನ್ನೂ ಬಿಟ್ಟವರಂತೆ ತಿರಸ್ಕಾರಭಾವದಿಂದ ಒಂದೆಡೆಯಲ್ಲಿ ಶತಪಥ ತಿರುಗುತ್ತಿದ್ದರು. ಕೋಟೆಯ ಒಳಗೆ ಗಜಿಬಿಜಿ, ಕೋಟೆಯು ಹೊರಗಡೆ ಶತ್ರುಗಳ ಹಾವಳಿ. ಆದರೂ ಬೆಟ್ಟದ ಒಡೆಯರು ತಟಸ್ಥರಾಗಿದ್ದರನ್ನು ಕಂಡು ಹೆಂಗಸೊಬ್ಬಳು ಹತ್ತಿರ ಹೋಗಿ “ಇದೇನು ಈ ಕಾಲದಲ್ಲಿಯೂ ಒಡೆಯರ ವಂಶದಲ್ಲಿ ಹುಟ್ಟಿದವರು ತಟಸ್ಟರಾಗಿರುವದೇ!” ಎಂದು ಮೂದಲಿಸಿದಳು. ತಕ್ಷಣವೇ ಬೆಟ್ಟದ ಒಡೆಯರು ಒಂದು ಗಂಡು ಕೊಡಲಿಯನ್ನು ಎತ್ತಿಕೊಂಡು ತನ್ನ ಸೈನ್ಯವನ್ನು ಕೂಗಿ ಒಟ್ಟು ಕೂಡಿಸಿ” ಹಿಂದೆ ಬನ್ನಿ ಎಂದು ಕೋಟೆಯ ಬಾಗಿಲ ಕಡೆಗೆ ನುಗ್ಗಿದರು. ಬಾಗಿಲ ಆಗಣಿ ಹಾಕಿತ್ತು. ಬೆಟ್ಟದ ಒಡೆಯರು ತಮ್ಮ ಕೊಡಲಿಯಿಂದ ಒಂದೇ ಏಟು ಹೊಡೆದರು. ಬಾಗಿಲು ತೆರೆಯಿತು. ತರುವಾಯ ಒಡೆಯರು ತಮ್ಮ ಭಟರೊಡನೆ ಶತ್ರುಗಳ ಮಧ್ಯೆ ನುಗ್ಗಿದರು, ವೀರಾವೇಶದಿಂದ ಯುದ್ದ ಮಾಡಿ ಅವರನ್ನು ಸೋಲಿಸಿ ಅಟ್ಟಿ ಬಿಟ್ಟರು. ಈ ರೀತಿಯಲ್ಲಿ ಮುತ್ತಲು ಬಂದ ಶತ್ರುಗಳು ತಾವೇ ಸೋತು ಪಲಾಯನರಾದರು.
*****
[ವಿಲ್ಕ್ಸ್‌ ಸಂ೧; ಪುಟ ೨೫]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...