ಹೊಲದ ಹಸಿರಿನ ಮೇಲೆ ಹೊಂಬಿಸಿಲು ಬಿದ್ದಿತ್ತು. ಅಲ್ಲಲ್ಲಿ ತಿಳಿನೀರಿನ ಕನ್ನಡಿ ಹೊಳೆಯುತ್ತಿತ್ತು. ಒಂದೇ ಒಂದು ಬೆಳ್ಳಗಿನ ಗೂಳಿ ಮೇಯುತ್ತಿತ್ತು. ಇಬ್ಬರು ಕವಿಗಳು ಹೊಲದಂಚಿನ ಬಾಳೆಯ ತೋಟದಲ್ಲಿ ನಿಂತು ಈ ಚೆಲುವನ್ನು ಸವಿಯುತ್ತಿದ್ದರು. ಒಬ್ಬನಿಗೆ ಕಾವ್ಯಸಮಾಧಿ ಹತ್ತಿ ಗುಂಗುಡಹತ್ತಿದನು. ಬಳಿಗೆ ಇನ್ನೊಬ್ಬನಿದ್ದಾನೆಂಬುದನ್ನೂ ಮರೆತನು. ಇನ್ನೊಬ್ಬನಿಗೂ ಒಂದು ಬಗೆಯ ಲಹರಿಬಂತು. ಹೊ ಹೋ ಹೋೕ ಎಂದು ಕೂಗಿ ಬಿಟ್ಟ. ಅವನು ಸಮಾಧಿಯಿಳಿದು ಇವನನ್ನು ಕೇಳಿದ: ಏನಪ್ಪಾ ನನ್ನ ಸಮಾಧಿಯನ್ನೆಲ್ಲ ಕೆಡಿಸಿಬಿಟ್ಟೆ. ಈ ಚೆಲುವಿನ ದಿವ್ಯಸ್ಪರ್ಶಹೊಂದಿ ನನ್ನ ಜೀವಾತ್ಮನು ಪರಮಾತ್ಮನ ಕಡೆಗೆ ಹರಿದು ಚಿತ್ ಸುಖಸಾಗರದಲ್ಲಿ ಈಜಾಡುತ್ತಿದ್ದನು. ಕೆಡಿಸಿಬಿಟ್ಟೆಯಲ್ಲ.
ಇವನು ಹೇಳಿದ: ಓಹೋ, ಹಾಗೆಲ್ಲ ಆಗಿಬಿಟ್ಟಿತ್ತೋ? ನನಗೂ ಒಂದು ಬಗೆಯ ಸಮಾಧಿ ಹತ್ತಿತ್ತು. ಅಲ್ಲಿ ಒಂದು ಸೊಕ್ಕಿನ ಗೂಳಿ ಒಕ್ಕಲಿಗರ ಗಂಜಿಯ ಬೊಡ್ಡೆಗಳನ್ನೆಲ್ಲ ತೂರಿಕೊಂಡು ಹೋಗುವುದನ್ನು ಕಂಡೆ; ಕೂಗಿ ಬಿಟ್ಟೆ.
ಇವನ ಹೊ ಹೋ ಹೋೕ ಕೇಳಿಯೋ ಏನೋ, ತೋಟದಲ್ಲಿದ್ದ ಒಬ್ಬ ಒಕ್ಕಲಿಗನು ಗದ್ದೆಯನ್ನೆಲ್ಲ ಸೂರೆಗೊಳ್ಳುತ್ತಿದ್ದ ಗೂಳಿಯನ್ನು ತೌರಿಕೊಂಡು ಹೋದುದು ವಾಗ್ವಾದಕ್ಕೆ ಆರಂಭಿಸಿದ್ದ ಆ ಕವಿಗಳಿಗೆ ಕಾಣಿಸಲಿಲ್ಲ.
*****

















