Home / ಬಾಲ ಚಿಲುಮೆ / ಕಥೆ / ಎರಡೂ ಇಲ್ಲವಾದ ಕಥೆ

ಎರಡೂ ಇಲ್ಲವಾದ ಕಥೆ

ಒಂದು ಊರಿನಲ್ಲಿ ದಂಪತಿಗಳು ಇದ್ದರು. ಗಂಡನು ಮುದುಕನೆಂದು ಅವಳಿಗೆ ಅವನ ಮೇಲೆ ಮಮತೆಯಿರಲಿಲ್ಲ. ಯಾವಾಗಲೂ ಅದೇ ಚಿಂತೆಯಾಗಿ ಅವಳು ಮನೆಯಲ್ಲಿಯೇ ಇರುತ್ತಿರಲಿಲ್ಲ. ಹಾಗೆ ಸುತ್ತುತ್ತಿರುವ ಅವಳನ್ನು ನೋಡಿ ಒಬ್ಬ ತುಂಟನು, ಎಲೆ ಸುಂದರಿ, ನನ್ನ ಹೆಂಡತಿಯು ಸತ್ತುಹೋದಳು. ನಿನ್ನನ್ನು ನೋಡಿ ನನಗೆ ಆಸೆಯಾಗುವುದು. ನೀನು ನನ್ನ ಹೆಂಡತಿಯಾಗು” ಎಂದು ಕೇಳಿಕೊಂಡನು. ಅವಳು “ಹಾಗೆ ನೀನು ನನ್ನನ್ನು ಮಾಡಿಕೊಳ್ಳುವುದಾದರೆ ನನ್ನ ಗಂಡನ ಮನೆಯಲ್ಲಿರುವ ಹಣವೆಲ್ಲಾ ತರುವೆನು. ಅವನು ಮುದುಕ ಇವೊತ್ತೋ ನಾಳೆಯೋ ಸಾಯುವನು. ನಾವಿಬ್ಬರೂ ದೇಶಾಂತರ ಹೋಗೋಣ” ಎಂದಳು. ಅವನೂ “ಸರಿ ಹಾಗೇ ಆಗಲಿ.” ಎಂದನು. ಮರುದಿನ ಬೆಳಗಾಗುವುದರೊಳಗಾಗಿ ಅವಳು ಮನೆಯಲ್ಲಿನ ಹಣವನ್ನೆಲ್ಲಾ ಗಂಟು ಕಟ್ಟಿಕೊಂಡು ಬಂದುಬಿಟ್ಟಳು. ಆ ತುಂಟನೂ ಅವಳನ್ನು ಕರೆದುಕೊಂಡು ಆ ಊರು ಬಿಟ್ಟು ಹೋದನು.
ದಾರಿಯಲ್ಲಿ ಒ೦ದು ನದಿಯು ಸಿಕ್ಕಿತು. ಅದನ್ನು ಕಂಡು ಆ ಧೂರ್ತನು “ಇವಳಿಂದ ನನಗೆ ಆಗಬೇಕಾದುದೇನು? ಇವಳನ್ನು ಹುಡುಕಿಕೊಂಡು ಯಾರಾದರೂ ಬಂದರೆ ನನಗೆ ಕಷ್ಟವಾಗುವುದು. ಅದರಿಂದ ಇವಳ ಹಣವನ್ನು ಹಾರಿಸಿಕೊಂಡು ಓಡಬೇಕು.” ಎಂದು ಗೊತ್ತುಮಾಡಿಕೊಂಡು “ನೋಡು, ಈ ನದಿಯನ್ನು ದಾಟುವುದು ಕಷ್ಟ. ಅದರಿಂದ ನಿನ್ನ ಬಳಿಯಿರುವುದನ್ನೆಲ್ಲ ಮೂಟೆ ಕಟ್ಟಿಕೊಡು. ಅದನ್ನು ತೆಗೆದುಕೊಂಡು ಹೋಗಿ ಆ ಕಡೆಯಲ್ಲಿ ಇಟ್ಟು ಬಂದು ಕರೆದುಕೊಂಡು ಹೋಗುವೆನು.” ಎಂದನು. ಅವಳು ಎಲ್ಲವನ್ನೂ ಕಟ್ಟಿದಳು. “ನೀನು ಉಟ್ಟರುವ ಸೀರೆಯನ್ನೂ ಕೊಡು ಈ ತುಂಡನ್ನು ಉಟ್ಟುಕೊಂಡಿರು. ನದಿ ದಾಟುವಾಗ ನೆನೆದುಹೋದರೆ ಒಣಗುವವರೆಗೂ ಇಲ್ಲಿಯೇ ಕೂತಿರಬೇಕು” ಎನ್ನಲು, ಅವಳು ಹಾಗೂ ಮಾಡಿದಳು. ಒಂದು ತುಂಡು ಬಟ್ಟೆಯುಟ್ಟು ಕೊಂಡು ನದಿಯ ತೀರದಲ್ಲಿ ಒಣಕುತ್ತ ಕುಳಿತುಕೊಂಡಳು. ಆ ತುಂಟನು ನದಿಯನ್ನು ದಾಟಿ ಹೇಳದೆ ಕೇಳದೆ ಎಲ್ಲಿಯೋ ಹೊರಟುಹೋದನು.
ಅವಳು ಹೀಗೆ ಒಣಕುತ್ತೆ, ಅಳುತ್ತ ಕುಳಿತಿರುವಾಗ ಒಂದು ನರಿಯು ಅತ್ತ ಬಂತು. ಅದರ ಬಾಯಲ್ಲಿ ಒಂದು ತುಂಡು ಮಾಂಸವಿತ್ತು. ಅದು ಬರುವ ವೇಳೆಗೆ ನೀರಿನಲ್ಲಿ ಎರಡು ಮೀನುಗಳು ಜಗಳವಾಡಿ, ಒ೦ದು ಮೀನು ನೀರಿನಿಂದ ಹಾರಿ ದಡದಲ್ಲಿ ಬಿತ್ತು. ಅದನ್ನು ಕಂಡು ನರಿಯು ತನ್ನ ಬಾಯಲ್ಲಿ ಇದ್ದ ಮಾಂಸದ ತುಂಡನ್ನು ಅಲ್ಲಿ ಹಾಕಿ ಆ ಮೀನು ಹಿಡಿದುಕೊಳ್ಳಲು ಹೋಯಿತು. ಆ ಮೀನು ಮತ್ತೆ ನೀರಿಗೆ ಪುಣಕ್ಕನೆ ನೆಗೆಯಿತು. ಇತ್ತ ನರಿಯು ಹಾಕಿದ್ದ ಮಾಂಸದ ತುಂಡನ್ನು ಹದ್ದು ಕಚ್ಚಿಕೊಂಡು ಹೋಯಿತು. ನರಿಯು ಅದೂ ಹೋಗಿ ಇದೂ ಹೋಗಲು ಪೆಚ್ಚಾಗಿ ನಿಂತುಕೊಂಡಿತು. ಅದನ್ನು ಕಂಡು ಆ ಹೆಂಗಸು ನಕ್ಕು “ಅಯ್ಯೋ ಪಾಪ, ಮೀನು ನೀರಿನ ಪಾಲಾಯಿತು : ಮಾಂಸ ಹದ್ದಿನ ಪಾಲಾಯಿತು. ನಿನ್ನ ಮೊಖ ಪೆಚ್ಚಾಯಿತು”? ಎಂದು ಹಾಸ್ಯ” ಮಾಡಿದಳು. ನರಿಗೆ ರೇಗಿ ಹೋಗಿ ಹೇಳಿತು:-
ನನ್ನ ಜಾಣಿಗೆರಡು ಸಾಟಿ ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥ 
ಎಂದು ಮೂದಲಿಸಿ ಮುಂದೆ ಹೋಯಿತು.
ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಮತ್ತೊಂದು ಜಲಚರವು ಬಂದು “ಎಲೋ, ನಿನ್ನ ಮನೆಯನ್ನು ಇನ್ನೊಂದು ಮೊಸಳೆಯು ಹಿಡಿದುಕೊಂಡಿತು.” ಎಂದು ಹೇಳಿತು. ಅದನ್ನು ಕೇಳಿ ಮೊಸಳೆಯು “ಇದೀಗ ಅದೃಷ್ಟ ಎನ್ನುವುದು. ಎಡಹಿದಕಾಲು ಎಡಹುವುದು. ಅನ್ನ ವಿಲ್ಲದಿದ್ದಾಗ ಹಸಿವು ಹೆಚ್ಚುವುದು. ಅಪತ್ತುಗಳೂ ವೈರಗಳೂ ಹೆಚ್ಚುವುದು. ಇವೆಲ್ಲ ದುರದೃಷ್ಟ ಕಾಲದಲ್ಲಿ ಆಗುವ ಕೆಲಸಗಳು; ಏನು ಮಾಡಲಿ? ಈಗ ಅವನೊಡನೆ ಯುದ್ಧ ಮಾಡಲೇ? ಒಳ್ಳೆಯ ಮಾತಿನಿಂದ ಕಾರ್ಯವನ್ನು ಸಾಧಿಸಲೇ? ಏನಾದರೂ ಕೊಟ್ಟು ಅವನನ್ನು ಮನೆ ಬಿಡಸಲೆ?” ಎಂದು ಬಹಳ ಯೋಚನೆ ಮಾಡಿ, ಏನು ಮಾಡಬೇಕೆಂದು ಕಪಿಯನ್ನೇ ಕೇಳಿತು.
ಅದು “ನೀನು ಕೃತಘ್ನ, ನಿನಗೆ ನಾನು ಎನೂ ಹೇಳುವುದಿಲ್ಲ.” ಎನ್ನಲು ಮೊಸಳೆಯು ಅಯ್ಯಾ, ಬಲ್ಲವರು, ಏಳು ಹೆಜ್ಜೆ ಒಟ್ಟಿಗೆ ನಡೆದರೆ ಒಬ್ಬರಿಗೊಬ್ಬರು ಮಿತ್ರರಾಗುವರು ಎನ್ನುವರು. ಅದರಿಂದಲಾದರೂ ನೀನು ನನಗೆ ಹಿತವಾಗುವುದು ಯಾವುದು ಅದನ್ನು
ಹೇಳು.
ಅಲ್ಲದೆ, ಉಪಕಾರಿ ಗುಪಕಾರ ಮಾಳ್ಪುದೇನದು ದೊಡ್ಡಿತು || 
ಅಪಕಾರಿ ಗುಪಕಾರಮಾಳ್ಪುದದು ನಿಜ ದೊಡ್ಡಿತು ॥ ೨೬ ॥ 
ಎಂದು ಕೇಳಿಕೊಂಡಿತು. ಅದಕ್ಕೆ ಕಪಿಯು ಹೇಳಿತು: ಹಾಗಾದರೆ ಕೇಳು. ಹೋಗಿ ಮೊದಲು ಅದರೊಡನೆ ಯುದ್ಧ ಮಾಡು. ಕೇಳಿಲ್ಲವೆ
ರಣದೆ ಸೋತರೆ ಸಗ್ಗ, ಮನೆಯ ಗೆಲ್ಲಲು ಕೀರ್ತಿ | 
ರಣಕೆ ಇಳಿದರೆ ಹೀಗೆ, ಹಿರಿಯ ಲಾಭಗಳೆರಡು ॥ ೨೭॥ 
ಮಹಾ ಚತುರಕನಂತೆ ಮಾಡಬೇಕು.
ಅಲ್ಲದೆ,
ನಮಿಸಿ ಸಾಮದಿಂದುತ್ತಮನನೊಲಿಸಿಕೊ॥ 
ಶೂರನಂ ಭೇದದಿಂದೊಡೆದು ಜಯಿಸಿಕೊ | 
ನೀಚಗಿತ್ತಿನಿತು ದಾನದಿಂ ಬಿಡಿಸಿಕೋ | 
ಸಮನೊಡನೆ ಮಲೆತು ಹೋರಾಡಿ ಗೆದ್ದುಕೋ ॥ ೨೮ ॥
ಮೊಸಳೆಯು ಹೇಳಿತು: “ಅದು ಹೇಗೆ?” ಎಂದು:
ಕಪಿಯು ಹೇಳಿತು.
*****
ಮಹಾ ಚತುರಕನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...