ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ,
ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ;
ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ-
ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು.
ಚಿಕ್ಕ ಹರೆಯದ ಚಾಮನೊಲಿದು ಮದುವೆಗೆನ್ನ ಬಯಸುತ್ತಿದ್ದ.
ಮಾತನೆತ್ತಲು ರೆಕ್ಕವಿಲ್ಲದೆ ನಾಚಿ ಸುಮ್ಮನೆ ಇರುವನು.
ದುಡ್ಡು ಕಾಸನು ಕೂಡಿಹಾಕಲು ಹೋಗಿ ಹಡಗ ಸೇರಿಕೊಂಡ-
ದುಡ್ಡು ಕಾಸನು ನನ್ನ ಸಲುವೇ ಕೂಡಿಹಾಕಲು ಹೋದನು.
ಅವನು ಹೋಗಿ ನೆಟ್ಟಗೆಲ್ಲಾ ಎರಡು ವಾರ ಕಳೆಯಲಿಲ್ಲ.
ಅಪ್ಪ ಕೈಯ ಮುರಿದುಕೊಂಡ; ಕಳ್ಳರೊಯ್ದರು ದನವನು.
ಅವ್ವ ನರಳುತ ಬಿದ್ದುಕೊಂಡಳು, ಚಾಮ ಎತ್ತಲೋ ಕಡಲಲಿದ್ದನು.
ಇತ್ತ ಮುದಿಯ ರಾಮಗೌಡ ನನ್ನ ಬಯಸಿ ಬಂದನು.
ಅಪ್ಪ ಹೊರಗೆ ಗೆಯ್ಯಲಾರ, ಅವ್ವ ಒಳಗೆ ನೆಯ್ಯಲಾರಳು;
ಹಗಲು ಇರುಳು ನಾನು ದುಡಿದೂ ನಮಗೆ ಹಿಟ್ಟು ಹುಟ್ಟದು.
ರಾಮಗೌಡ ಕಷ್ಟಕಾದ : ಕೈಯ ಹಿಡಿದು ಕಣ್ಣ ನೆನಸಿ,
ಅವರ ಸಲುವಾಗೆನ್ನ ಚೆನ್ನಿ, ಮದುವೆಯಾಗು ಎಂದನು.
ನನ್ನ ಮನಸೋ ಒಲ್ಲೆನೆನುವುದು; ಚಾಮ ಬರುವ ನಚ್ಚು ಹೋಗದು;
ಎಲ್ಲಿ ಬರುವನು? ಗಾಳಿ ಬಡಿದು ಹಡಗು ಪುಡಿಪುಡಿಯಾಯಿತು.
ಹಡಗು ಪುಡಿಪುಡಿಯಾಯಿತಯ್ಯೋ ಸಾಯದೇತಕೆ ಚಾಮ ಉಳಿದ!
ಕೊರಗಿ ನಾನೀ ಬೇಗೆಯಲ್ಲಿ ಏಕೆ ಬದುಕುತ್ತಿರುವೆನು!
ಅಪ್ಪ ಹೇಳಿದ, ಗದರಿಕೊಂಡ; ಅವ್ವ ಬಾಯಲಿ ಆಡಒಲ್ಲಳು;
ಅವಳು ನೋಡಿದ ನೋಟವೇ ನನ್ನೆದೆಯನಿರಿಯಿತು, ಮುರಿಯಿತು.
ಅವನ ಕೈಯಲಿ ಕೈಯನಿಟ್ಟರು; ಮನಸು ಕಡಲಲಿ ನಿಂತುಹೋಯಿತು.
ಅಂತು ಮುದಿಯ ರಾಮಗೌಡ ನನಗೆ ಗಂಡನಾದನು.
ಮದುವೆಯಾಗಿ ನೆಟ್ಟಗೆಲ್ಲಾ ನಾಲ್ಕುವಾರ ಕಳೆಯಲಿಲ್ಲ.
ಬಾಗಿಲಲ್ಲಿ ಕಲ್ಲಮೇಲೆ ಕುಳಿತು ಕೊರಗುತ – ಕಂಡೆನು!
ಗಾಳಿಯಾಗಿ ಬಂದ ಚಾಮ ಎಂದುಕೊಂಡೆನು – ಚಾಮು ನಕ್ಕು,
ತೆರವ ತಂದೆ, ಮದುವೆಯಾಗಲು ಬಂದೆ, ಚೆನ್ನಿ , ಎಂದನು .
ಬಿಕ್ಕಿ ಬಿಕ್ಕಿ ನುಡಿಸಿ ನುಡಿಸಿ, ದುಃಖವೆಲ್ಲಾ ಹೇಳಿಕೊಂಡೆವು,
ಒಂದು ಮುತ್ತ ಸೆಳೆದುಕೊಂಡೆವು-ಅಟ್ಟಿಬಿಟ್ಟೆ, ಆಗಲೆ!
ಸಾಯ ಒಲ್ಲೆನೆ ನಾನು ಪಾಪಿ! ಅಯ್ಯೊ! ಪಾಪಿಗೆ ಸಾವು ಬಹುದೆ?
ಹುಟ್ಟದೇ ಇರಬಾರದೇ! ಈ ಬೇಗೆಬಾಳನು ತಾಳೆನೇ!
ಗಾಳಿಯಾಗಿ ಸುಳಿಯುತಿರುವೆ-ಮನೆಯ ಕೆಲಸ ಅಕ್ಕರಿಲ್ಲ,
ಚಾಮನನು ನೆನೆಯುವುದು ಪಾಪ ; ಎಷ್ಟೋ ತಡೆಯುವೆ ಮನಸನು.
ಒಳ್ಳೆ ಗರತಿಯಾಗಿ ಬದುಕಲು ಎದೆಯನೆಷ್ಟೋ ಗಟ್ಟಿಮಾಡುವೆ,
ರಾಮಗೌಡನ ಪ್ರೀತಿ ನಂಬಿಕೆಗೆಂತು ದ್ರೋಹವ ಬಗೆವೆನು!
*****
LADY LINDSAY (1750-1825): Auld Robin Gray















