Home / ಕವನ / ಅನುವಾದ / ಮುದಿಯ ರಾಮಗೌಡ

ಮುದಿಯ ರಾಮಗೌಡ

ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ,
ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ;
ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ-
ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು.

ಚಿಕ್ಕ ಹರೆಯದ ಚಾಮನೊಲಿದು ಮದುವೆಗೆನ್ನ ಬಯಸುತ್ತಿದ್ದ.
ಮಾತನೆತ್ತಲು ರೆಕ್ಕವಿಲ್ಲದೆ ನಾಚಿ ಸುಮ್ಮನೆ ಇರುವನು.
ದುಡ್ಡು ಕಾಸನು ಕೂಡಿಹಾಕಲು ಹೋಗಿ ಹಡಗ ಸೇರಿಕೊಂಡ-
ದುಡ್ಡು ಕಾಸನು ನನ್ನ ಸಲುವೇ ಕೂಡಿಹಾಕಲು ಹೋದನು.

ಅವನು ಹೋಗಿ ನೆಟ್ಟಗೆಲ್ಲಾ ಎರಡು ವಾರ ಕಳೆಯಲಿಲ್ಲ.
ಅಪ್ಪ ಕೈಯ ಮುರಿದುಕೊಂಡ; ಕಳ್ಳರೊಯ್ದರು ದನವನು.
ಅವ್ವ ನರಳುತ ಬಿದ್ದುಕೊಂಡಳು, ಚಾಮ ಎತ್ತಲೋ ಕಡಲಲಿದ್ದನು.
ಇತ್ತ ಮುದಿಯ ರಾಮಗೌಡ ನನ್ನ ಬಯಸಿ ಬಂದನು.

ಅಪ್ಪ ಹೊರಗೆ ಗೆಯ್ಯಲಾರ, ಅವ್ವ ಒಳಗೆ ನೆಯ್ಯಲಾರಳು;
ಹಗಲು ಇರುಳು ನಾನು ದುಡಿದೂ ನಮಗೆ ಹಿಟ್ಟು ಹುಟ್ಟದು.
ರಾಮಗೌಡ ಕಷ್ಟಕಾದ : ಕೈಯ ಹಿಡಿದು ಕಣ್ಣ ನೆನಸಿ,
ಅವರ ಸಲುವಾಗೆನ್ನ ಚೆನ್ನಿ, ಮದುವೆಯಾಗು ಎಂದನು.

ನನ್ನ ಮನಸೋ ಒಲ್ಲೆನೆನುವುದು; ಚಾಮ ಬರುವ ನಚ್ಚು ಹೋಗದು;
ಎಲ್ಲಿ ಬರುವನು? ಗಾಳಿ ಬಡಿದು ಹಡಗು ಪುಡಿಪುಡಿಯಾಯಿತು.
ಹಡಗು ಪುಡಿಪುಡಿಯಾಯಿತಯ್ಯೋ ಸಾಯದೇತಕೆ ಚಾಮ ಉಳಿದ!
ಕೊರಗಿ ನಾನೀ ಬೇಗೆಯಲ್ಲಿ ಏಕೆ ಬದುಕುತ್ತಿರುವೆನು!

ಅಪ್ಪ ಹೇಳಿದ, ಗದರಿಕೊಂಡ; ಅವ್ವ ಬಾಯಲಿ ಆಡಒಲ್ಲಳು;
ಅವಳು ನೋಡಿದ ನೋಟವೇ ನನ್ನೆದೆಯನಿರಿಯಿತು, ಮುರಿಯಿತು.
ಅವನ ಕೈಯಲಿ ಕೈಯನಿಟ್ಟರು; ಮನಸು ಕಡಲಲಿ ನಿಂತುಹೋಯಿತು.
ಅಂತು ಮುದಿಯ ರಾಮಗೌಡ ನನಗೆ ಗಂಡನಾದನು.

ಮದುವೆಯಾಗಿ ನೆಟ್ಟಗೆಲ್ಲಾ ನಾಲ್ಕುವಾರ ಕಳೆಯಲಿಲ್ಲ.
ಬಾಗಿಲಲ್ಲಿ ಕಲ್ಲಮೇಲೆ ಕುಳಿತು ಕೊರಗುತ – ಕಂಡೆನು!
ಗಾಳಿಯಾಗಿ ಬಂದ ಚಾಮ ಎಂದುಕೊಂಡೆನು – ಚಾಮು ನಕ್ಕು,
ತೆರವ ತಂದೆ, ಮದುವೆಯಾಗಲು ಬಂದೆ, ಚೆನ್ನಿ , ಎಂದನು .

ಬಿಕ್ಕಿ ಬಿಕ್ಕಿ ನುಡಿಸಿ ನುಡಿಸಿ, ದುಃಖವೆಲ್ಲಾ ಹೇಳಿಕೊಂಡೆವು,
ಒಂದು ಮುತ್ತ ಸೆಳೆದುಕೊಂಡೆವು-ಅಟ್ಟಿಬಿಟ್ಟೆ, ಆಗಲೆ!
ಸಾಯ ಒಲ್ಲೆನೆ ನಾನು ಪಾಪಿ! ಅಯ್ಯೊ! ಪಾಪಿಗೆ ಸಾವು ಬಹುದೆ?
ಹುಟ್ಟದೇ ಇರಬಾರದೇ! ಈ ಬೇಗೆಬಾಳನು ತಾಳೆನೇ!

ಗಾಳಿಯಾಗಿ ಸುಳಿಯುತಿರುವೆ-ಮನೆಯ ಕೆಲಸ ಅಕ್ಕರಿಲ್ಲ,
ಚಾಮನನು ನೆನೆಯುವುದು ಪಾಪ ; ಎಷ್ಟೋ ತಡೆಯುವೆ ಮನಸನು.
ಒಳ್ಳೆ ಗರತಿಯಾಗಿ ಬದುಕಲು ಎದೆಯನೆಷ್ಟೋ ಗಟ್ಟಿಮಾಡುವೆ,
ರಾಮಗೌಡನ ಪ್ರೀತಿ ನಂಬಿಕೆಗೆಂತು ದ್ರೋಹವ ಬಗೆವೆನು!
*****
LADY LINDSAY (1750-1825): Auld Robin Gray

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...