Home / ಕವನ / ಅನುವಾದ / ಮುದಿಯ ರಾಮಗೌಡ

ಮುದಿಯ ರಾಮಗೌಡ

ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ,
ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ;
ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ-
ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು.

ಚಿಕ್ಕ ಹರೆಯದ ಚಾಮನೊಲಿದು ಮದುವೆಗೆನ್ನ ಬಯಸುತ್ತಿದ್ದ.
ಮಾತನೆತ್ತಲು ರೆಕ್ಕವಿಲ್ಲದೆ ನಾಚಿ ಸುಮ್ಮನೆ ಇರುವನು.
ದುಡ್ಡು ಕಾಸನು ಕೂಡಿಹಾಕಲು ಹೋಗಿ ಹಡಗ ಸೇರಿಕೊಂಡ-
ದುಡ್ಡು ಕಾಸನು ನನ್ನ ಸಲುವೇ ಕೂಡಿಹಾಕಲು ಹೋದನು.

ಅವನು ಹೋಗಿ ನೆಟ್ಟಗೆಲ್ಲಾ ಎರಡು ವಾರ ಕಳೆಯಲಿಲ್ಲ.
ಅಪ್ಪ ಕೈಯ ಮುರಿದುಕೊಂಡ; ಕಳ್ಳರೊಯ್ದರು ದನವನು.
ಅವ್ವ ನರಳುತ ಬಿದ್ದುಕೊಂಡಳು, ಚಾಮ ಎತ್ತಲೋ ಕಡಲಲಿದ್ದನು.
ಇತ್ತ ಮುದಿಯ ರಾಮಗೌಡ ನನ್ನ ಬಯಸಿ ಬಂದನು.

ಅಪ್ಪ ಹೊರಗೆ ಗೆಯ್ಯಲಾರ, ಅವ್ವ ಒಳಗೆ ನೆಯ್ಯಲಾರಳು;
ಹಗಲು ಇರುಳು ನಾನು ದುಡಿದೂ ನಮಗೆ ಹಿಟ್ಟು ಹುಟ್ಟದು.
ರಾಮಗೌಡ ಕಷ್ಟಕಾದ : ಕೈಯ ಹಿಡಿದು ಕಣ್ಣ ನೆನಸಿ,
ಅವರ ಸಲುವಾಗೆನ್ನ ಚೆನ್ನಿ, ಮದುವೆಯಾಗು ಎಂದನು.

ನನ್ನ ಮನಸೋ ಒಲ್ಲೆನೆನುವುದು; ಚಾಮ ಬರುವ ನಚ್ಚು ಹೋಗದು;
ಎಲ್ಲಿ ಬರುವನು? ಗಾಳಿ ಬಡಿದು ಹಡಗು ಪುಡಿಪುಡಿಯಾಯಿತು.
ಹಡಗು ಪುಡಿಪುಡಿಯಾಯಿತಯ್ಯೋ ಸಾಯದೇತಕೆ ಚಾಮ ಉಳಿದ!
ಕೊರಗಿ ನಾನೀ ಬೇಗೆಯಲ್ಲಿ ಏಕೆ ಬದುಕುತ್ತಿರುವೆನು!

ಅಪ್ಪ ಹೇಳಿದ, ಗದರಿಕೊಂಡ; ಅವ್ವ ಬಾಯಲಿ ಆಡಒಲ್ಲಳು;
ಅವಳು ನೋಡಿದ ನೋಟವೇ ನನ್ನೆದೆಯನಿರಿಯಿತು, ಮುರಿಯಿತು.
ಅವನ ಕೈಯಲಿ ಕೈಯನಿಟ್ಟರು; ಮನಸು ಕಡಲಲಿ ನಿಂತುಹೋಯಿತು.
ಅಂತು ಮುದಿಯ ರಾಮಗೌಡ ನನಗೆ ಗಂಡನಾದನು.

ಮದುವೆಯಾಗಿ ನೆಟ್ಟಗೆಲ್ಲಾ ನಾಲ್ಕುವಾರ ಕಳೆಯಲಿಲ್ಲ.
ಬಾಗಿಲಲ್ಲಿ ಕಲ್ಲಮೇಲೆ ಕುಳಿತು ಕೊರಗುತ – ಕಂಡೆನು!
ಗಾಳಿಯಾಗಿ ಬಂದ ಚಾಮ ಎಂದುಕೊಂಡೆನು – ಚಾಮು ನಕ್ಕು,
ತೆರವ ತಂದೆ, ಮದುವೆಯಾಗಲು ಬಂದೆ, ಚೆನ್ನಿ , ಎಂದನು .

ಬಿಕ್ಕಿ ಬಿಕ್ಕಿ ನುಡಿಸಿ ನುಡಿಸಿ, ದುಃಖವೆಲ್ಲಾ ಹೇಳಿಕೊಂಡೆವು,
ಒಂದು ಮುತ್ತ ಸೆಳೆದುಕೊಂಡೆವು-ಅಟ್ಟಿಬಿಟ್ಟೆ, ಆಗಲೆ!
ಸಾಯ ಒಲ್ಲೆನೆ ನಾನು ಪಾಪಿ! ಅಯ್ಯೊ! ಪಾಪಿಗೆ ಸಾವು ಬಹುದೆ?
ಹುಟ್ಟದೇ ಇರಬಾರದೇ! ಈ ಬೇಗೆಬಾಳನು ತಾಳೆನೇ!

ಗಾಳಿಯಾಗಿ ಸುಳಿಯುತಿರುವೆ-ಮನೆಯ ಕೆಲಸ ಅಕ್ಕರಿಲ್ಲ,
ಚಾಮನನು ನೆನೆಯುವುದು ಪಾಪ ; ಎಷ್ಟೋ ತಡೆಯುವೆ ಮನಸನು.
ಒಳ್ಳೆ ಗರತಿಯಾಗಿ ಬದುಕಲು ಎದೆಯನೆಷ್ಟೋ ಗಟ್ಟಿಮಾಡುವೆ,
ರಾಮಗೌಡನ ಪ್ರೀತಿ ನಂಬಿಕೆಗೆಂತು ದ್ರೋಹವ ಬಗೆವೆನು!
*****
LADY LINDSAY (1750-1825): Auld Robin Gray

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...