ದೇವನಿಲ್ಲಿಗೆ ಬರುವ ಮುನ್ನವೆ ದೇವದೂತರು ಬರುವರು
ಎನ್ನುವೈತಿಹ್ಯವನು ನಿಜವೆನಿಸೆನಿತುದಾತ್ತಧ್ಯೇಯರು
ಬಾನವರಿಗಿಳೆ ಸುಪಥವಾಗಲು ಮುನ್ನ ಜನ್ಮವ ಪಡೆಯುತ
ನಡೆದರೈ ಪರದರ್ಪದುರ್ಗಮವಾದ ನಮ್ಮೀ ನಾಡೊಳು.
ರಾಮಮೋಹನ ರಾಮಕೃಷ್ಣರು ಯತಿ ವಿವೇಕಾನಂದರು
ಮೆಹತ ಬಂಕಿಮಚಂದ್ರ ಗೋಖಲೆ ದಾಸ ಶ್ರದ್ಧಾನಂದಜಿ
ಅನ್ಸಾರಿ ನವರೋಜಿ ಇಕ್ಬಲ ಮಾಲವೀಯರು ರಾನಡೆ
ಲಾಲಲಜಪತರಾಯ ಮೋತಿಲಾಲ ತಿಲಕ ರವೀಂದ್ರರು-
ಇಂತೆಣಿಸಿ ಮುಗಿಸುವೆನೆ ನಾನೀ ದಿವ್ಯತೇಜೋಮಹಿಮರ
ಭಾರತದೊಳಿಂಗ್ಲೆಂಡು ಚೆಲ್ಲಿದ ನೆರಳತಮದೊಳು ಹೊಳೆದರ
ಭೀತಿಮೋಹವಿಮಾನಮೂರ್ಛಿತರಾಗದುಳಿದರ ಧೀರರ
ಇರುಳ ಗರ್ವದ ಮೌನವಿಗಡಿಸೆ ಉಷಾಸ್ಫೂರ್ಜನ್ನಾದರ?
ನೆಲವ ತಬ್ಬಿರುವಂಧಕಾರವ ದೂರದುಡಗಣ ಹರಿಸದು
ನೆಲವ ತಬ್ಬುವ ಬೆಳಕೆ ಬೇಕಿದನೆಬ್ಬಿಸುತಲಸುವೆಗೆಯಲು
ಬುದ್ಧಿಯುಫ್ಪರಿಗೆಯಲಿ ನೆಲಸಿದ ವೀಥಿವೀಕ್ಷಣ ಚತುರರು
ತಲದಿ ನಡೆಯುವ ಪ್ರಾಣದಾಟಕೆ ಮೋಹಗೊಂಡರು ವಿಫಲರು.
ಅನ್ನಕೋಶದಿ ಬಂದಿ ಹಲವೆಡೆ ಪ್ರಾಣಕೋಶದಿ ಹಲವೆಡೆ
ಮನೋಜ್ಞಾನಾನಂದ ಕೋಶಗಳಲ್ಲಿಯಂತೆಯೆ ಕೆಲವೆಡೆ
ಭಾರತದ ಚೈತನ್ಯವಾಹಿನಿ ಸೇತು ಬಂಧಿತೆಯಾಗುತ
ಪರರ ಸಂಪತ್ ಸುರ್ಫಣೆಗಾದಳು ತನ್ನ ತಾನೇ ಮರೆಯುತ.
ಪಂಚಕೋಶಗಳಲ್ಲು ಎಡೆತಡೆಯಿಲ್ಲದಂದದಿ ಹರಿಯುತ
ಈ ಮಹಾನದಿ ವಿಶ್ವಜೀವನಶಿವಧಿಸಂಗಮೆಯಪ್ಪಳೆ?
ಪ್ರಕೃತಿತಾರಕೆಯಾಗದಂದದಿ ಕುಟಿಲ ರೌದ್ರವ ಮೆರೆಸುತ
ರುದ್ರಜಟೆಯೊಳು ಸಿಲುಕದೀ ಹರಿಪದೆಗೆ ಬಿಡುಗಡೆಯೆಂದಿಗೆ?
*****

















