ಒಮ್ಮೆ ಗುರುಗಳು ತನ್ನ ಪಟ್ಟ ಶಿಷ್ಯನನ್ನು ಕರೆದು ಹೀಗೆ ಹೇಳಿದರು. ಇಂದು ನೀನು ನಿನ್ನ ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಮಾಡು. ನಿನ್ನ ಧ್ಯಾನದ ಅನುಭವವನ್ನು ನಂತರ ನನಗೆ ಬಂದು ಹೇಳು”-ಎಂದು ಹೇಳಿದರು.
ಶಿಷ್ಯ ಗುರುವಿನ ಅಣತಿಯ ಮೇರೆಗೆ ನಿಬಿಡವಾದ ವನಕ್ಕೆ ಹೋಗಿ ಒಂದು ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ. ಕಣ್ಣು ಮುಚ್ಚಿ, ಭುಜ, ಕತ್ತು, ಬೆನ್ನು ಒಂದು ನಿಲಿವಿನಲ್ಲಿಟ್ಟು, ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಆರಂಭಿಸಿದ.
ಶ್ಯಾಸವನ್ನು ರೇಚಕದಿಂದ ಪೂರಕ, ಪೂರಕದಿಂದ ಕುಂಭಕದಲ್ಲಿ ಶ್ವಾಸವನ್ನು ವೀಕ್ಷಿಸುತ್ತಾ ಕಾಲದ ಅನಂತತೆಯಲ್ಲಿ ಲೀನವಾದ. ಅವನ ಉಸಿರು ಮಂದ ಪವನದೊಂದಿಗೆ ಒಂದಾಯಿತು. ಹಾಡುವ ಕೋಗಿಲೆಯ ನಾದದಲ್ಲಿ ತೇಲಾಡಿತು. ಎಲೆಯ ಮರ್ಮರದಲ್ಲಿ ಒಂದಾಯಿತು. ವೃಕ್ಷದ ಬೇರಲ್ಲಿ ಬೇರೂರಿತು. ಹೂಗಂಧವಾಯಿತು. ಹಣ್ಣಿನ ಪಕ್ವತೆ ಪಡೆಯಿತು. ವನವೆಲ್ಲಾ ಸುತ್ತಾಡಿತು. ಉಸಿರಿಗೆ ದೇಹದ ಅಸ್ತಿತ್ವ, ದೂರವಾಯಿತು. ಮನದ ಹಿಡಿತದಿಂದ ಉಸಿರು ವಿಶ್ವಗಾಮಿಯಾಯಿತು. ಸೀಮೆಗಳ ದಾಟಿತು. ವಿಶ್ವದ ಎಲ್ಲಾ ಚೇತನಕ್ಕೆ ಹೊಂದಿಕೊಂಡಿತು. ಬೆಸೆದುಕೊಂಡಿತು. ಆಗಸದ ನೀಲಿಯಲ್ಲಿ ಬೆರೆತಿತು. ಕಿರಣದಲ್ಲಿ ಮುಳುಗಿತು. ಬೆಳದಿಂಗಳಲ್ಲಿ ಆಡಿತು. ನಕ್ಷತ್ರದೊಡನೆ ನರ್ತಿಸಿತು. ಸಾಗರದ ಅನಂತತೆಯಲ್ಲಿ ತೇಲಾಡಿತು. ನದಿಯೊಡನೆ ಹರಿಯಿತು.
ಜಲಪಾತದಲ್ಲಿ ಲಾಸ್ಯವಾಡಿತು. ಮಳೆಯಲ್ಲಿ ಮಿಂದಿತು. ಮಿಂಚಲ್ಲಿ ಬೆಳಗಿತು. ನಾನು ಎಂಬುದಿಲ್ಲದೆ ಉಸಿರು ತಾನೇತಾನಾಗಿ ಮೆಲ್ಲ ಮೆಲ್ಲನೆ ವಿಶ್ವವ್ಯಾಪಿಯಾಯಿತು. ಪ್ರಾಣ ವಿಶ್ವಪ್ರಾಂಗಣವಾಯಿತು. ‘ನಾ’ನಿಲ್ಲದ ಆವಿಶ್ವ ಐಕ್ಯದಲ್ಲಿ ಉಸಿರದೆಷ್ಟು ಜೀವಂತ. ಉಸಿರು ಅದೆಷ್ಟು ಹಸಿರು ವಸಂತ. ಉಸಿರು ಅದೆಷ್ಟು ಅನಂತ ಭವ್ಯತೆಯ ಭಗವಂತ! ವಿಶ್ವಚೇತನದಲ್ಲಿ ಅನುಭಾವಿ ಶಿಷ್ಯ ಮಾರನೆ ದಿನ ಗುರುವಿನಲ್ಲಿ ಬಂದ.
“ಪ್ರಿಯ ಶಿಷ್ಯ! ನಿನ್ನ ಧ್ಯಾನದ ಅನುಭವವೇನು?”ಎಂದು ಗುರುಗಳು ಕೇಳಿದರು.
“ಧ್ಯಾನದಲ್ಲಿ ನಾನಿರಲಿಲ್ಲ. ನಾನೇನು ಹೇಳಬಲ್ಲೆ? ಉಸಿರು ಮಾತ್ರ ಇದ್ದಾಗ ನಾ ಮೌನ ಚೇತನವಾಗಿದ್ದೆ.” ಎಂದ ಶಿಷ್ಯ.
“ಅಹುದು ಶಿಷ್ಯ! ನಿನ್ನ ಮೌನ ಸ್ಪಂದನ ನಿನ್ನ ಅನುಭವ ಸಾರುತ್ತಿದೆ” ಎಂದರು ಗುರುಗಳು.
*****

















