Home / ಕಥೆ / ಕಿರು ಕಥೆ / ಧ್ಯಾನಾನುಭವ

ಧ್ಯಾನಾನುಭವ

ಒಮ್ಮೆ ಗುರುಗಳು ತನ್ನ ಪಟ್ಟ ಶಿಷ್ಯನನ್ನು ಕರೆದು ಹೀಗೆ ಹೇಳಿದರು. ಇಂದು ನೀನು ನಿನ್ನ ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಮಾಡು. ನಿನ್ನ ಧ್ಯಾನದ ಅನುಭವವನ್ನು ನಂತರ ನನಗೆ ಬಂದು ಹೇಳು”-ಎಂದು ಹೇಳಿದರು.

ಶಿಷ್ಯ ಗುರುವಿನ ಅಣತಿಯ ಮೇರೆಗೆ ನಿಬಿಡವಾದ ವನಕ್ಕೆ ಹೋಗಿ ಒಂದು ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ. ಕಣ್ಣು ಮುಚ್ಚಿ, ಭುಜ, ಕತ್ತು, ಬೆನ್ನು ಒಂದು ನಿಲಿವಿನಲ್ಲಿಟ್ಟು, ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಆರಂಭಿಸಿದ.

ಶ್ಯಾಸವನ್ನು ರೇಚಕದಿಂದ ಪೂರಕ, ಪೂರಕದಿಂದ ಕುಂಭಕದಲ್ಲಿ ಶ್ವಾಸವನ್ನು ವೀಕ್ಷಿಸುತ್ತಾ ಕಾಲದ ಅನಂತತೆಯಲ್ಲಿ ಲೀನವಾದ. ಅವನ ಉಸಿರು ಮಂದ ಪವನದೊಂದಿಗೆ ಒಂದಾಯಿತು. ಹಾಡುವ ಕೋಗಿಲೆಯ ನಾದದಲ್ಲಿ ತೇಲಾಡಿತು. ಎಲೆಯ ಮರ್ಮರದಲ್ಲಿ ಒಂದಾಯಿತು. ವೃಕ್ಷದ ಬೇರಲ್ಲಿ ಬೇರೂರಿತು. ಹೂಗಂಧವಾಯಿತು. ಹಣ್ಣಿನ ಪಕ್ವತೆ ಪಡೆಯಿತು. ವನವೆಲ್ಲಾ ಸುತ್ತಾಡಿತು. ಉಸಿರಿಗೆ ದೇಹದ ಅಸ್ತಿತ್ವ, ದೂರವಾಯಿತು. ಮನದ ಹಿಡಿತದಿಂದ ಉಸಿರು ವಿಶ್ವಗಾಮಿಯಾಯಿತು. ಸೀಮೆಗಳ ದಾಟಿತು. ವಿಶ್ವದ ಎಲ್ಲಾ ಚೇತನಕ್ಕೆ ಹೊಂದಿಕೊಂಡಿತು. ಬೆಸೆದುಕೊಂಡಿತು. ಆಗಸದ ನೀಲಿಯಲ್ಲಿ ಬೆರೆತಿತು. ಕಿರಣದಲ್ಲಿ ಮುಳುಗಿತು. ಬೆಳದಿಂಗಳಲ್ಲಿ ಆಡಿತು. ನಕ್ಷತ್ರದೊಡನೆ ನರ್ತಿಸಿತು. ಸಾಗರದ ಅನಂತತೆಯಲ್ಲಿ ತೇಲಾಡಿತು. ನದಿಯೊಡನೆ ಹರಿಯಿತು.

ಜಲಪಾತದಲ್ಲಿ ಲಾಸ್ಯವಾಡಿತು. ಮಳೆಯಲ್ಲಿ ಮಿಂದಿತು. ಮಿಂಚಲ್ಲಿ ಬೆಳಗಿತು. ನಾನು ಎಂಬುದಿಲ್ಲದೆ ಉಸಿರು ತಾನೇತಾನಾಗಿ ಮೆಲ್ಲ ಮೆಲ್ಲನೆ ವಿಶ್ವವ್ಯಾಪಿಯಾಯಿತು. ಪ್ರಾಣ ವಿಶ್ವಪ್ರಾಂಗಣವಾಯಿತು. ‘ನಾ’ನಿಲ್ಲದ ಆವಿಶ್ವ ಐಕ್ಯದಲ್ಲಿ ಉಸಿರದೆಷ್ಟು ಜೀವಂತ. ಉಸಿರು ಅದೆಷ್ಟು ಹಸಿರು ವಸಂತ. ಉಸಿರು ಅದೆಷ್ಟು ಅನಂತ ಭವ್ಯತೆಯ ಭಗವಂತ! ವಿಶ್ವಚೇತನದಲ್ಲಿ ಅನುಭಾವಿ ಶಿಷ್ಯ ಮಾರನೆ ದಿನ ಗುರುವಿನಲ್ಲಿ ಬಂದ.

“ಪ್ರಿಯ ಶಿಷ್ಯ! ನಿನ್ನ ಧ್ಯಾನದ ಅನುಭವವೇನು?”ಎಂದು ಗುರುಗಳು ಕೇಳಿದರು.

“ಧ್ಯಾನದಲ್ಲಿ ನಾನಿರಲಿಲ್ಲ. ನಾನೇನು ಹೇಳಬಲ್ಲೆ? ಉಸಿರು ಮಾತ್ರ ಇದ್ದಾಗ ನಾ ಮೌನ ಚೇತನವಾಗಿದ್ದೆ.” ಎಂದ ಶಿಷ್ಯ.

“ಅಹುದು ಶಿಷ್ಯ! ನಿನ್ನ ಮೌನ ಸ್ಪಂದನ ನಿನ್ನ ಅನುಭವ ಸಾರುತ್ತಿದೆ” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...