Home / ಕವನ / ಕವಿತೆ / ಕಡಲಿನ ತಡಿಯಲ್ಲಿ

ಕಡಲಿನ ತಡಿಯಲ್ಲಿ

ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ
ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥

ತುಂಬು ಚಂದಿರನು ಬಹನೆನುತ ಸಾರಿಸಿದಂತೆ
ಗಗನದಂಗಣವಿಂದು ಅತಿಶುಭ್ರ ನೀಲ!
ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು
ಆವುದೋ! ಒಡೆಯಲಿಕಭೇದ್ಯವೀ ಜಾಲ!

ಕಾದು ನಸು ಬೆಚ್ಚಗಿಹ ಬಿಳಿಮರಳ ಹಾಸುಗೆಯು!
ತೆರೆಗಳೆದೆ ಮೇಲೆ ನಡೆದೈತರುವ ಪವನ!
ಮೌನಕೇ ಕಚಕುಳಿಯನಿಡುತಿರುವ ಕಡಲ ಮೊರೆ!-
ಅಕಟಕಟ! ವ್ಯರ್ಥವೈ ಪ್ರಕೃತಿಯಾ ಕವನ!

ಜಡತನದ ಮುದ್ದೆಯಂತಿನಿತು ದಿನ ರೆಕ್ಕೆಗಳ
ಮುದುಡಿ ಕುಳಿತಿದ್ದ ಕಿದ್ದೊಲೆ ಚಿಮ್ಮಿ ನೆಗೆದು
ಭೂತದೊಳು ಹಾರಾಡಿ, ಭವಿತವ್ಯದೊಳಗಿಣುಕಿ
ಬಹ ಮನದ ಖಗ ಕುಣಿವುದಿಂದೇನ ಬಗೆದು?

ನಲ್ಮೆಯನೆ ಹಾರೈಸೆ ಮನವೆನಿತು ಬಳಲಿದರು
ನೈರಾಶ್ಯವೇ ಉಕ್ಕಿಬರುತಿಹುದಿದೇನು?-
ಮಧುವಿಗಾಶಿಸಿ ಗೂಡ ಕೆಣಕಲೇಳುತ ನುಗ್ಗಿ
ಮೊಗಕೆರಗಿ ಮುಳ್ಳುಗಳ ನೆಡುವವೊಲು ಜೇನು!

ಫಲಿಸದೊಲವಳಿದ ಕೆಳೆ, ಸೆಳೆದ ತನು, ತಳೆದ ಕೊರೆ-
ಮನದ ಕಳವಳದ ಕತವೇನು ಒಂದೆರಡೆ?
“ಸಾಲದಿದು” ಎಂಬೊಲು ನಿರಾಶೆಯೀ ನಿಟ್ಟುಸಿರು:
ಮುಂದೆ ಕಾದಿರುವುದೂ ರಸವಿರದ ಬರಡೆ!

ಕಂಗೊಳಿಪ ಚೆಲುವಿಹುದು, ತಂಗಾಳಿ ಬೀಸಿಹುದು
ರಂಗೇರುತಿರೆ ದಿಗಂಗನೆಯ ಕದಪೆಲ್ಲ
ತಿಂಗಳೈತಂದು ಮುಗಿಲಂಗಣಕೆ, ಸೊದೆ ಜಗದಿ
ತಂಗಿದರು ಮನಕಿಂದು ಶಾಂತಿಯೊಂದಿಲ್ಲ!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...