ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ
ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥
ತುಂಬು ಚಂದಿರನು ಬಹನೆನುತ ಸಾರಿಸಿದಂತೆ
ಗಗನದಂಗಣವಿಂದು ಅತಿಶುಭ್ರ ನೀಲ!
ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು
ಆವುದೋ! ಒಡೆಯಲಿಕಭೇದ್ಯವೀ ಜಾಲ!
ಕಾದು ನಸು ಬೆಚ್ಚಗಿಹ ಬಿಳಿಮರಳ ಹಾಸುಗೆಯು!
ತೆರೆಗಳೆದೆ ಮೇಲೆ ನಡೆದೈತರುವ ಪವನ!
ಮೌನಕೇ ಕಚಕುಳಿಯನಿಡುತಿರುವ ಕಡಲ ಮೊರೆ!-
ಅಕಟಕಟ! ವ್ಯರ್ಥವೈ ಪ್ರಕೃತಿಯಾ ಕವನ!
ಜಡತನದ ಮುದ್ದೆಯಂತಿನಿತು ದಿನ ರೆಕ್ಕೆಗಳ
ಮುದುಡಿ ಕುಳಿತಿದ್ದ ಕಿದ್ದೊಲೆ ಚಿಮ್ಮಿ ನೆಗೆದು
ಭೂತದೊಳು ಹಾರಾಡಿ, ಭವಿತವ್ಯದೊಳಗಿಣುಕಿ
ಬಹ ಮನದ ಖಗ ಕುಣಿವುದಿಂದೇನ ಬಗೆದು?
ನಲ್ಮೆಯನೆ ಹಾರೈಸೆ ಮನವೆನಿತು ಬಳಲಿದರು
ನೈರಾಶ್ಯವೇ ಉಕ್ಕಿಬರುತಿಹುದಿದೇನು?-
ಮಧುವಿಗಾಶಿಸಿ ಗೂಡ ಕೆಣಕಲೇಳುತ ನುಗ್ಗಿ
ಮೊಗಕೆರಗಿ ಮುಳ್ಳುಗಳ ನೆಡುವವೊಲು ಜೇನು!
ಫಲಿಸದೊಲವಳಿದ ಕೆಳೆ, ಸೆಳೆದ ತನು, ತಳೆದ ಕೊರೆ-
ಮನದ ಕಳವಳದ ಕತವೇನು ಒಂದೆರಡೆ?
“ಸಾಲದಿದು” ಎಂಬೊಲು ನಿರಾಶೆಯೀ ನಿಟ್ಟುಸಿರು:
ಮುಂದೆ ಕಾದಿರುವುದೂ ರಸವಿರದ ಬರಡೆ!
ಕಂಗೊಳಿಪ ಚೆಲುವಿಹುದು, ತಂಗಾಳಿ ಬೀಸಿಹುದು
ರಂಗೇರುತಿರೆ ದಿಗಂಗನೆಯ ಕದಪೆಲ್ಲ
ತಿಂಗಳೈತಂದು ಮುಗಿಲಂಗಣಕೆ, ಸೊದೆ ಜಗದಿ
ತಂಗಿದರು ಮನಕಿಂದು ಶಾಂತಿಯೊಂದಿಲ್ಲ!
*****


















