Home / ಕವನ / ಕವಿತೆ / ಅಮ್ಮ!

ಅಮ್ಮ!

(ವಿಯೋಗ ಗೀತ)


ಅಮ್ಮ! ನಿನ್ನ ವಿಯೋಗದರಿವಿನಲಿ ನನ್ನೆದೆಯು
ಸಂತಾಪದಲಿ ಸಿಡಿಯುತಿತ್ತು!
ದುಮ್ಮಾನದುರಿಯಲ್ಲಿ ಆಹುತಿಗೆ ಸಂದಿತ್ತು!
ಮನವು ಸುಡುಗಾಡಿನಂತಿತ್ತು!


ಕಣ್ಣೀರ ಕಾಳ್ಪುರವು ಕಾಲಾಗಿ ಹರಿದತ್ತು!
ಉತ್ಸಾಹದೈಸಿರಿಯ ಮೇಲೆ
ಮಣ್ಣೆರಚಿದಂತಾಯ್ತು! ನಲವಿನೊರತೆಯು ಬರತು,
ನಾಟ್ಯವೆಸೆಗಿತು ದುಃಖಲೀಲೆ!


ಜೀವನದ ದಾರಿಯಲಿ ಕೈದೀಪದಂತಿದ್ದೆ;-
ದೀಪವದು ನಂದಿದಂತಾಯ್ತು!
ಓವಿ ಮುನ್ನಡೆಸುತಿಹ ಊರ್ಗೋಲಿನಂತಿದ್ದೆ;-
ಆ ಕೋಲು ಮುರಿದ ಹಾಗಾಯ್ತು


ಕಣ್ಣಿಗಾ ನಿನ್ನ ಭೌತಿಕ ಶರೀರದ ರೂಹು
ಇನ್ನು ಕಾಣದಿರಲೇನಹುದು?-
ನಿನ್ನ ಮಂಗಲ ರೂಪವೆನ್ನ ಹೃದಯದ ಪಟದಿ
ಅಚ್ಚಳಿಯದಂತೆ ನೆಲಸಿಹುದು


ಎನ್ನಲ್ಲಿ ಹೆಚ್ಚಾದ ನಿನ್ನೊಲವ ನೆನೆನೆನೆದು,
ಅವ್ಯಾಜ ಪ್ರೇಮವನು ಸ್ಮರಿಸಿ,
ಉನ್ನತಿಯನೈದುತಿದೆ ವಿರಹಾಗ್ನಿಯದನೀಗ
ನ೦ದಿಸುವೆ ಕಂಬನಿಯ ಸುರಿಸಿ


ನಾನಂದು ಶಾಲೆಯಿಂದೈತರುವ ಸಮಯದಲಿ
ಒ೦ದಿನಿತು ಹೊತ್ತಾಗುವಲ್ಲಿ,
ನೀನು ಮನೆಯಿಂದಿಳಿದು ಬಂದೆನ್ನ ದಾರಿಯನು
ಕಾಯುತ್ತ ನಿಂತಿದ್ದೆಯಲ್ಲಿ


ಹೆಣ್ಣಮಕ್ಕಳು ನಿನಗೆ ಹುಟ್ಟಿದಿಹ ಮರುಕದಲಿ
ಚಿಕ್ಕಂದು ನಮ್ಮ ತಲೆ ನೆಯ್ದು,
ಗೋರಂಟಿ ಹೂದಂಡೆ ನೆತ್ತಿವರೆಗೂ ಸೂಡಿ,
ಸಂತೋಷವಾಂತಿದ್ದೆಯೊಲಿದು


ಅದನೀಗ ಮನದಲ್ಲಿ ನೆನೆವಲ್ಲಿ, ಕೂರಲಗು
ನೆಟ್ಟಂತೆ ವೇದನೆಯ ಬಾಧೆ
ಒದವುತಿದೆ; ನಿನ್ನತುಲ ಮಮತೆಯರಿವಾಗುತಿದೆ
ನಲ್ಮೆಯಾ ನೆನಹದಾಗುತ್ತಿದೆ


ಅಸ್ಥಿರದ ಜಡದೇಹ ಮರೆಯಾದರೇನಂತೆ?
ನಿನ್ನ ಪರಿಶುದ್ಧಾತ್ಮದೊಲವು
ಸುಸ್ಥಿರವದಾಗೆನ್ನ ಬೆಂಬಿಡದೆ ಸರಿಯಾಗಿ
ಪೊರೆಯುತಕಿರಲನವರತವು!
*****
೧೯೩೫

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...